ವೈಕುಂಠ ಏಕಾದಶಿ; ಸ್ವರ್ಗದ ಬಾಗಿಲು ತಟ್ಟಲು ಸಕಾಲ
ಹಿಂದೂ ಪಂಚಾಗದ ಪ್ರಕಾರ ಪುಷ್ಯ ಮಾಸ, ಮಾರ್ಗಶಿರ ಶುಕ್ಲ ಪಕ್ಷದ ಏಕಾದಶಿ ದಿನವನ್ನು "ವೈಕುಂಠ ಏಕಾದಶಿ" ಎಂದು ವೈಷ್ಣವ ಅನುಯಾಯಿಗಳು ಆಚರಿಸುವುದು ತಮಗೆಲ್ಲ ತಿಳಿದಿದೆ. ಅವತ್ತು ಉಪವಾಸ ಮಾಡಿ, ಶ್ರೀಮನ್ನಾರಾಯಣನ ದರ್ಶನ ಪಡೆದರೆ ಸ್ವರ್ಗದ ಆಕಾಂಕ್ಷೆ ಇಟ್ಟುಕೊಂಡಿರುವ ಯಾರು ಬೇಕಾದರೂ ಅಲ್ಲಿಗೆ ತೆರಳಬಹುದಾಗಿದೆ.
ಹಿಂದೂ ಧರ್ಮದ ಅತ್ಯಂತ ಮನಮೋಹಕ ಕಲ್ಪನೆಗಳಲ್ಲಿ ಕಳಶಪ್ರಾಯವಾದದ್ದು ಸ್ವರ್ಗದ ಕಲ್ಪನೆ. ಹಿಂದೂ ಧರ್ಮ ಮಾತ್ರವಲ್ಲ. ಇತರ ಎಲ್ಲ ಧರ್ಮಗಳೂ ಕೂಡ ಸಹಜವಾಗಿ ತಮ್ಮದೇ ಆದ ಸ್ವರ್ಗದ ಕಲ್ಪನೆಗಳನ್ನು ಇಟ್ಟುಕೊಂಡಿವೆ. ಏಕೆಂದರೆ, ಇಲ್ಲಿಗೆ ಬಂದಿರುವ ಎಲ್ಲರೂ ಅಲ್ಲಿಗೆ ಹೋಗಬೇಕು. ಹೋದರೆ, ಸ್ವರ್ಗಕ್ಕೇ ಹೋಗಬೇಕು.
ನೀವೂ ಸ್ವರ್ಗದ ಅಭಿಲಾಷಿಗಳಾಗಿದ್ದರೆ ಸ್ವರ್ಗದ ಬಾಗಿಲು ತಟ್ಟಲು ಇದು ಪ್ರಶಸ್ತವಾದ ಸಕಾಲ. ವೈಕುಂಠ ಏಕಾದಶಿ ದಿನ ಉಪವಾಸ ವ್ರತ ಆಚರಿಸಿದರೆ ಸತ್ತಮೇಲೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆಂಬ ನಂಬಿಕೆಯಿದೆ. ಮಹಾಲಕ್ಷ್ಮಿಪುರದ ಶ್ರೀನಿವಾಸ ಸೇವಾ ಸಮಿತಿ ಟ್ರಸ್ಟ್ ದೇವರಿಗೆ ವಜ್ರಕವಚಧಾರಣೆ ಮತ್ತು ಹೂವಿನ ವಿಶೇಷ ಅಲಂಕಾರ ಏರ್ಪಡಿಸಿದೆ. ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ನಿರಂತರವಾಗಿ ದರ್ಶನ ವ್ಯವಸ್ಥೆ ಮಾಡಲಾಗಿದೆ.
ವಿ ವಿ ಪುರದಲ್ಲಿನ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ವಜ್ರಾಂಗಧಾರಣೆ ಏರ್ಪಡಿಸಲಾಗಿದೆ. ಬೆಳಗ್ಗೆ 9ರಿಂದ ರಾತ್ರಿ 10 ಗಂಟೆಯ ತನಕ ಭಜನೆ, ದೇವರ ನಾಮ ಗಾಯನ ನಡೆಯಲಿದೆ. ಶ್ರೀ ಪಾಂಡುರಂಗ ವಿಷ್ಣು ಸಹಸ್ರನಾಮ ಮಂಡಳಿಯು ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಹಾಯಜ್ಞ ಮತ್ತು ಕೋಟಿ ತುಳಸಿ ಅರ್ಚನೆ ಆಯೋಜಿಸಿದೆ.
ಮಲ್ಲೇಶ್ವರದ ಆಟದ ಮೈದಾನದಲ್ಲಿ ಡಿ.28ರಂದು ಮುಂಜಾನೆ 5 ಗಂಟೆಯಿಂದ ಡಿ.29ರ ಬೆಳಗ್ಗೆ 8 ಗಂಟೆಯವರೆಗೂ ಕಾರ್ಯಕ್ರಮ ನಡೆಯಲಿದೆ. ನಿರಂತರ 27 ಗಂಟೆಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ 108 ಬಾರಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಾಗುತ್ತದೆ.
ಡಿ.28ರಂದು ಬೆಳಗೆ 8.30ಕ್ಕೆ ಪೇಜಾವರ ಮಠಾಧೀಶ ವಿಶ್ವೇಶ್ವತೀರ್ಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಕೋಟಿ ಅರ್ಚನೆ ನೆರವೇರಲಿದೆ. ಕೋಟಿ ಅರ್ಚನೆ ಮಾಡಬಯಸುವವರು ಮಂಡಳಿ ಕಾರ್ಯದರ್ಶಿ ಶಾಲಿನಿ ಜಯಕುಮಾರ್ ಅವರನ್ನು 98866 43917, 99865 04001 ಮೂಲಕ ಸಂಪರ್ಕಿಸಬಹುದು. ಅಂದು ಸಂಜೆ 6ಗಂಟೆಗೆ ವಿಷ್ಣು ಸಹಸ್ರನಾಮ ಕುರಿತು ವಿದ್ವಾಂಸ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ಅವರಿಂದ ವಿಶೇಷ ಪ್ರವಚನ ನಡೆಯಲಿದೆ.