ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಲಯದಲ್ಲಿ ಯಾವಾಗ ಶ್ರಾದ್ಧ ಮಾಡಬಾರದು? ಯಾವಾಗ ಮಾಡಬೇಕು

By ವಿಷ್ಣುದಾಸ ನಾಗೇಂದ್ರಾಚಾರ್ಯ, ಮೈಸೂರು
|
Google Oneindia Kannada News

ಭಾದ್ರಪದ ಕೃಷ್ಣಪಕ್ಷದ ಪ್ರತಿಪದೆಯಿಂದ, ಭಾದ್ರಪದ ಅಮಾವಾಸ್ಯೆಯವರೆಗಿನ ಕಾಲವನ್ನು ಪಿತೃಪಕ್ಷ ಎನ್ನುತ್ತಾರೆ. ಈ ಸಂದರ್ಭದಲ್ಲಿ ನಾವು ಸಮಸ್ತ ಪಿತೃಗಳಿಗೂ ಶ್ರಾದ್ಧವನ್ನು ಮಾಡಬೇಕು. ಏಕಾದಶೀದಿವಸ ಹೊರತು ಪಡಿಸಿ ಉಳಿದ ಹದಿನಾಲ್ಕು ದಿವಸಗಳೂ ಶ್ರಾದ್ಧ ಮಾಡಬೇಕು. ಪಿತೃಪಕ್ಷದಲ್ಲಿ ಯಾವಾಗ ಶ್ರಾದ್ಧ ಮಾಡಬಾರದು? ಯಾವಾಗ ಮಾಡಬೇಕು ಎಂಬ ಕುರಿತು ವಿಶೇಷ ಲೇಖನ ಇಲ್ಲಿದೆ.

ಈ ಮಾತನ್ನು ಕಾತ್ಯಾಯನರು ಹೇಳಿದ್ದಾರೆ -

ನಭಸ್ಯಾಸ್ಯಾಪರೇ ಪಕ್ಷೇ ಶ್ರಾದ್ಧಂ ಕುರ್ಯಾದ್ ದಿನೇದಿನೇI

ಬ್ರಹ್ಮಪುರಾಣದಲ್ಲಿಯೂ ಈ ಮಾತಿದೆ -

ಆಶ್ವಯುಕ್ಕೃಷ್ಣಪಕ್ಷೇ ತು ಶ್ರಾದ್ಧಂ ಕುರ್ಯಾದ್ ದಿನೇದಿನೇ I (ನನ್ನ ಕೃಷ್ಣಾಷ್ಟಮಿಯ ಕುರಿತ ಉಪನ್ಯಾಸದಲ್ಲಿ ಇವುಗಳ ಕುರಿತು ವಿಶೇಷ ಚರ್ಚೆಯಿದೆ, ಒಮ್ಮೆ ಕೇಳಿ)

When shraddha should be and should not be performed in Pitru paksha

ಏಕಾದಶೀವ್ರತ ಸಕಲನಿಯಮಗಳಿಗಿಂತಲೂ ಮಹತ್ತ್ವದ್ದಾದ್ದರಿಂದ ವೈಷ್ಣವರು ಏಕಾದಶೀ ದಿವಸ ಶ್ರಾದ್ಧವನ್ನು ಮಾಡುವಂತಿಲ್ಲ. ಘಾತಚತುರ್ದಶಿಯಂದು ದುರ್ಮರಣ ಹೊಂದಿದವರಿಗೆ ಮಾತ್ರ ಶ್ರಾದ್ದ. ಈ ಎರಡು ದಿವಸ ಬಿಟ್ಟು ಎಲ್ಲ ದಿವಸಗಳಲ್ಲಿಯೂ ಶ್ರಾದ್ಧ ಮಾಡಬೇಕು, ಇಡಿಯ ಪಕ್ಷದಲ್ಲಿ ಶ್ರಾದ್ಧ ಮಾಡುವ ಶ್ರದ್ಧಾಳುಗಳು.

ಆದರೆ, ಈಗ ಪ್ರತೀದಿವಸ ಮಾಡುವವರು ಬಹಳ ಕಡಿಮೆ. ಮಹಾಲಯದಲ್ಲಿ ಒಂದು ದಿವಸ ಮಾತ್ರ ಪಕ್ಷವನ್ನು ಮಾಡಿಬಿಡುತ್ತಾರೆ. ಅಂಥವರೂ ಸಹ ಪ್ರತೀದಿವಸ ತರ್ಪಣವನ್ನು ಮಾತ್ರ ನೀಡಲೇ ಬೇಕು, ಏಕಾದಶಿಯನ್ನು ಹೊರತುಪಡಿಸಿ.

ಒಂದೇ ಬಾರಿ ಶ್ರಾದ್ಧ ಮಾಡುವವರು ಯಾವ ದಿವಸಗಳಲ್ಲಿ ಶ್ರಾದ್ಧ ಮಾಡಬಾರದು ಎನ್ನುವದನ್ನು ವಸಿಷ್ಠರು ತಿಳಿಸಿದ್ದಾರೆ -

ನಂದಾಯಾಂ ಭಾರ್ಗವದಿನೇ ಚತುರ್ದಶ್ಯಾಂ ತ್ರಿಜನ್ಮಸು I
ಏಷು ಶ್ರಾದ್ಧಂ ನ ಕುರ್ವೀತ ಗೃಹೀ ಪುತ್ರಧನಕ್ಷಯಾತ್ II

1. ಪ್ರತಿಪದಾ, ಷಷ್ಠೀ ಮತ್ತು ಏಕಾದಶಿಗಳಿಗೆ ನಂದಾತಿಥಿ ಎಂದು ಹೆಸರು. ಈ ತಿಥಿಗಳಂದು ಮಹಾಲಯಶ್ರಾದ್ಧ ಮಾಡಬಾರದು.

2. ಶುಕ್ರವಾರದಂದು ಮಹಾಲಯಶ್ರಾದ್ಧ ಮಾಡಬಾರದು.

3. ಘಾತಚತುರ್ದಶಿಯಂದು ಮಹಾಲಯಶ್ರಾದ್ಧ ಮಾಡಬಾರದು. ಅಫಘಾತ - ಕೊಲೆ - ಆತ್ಮಹತ್ಯೆಗಳಿಂದ ಸತ್ತವರಿಗೆ ಮಾತ್ರ ಘಾತಚತುರ್ದಶಿಯಂದು ಶ್ರಾದ್ಧ.

4. ರೋಹಿಣೀ, ರೇವತೀ ಮತ್ತು ಮಘಾ ಈ ನಕ್ಷತ್ರಗಳು ಇರುವ ದಿವಸ ಮಹಾಲಯಶ್ರಾದ್ಧವನ್ನು ಮಾಡಬಾರದು.

ಮೇಲೆ ಹೇಳಿದ ದಿವಸಗಳಲ್ಲಿ ಮಹಾಲಯಶ್ರಾದ್ಧ ಮಾಡಿದರೆ ಮಕ್ಕಳಿಗೆ ತೊಂದರೆಯುಂಟಾಗುತ್ತದೆ ಮತ್ತು ಸಂಪತ್ತು ನಾಶವಾಗುತ್ತದೆ ಎಂದು ವಸಿಷ್ಠರು ಮತ್ತು ವೃದ್ದಗರ್ಗರು ಇಬ್ಬರೂ ತಿಳಿಸಿದ್ದಾರೆ.

ಪ್ರಾಜಾಪತ್ಯೇ ಚ ಪೌಷ್ಣೇ ಚ ಪಿತ್ರ್ಯಕ್ರ್ಷೇ ಭಾರ್ಗವೇ ತಥಾ I
ಯಸ್ತು ಶ್ರಾದ್ಧಂ ಪ್ರಕುರ್ವೀತ ಸತ್ಯ ಪುತ್ರೋ ವಿನಶ್ಯತಿ II

ಹೀಗಾಗಿ ಒಂದೇ ಬಾರಿ ಶ್ರಾದ್ಧ ಮಾಡುವವರು ಈ ನಿಯಮವನ್ನು ಅವಶ್ಯವಾಗಿ ಅನುಸರಿಸಬೇಕು. ಈ ಬಾರಿ (ಮನ್ಮಥಸಂವತ್ಸರದ ಮಹಾಲಯದಲ್ಲಿ) ಕೆಳಗಿನ ದಿವಸಗಳಂದು ಶ್ರಾದ್ಧ ಮಾಡಬಾರದು.

ಸೆಪ್ಟೆಂಬರ್ 29ನೆಯ ತಾರೀಕು ರೇವತೀನಕ್ಷತ್ರವಿರುವದರಿಂದ ಪಕ್ಷ ಮಾಡಬಾರದು.

ಅಕ್ಟೋಬರ್ 2 ನೆಯ ತಾರೀಕು ಶುಕ್ರವಾರವಾದ್ದರಿಂದ ಪಕ್ಷ ಮಾಡಬಾರದು.

3ನೆಯ ತಾರೀಕು ಷಷ್ಠೀತಿಥಿ ಮತ್ತು ರೋಹಿಣೀ ನಕ್ಷತ್ರವಿರುವದರಿಂದ ಪಕ್ಷ ಮಾಡಬಾರದು.

9ನೆಯ ತಾರೀಕು ಮಘಾನಕ್ಷತ್ರ ಮತ್ತು ಶುಕ್ರವಾರವಿರುವದರಿಂದ ಪಕ್ಷ ಪಕ್ಷಮಾಡಬಾರದು.

11ನೆಯ ತಾರೀಕು ಚತುರ್ದಶಿಯಿರುವದರಿಂದ ಪಕ್ಷ ಮಾಡಬಾರದು. ದುರ್ಮರಣ ಹೊಂದಿದ ವ್ಯಕ್ತಿಗಳಿಗೆ ಮಾತ್ರ ಆ ದಿವಸ ಶ್ರಾದ್ಧ.

ಇಡಿಯ ಮಹಾಲಯದಲ್ಲಿ ಪ್ರತೀದೀವಸವೂ ಶ್ರಾದ್ಧ ಮಾಡುವವರು ಮೇಲಿನ ದಿವಸಗಳಲ್ಲಿಯೂ, ಏಕಾದಶಿಯನ್ನು ಹೊರತು ಪಡಿಸಿ ಶ್ರಾದ್ಧ ಮಾಡಬಹುದು. ಅವರಿಗೆ ಮೇಲಿನ ನಿಯಮಗಳು ಅನ್ವಯಿಸುವದಿಲ್ಲ ಎಂದು ಶ್ರೀ ವೇದವ್ಯಾಸದೇವರ ಶಿಷ್ಯರಾದ ಕಾರ್ಷ್ಣಾಜಿನಿಋಷಿಗಳು ಹೇಳಿದ್ದಾರೆ.

ನಭಸ್ಯಸ್ಯಾಪರೇ ಪಕ್ಷೇ ಶ್ರಾದ್ಧಂ ಕುರ್ಯಾದ್ ದಿನೇದಿನೇ I
ನೈವ ನಂದ್ಯಾದಿ ವರ್ಜ್ಯಂ ಸ್ಯಾನ್ನೇ ವ ವರ್ಜ್ಯಾ ಚತುರ್ದಶೀ II

ಹಾಗಾದರೆ ಯಾವ ದಿವಸದಲ್ಲಿ ಪಕ್ಷ ಮಾಡುವದು ಉತ್ತಮ ಪಕ್ಷ?

ಈ ಪ್ರಶ್ನೆಗೆ ಕಾತ್ಯಾಯನರು ಉತ್ತರವನ್ನು ನೀಡಿದ್ದಾರೆ -

ಯಾ ತಿಥಿರ್ಯಸ್ಯ ಮಾಸಸ್ಯ ಮೃತಾಹೇ ತು ಪ್ರವರ್ತತೇ I
ಸಾ ತಿಥಿಃ ಪಿತೃಪಕ್ಷೇ ತು ಪೂಜನೀಯಾ ಪ್ರಯತ್ನತಃ II

ತಂದೆಯವರು ಪ್ರತಿಪದಾ ದಿವಸ ಮರಣ ಹೊಂದಿದ್ದಲ್ಲಿ, ಪ್ರತಿಪದಾ ದಿವಸವೇ ಪ್ರಯತ್ನ ಪಟ್ಟು ಶ್ರಾದ್ಧ ಮಾಡಬೇಕು. ತಂದೆ ನವಮೀ ತಿಥಿಯಂದು ಮರಣ ಹೊಂದಿದ್ದರೆ ಅವಿಧವಾನವಮಿಯಂದೇ ಪಕ್ಷವನ್ನು ಮಾಡಬೇಕು. ಆದರೆ, ಏಕಾದಶೀ ಮತ್ತು ಚತುರ್ದಶಿಯಂದು ಮಾತ್ರ ಪಕ್ಷ ಮಾಡುವ ಹಾಗಿಲ್ಲ. ಹೀಗಾಗಿ ತಂದೆಯವರ ಮೃತತಿಥಿ ಈ ಬಾರಿ 29, 2, 3, 9 ನೇ ತಾರಿಕಿನಂದು ಬಂದಿದ್ದಲ್ಲಿ ಅವಶ್ಯವಾಗಿ ಮಾಡಬಹುದು.

English summary
When shraddha should be and should not be performed during Pitru paksha, 16–lunar day period. During this period Hindus pay homage to their ancestor (Pitrs), especially through food offerings. Vishnudasa Nagendracharya explains when and how to perform Pitru Paksha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X