Hanuman Jayanti 2025: ಹನುಮ ಜಯಂತಿ- ಬೆಂಗಳೂರಿನ ಪ್ರಮುಖ ಆಂಜನೇಯನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಇಂದು ಹನುಮ ಜಯಂತಿ. ಬೆಂಗಳೂರಿನ ಬಹುತೇಕ ಮಾರುತಿ ಮಂದಿರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಇಂದು ಶನಿವಾರವಾದ್ದರಿಂದ ಬೆಳಗ್ಗೆಯಿಂದಲೇ ಆಂಜನೇಯನ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನೆರೆವೇರುತ್ತಿವೆ. ಹನುಮ ಜಯಂತಿ ಪ್ರಯುಕ್ತ ದೇವಸ್ಥಾನ ಹಾಗೂ ದೇವರನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗಿದ್ದು ಜನ ದೇವರ ದರ್ಶನ್ ಪಡೆದು ಪುನೀತರಾಗುತ್ತಿದ್ದಾರೆ.
ಹೌದು ಇಂದು ಬೆಂಗಳೂರಿನಲ್ಲಿ ಪ್ರಮುಖ ಆಂಜನೇಯನ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತಿದೆ. ಹೀಗಾಗಿ ದೇವರ ದರ್ಶನ ಪಡೆಯಲು ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ವಿಜಯನಗರದ ಮಾರುತಿ ಮಂದಿರ, ಬೆಂಗಳೂರಿನ ಮೈಸೂರು ರಸ್ತೆಯ ಬ್ಯಾಟರಾಯನಪುರದ ಬಳಿ ಇರುವ ಗಾಳಿ ಆಂಜನೇಯ ದೇವಸ್ಥಾನ, ರಾಗಿಗುಡ್ಡ ಆಂಜನೇಯ ದೇವಸ್ಥಾನ, ಗಿರಿನಗರ ಕಾರ್ಯ ಸಿದ್ದಿ ಆಂಜನೇಯ ದೇವಸ್ಥಾನ, ಬಸವನಗುಡಿಯ ಕಾರಂಜಿ ಆಂಜನೇಯ ದೇವಾಲಯ ಹೀಗೆ ಬೆಂಗಳೂರಿನ ಪ್ರಮುಖ ಹನುಮ ದೇವಸ್ಥಾನಗಳಗೆ ಜನ ಭೇಟಿ ನೀಡುತ್ತಿದ್ದಾರೆ.

ಹನುಮ ಜಯಂತಿ ಆಚರಣೆ
ಹನುಮ ಜಯಂತಿಯನ್ನು ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ. ಉತ್ತರ ಭಾರತದ ಭಕ್ತರು ಹನುಮಾನ್ ಜಯಂತಿಯನ್ನು ಚೈತ್ರ ಮಾಸದ ಪೂರ್ಣಿಮೆಯಂದು ಅಂದರೆ ಮಾರ್ಚ್ ಏಪ್ರಿಲ್ ಮಧ್ಯೆ ಆಚರಿಸುತ್ತಾರೆ. ಈ ದಿನವೇ ಆಂಜನಾ ಮತ್ತು ಕೇಸರಿಗೆ ವಾಯು ದೇವರ ಆಶೀರ್ವಾದಿಂದ ಹನುಮಂತ ಜನಿಸಿದ ಎನ್ನಲಾಗುತ್ತದೆ.
ಇನ್ನೂ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಅಂದರೆ ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಹನುಮ ಜಯಂತಿಯನ್ನು ಮಾರ್ಗಶೀರ್ಷ ಮಾಸದಲ್ಲಿ ಅಂದರೆ ಡಿಸೆಂಬರ್ ಜನರವರಿ ಸಮಯದಲ್ಲಿ ಆಚರಿಸಲಾಗುತ್ತದೆ. ವರ್ಷಕ್ಕೆ ಎರಡು ಬಾರಿ ಹನುಮ ಜಯಂತಿ ಆಚರಿಸಲು ಕಾರಣ ಪ್ರಾಚೀನ ಪುರಾಣಗಳು.
ಕೆಲವು ಶಾಸ್ತ್ರಗಳು ಹನುಮಂತನ ಜನನವನ್ನು ಚೈತ್ರ ಮಾಸಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸುತ್ತವೆ. ಇನ್ನೂ ಕೆಲವು ಮಾರ್ಗಶೀರ್ಷ ಮಾಸದ ವೇಳೆ ಎಂದು ವಿವರಿಸುತ್ತವೆ. ಈ ದಿನ ಭಕ್ತರು ಹನುಮಾನ್ ಚಾಲೀಸಾ ಪಠಿಸುತ್ತಾರೆ, ವಿಶೇಷ ಪೂಜೆಗಳನ್ನು ನೆರವೇರಿಸುತ್ತಾರೆ ಮತ್ತು ಹನುಮಂತನ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಒಟ್ಟಿನಲ್ಲಿ ಇಂದು ಹನುಮ ಜಯಂತಿಯೊಂದಿಗೆ ಶನಿವಾರವಾಗಿದ್ದರಿಂದ ನಗರದ ಪ್ರಮುಖ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು ಹಬ್ಬದ ಕಳೆ ಕಂಡು ಬರುತ್ತಿದೆ.












Click it and Unblock the Notifications