ಅ.18 ರಿಂದ 20 ಬೆಳಕಿನ ಹಬ್ಬ ದೀಪಾವಳಿ: ಎಲ್ಲೆಲ್ಲೂ ಭರದ ಸಿದ್ಧತೆ
ಬೆಂಗಳೂರು, ಅಕ್ಟೋಬರ್ 13: ಬೆಳಕಿನ ಹಬ್ಬ ದೀಪಾವಳಿಯ ಸಡಗರ ಈಗಾಗಲೆ ಎಲ್ಲೆಡೆ ಆರಂಭವಾಗಿದೆ. ಅಕ್ಟೋಬರ್ 18 ರಿಂದ 20 ರವರೆಗೆ ನಡೆಯುವ ದೀಪಾವಳಿ ಹಿಂದುಗಳ ಪಾಲಿಗೆ ಅತ್ಯಂತ ಶ್ರೇಷ್ಠ ಹಬ್ಬ.
ಅ.18 ರಂದು ನರಕ ಚತುರ್ದಶಿ ಮತ್ತು ಅ.20 ರಂದು ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ. ಅ.19 ರಂದು ಅಮಾವಾಸ್ಯೆಯ ದಿನ ಕರ್ನಾಟಕದ ಹಲವು ಭಾಗಗಳಲ್ಲಿ ಲಕ್ಷ್ಮಿ ಪೂಜೆ ಮಾಡುತ್ತಾರೆ. ವ್ಯಾಪಾರಸ್ಥರು ಅಂದು ತಮ್ಮ ಅಂಗಡಿಗಳಿಗೆ ಪೂಜೆ ಮಾಡಿದರೆ ಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆ ಇದೆ.
ಪಟಾಕಿಯಿಂದ ಜೀವವೂ ಹೋಗಬಹುದಾ?: 5 ಪ್ರಶ್ನೆಗಳಿಗೆ ವೈದ್ಯರ ಉತ್ತರ
ಪುರಾಣಗಳ ಪ್ರಕಾರ ಈ ದಿನ 14 ವರ್ಷ ವನವಾಸ ಮುಗಿಸಿ ಭಗವಾನ್ ಶ್ರೀರಾಮ ಮತ್ತು ಆತನ ಪತ್ನಿ ಸೀತೆ, ಲಕ್ಷ್ಮಣರು ಅಯೋಧ್ಯೆಗೆ ವಾಪಸಾದ ದಿನ ಇದು. ಹಾಗೆಯೇ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ದಿನ ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ್ದರಿಂದ ಆ ದಿನವನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ.
ಬಲಿ-ವಾಮನರ ಕತೆ
ಕಾರ್ತಿಕ ಮಾಸದ ಶುಕ್ಲಪಕ್ಷದ ಪಾಡ್ಯದಂದು ವಾಮನನಿಗೆ ಮೂರು ಅಡಿ ಜಾಗ ನೀಡುವುದಕ್ಕಾಗಿ ತನ್ನ ಪ್ರಾಣತ್ಯಾಗ ಮಾಡಿದ ಬಲಿಚಕ್ರವರ್ತಿಯ ತ್ಯಾಗ ನೆನಪಿಸಿಕೊಳ್ಳಲು ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ.
ವಿಭಿನ್ನ ಆಚರಣೆ
ಪ್ರಪಂಚದಾದ್ಯಂತ ಇರುವ ಹಿಂದುಗಳೂ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ದೀಪಾವಳಿಯ ಆಚರಣೆ ಉತ್ತರ ಭಾರತಕ್ಕೂ, ದಕ್ಷಿಣ ಭಾರತಕ್ಕೂ ಕೊಂಚ ಭಿನ್ನವಾಗಿದೆ. ಉತ್ತರ ಭಾರತದಲ್ಲಿಐದು ದಿನಗಳ ಕಾಲ ಈ ಹಬ್ಬ ಆಚರಿಸಿದರೆ ದಕ್ಷಿಣ ಭಾರತದಲ್ಲಿ ಮೂರು ದಿನ ಆಚರಿಸಲಾಗುತ್ತದೆ.
ಕಾಮಧೇನುವಿಗೆ ಪೂಜೆ
ದೀಪಾವಳಿಯ ಬಹುಮುಖ್ಯ ಆಚರಣೆ ಎಂದರೆ ಗೋಪೂಜೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದ ಮಲೆನಾಡಿನ ಪ್ರದೇಶಗಳಲ್ಲಿ ಗೋವುಗಳನ್ನು ಚೆಂಡು ಹೂವು, ಅಡಿಕೆ, ಪಚ್ಚೆತೆನೆ, ಹಿಂಗಾರಗಳಿಂದ ಮಾಡಿದ ಮಾಲೆಯಲ್ಲಿ ಸಿಂಗರಿಸಿ, ಬಲಿಪಾಡ್ಯಮಿಯ ದಿನ ಬೆಳಿಗ್ಗೆ ಪೂಜಿಸುತ್ತಾರೆ. ಅಂದು ಸಂಜೆ ಗೋವುಗಳಿಗೆ ದೃಷ್ಟಿ ತೆಗೆಯುವ ಪದ್ಧತಿಯೂ ಇದೆ.
ಪಟಾಕಿ-ಹಣತೆ
ಹೆಸರೇ ಹೇಳುವಂತೆ ದೀಪಗಳ ಹಬ್ಬವಾಗಿರುವುದರಿಂದ ಹಣತೆ ಹಚ್ಚುವುದೇ ಹಬ್ಬದ ಪ್ರಮುಖ ಆಕರ್ಷಣೆ. ಕಾರ್ತಿಕ ಮಾಸದಲ್ಲೆ ಬಹಳ ಬೇಗ ಸೂರ್ಯಾಸ್ತವಾಗುವುದರಿಂದ ಮಲೆನಾಡಿನ ಭಾಗಗಳಲ್ಲಿ ದೀಪಾವಳಿಯಿಂದ ಹಿಡಿದು ಕಾರ್ತಿಕ ಮಾಸ ಮುಗಿಯುವವರೆಗೂ ಮನೆಯ ಹೊರಗಿನ ತುಳಸಿ ಕಟ್ಟೆಯ ಬಳಿ ಹಣತೆ ಹಚ್ಚಿಡುವ ಪದ್ಧತಿ ಇದೆ. ದೀಪಾವಳಿ ಹಬ್ಬದಂದು ಮನೆಯ ಜಗುಲಿ, ಅಂಗಳದ ತುಂಬ ಹಣತೆ ಬೆಳಗುವ ಜೊತೆಗೆ ಪಟಾಕಿ ಸಿಡಿಸುವ ಪದ್ಧತಿಯೂ ಪ್ರಸಿದ್ಧಿ ಪಡೆದಿದೆ. ಇತ್ತೀಚೆಗೆ ಹಲವು ರಾಜ್ಯಗಳು ಪರಿಸರ ಮಗತ್ತು ಆರೋಗ್ಯದ ಹಿತದೃಷ್ಟಿಯಿಂದ ಪಟಾಕಿ ನಿಷೇಧಿಸುವ ಕುರಿತು ಒಲವು ತೋರಿಸುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.
ಸಿಕ್ಖ್, ಜೈನ ಮತದಲ್ಲೂ ಆಚರಣೆ
ಹಿಂದುಗಳಷ್ಟೇ ಅಲ್ಲದೆ, ಸಿಕ್ಖ್ ಮತ್ತು ಜೈನ ಮತದವರೂ ದೀಪಾವಳಿಯನ್ನು ಅತ್ಯಂತ ದೊಡ್ಡ ಹಬ್ಬವೆಂದು ಆಚರಿಸುತ್ತಾರೆ.