Get Updates
Get notified of breaking news, exclusive insights, and must-see stories!

ನಮ್ಮಮ್ಮ ಅನ್ನಪೂರ್ಣೇಶ್ವರಿ

ಎತ್ತರ ಸುಮಾರು 5 ಅಡಿ. ಅದರಲ್ಲೂ ಒಂದಗುಲ ಕಡಿಮೆ ಎಂದೇ ಹೇಳಬಹುದು. ಬಣ್ಣ ಮಾಸಲು ಗಪ್ಪು. ಹಣೆಯಲ್ಲಿ ದೊಡ್ಡ ಕುಂಕುಮ. ಕೂದಲನ್ನು ತುರುಬಿನಂತೆ ಕಟ್ಟಿದ್ದಾರೆ. ಮಡಿ ಸೀರೆಯಲ್ಲಿ ಲಲಿತಾ ತ್ರಿಪುರ ಸುಂದರಿ ಸಹಸ್ರನಾಮ ಮುಗಿಸಿ ದೇವರ ಪ್ರದಕ್ಷಿಣೆ ಮಾಡುತ್ತಿದ್ದಾರೆ. ನೋಡಿದ ತಕ್ಷಣ ಯಾರಿಗಾದರೂ ಭಕ್ತಿ, ಗೌರವ, ಪ್ರೀತಿ ಮೂಡಿಸುವ ನೋಟ. ಇವರೇ ನನ್ನ ತಾಯಿ. ಸ್ವರ್ಗಸ್ಥರಾಗಿ ನಲವತ್ತು ನಾಲ್ಕು ವರ್ಷಗಳಾದರೂ, ಈ ಮೇಲಿನ ರೂಪು ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದಂತಿದೆ.

ಮಡಿವಂತ ವೈದಿಕ ಮನೆತನದ ಪುರೋಹಿತರ ಮನೆಯಲ್ಲಿ ಜನಿಸಿ, ಪ್ರಾಥಮಿಕ ವಿದ್ಯಾಭ್ಯಾಸ ಮಾತ್ರ ಮುಗಿಸಿ, ಮನೆಗೆಲಸಗಳಲ್ಲಿ ನಿಷ್ಣಾತರಾಗಿ, ದೊಡ್ಡ ಕುಟುಂಬಕ್ಕೆ ಸೊಸೆಯಾಗಿ ಬಂದರು. ಗಂಡನ ಮನೆಯಲ್ಲಿ, ಗಂಡನೇ ಹಿರಿಯ ಮಗ. ಅತ್ತೆ, ಮಾವ, ಗಂಡನ ತಮ್ಮ, ಗಂಡನ ಐದು ಜನ ತಂಗಿಯರು - ಇವರೆಲ್ಲರ ಜವಾಬ್ದಾರಿ ಹಾಗೂ ಚಾಕರಿ ಇವರ ಪಾಲಿಗೇ ಬಿತ್ತು. ಆದರೂ ಒಬ್ಬರಿಗೂ, ಒಂದು ದಿನವೂ ಮನಸ್ಸಿಗೆ ನೋವಾಗದಂತೆ ಎಲ್ಲರಿಗೂ ಪ್ರೀತಿ ಪಾತ್ರರಾಗಿ, ಎಲ್ಲರ ಮನೋ ಇಂಗಿತಗಳನ್ನು ಅರಿತು ಅವರೆಲ್ಲರ ಕಷ್ಟ ಸುಖಗಳನ್ನು ನೋಡಿಕೊಂಡು, ಎಲ್ಲರಿಂದಲೂ ಭಲೇ ಎನಿಸಿಕೊಂಡಿದ್ದರು. ಗಂಡ ಊರಿನ ಮಾನ್ಯ ಪುರೋಹಿತರು, ರಾಜಕೀಯ ತಜ್ಞರು. ನ್ಯಾಯ ಹೇಳುವವರು. ಇದರಿಂದಾಗಿ ಮನೆಯಲ್ಲಿ ಯಾವಾಗಲೂ ಜನ ಇದ್ದೇ ಇರುತ್ತಿದ್ದರು. ಅವರೆಲ್ಲರಿಗೂ ಸೂಕ್ತ ಸಲಹೆ ನೀಡಿ, ಸಮಯಕ್ಕೆ ಸರಿಯಾಗಿ, ಕಾಫಿ, ತಿಂಡಿ ಅಥವಾ ಊಟ ಒದಗಿಸಿ, ಬರಿಗೈಯಲ್ಲಿ, ಬರಿ ಹೊಟ್ಟೆಯಲ್ಲಿ ಕಳುಹಿಸದೆ, ಊರಿನ ಅನ್ನಪೂರ್ಣೆಶ್ವರಿ ಎಂದೆನಿಸಿಕೊಂಡಿದ್ದರು. ಏನೊಂದು ಕಷ್ಟ ಸುಖಗಳು ಬಂದರೂ ಅಚ್ಚಮ್ಮ (ನನ್ನ ತಾಯಿಯ ನಿಜವಾದ ಹೆಸರು ಲಕ್ಷಮ್ಮ ಅದು ಅಪಭ್ರಾಂಶವಾಗಿ ಅಚ್ಚಮ್ಮ ಆಗಿತ್ತು) ನನ್ನು ಕೇಳಲು ಬರುತ್ತಿದ್ದರು.

ಒಂದಾದ ಮೇಲೊಂದು, ಮೈದುನನ ಮದುವೆ ನಾದಿನಿಯರ ಮದುವೆಗಳನ್ನು ಸಾಂಗೋಪಾಂಗವಾಗಿ ನೆರವೇರಿಸಿದರು. ಇದರ ಜೊತೆ, ನಾನು ಈ ಜಗತ್ತಿಗೆ ಬರುವ ವೇಳೆಗೆ 9 ಜನ ಮಕ್ಕಳಿಗೂ ಜನನವಿತ್ತಿದ್ದರು.

ಮುತ್ತು ಮತ್ತು ಕೈತುತ್ತು : ನನಗೆ ಜ್ಞಾಪಕವಿರುವಂತೆ, ನನ್ನ ಪ್ರಿಯವಾದ ವಿಷಯವೇನೆಂದರೆ ಸಂಜೆ ಅವರ ಮುಂದೆ ಕುಳಿತು ಪ್ರಭವಾದಿ 60 ಸಂವತ್ಸರಗಳ ಹೆಸರುಗಳು, ನಕ್ಷತ್ರಗಳು, ವಾರಗಳ, ತಿಂಗಳುಗಳ (ಚಂದ್ರಮಾನ, ಸೌರಮಾನ, ಮುಸಲ್ಮಾನ್‌, ಆಂಗ್ಲ - ಎಲ್ಲರ) ಹೆಸರುಗಳು ಇತ್ಯಾದಿ ಹೇಳಿಸಿಕೊಳ್ಳುತ್ತಿದ್ದುದು. ಅವರು, ವಿದ್ಯಾಭ್ಯಾಸದ ಮಹತ್ವವನ್ನು ಚೆನ್ನಾಗಿ ಅರಿತಿದ್ದರು.

ಮಕ್ಕಳು ಯಾರೇ ಆಗಲಿ ಓದಿನಲ್ಲಿ ಸೋಮಾರಿತನ ಪಟ್ಟರೆ, ಉದಾಸೀನ ಮಾಡಿದರೆ, ಅಸಡ್ಡೆಯಿಂದ ಮಾತಾಡಿದರೆ ತಕ್ಷಣವೇ ಆಗುತ್ತಿತ್ತು ತಕ್ಕ ಶಾಸ್ತಿ. ಎಂದೂ ಮಕ್ಕಳನ್ನು ಹೊಡೆದವರಲ್ಲ. ಆದರೆ ಮಾತಿನ ತೀಕ್ಷಣತೆಯಿಂದಲೇ ಮನದಟ್ಟು ಮಾಡುತ್ತಿದ್ದರು. ನಾನು ಮನೆಯಲ್ಲೇ ಓದಿ, ಬರೆಯಲು ಕಲಿತಿದ್ದೆನಾದ್ದರಿಂದ, ಮತ್ತು ಶಾಲೆಗೆ ಹೋದರೆ ಮೇಸ್ಟ್ರಿಂದ ಬೆತ್ತದ ಸೇವೆ ಆಗುತ್ತೇನೋ ಎಂಬ ಭಯದಿಂದ (ಏಕೆಂದರೆ ಆಗಿನ ಕಾಲದಲ್ಲಿ ನಮ್ಮೂರಿನ ಶಾಲೆಯ ಮೇಷ್ಟರ ವಿನಾಕಾರಣ ಬೆತ್ತದ ಪ್ರಯೋಗ ಮನೆ ಮಾತಾಗಿತ್ತು) ಆರು ವರ್ಷವಾದರೂ ಸ್ಕೂಲಿಗೆ ಹೋಗಲು ಹಿಂಜರಿಯುತ್ತಿದ್ದೆ. ಆದರೆ, ಸ್ಕೂಲಿನ ಜವಾನ (ಮುನಿಸ್ವಾಮಿ ಎಂದು ಆತನ ಹೆಸರು) ಕರೆದೊಯ್ಯಲು ಮನೆಗೇ ಬರುತ್ತಿದ್ದ. ತಾಯಿಯಲ್ಲಿ ಹೋಗಿ ಬಚ್ಚಿಟ್ಟುಕೊಂಡರೆ ಏನೂ ಉಪಯೋಗವಿಲ್ಲವೆಂದು ತಿಳಿದು, ಅಕ್ಕನ ಹತ್ತಿರ ಹೋಗಿ ಬಚ್ಚಿಟ್ಟು ಕೊಳ್ಳುತ್ತಿದ್ದೆ. ಜವಾನನನ್ನು ನೋಡಿದ ತಕ್ಷಣ ಮುಲಾಜಿಲ್ಲದೆ, ನನ್ನನ್ನು ಅಕ್ಕನಿಂದ ಬಿಡಿಸಿ ಜವಾನನಿಗೆ ಒಪ್ಪಿಸುತ್ತಿದ್ದರು, ನನ್ನ ತಾಯಿ.

ತಾಯಿಯನ್ನು ಮನಸ್ಸಿನಲ್ಲೇ ಬೈಯ್ದುಕೊಂಡು ಸ್ಕೂಲಿಗೆ ಹೋಗುತ್ತಿದ್ದೆ. ಸ್ಕೂಲಿನಿಂದ ಬಂದ ತಕ್ಷಣ, ನನ್ನ ತಲೆಯನ್ನು ಸವರಿ ಒಂದು ಮುತ್ತು ಕೊಟ್ಟು, ಕೈ ತುತ್ತು ಹಾಕಿದ ತಕ್ಷಣ, ತಾಯಿ ಮೇಲೆ ಇದ್ದ ಕೋಪವೆಲ್ಲಾ ಮಾಯವಾಗುತ್ತಿತ್ತು.

ಒಂದು ಸಲ ಬೇಸಿಗೆ ರಜೆಯಲ್ಲಿ 5-6 ದಿನ ಅಕ್ಕನ ಊರಿಗೆ ಹೋಗಿ ಹಿಂದುರಿಗಿದ್ದೆ. ಆಗ ನನಗೆ 8-9 ವರ್ಷ ಆಗ್ಗೆ ನಾನೇ ಮನೆಯಲ್ಲಿ ಚಿಕ್ಕವನು. ಎಲ್ಲರಿಗೂ ಅದೂ ನನ್ನ ತಾಯಿಗಂತೂ ನನ್ನ ಮೇಲೆ ಬಹಳ ಪ್ರೀತಿ. ಎರಡು ದಿನ ಹಿಂದೆ ಮಾಡಿದ್ದ ಅಕ್ಕಿ ರೊಟ್ಟಿಯನ್ನು ನನಗಾಗಿ ಮೀಸಲಾಗಿಟ್ಟಿದ್ದು, ನಾನು ಬಂದ ತಕ್ಷಣ, ನನ್ನನ್ನು ತಬ್ಬಿಕೊಂಡು, ನನಗೆ ರೊಟ್ಟಿಯನ್ನು ಕೊಟ್ಟು, ನಾನು ತಿನ್ನುತ್ತಿದ್ದುದನ್ನು ಕಂಡು ಆನಂದಿಸುತ್ತಿದ್ದ ಮುಖ ಈಗಲೂ ನನ್ನ ಕಣ್ಣ ಮುಂದಿದೆ. ಅಂದು ಅನುಭವಿಸಿದ ಆ ರೊಟ್ಟಿಯ ಸವಿಯನ್ನು ಆಮೇಲೆ ಎಂದೂ ಅನುಭವಿಸಿದವನಲ್ಲ.

ಡಾ. ಶಂಕರ ಶಾಸ್ತ್ರೀ
ಗ್ಲೆನ್‌ಕೋ, ಸೇಂಟ್‌ ಲೂಯಿಸ್‌, ಮಿಸ್ಸೌರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+