ಇಂದು 'ರಥಸಪ್ತಮಿ': ಸೂರ್ಯನ ಹಬ್ಬದ ಮಹತ್ವ
Recommended Video
ಸಪ್ತ ಕುದುರೆಗಳ ರಥವನ್ನೇರಿದ ಸೂರ್ಯ ತನ್ನ ಪಥವನ್ನು ಉತ್ತರದತ್ತ ತಿರುಗಿಸಿ, ಹೊರಡುವ ಪರ್ವಕಾಲವೇ ಈ ರಥಸಪ್ತಮಿ. ಜಗದ ಅಧಿನಾಯಕ ಸೂರ್ಯ ರಥಸಪ್ತಮಿ ಹಬ್ಬದ ಕೇಂದ್ರ ಬಿಂದು. ಹಿಂದು ಪಂಚಾಂಗದ ಪ್ರಕಾರ ಮಾಘ ಮಾಸದ ಸಪ್ತಮಿಯಂದು ರಥಸಪ್ತಮಿ ಆಚರಿಸಲಾಗುತ್ತದೆ. ಈ ವರ್ಷ ಜ.24 ರಂದು ದೇಶದೆಲ್ಲೆಡೆ ರಥಸಪ್ತಮಿ ಆಚರಣೆ ನಡೆಯುತ್ತಿದೆ.
ಉತ್ತಮ ಆರೋಗ್ಯ ಮತ್ತು ಎಲ್ಲರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿ ಈ ದಿನ ಸೂರ್ಯನನ್ನು ಪೂಜಿಸಲಾಗುತ್ತದೆ. ರಥಸಪ್ತಮಿಯ ನಂತರ ಚಳಿ ಕಡಿಮೆಯಾಗಿ ಬಿಸಿಲಿನ ಪ್ರಖರತೆ ಹೆಚ್ಚುತ್ತದೆ.
ರಥಸಪ್ತಮಿ : ಸಪ್ತಕುದುರೆಗಳ ರಥವೇರುವ ಸೂರ್ಯನಿಗೆ ನಮಸ್ಕಾರ
ಈ ದಿನ ಸೂರ್ಯೋದಯದ ಸಮಯದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿ, ಸೂರ್ಯನಿಗೆ ಅರ್ಘ್ಯ ನೀಡಿದರೆ ಸಕಲ ದುಃಖಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯೂ ಇದೆ.
ಸೂರ್ಯನೇ ಅಧಿಪತಿ
ನವಗ್ರಹಗಳಿಗೆ ಸೂರ್ಯನೆ ಅಧಿಪತಿ. ಸೌರಕೇಂದ್ರ ವ್ಯವಸ್ಥೆಯನ್ನು ವಿಜ್ಞಾನಿಗಳು ಪತ್ತೆ ಮಾಡುವ ಮೊದಲೇ, ಹಿಂದು ಪುರಾಣಗಳಲ್ಲಿ ಅದು ಉಲ್ಲೇಖವಾಗಿತ್ತು. ಅದಕ್ಕೆಂದೇ ನಾವು ನವಗ್ರಹಗಳಿಗೆ ಸೂರ್ಯನೇ ಅಧಿಪತಿ ಎಂದು ಸೂರ್ಯನ ಪೂಜೆಯನ್ನು ಎಂದಿನಿಂದಲೋ ಮಾಡಿಕೊಂಡು ಬಂದಿದ್ದೆವು. ಸಮಸ್ತ ವಿಶ್ವಕ್ಕೂ ಸೂರ್ಯನೇ ಒಡೆಯ ಎಂಬುದನ್ನು ಕಂಡುಕೊಂಡ ನಮ್ಮ ಋಷಿಮುನಿಗಳು ರಥಸಪ್ತಮಿಯಂದು ಸೂರ್ಯನನ್ನು ಪೂಜಿಸುತ್ತ ಬಂದಿದ್ದಾರೆ.
ಪವಿತ್ರ ಸ್ನಾನ
ಈ ದಿನ ಬೆಳಿಗ್ಗೆ ಬೇಗ ಎದ್ದು, ಪವಿತ್ರ ನದಿಗಳಲ್ಲಿ ಸ್ನಾನ ಮಾಡುವಾಗ ಎಕ್ಕದ ಎಲೆಯನ್ನು ತಲೆ ಮೇಲೆ ಇಟ್ಟುಕೊಳ್ಳುವ ಪರಿಪಾಠವಿದೆ. ಇದು ಸೂರ್ಯನಿಗೆ ಪ್ರಿಯವಾದ ಎಲೆ ಎಂಬ ಕಾರಣಕ್ಕೆ ಈ ದಿನ ಎಕ್ಕದ ಎಲೆ ಉಪಯೋಗಿಸಲಾಗುತ್ತದೆ. ಮನೆಯ ಮುಂದೆ ಸುಂದರ ರಂಗೋಲಿ ಇಟ್ಟು ಹೆಂಗೆಳೆಯರು ರಥಸಪ್ತಮಿಯನ್ನು ಸಂಭ್ರಮಿಸುತ್ತಾರೆ.ರಥಸಪ್ತಮಿಯಂದು ಶುಭದ ಸೂಚಕವಾಗಿ ಹಾಲುಕ್ಕಿಸುವ ಪರಿಪಾಠವೂ ಕೆಲವೆಡೆ ಇದೆ. ಇದು ಶುಭ ಕಾರ್ಯಗಳ ಆರಂಭದ ಸೂಚಕವೂ ಹೊದು.
ಸೂರ್ಯನ ಪೂಜೆ ಏಕೆ ?
ಸೂರ್ಯ ಆರೋಗ್ಯ ಮತ್ತು ಐಶ್ವರ್ಯ ದತ್ತ ಎಂಬ ಕಾರಣಕ್ಕೆ ಆತನನ್ನು ಭಕ್ತಿ-ಭಾವದಿಂದ ಪೂಜಿಸಲಾಗುತ್ತದೆ. ಅಲ್ಲದೆ ಬೆಳಗ್ಗಿನ ಸೂರ್ಯನ ಎಳೆಬಿಸಿಲಲ್ಲಿ ದೇಹಕ್ಕೆ ಶಕ್ತಿ ನೀಡುವ ಅಂಶಗಳಿವೆ ಎಂಬುದೂ ವೈಜ್ಞಾನಿಕವಾಗಿ ಸಾಬೀತಾಗಿದೆ. ದೇಹಕ್ಕೆ ಅತ್ಯಗತ್ಯವಾದ ವಿಟಾಮಿನ್ ಡಿ ಅಂಶ ಸೂರ್ಯಕಿರಣದಲ್ಲಿ ಹೇರಳವಾಗಿರುತ್ತದೆ. ಆದ್ದರಿಂದ ಸೂರ್ಯನನ್ನು ಪೂಜಿಸಲಾಗುತ್ತದೆ.
ಸೂರ್ಯ ನಮಸ್ಕಾರ
ಯೋಗ ಪದ್ಧತಿಯಲ್ಲಿ ಸೂರ್ಯ ನಮಸ್ಕಾರಕ್ಕೆ ಅತೀ ಹೆಚ್ಚಿನ ಪ್ರಾಶಸ್ತ್ಯವಿದೆ. ಈ ದಿನ ಬೆಳಿಗ್ಗೆ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಸೂರ್ಯದೇವನಿಗೆ ಕೃತಜ್ಞತೆ ಅರ್ಪಿಸಲಾಗುತ್ತದೆ.