ಬೆಳಗಾವಿಯಲ್ಲಿ ಗಣಪನ ಉತ್ಸವ; ಮಾರ್ಗಸೂಚಿ ಕೊಟ್ಟ ಜಿಲ್ಲಾಡಳಿತ
ಬೆಳಗಾವಿ, ಆಗಸ್ಟ್ 14: ಪ್ರತಿ ವರ್ಷ ಗಣೇಶ ಹಬ್ಬ ಬರುವ ತಿಂಗಳ ಮುನ್ನವೇ ಎಲ್ಲೆಲ್ಲೂ ತಯಾರಿ ಜೋರಾಗಿ ನಡೆಯುತ್ತಿತ್ತು. ಬೆಳಗಾವಿಯಲ್ಲಂತೂ ಮೂರು ತಿಂಗಳ ಮುನ್ನವೇ ಹಬ್ಬದ ಸಡಗರ ತುಂಬಿಕೊಳ್ಳುತ್ತಿತ್ತು. ಗಣೇಶ ಹಬ್ಬದ ಸಂಭ್ರಮ ಪ್ರತಿ ಬೀದಿಯಲ್ಲೂ ರಾರಾಜಿಸುತ್ತಿತ್ತು. ಆದರೆ ಈ ಬಾರಿ ಕೊರೊನಾ ಸೋಂಕಿನ ಪರಿಣಾಮ ಗಣೇಶ ಹಬ್ಬದ ಮೇಲೂ ಆಗಿದೆ.
ಗಣೇಶ ಹಬ್ಬಕ್ಕೆ ಕೆಲ ದಿನಗಳು ಮಾತ್ರ ಬಾಕಿಯಿವೆ. ಆದರೆ, ಈ ವರ್ಷ ಅದ್ಧೂರಿ ಗಣೇಶೋತ್ಸವಕ್ಕೆ ಬ್ರೇಕ್ ಹಾಕಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಉತ್ಸವ ನಡೆಯುವುದು ಖಚಿತವಾಗಿದೆ. ಈಗಾಗಲೇ ಸರ್ಕಾರ ಮಾರ್ಗಸೂಚಿಯನ್ನು ಸಹ ಪ್ರಕಟ ಮಾಡಿದೆ. ಹೀಗಾಗಿ ಬೆಳಗಾವಿಯಲ್ಲಿ ಈ ಬಾರಿ ಗಣೇಶೋತ್ಸವದ ಬೆರಗು ಕಡಿಮೆಯಾಗಲಿದೆ.

ಬಾಲಗಂಗಾಧರ್ ತಿಲಕರು ಆರಂಭಿಸಿದ್ದ ಉತ್ಸವ
ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ವತಃ ಬೆಳಗಾವಿಗೆ ಬಂದು ಸಾರ್ವಜನಿಕ ಗಣೇಶ ಉತ್ಸವವನ್ನು ಆರಂಭಿಸಿದ್ದರು. ಅಂದಿನಿಂದ ಪ್ರತಿ ವರ್ಷ ಬೆಳಗಾವಿ ನಗರದಲ್ಲಿ ಅದ್ಧೂರಿಯಾಗಿ ಗಣೇಶ ಉತ್ಸವವನ್ನು ನಡೆಸಲಾಗುತ್ತಿತ್ತು. ಇಲ್ಲಿನ ಗಣೇಶೋತ್ಸವವನ್ನು ನೋಡುವುದೇ ಕಣ್ಣಿಗೆ ಹಬ್ಬ. ಬೆಳಗಾವಿ ನಗರದಲ್ಲಿಯೇ ಸುಮಾರು 300 ಗಣೇಶ ಉತ್ಸವ ಮಂಡಳಿಗಳೂ ಇವೆ. ಆದರೆ ಈ ಬಾರಿ ಸಂಭ್ರಮದ ಗಣೇಶೋತ್ಸವ ನಡೆಯುವುದುಕ್ಕೆ ಬ್ರೇಕ್ ಹಾಕಲಾಗಿದೆ.

ಸರಳವಾಗಿ ಹಬ್ಬ ಮಾಡಲು ನಿರ್ದೇಶನ
ಬೆಳಗಾವಿಯಲ್ಲಿ ಗಣೇಶ ಉತ್ಸವ ವಿಸರ್ಜನೆ ಮೆರವಣಿಗೆ 24 ಗಂಟೆಗೂ ಹೆಚ್ಚು ಕಾಲ ನಡೆಯುತ್ತಿತ್ತು. ಹಲವು ಸಾಂಸ್ಕೃತಿ ಕಾರ್ಯಕ್ರಮಗಳು ಉತ್ಸವಕ್ಕೆ ಜೊತೆಯಾಗುತ್ತಿದ್ದವು. ಆದರೆ ಈ ವರ್ಷದ ಸರ್ಕಾರದ ಮಾರ್ಗಸೂಚಿಯ ಅನ್ವಯ ಗಣೇಶ ಉತ್ಸವ ನಡೆಯುವುದು ಇದೀಗ ನಿಶ್ಚಿತವಾಗಿದೆ. ಈ ಬಾರಿ ಸರಳವಾಗಿ ಉತ್ಸವ ನಡೆಸಲು ನಿರ್ದೇಶಿಸಲಾಗಿದೆ.

ಕಠೀಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ
ಉತ್ಸವದಲ್ಲಿ ಪಟಾಕಿ, ಲೌಡ್ ಸ್ಪೀಕರ್ ಬಳಸುವಂತಿಲ್ಲ. ಪಿಒಪಿ ಮೂರ್ತಿಗಳ ಬದಲಾಗಿ ಮಣ್ಣಿನ ಮೂರ್ತಿಗಳನ್ನು ಬಳಸಬೇಕು. ಉತ್ಸವ ಸಂದರ್ಭದಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಬೇಕು. ಆರತಿ ಸಂದರ್ಭದಲ್ಲಿ 5 ಕ್ಕೂ ಹೆಚ್ಚು ಜನ ಸೇರುವಂತಿಲ್ಲ. ಗಣೇಶ ಉತ್ಸವ ದರ್ಶನವನ್ನು ಆನ್ ಲೈನ್ ನಲ್ಲಿ ಮಾಡಬೇಕು. ವಿಸರ್ಜನೆ ವೇಳೆ ಮೆರವಣಿಗೆಯನ್ನು ನಿಷೇಧಿಸಿದೆ. ಜಿಲ್ಲಾಡಳಿತದ ನಿಯಮ ಪಾಲನೆ ಮಾಡದೇ ಇದ್ದರೆ ಕಠಿಣ ಕಾನೂನಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ.

ಮಹಾಮಂಡಳಗಳಿಗೆ ಮಾರ್ಗಸೂಚಿ ಬಿಡುಗಡೆ
ಬೆಳಗಾವಿ ಜಿಲ್ಲಾಡಳಿತ ಸದ್ಯ ಸಾರ್ವಜನಿಕ ಗಣೇಶ ಉತ್ಸವ ಮಹಾಮಂಡಳಗಳಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ವರ್ಷ ಸಮೀಪದ ದೇವಸ್ಥಾನ ಅಥವಾ ಮಂಡಳದ ಪ್ರಮುಖರ ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಉತ್ಸವ ಆಚರಣೆ ಸಂಬಂಧ ಇಲಾಖೆ ಹಾಗೂ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳಬೇಕು ಎಂದು ಷರತ್ತು ವಿಧಿಸಿದೆ. ಅದರಂತೆಯೇ ಉತ್ಸವವೂ ಸರಳವಾಗಿ ನಡೆಯಲಿದೆ.












Click it and Unblock the Notifications