Get Updates
Get notified of breaking news, exclusive insights, and must-see stories!

ಶಬರಿಮಲೆಯ 'ಮಕರ ಜ್ಯೋತಿ' ಎಂದರೇನು?

What is Makari Jyothi? (img courtesy Wikipedia)
ಬಹಳಷ್ಟು ಮಂದಿಗೆ 'ಮಕರ ಜ್ಯೋತಿ' ಎಂದರೇನು ಎಂಬ ಜಿಜ್ಞಾಸೆ ಇದೆ. ಇದನ್ನು ಪರಿಹರಿಸುವ ಒಂದು ಸಣ್ಣ ಪ್ರಯತ್ನ ಇದು. ಶಬರಿಮಲೆಯ ಎರಡು ತಿಂಗಳ ಪವಿತ್ರ ವ್ರತಾಚರಣೆಯ ಕೊನೆಯ ದಿನವಾದ ಮಕರ ಸಂಕ್ರಮಣದಂದು 'ಮಕರ ಜ್ಯೋತಿ'ಯ ದರ್ಶನವಾಗುತ್ತದೆ. ಮಕರಜ್ಯೋತಿಯ ದರ್ಶನಕ್ಕಾಗಿ ದೇಶದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ಶಬರಿಮಲೆಗೆ ಆಗಮಿಸುತ್ತಾರೆ.

ಶಬರಿಮಲೆಗೆ ವಿರುದ್ಧ ದಿಕ್ಕಿನಲ್ಲಿರುವ ಪೊನ್ನಂಬಲಮೇಡು ಗಿರಿಯಲ್ಲಿ ಮಕರಜ್ಯೋತಿ ಕಾಣಿಸಿಕೊಳ್ಳುತ್ತದೆ. ಪ್ರತಿವರ್ಷ ಜನವರಿ 14ರಂದು ಅಯ್ಯಪ್ಪ ಸ್ವಾಮಿಗೆ ಸಂಜೆ 7 ಗಂಟೆಗೆ ನಡೆಯುವ ಮಹಾಮಂಗಳಾರತಿ ಬಳಿಕ ಮಕರ ಜ್ಯೋತಿಯ ದರ್ಶನವಾಗುತ್ತದೆ. ಮಕರಜ್ಯೋತಿಯು ಮೂರು ಬಾರಿ ದೇದೀಪ್ಯಮಾನವಾಗಿ ಮಿಣುಗಿ ಅದೃಶ್ಯವಾಗುತ್ತದೆ.

ಈ ಬಾರಿಯ ಮಕರ ಜ್ಯೋತಿ ದರ್ಶವು ಸಂಜೆ 7.07 ಗಂಟೆಗೆ ಸರಿಯಾಗಿ ಪೊನ್ನಂಬಲಮೇಡು ಗಿರಿಯಲ್ಲಿ ಕಾಣಿಸಿಕೊಳ್ಳಿತು. ಮಕರ ಜ್ಯೋತಿ ದರ್ಶನವಾಗುತ್ತಿದ್ದಂತೆ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿಯ ಮಂತ್ರಗಳನ್ನು ಪಠಿಸುತ್ತಾ ಜ್ಯೋತಿಯನ್ನು ದರ್ಶಿಸಿಕೊಂಡು ಪಾವನರಾಗುತ್ತಾರೆ.

ಮಕರ ಜ್ಯೋತಿಯ ಬಗ್ಗೆ ಕೆಲವು ಅಯ್ಯಪ್ಪ ಸ್ವಾಮಿ ಭಕ್ತರು ಸೇರಿದಂತೆ ಹಲವರಲ್ಲಿ ಏಕಾಭಿಪ್ರಾಯವಿಲ್ಲ. ಕೆಲವರು ಮಕರ ಜ್ಯೋತಿಯ 'ರಹಸ್ಯ'ದ ಬಗ್ಗೆ 'ಅಧ್ಯಯನ' ಮಾಡಿದ್ದು ಕಡೆಗೆ ಒಂದು ಅಭಿಪ್ರಾಯಕ್ಕೆ ಬಂದಿದ್ದಾರೆ. ಮಕರಜ್ಯೋತಿ ಕಾಣಿಸಿಕೊಳ್ಳುವ ಪೊನ್ನಂಬಲಮೇಡು ಗಿರಿಯು ದಟ್ಟ ಕಾಡಿನಿಂದ ಆವೃತವಾಗಿದೆ. ಈ ಗಿರಿಯು ಅರಣ್ಯ ಇಲಾಖೆ ಹಾಗೂ ವಿದ್ಯ್ಯುತ್ ಇಲಾಖೆಯ ಸುಪರ್ದಿಯಲ್ಲಿದೆ . ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.

ಮೂಲಗಳ ಪ್ರಕಾರ ಪೊನ್ನಂಬಲಮೇಡು ಗಿರಿಯಲ್ಲಿ ಸಣ್ಣ ಮಂದಿರವಿತ್ತಂತೆ. ಅಲ್ಲಿನ ಗಿರಿಜನರು ವರ್ಷದಲ್ಲಿ ಒಮ್ಮೆ ಅಯ್ಯಪ್ಪನಿಗೆ ಪೂಜೆ ಮಾಡಿ ಕರ್ಪೂರ ಹಾಗೂ ಕಾಷ್ಠವನ್ನು ಹೊತ್ತಿಸುತ್ತಿದ್ದರು. ಅದನ್ನೇ ಮಕರಜ್ಯೋತಿ ಎಂದು ನಂಬಲಾಗಿತ್ತ್ತು ಎಂಬ ವಾದವೂ ಇದೆ. ಬರುಬರುತ್ತಾ ಗಿರಿಜನರು ಅವಸಾನವಾದ ಬಳಿಕ ಈ ಕಾರ್ಯವನ್ನು ವಿದ್ಯುತ್ ಇಲಾಖೆ ನಡೆಸಿಕೊಂಡು ಬರುತ್ತಿದೆ ಎಂಬ ಮತ್ತೊಂದು ವಾದವೂ ಇದೆ.

ಪ್ರತಿವರ್ಷ ಜನವರಿ 14ರಂದು ಕರ್ಪೂರವನ್ನು ಹೊತ್ತಿಸಲಾಗುತ್ತಿದ್ದು ಅದನ್ನೇ 'ಮಕರಜ್ಯೋತಿ' ಎನ್ನಲಾಗುತ್ತಿದೆ. ಸದ್ಯಕ್ಕೆ ಮಕರಜ್ಯೋತಿ ಕಾಣಿಸಿಕೊಳ್ಳುವ ಸ್ಥಳದಲ್ಲಿನ ಮಂದಿರ ನಿರ್ನಾಮವಾಗಿದ್ದು, ಅಲ್ಲಿ ಕಾಂಕ್ರೀಟ್ ವೇದಿಕೆಯನ್ನು ನಿರ್ಮಿಸಲಾಗಿದೆ. ಬೃಹತ್ ಬಾಣಲೆಗೆ ಕರ್ಪೂರವನ್ನು ಹಾಕಿ ಉರಿಸಲಾಗುತ್ತದೆ. ಹೀಗೆ ಮೂರು ಬಾರಿ ಮಾಡಲಾಗುತ್ತದೆ. ಅದೇ ಮಕರಜ್ಯೋತಿ ಎಂಬ ಪುರಾಣಕತೆಗೆ ಅಪವಾದವೆಂಬಂತೆ ಸ್ವಾರಸ್ಯ ಕತೆಯೂ ಚಾಲ್ತಿಯಲ್ಲಿದೆ.

"ಮಕರಜ್ಯೋತಿಯು ಬಾಹ್ಯಾಕಾಶದಲ್ಲಿ ನಡೆಯುವ ಪ್ರಾಕೃತಿಕ ವಿದ್ಯಮಾನವಲ್ಲ, ಇದರಲ್ಲಿ ಮಾನವನ ಕೈವಾಡವಿದೆ" ಎಂಬುದನ್ನು ಕೇರಳ ಸರಕಾರ ಹಾಗೂ ಅಯ್ಯಪ್ಪ ಸ್ವಾಮಿ ಆಲಯ ಮಂಡಳಿಯ ಕೆಲವರು ಈ ಹಿಂದೆ ಹೇಳಿದ್ದರು. ಆದರೆ ಅಯ್ಯಪ್ಪನ ಭಕ್ತರು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಅಯ್ಯಪ್ಪಸ್ವಾಮಿ ಆಲಯದ ಪ್ರಧಾನ ಅರ್ಚಕರಾದ ರಾಹುಲ್ ಈಶ್ವರ್ ಅವರು ಮಕರಜ್ಯೋತಿಯ ಬಗ್ಗೆ ಹೇಳುವುದೇನೆಂದರೆ, ತಪ್ಪು ಮಾಹಿತಿ ಕೊಟ್ಟ ಜನರಿಂದ ತಪ್ಪಾಗಿ ಅರ್ಥೈಸಲಾಗಿದೆ. ಅಯ್ಯಪ್ಪ ಭಕ್ತ್ತರು ಕೊಟ್ಟ ಮಾಹಿತಿ ಇದಲ್ಲ. ಮಕರಜ್ಯೋತಿಯೇ ಬೇರೆ, ಮಕರವಿಲಕ್ಕುವೇ ಬೇರೆ. ಇವೆರಡೂ ಒಂದಕ್ಕೊಂದು ತೀರಾ ಭಿನ್ನ. ಮಕರಜ್ಯೋತಿ ಬಾಹ್ಯಾಕಾಶದಲ್ಲಿ ನಡೆಯುವ ಅಪೂರ್ವ ವಿದ್ಯಮಾನ. ಆದರೆ ಪೊನ್ನಂಬಲಮೇಡು ಗಿರಿಯಲ್ಲಿನ ಮುಂಚೆ ದೇವಸ್ಥಾನವಿದ್ದ ಸ್ಥಳದಲ್ಲಿ ಹೊತ್ತಿಸುವ ದೀಪವೇ ಮಕರವಿಲ್ಲಕ್ಕು ಎನ್ನುತ್ತಾರೆ ಅವರು.

ಶಬರಿಮಲೆ ದೇವಸ್ಥಾನದಿಂದ ಪೊನ್ನಂಬಲಮೇಡು 4 ಕಿ.ಮೀ ದೂರದಲ್ಲಿದೆ. ಶಬರಿಮಲೆಗೆ ವಿದ್ಯುತ್ ಪೂರೈಸುವ ಕೋಚುಪಾಂಬ ಪವರ್ ಸ್ಟೇಷನ್ ಇಲ್ಲಿಯೇ ಇದೆ. ಪ್ರತಿವರ್ಷ ಕಾಣಿಸುವ ಮಕರಜ್ಯೋತಿ ಮಾನವನ ಸೃಷ್ಟಿಯೇ ಅಥವಾ ದೈವ ಕ್ರಿಯೆಯೇ ಎಂಬ ಜಿಜ್ಞಾಸೆ ಇದುವರೆಗೂ ಬಗೆಹರಿದಿಲ್ಲ. ಈ ಎಲ್ಲಾ ವಾದವಿದಾದಗಳಿಗೆ ಅಯ್ಯಪ್ಪ ಸ್ವಾಮಿ ಭಕ್ತರು ಮಾತ್ರ ಕಿವಿಗೊಡದೆ ತಮ್ಮ ಭಕ್ತಿಪಥದಲ್ಲಿ ನಡೆಯುತ್ತಿದ್ದಾರೆ.

ಅಯ್ಯಪ್ಪ ಸ್ವಾಮಿಯ ಪವಿತ್ರ ಆಭರಣಗಳನ್ನು 'ಗರುಡ' ತೆಗೆದುಕೊಂಡು ಹೋಗುವುದೇ ಮಕರಜ್ಯೋತಿ ಎಂದು ನಂಬಿದ್ದಾರೆ. ಅವರ ಬಲವಾದ ನಂಬಿಕೆಗಳನ್ನು ಮುರಿಯುವ ಕೆಲಸಕ್ಕೆ ಯಾರೂ ಕೈಹಾಕಿದರೂ ಪ್ರಯೋಜನ ಮಾತ್ರ ಶೂನ್ಯ. ಆದರೆ ಅಯ್ಯಪ್ಪ ಸ್ವಾಮಿ ಆಲಯಕ್ಕೆ ಮಾತ್ರ ಮಕರಜ್ಯೋತಿಯ ಪ್ರಯುಕ್ತ ಪ್ರತಿವರ್ಷ ಕೋಟ್ಯಾಂತರ ರುಪಾಯಿ ಹರಿದುಬರುತ್ತಿದೆ. [ಶಬರಿಮಲೆ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+