ಸಕಲ ಸಮಸ್ಯೆ ಸೈಡಿಗೆ ಸರಿಯಲು ನವರಾತ್ರಿಗಿಂತ ಸಮಯ ಬೇಕೆ?
ಅಕ್ಟೋಬರ್ 1ರಿಂದ ನವರಾತ್ರಿ ಅರಂಭವಾಗುತ್ತಿದ್ದು, 11ನೇ ತಾರೀಕು ನವರಾತ್ರಿ ಪಾರಣೆ ಜತೆಗೆ ಕೊನೆಯಾಗುತ್ತದೆ. ಶರನ್ನವರಾತ್ರಿಯ ಈ ದಿನಗಳನ್ನು ಪರ್ವ ಕಾಲ ಎನ್ನುತ್ತಾರೆ. ಶುಭ ಕಾರ್ಯಗಳನ್ನು ಮಾಡುವುದಕ್ಕಾಗಿಯೇ ನವರಾತ್ರಿಗೆ ಕಾಯಲಾಗುತ್ತದೆ. ಮನೆ ಖರೀದಿ, ವಾಹನ ಖರೀದಿ, ಆಭರಣ ಖರೀದಿ, ಗೃಹ ಪ್ರವೇಶ, ಮನೆ ಕಟ್ಟುವುದನ್ನು ಆರಂಭಿಸುವುದಕ್ಕೆ ಇದು ಸೂಕ್ತ ಕಾಲ.
ಇಲ್ಲಿ ಕೆಲ ವಿಚಾರಗಳನ್ನು ಗಮನದಲ್ಲಿರಿಸಬೇಕು. ವಾರ ದೋಷಗಳು ಅಂತ ಕರೆಯುವ ಶನಿವಾರ, ಮಂಗಳವಾರ ಹಾಗೂ ಭಾನುವಾರದಂದು ಮಾತ್ರ ಗೃಹಾರಂಭ, ವಾಹನ ಖರೀದಿ, ಗೃಹ ಪ್ರವೇಶದಂಥದ್ದನ್ನು ಮಾಡಬಾರದು. ನವರಾತ್ರಿಯ ಪರ್ವ ಕಾಲಕ್ಕೆ ಧಾರ್ಮಿಕ ಪ್ರಾಮುಖ್ಯವೇ ಹೆಚ್ಚು.[ನವರಾತ್ರಿಗೆ ಸಿದ್ಧಗೊಂಡಿದೆ ಹೆಬ್ಬೂರು ಶ್ರೀಚಕ್ರ ಕಾಮಾಕ್ಷಿ ದೇಗುಲ]
ಹೇಗೆ ಸೂರ್ಯೋದಯ-ಸೂರ್ಯಾಸ್ತ, ಚಂದ್ರೋದಯ-ಚಂದ್ರಾಸ್ತ ಎಂಬುದಿದೆಯೋ ಅದೇ ರೀತಿ ಇತರ ಗ್ರಹಗಳ ಅಸ್ತ-ಉದಯವೂ ಇರುತ್ತದೆ. ಆ ರೀತಿ ಗ್ರಹಗಳು ಅಸ್ತವಾಗಿರುವಾಗ ಶುಭ ಕಾರ್ಯಗಳನ್ನು ಮಾಡಬಾರದು ಎಂಬುದು ಜ್ಯೋತಿಷ್ಯದಲ್ಲಿದೆ.
ಶತ್ರುಸಂಹಾರ
ಈ ಒಂಬತ್ತು ದಿನದಲ್ಲಿ ದೇವಿಯು ದುರ್ಗಾ, ಆರ್ಯಾ, ಭಗವತೀ, ಕುಮಾರಿ, ಅಂಬಿಕಾ, ಮಹಿಷ ಮರ್ದಿನಿ, ಚಂಡಿಕಾ, ಸರಸ್ವತಿ ಹಾಗೂ ವಾಗೀಶ್ವರಿ ಹೀಗೆ ಒಂಬತ್ತು ಸ್ವರೂಪದಲ್ಲಿರುತ್ತಾಳೆ. ಆ ದಿನ ಆಯಾ ದೇವಿಯನ್ನು ಅನುಷ್ಠಾನ ಮಾಡುವುದಕ್ಕೆ ಪ್ರಾಶಸ್ತ್ಯ. ಆರ್ಥಿಕ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ತೊಂದರೆ, ಕೋರ್ಟು-ಕಚೇರಿ ವ್ಯಾಜ್ಯಗಳು, ಶತ್ರು ಸಂಹಾರಕ್ಕಾಗಿ ದೇವಿಯನ್ನು ಪ್ರಾರ್ಥನೆ ಮಾಡಬಹುದು.
ಲಕ್ಷ್ಮಿನಾರಾಯಣ ಹೃದಯ ಸ್ತೋತ್ರ
ಅಲಂಕಾರ, ಹೋಮ, ಪೂಜೆಗಳಿಗೆ ಈ ಅವಧಿಯಲ್ಲಿ ಫಲ ಮತ್ತೂ ಹೆಚ್ಚಾಗುತ್ತದೆ. ಇನ್ನು ಚಂಡಿಕಾ ಪಾರಾಯಣ, ಯಾಗ ಮತ್ತು ಆರಾಧನೆಯನ್ನೂ ಮಾಡುತ್ತಾರೆ. ನವರಾತ್ರಿ ವೇಳೆ ಲಕ್ಷ್ಮಿನಾರಾಯಣ ಹೃದಯ ಸ್ತೋತ್ರ ಮಾಡುವುದರಿಂದ ದಾರಿದ್ರ್ಯ ನಾಶವಾಗುತ್ತದೆ ಎಂಬುದು ನಂಬಿಕೆ. ಮೊದಲ ದಿನ ಒಂದು ಬಾರಿ, ಎರಡನೇ ದಿನಕ್ಕೆ ಎರಡು ಬಾರಿ...ಹೀಗೆ ದಿನಕ್ಕೆ ಒಂದಾವರ್ತಿ ಹೆಚ್ಚಿಸುತ್ತಾ ಒಂಬತ್ತು ದಿನ ಪಠಣ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ.
ವಿಜಯ ದಶಮಿ:ಎರಡು ಅಭಿಪ್ರಾಯ
ವಿಜಯದಶಮಿಯಂದು ಅರಂಭಿಸುವ ವ್ಯವಹಾರ, ಕಾರ್ಯಗಳಲ್ಲಿ ಯಶಸ್ಸು ಖಚಿತ ಎಂಬುದು ತುಂಬ ಹಿಂದಿನಿಂದಲೂ ಇರುವ ನಂಬಿಕೆ. ಅದರೆ ಈ ಬಗ್ಗೆ ಎರಡು ಅಭಿಪ್ರಾಯ ಇದೆ. ಅಜ್ಞಾತ ವಾಸದ ನಂತರ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು ಮತ್ತೆ ತೆಗೆದುಕೊಂಡ ದಿನ ವಿಜಯ ದಶಮಿ.
ಹಿರಿಯರ ಅಭಿಪ್ರಾಯ
ಅಂದು ಆಯುಧ ತೆಗೆದುಕೊಂಡ ಕಾರಣಕ್ಕೆ ಯುದ್ಧದಲ್ಲಿ ಗೆಲುವಾಗಿದ್ದು ಹೌದಾದರೂ ಅಪಾರ ಸಾವು-ನೋವು ನೋಡಬೇಕಾಯಿತು. ಅದ್ದರಿಂದ ಆ ದಿನ ಶುಭ ಕಾರ್ಯಗಳನ್ನು ಮಾಡಬಾರದು ಎಂದು ವಾದಿಸುವವರೂ ಇದ್ದಾರೆ. ಆದರೆ ಈ ವಿಷಯದಲ್ಲಿ ಆಯಾ ಕುಟುಂಬ, ಗುರುಗಳು ಹಾಗೂ ಹಿರಿಯರ ಮಾತಿನಂತೆ ನಡೆದುಕೊಳ್ಳುವುದು ಸೂಕ್ತ.
ವಿವಾಹ ತಡೆಗೆ ಪರಿಹಾರ
ಇನ್ನು ವಿವಾಹಕ್ಕೆ ತಡೆಯಿದ್ದಲ್ಲಿ ಪಾರ್ವತೀ ದೇವಿಗೆ, ಅಂದರೆ ಗೌರಿ ಸ್ವರೂಪಳಾದ ಯಾವುದೇ ದೇವಿಗೆ ತಾಳಿ ಹಾಗೂ ವಸ್ತ್ರ ಅರ್ಪಿಸುವುದರಿಂದ ತಡೆ ನಿವಾರಣೆಯಾಗುತ್ತದೆ ಎಂಬುದು ಕೂಡ ಪ್ರಚಲಿತದಲ್ಲಿರುವ ನಂಬಿಕೆ. ಸಂಗೀತಾಭ್ಯಾಸ ಅರಂಭಿಸುವುದಕ್ಕೆ, ಹೊಸದಾಗಿ ವಿದ್ಯೆ ಕಲಿಯುವುದಕ್ಕೂ ನವರಾತ್ರಿ ತುಂಬ ಸೂಕ್ತ ಕಾಲ.
ದಾನದಿಂದ ಹೆಚ್ಚು ಫಲ
ನವರಾತ್ರಿಯ ಪರ್ವ ಕಾಲದಲ್ಲಿ ದಾನ-ಧರ್ಮ ಮಾಡುವುದರಿಂದ ಅದರ ಫಲ ಹೆಚ್ಚುತ್ತದೆ. ಗೋದಾನ, ವಸ್ತ್ರದಾನ, ಧಾನ್ಯದಾನ ಮಾಡುವುದರಿಂದ ಆ ಕರ್ತೃವಿನ ಮನೆಯಲ್ಲಿ ಶುಭ ಫಲಗಳು ಹೆಚ್ಚುತ್ತವೆ ಎನ್ನುತ್ತಾರೆ ಪುರೋಹಿತರಾದ ಶಂಕರ್ ಭಟ್. ಆದರೆ ಶುಕ್ರಾಸ್ತ, ಗುರು ಅಸ್ತ ವೇಳೆ ಮದುವೆ, ಉಪನಯನವನ್ನು ಮಾಡಬಾರದು ಎನ್ನುತ್ತಾರೆ.