ಮಾರ್ಚ್ 10 ವಿಶ್ವ ಕಿಡ್ನಿ ದಿನ, ಮೂತ್ರಪಿಂಡ ಜೋಪಾನ
ಕಿಡ್ನಿ ಅಥವಾ ಮೂತ್ರಪಿಂಡ ನಮ್ಮ ದೇಹದ ಅತ್ಯಂತ ಪ್ರಮುಖವಾದ ಅಂಗ. ಇರುವ ಎರಡು ಕಿಡ್ನಿಗಳು ದಿನವಿಡಿ ಎಡಬಿಡದೆ ಕೆಲಸ ಮಾಡುತ್ತಿರುತ್ತದೆ. ಮೂತ್ರಪಿಂಡಗಳು ನಮ್ಮ ದೇಹದ ಫಿಲ್ಟರ್ ಇದ್ದಂತೆ. ಶರೀರದ ಕೆಲಸಗಳಿಗೆ ಪೂರಕವಾದ ರಾಸಾಯನಿಕಗಳನ್ನು ಬಳಸಿಕೊಂಡು, ಬೇಡವಾದ ವಸ್ತುಗಳನ್ನು ದೇಹದಿಂದ ಹೊರತಳ್ಳುವ ಕೆಲಸದಲ್ಲಿ ನಿರತವಾಗಿರುತ್ತವೆ. ಕೇವಲ 150 ಗ್ರಾಂ ತೂಕದ ಬೀನ್ಸ್ ಗಾತ್ರದ ಇವು ಮಾಡುವ ಕೆಲಸ ಮಾತ್ರ ಊಹೆಗೂ ನಿಲುಕದು. ಹೃದಯದಷ್ಟೇ ಪ್ರಮುಖವಾದ ಇನ್ನೊಂದು ಅಂಗವೆಂದರೆ ಕಿಡ್ನಿ ಎಂದರೂ ತಪ್ಪಾಗಲಿಕ್ಕಿಲ್ಲ. ಕಿಡ್ನಿಯ ಕೆಲಸದಲ್ಲಿ ಸ್ವಲ್ಪ ಏರುಪೇರು ಆದರೂ ದೇಹದ ಎಲ್ಲಾ ಆಂತರಿಕ ವ್ಯವಸ್ಥೆಗಳು ಏರುಪೇರಾಗುತ್ತವೆ.
ಕಿಡ್ನಿ(Kidney)ಯ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ ತಿಂಗಳ 2ನೇ ಗುರುವಾರದಂದು 'ವಿಶ್ವ ಕಿಡ್ನಿ ದಿನ'ವೆಂದು ಆಚರಿಸಲಾಗುತ್ತದೆ. 2006ರಲ್ಲಿ ಈ ಆಚರಣೆ ಆರಂಭವಾಗಿದ್ದು, ಕಿಡ್ನಿ ಸಂಬಂಧಿ ಕಾಯಿಲೆಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದು ಮತ್ತು ಕಿಡ್ನಿಯ ಜೋಪಾನದ ಬಗ್ಗೆ ಅರಿವು ಮೂಡಿಸುವ ಮಹತ್ತರ ಉದ್ದೇಶವನ್ನು ಹೊಂದಿದೆ. ಬಹುತೇಕ ಮೂತ್ರಪಿಂಡ ಕಾಯಿಲೆಗಳನ್ನು ತಡೆಯಬಹುದು ಮತ್ತು ಗುಣ ಪಡಿಸಬಹುದಾಗಿದ್ದು, ಈ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯದ ತುರ್ತು ಅಗತ್ಯತೆ ಇದೆ ಎಂದು ಕಿಡ್ನಿ ತಜ್ಞ ವೈದ್ಯರು ಅಭಿಪ್ರಾಯ ಪಡುತ್ತಾರೆ. [ಅಣ್ಣನಿಗೆ ಕಿಡ್ನಿ ದಾನ ಮಾಡಿದ ತಮ್ಮ ಅನಿಲ್ - ಸಂದರ್ಶನ]
ಇಂದಿನ ದಿನಗಳಲ್ಲಿ ನಾವುಗಳು ಅಳವಡಿಸಿಕೊಂಡಿರುವ ಜೀವನಶೈಲಿ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮತ್ತು ಹೃದಯಕ್ಕೆ ಸಂಬಂಧಿಸಿದ ಕೆಲವೊಂದು ಕಾಯಿಲೆಗಳು ಕಿಡ್ನಿ ಕಾಯಿಲೆಗೆ ಪ್ರಮುಖ ಕಾರಣವೆಂದು ತಜ್ಞ ವೈದ್ಯರು ಹೇಳುತ್ತಾರೆ. ಸಾಮಾನ್ಯ ಜನರಲ್ಲಿ ಮೂತ್ರಪಿಂಡದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಹೃದಯ ಸಂಬಂಧಿ ರೋಗಿಗಳಲ್ಲಿ ಕಿಡ್ನಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಮತ್ತು ಮೂತ್ರಪಿಂಡದ ಕಾಯಿಲೆ ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಾದ ಅನಿವಾರ್ಯತೆ ಇಂದು ಆಗಬೇಕಾಗಿದೆ. [ಮಾರ್ಚ್ 9 ವಿಶ್ವ ಧೂಮಪಾನ ರಹಿತ ದಿನ]
ಮಕ್ಕಳಲ್ಲಿಯೂ ಮೂತ್ರಕೋಶದ ತೊಂದರೆ
ಹಿರಿಯರಲ್ಲಿ ಮಾತ್ರವಲ್ಲ ಮಕ್ಕಳಲ್ಲಿಯೂ ಮೂತ್ರಕೋಶದ ತೊಂದರೆ ಕಂಡುಬರುತ್ತಿದೆ. ಈ ಕಾರಣದಿಂದ ಮಕ್ಕಳಲ್ಲಿ ಆರಂಭದಿಂದಲೇ ಉತ್ತಮ ಜೀವನಶೈಲಿಯನ್ನು ರೂಢಿಸುವುದು ಪಾಲಕರ ಮಹತ್ತರ ಜವಾಬ್ದಾರಿ. ನಿಯಮಿತವಾಗಿ ಆಟವಾಡುವುದು, ಪೌಷ್ಟಿಕಾಂಶಗಳಿಂದ ತುಂಬಿದ ಆಹಾರ ತಿನ್ನುವುದು, ಅವರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ.
ಚಟುವಟಿಕೆಯಿಂದಿರಿ, ಆರೋಗ್ಯದಿಂದಿರಿ
ಮೂತ್ರಪಿಂಡದ ಆರೋಗ್ಯಕ್ಕಾಗಿ ಯಾವಾಗಲೂ ಚಟುವಟಿಕೆಯಿಂದಿರಿ, ಚೆನ್ನಾಗಿ ಅಡ್ಡಾಡಿ ಎಂಬ ಸಂದೇಶವನ್ನು ಜಗತ್ತಿನಾದ್ಯಂತ ಇಂದು ಸಾರಲಾಗುತ್ತಿದೆ. ದೈಹಿಕ ಚಟುವಟಿಕೆಯಂತಹ ಚಿಕ್ಕಚಿಕ್ಕ ಬದಲಾವಣೆಗಳು ದೇಹವನ್ನು ಮತ್ತಷ್ಟು ಬಲಪಡಿಸುತ್ತವೆ ಮತ್ತು ಕಿಡ್ನಿಯ ಆರೋಗ್ಯವನ್ನು ಸುಸ್ಥಿರವಾಗಿರಿಸುತ್ತದೆ.
ಕಿಡ್ನಿ ಆರೋಗ್ಯಕ್ಕಾಗಿ ನೃತ್ಯಮಾಡಿ
ಈ ವರ್ಷದ ವಿಶ್ವ ಮೂತ್ರಪಿಂಡ ದಿನವನ್ನು ಮಕ್ಕಳ ಆರೋಗ್ಯಕ್ಕಾಗಿ ಮುಡಿಪಾಗಿಡಲಾಗಿದೆ. ಆದ್ದರಿಂದ ಕಿಡ್ನಿ ಬಗ್ಗೆ ಕಾಳಜಿ ಇರುವವರು ಮಕ್ಕಳನ್ನು ಸೇರಿಸಿಕೊಂಡು ನರ್ತನ ಮಾಡಿ, ಅದರ ವಿಡಿಯೋವನ್ನು ನಮಗೆ ಕಳಿಸಿಕೊಡಿ. 10 ಅತ್ಯುತ್ತಮ ವಿಡಿಯೋಗಳನ್ನು ಆಯ್ದು ವೆಬ್ ಸೈಟಿನಲ್ಲಿ ಹಾಕಲಾಗುವುದು ಎಂದು ವರ್ಲ್ಡ್ ಕಿಡ್ನಿ ಡೇ ಡಾಟ್ ಆರ್ಗ್ ಹೇಳಿದೆ.
ಕಿಡ್ನಿ ಸಮಸ್ಯೆಗೆ ಪರಿಹಾರವಿದೆ
ಸಾಕಷ್ಟು ಜಾಗೃತಿ ಮೂಡುತ್ತಿರುವ ಇಂದಿನ ದಿನಗಳಲ್ಲಿ ಕಿಡ್ನಿ ಸಮಸ್ಯೆಗಳಿಗೆ ಚಿಕಿತ್ಸೆ ಲಭ್ಯವಿದೆ. ಸಾಕಷ್ಟು ಜನರು ದಾನ ನೀಡಲು ಕೂಡ ಮುಂದೆ ಬರುತ್ತಿದ್ದಾರೆ. ಆದರೂ ಮೂತ್ರಪಿಂಡದ ಸಮಸ್ಯೆಯನ್ನು ಯಾರೂ ಲಘುವಾಗಿ ಪರಿಗಣಿಸಬಾರದು. [ಹಿಂದೂ ಕಿಡ್ನಿ ಮುಸ್ಲಿಂಗೆ, ಮುಸ್ಲಿಂ ಕಿಡ್ನಿ ಹಿಂದೂಗೆ!]
ಜಾಗೃತಿಗಾಗಿ ಬೆಂಗಳೂರಿನಲ್ಲಿ ವಾಕಥಾನ್
ಮೂತ್ರಪಿಂಡದ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಾರ್ಚ್ 10ರಂದು ಬೆಳಿಗ್ಗೆ 7 ಗಂಟೆಗೆ ಬೆಂಗಳೂರಿನಲ್ಲಿ ದೊಡ್ಡ ಗಣಪತಿ ದೇವಸ್ಥಾನದಿಂದ ಲಾಲ್ ಬಾಗ್ ವರೆಗೆ ವಾಕಥಾನ್ ಏರ್ಪಡಿಸಲಾಗಿತ್ತು.
ಡಯಾಲಿಸಿಸ್ ಕೇಂದ್ರ : ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಡಯಾಲಿಸಿಸ್ಗೆ ಒಳಗಾಗುವ ಮೂಲಕ ಸಾಮಾನ್ಯ ಜನರಂತೆ ಬದುಕಬಹುದು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸರ್ಕಾರವು ಅನೇಕ ಜಿಲ್ಲಾ ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರವನ್ನು ಪ್ರಾರಂಭಿಸಿದೆ. ಗ್ರಾಮೀಣ ಭಾಗದ ಜನರು ಜಿಲ್ಲಾ ಕೇಂದ್ರ ಬಂದು ಹೋಗುವುದು ಕಷ್ಟದ ಕೆಲಸ. ಹೀಗಾಗಿ, ಪ್ರತಿ ತಾಲ್ಲೂಕಿನಲ್ಲೂ ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.