ಒಣಹಣ್ಣುಗಳ ಸರದಾರ ರಸಲ್ ಮಾರ್ಕೆಟ್ ಮಹಮ್ಮದ್
ಬೆಂಗಳೂರಿನ ಶಿವಾಜಿ ನಗರ ಯಾರಿಗೆ ಚಿರಪರಿಚಿತವಿಲ್ಲ ಹೇಳಿ. ಇದನ್ನು 1927 ಕಂಟೋನ್ಮೆಂಟ್ ನ ಬ್ರಿಟಿಷ್ ಸೈನಿಕರಿಗೆ ಬೇಕಾದ ವಸ್ತುಗಳನ್ನು ಸರಬರಾಜು ಮಾಡುವ ದಿಶೆಯಿಂದ ಸ್ಥಾಪಿಸಲಾಗಿತ್ತು. ಈಗಲೂ ಇದು ನಗರದ ಪ್ರಮುಖ ಭಾಗ. ಇಲ್ಲಿ ಕಾಣಬರುವ ರಸಲ್ ಮಾರುಕಟ್ಟೆ ರಮ್ಜಾನ್ ಮಾಸದಲ್ಲಿ ತುಂಬಾ ಚಟುವಟಿಕೆಗಳಿಂದ ಕೂಡಿರುತ್ತದೆ. ಬಗೆಯ ತಿನಿಸುಗಳು, ಖರ್ಜೂರಗಳು ನಿಮ್ಮನ್ನು ಆಕರ್ಷಿಸುತ್ತವೆ. ಖರ್ಜೂರದ ಸವಿಯ ಕಥೆಯನ್ನು ಮಹಮ್ಮದ್ ಇದ್ರೇಸ್ ಅವರು ಒನ್ಇಂಡಿಯಾದೊಂದಿಗೆ ಹಂಚಿಕೊಂಡಿದ್ದಾರೆ.
ಇದೊಂದು ಜಾತ್ಯಾತೀತ ವಲಯವೂ ಕೂಡ ಹೌದು. ಇಲ್ಲಿ ಸುಮಾರು 300 ವರ್ಷಗಳಷ್ಟು ಪುರಾತನ ಮಸೀದಿಗಳಿವೆ. ಕ್ರೈಸ್ರರ ಪ್ರಾರ್ಥನಾ ಮಂದಿರ, ಅಂದರೆ ಸೇಂಟ್ ಮೇರಿಯವರ ಬೆಸಲಿಕಾ ಕೂಡ ಇದೆ. ಸುತ್ತಮುತ್ತ ಹುಡುಕಿದರೆ ನಿಮಗೊಂದು ದೇವಾಲಯವೂ ದೊರೆಯುವುದು. ಹೀಗೆ ಸರ್ವಧರ್ಮಿಯ ವಲಯ ಇಂದು ಜಗದ್ವಿಖ್ಯಾತೆಯನ್ನು ಪಡೆದಿದೆ ಎಂದರೆ ನಿಮಗೆ ಅತಿಶಯೋಕ್ತಿ ಎನಿಸದಿರದು.[ಚಿತ್ರಗಳಲ್ಲಿ ದೇಶದೆಲ್ಲೆಡೆ ರಂಜಾನ್ ಸಂಭ್ರಮ]
ಹೌದು. ಈ ನಗರದ ಖ್ಯಾತಿಗೆ ಕಾರಣ ಇಲ್ಲಿ ಕಾಣಬರುವ ರಸಲ್ ಮಾರುಕಟ್ಟೆ. ಈ ಮಾರುಕಟ್ಟೆ ಯಾವಾಗಲೂ ಜನರಿಂದ ತುಂಬಿ ತುಳುಕುತ್ತದೆ. ಅದರಲ್ಲೂ ಮುಖ್ಯವಾಗಿ ಮುಸಲ್ಮಾನರ ಪವಿತ್ರ ತಿಂಗಳಾದ ರಂಜಾನ್ ಹಾಗೂ ಕ್ರಿಸ್ ಮಸ್ ತಿಂಗಳಿನಲ್ಲಿ ಈ ಮಾರ್ಕೆಟ್ ಗೆ ಎಲ್ಲಿಲ್ಲದ ಬೇಡಿಕೆ. ಇಲ್ಲಿ ಹಾಗೆಯೇ ಸುಮ್ಮನೆ ಒಳ ಪ್ರವೇಶಿಸಿದರೆ ಸಾಕು ಹಣ್ಣು, ಹೂವಿನ ಸುಗಂಧಕ್ಕಿಂತ ಇಲ್ಲಿರುವ 64 ಬಗೆಯ ಖರ್ಜೂರದ ಪರಿಮಳವೇ ಘಮಘಮಿಸುತ್ತಿರುತ್ತದೆ. ಕ್ಷಣ ಮಾತ್ರದಲ್ಲಿ ಅಲ್ಲಿ ವಿಹರಿಸುವ ಪ್ರತಿಯೋರ್ವರನ್ನು ತನ್ನತ್ತ ಬರಮಾಡಿಕೊಳ್ಳುತ್ತದೆ.
ರಾಜಕಾರಣಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಬೆಂಗಳೂರಿನ ನಾನಾ ಮೂಲೆಗಳಿಂದ ಜನ ಸಾಮಾನ್ಯರನ್ನು ತನ್ನತ್ತ ಸೆಳೆಯುತ್ತಿರುವ ಈ ಖರ್ಜೂರ ಅಂಗಡಿಯ ಸ್ಥಾಪನಾ ವರ್ಷ 1927. ಇದರ ಮೂಲ ಸ್ಥಾಪಕರು ಮಹಮ್ಮದ್ ಇದ್ರೇಸ್ ಚೌಧರಿ. ಒಟ್ಟು ಪ್ರಪಂಚದಲ್ಲಿ 300 ವಿವಿಧ ಬಗೆಯ ಖರ್ಜೂರಗಳು ದೊರೆಯುತ್ತವೆ. ಅದರಲ್ಲಿ ಇವರು 64 ಬಗೆಯ ಖರ್ಜೂರಗಳನ್ನು ಸುಮಾರು 7 ಕಡೆಯಿಂದ ಆಮದು ಮಾಡಿಕೊಂಡು ಬೆಂಗಳೂರಿನ ಜನತೆಗೆ ವಿತರಿಸುತ್ತಿರುವ ಹೆಗ್ಗಳಿಕೆ ನನ್ನದು ಎಂದು ಒನ್ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮನದುಂಬಿ ನುಡಿಯುತ್ತಾರೆ.

ಸಂದಿರುವ ಪ್ರಶಸ್ತಿಗಳು:
ಮೊಹಮ್ಮದ್ ಬಿಬಿಎಮ್ ಪಿ ಏರ್ಪಡಿಸುವ ಸ್ಪರ್ಧೆಯಲ್ಲಿ ಎರಡು ಬಾರಿ ಬಂಗಾರ ಪದಕ ಪಡೆದಿದ್ದಾರೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ನಾನಾ ಗಣ್ಯಾಧಿಗಣ್ಯರಿಂದ ಸನ್ಮಾನ ಸ್ವೀಕರಿಸಿದ್ದಾರೆ. ಸದಾ ಎಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಳ್ಳುವ ಮೊಹಮ್ಮದ್ ಅವರ ಮೇಲ್ ವಿಳಾಸ [email protected]

ಯಾವ ಯಾವ ಹೆಸರಿನ ಖರ್ಜೂರಗಳು?
ಮಧುಮೇಹಿಗಳಿಗಂತೂ ಇದು ಸಂತಸದ ಸುದ್ಧಿಯೂ ಹೌದು. ಇಲ್ಲಿ ಶುಗರ್ ಫ್ರೀ ಖರ್ಜೂರದಿಂದ ಅತ್ಯಂತ ಸ್ವಾದ, ಸಿಹಿಭರಿತ ಹಣ್ಣುಗಳು ಇಲ್ಲಿ ದೊರಕುತ್ತದೆ. ಪ್ರಂಪಂಚದಲ್ಲಿ ಮೊದಲ ಸ್ಥಾನದಲ್ಲಿರುವ ಅಜ್ವಾ, ಮೆಡ್ ಜಾಲ್ ಕಿಂಗ್, ಕಲ್ಮಿ, ಸುಕ್ರೀಲ್, ಮಬ್ರೂನ್, ಅಂಜುರ, ಸಾಗಯ್, ಅಂಬರು ಹೀಗೆ ಇನ್ನು ಮುಂತಾದ ಹೆಸರಿನ ಖರ್ಜೂರಗಳು ಲಭ್ಯವಾಗುತ್ತದೆ.
ಇಲ್ಲಿ ಖರ್ಜೂರದ ಜೊತೆಯಲ್ಲಿ ಒಣದ್ರಾಕ್ಷಿ, ಗೋಡಂಬಿ, ವಿವಿಧ ಬಗೆಯ ಚಾಕಲೇಟ್ ಗಳು ಸಿಗುತ್ತದೆ. ಇದರ ಪ್ರಾರಂಭಿಕ ಬೆಲೆ 150ರೂ ಇದ್ದು, 4000 ದವರೆಗೂ ಇದರ ಬೆಲೆ ಇದೆ. ಹಣ್ಣಿನ ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದು.

ರಂಜಾನ್ ಗೆ ಖರ್ಜೂರಕ್ಕೆ ಏನಿದೆ ಸಂಬಂಧ ?
ಮುಸಲ್ಮಾನ ಬಾಂಧವರಲ್ಲಿ ರಂಜಾನ್ ನ ಉಪವಾಸ ತಿಂಗಳು ಬಹಳ ಪ್ರಾಶಸ್ತ್ಯವಾದುದು. ಇದನ್ನು ಕೇವಲ ಧಾರ್ಮಿಕ ಪ್ರದರ್ಶನಕ್ಕಾಗಿ ಮಾತ್ರವಲ್ಲ. ದೈಹಿಕ ಆರೋಗ್ಯದ ದೃಷ್ಟಿಯಿಂದಲೂ ಒಳಿತಾದುದು ಎಂಬುದು ಇವರ ನಂಬಿಕೆ. ಇದು ನಿಜವೂ ಕೂಡ. ಇಡೀ ದಿನದಲ್ಲಿ 14 ಗಂಟೆಗಳ ಕಾಲ ಉಪವಾಸ ಇರುವ ಇವರು ಆಹಾರ ಸೇವಿಸುವುದು ಸೂರ್ಯಸ್ತದ ನಂತರ. ಅಲ್ಲಿಯವರೆಗೆ ಅವರ ದೈಹಿಕ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸವಾಗುವ ಸಾಧ್ಯತೆಗಳಿರುತ್ತವೆ.
ಆ ಎಲ್ಲಾ ವ್ಯತ್ಯಾಸವನ್ನು ಸಮತೂಗಿಸುವಂತಹ ಸಾಮರ್ಥ್ಯ ಈ ಡ್ರೈ ಫ್ರೂಟ್ಸ್ ನಲ್ಲಿದೆ. ಅದರಲ್ಲಿ ಮುಖ್ಯವಾಗಿ ಎಲ್ಲಾ ಹಣ್ಣುಗಳಿಗಿಂತ ಖರ್ಜೂರದ ಹಣ್ಣಿಗೆ ಶಕ್ತಿಯನ್ನು ಒದಗಿಸುವ ಗುಣ ಸಾಕಷ್ಟಿದೆ. ಒಂದು ಖರ್ಜೂರ ಇಡೀ ದಿನ ಆ ವ್ಯಕ್ತಿಯ ದೈಹಿಕ ಶಕ್ತಿಯನ್ನು ಸಮತೋಲನಗೊಳಿಸುತ್ತದೆ. ಸದಾ ಉಲ್ಲಾಸ ಭರಿತವನ್ನಾಗಿ ಮಾಡುತ್ತದೆ. ಹಾಗಾಗಿ ರಂಜಾನ್ ತಿಂಗಳಿಗೂ ಖರ್ಜೂರದ ಹಣ್ಣಿಗೂ ನಂಟು ಜಾಸ್ತಿ.

ಖರ್ಜೂರದಲ್ಲಿ ಏನೇನು ಔಷಧಿ ಗುಣಗಳಿವೆ?
ಒಂದು ಖರ್ಜೂರ ಇಡೀ ದಿನ ಆ ವ್ಯಕ್ತಿಯ ದೈಹಿಕ ಶಕ್ತಿಯನ್ನು ಸಮತೋಲನಗೊಳಿಸುತ್ತದೆ. ಸದಾ ಉಲ್ಲಾಸ ಭರಿತವನ್ನಾಗಿ ಮಾಡುತ್ತದೆ. ಇಷ್ಟೇ ಅಲ್ಲದೇ ನಾನಾ ಬಗೆಯ ಔಷಧಿ ಗುಣಗಳನ್ನು ಹೊಂದಿರುವ ಇದು ಚರ್ಮಕ್ಕೆ ಸಂಬಂಧಿಸಿದ ಖಾಯಿಲೆಗಳ ನಿವಾರಣೆ, ಕಾಲ್ಸಿಯಂ ಹೆಚ್ಚಳ, ರಕ್ತ ಶುದ್ಧೀಕರಣ, ಕಿಡ್ನಿ, ಹೃದಯ ಸಂಬಂಧಿ ಖಾಯಿಲೆ, ಮೂಳೆಗಳಿಗೆ ಸಂಬಂಧಪಟ್ಟಂತೆ ಹಾಗೂ ನಿಶಕ್ತತೆಯನ್ನು ದೂರ ಇರಿಸುವಲ್ಲಿ ಇದರ ಪಾತ್ರ ಅಮೋಘವಾದುದು.
ಹಣಕ್ಕಿಂತ ಜನರ ಮನಸ್ಸಿನ, ದೇಹದ ಆರೋಗ್ಯ ಮುಖ್ಯ ಎಂದು ಹೇಳುವ ಇವರು ಇದನ್ನು ಆರಂಭಿಸಿದ್ದು ಒಂದು ಹವ್ಯಾಸವಾಗಿ. ಆದರೆ ಇಂದು ವೃತ್ತಿಯಾಗಿ ಮಾಡಿಕೊಂಡು ಸುಮಾರು ಕೆಲಸಗಾರರ ಸಮಾಗಮದಲ್ಲಿ ಜನರನ್ನು ನಗುಮೊಗದಿಂದ, ಸ್ನೇಹಭಾವದಿಂದ ಕರೆತರುವಲ್ಲಿ ಬಹಳ ಯಶಸ್ವಿಯಾಗಿದ್ದಾರೆ.

ಎಲ್ಲೆಲ್ಲಿಂದ ರವಾನೆ?
ಬ್ರಿಟಿಷರ ಕಾಲದಲ್ಲಿ ಆರಂಭಗೊಂಡ ಇದು ಇರಾಕ್, ಇರಾನ್, ಜರ್ದಾನ್, ಟರ್ಕಿ, ಸೌತ್ ಆಫ್ರಿಕಾ, ಮಕ್ಕಾ ಮದೀನಾ ಸೇರಿದಂತೆ ಸುಮಾರು 7 ಕಡೆಯಿಂದ ಖರ್ಜೂರದ ಹಣ್ಣನ್ನು ತರಿಸಿಕೊಳ್ಳಲಾಗುತ್ತದೆ. ಇದು ಭಾರತದಲ್ಲಿ 64 ಬಗೆಯ ವಿವಿಧ ಖರ್ಜೂರಗಳನ್ನು ಆಮದು ಮಾಡಿಕೊಳ್ಳುವ ಏಕೈಕ ಶಾಪ್ ಎಂಬ ಖ್ಯಾತಿಗೂ ಇದು ಒಳಗಾಗಿದೆ.












Click it and Unblock the Notifications