ಮೈಸೂರು ದಸರಾದಲ್ಲಿ ಕಾದಾಡುವುದು ಸಲೀಸಲ್ಲ ಎನಿಸುವ ವಜ್ರಮುಷ್ಟಿ ಕಾಳಗ
ಮೈಸೂರು ದಸರಾ ಜಂಬೂಸವಾರಿ ನಡೆಯುವ ದಿನದಂದು ಬೆಳಗ್ಗೆ ಅರಮನೆ ಆವರಣದಲ್ಲಿ ವಜ್ರಮುಷ್ಟಿ ಕಾಳಗ ನಡೆಯುತ್ತದೆ. ಇದು ಸಾಂಪ್ರದಾಯಿಕವಾಗಿ ನಡೆದು ಬಂದ ರೂಢಿಯಾಗಿದೆ. ಸಾಮಾನ್ಯವಾಗಿ ಬೇರೆ ದಿನಗಳಲ್ಲಿ ಕುಸ್ತಿ ಆಡುವುದು ಎಲ್ಲೆಡೆ ಕಂಡು ಬರುತ್ತದೆ. ಅದರೂ ವಜ್ರಮುಷ್ಟಿ ಕಾಳಗ ದಸರಾ ದಿನ ಹೊರತುಪಡಿಸಿ ಇತರೆ ದಿನಗಳಲ್ಲಿ ಕಂಡುಬರುವುದಿಲ್ಲ.
ಈ ವಜ್ರಮುಷ್ಟಿ ಕಾಳಗದ ಕುರಿತು ತಿಳಿಯುತ್ತಾ ಹೋದರೆ ಕುತೂಹಲ ಕೆರಳುತ್ತದೆ. ಅಷ್ಟೇ ಅಲ್ಲ, ಮೈಸೂರು ಸಂಸ್ಥಾನದಲ್ಲಿ ವಜ್ರಮುಷ್ಟಿ ಕಾಳಗ ನಡೆಸುತ್ತಿದ್ದ ಪೈಲ್ವಾನರನ್ನು ಎಷ್ಟೊಂದು ಗೌರವದಿಂದ ನಡೆಸಿಕೊಳ್ಳುತ್ತಿತ್ತು ಎಂಬುದು ತಿಳಿದು ಬರುತ್ತದೆ. ಅಷ್ಟೇ ಅಲ್ಲ, ಮೈಸೂರು ಸಂಸ್ಥಾನದ ಗೌರವ ಕಾಪಾಡಿದ ಜಟ್ಟಿಗಳ ರೋಚಕ ಕಥೆಯೂ ತೆರೆದುಕೊಳ್ಳುತ್ತದೆ.[ಮೈಸೂರು ದಸರಾ : ಚಿನ್ನದ ಅಂಬಾರಿಗೆ ವಿಮೆ ಎಷ್ಟು ಗೊತ್ತೆ?]

ವಜ್ರಮುಷ್ಟಿ ಕಾಳಗ ಎನ್ನುವುದು ಸಮರಕಲೆ ಮತ್ತು ಮಲ್ಲಯುದ್ಧದಂತೆ. ಆದರೂ ಅದಕ್ಕಿಂತ ಭೀಕರ. ರಾಜರ ಕಾಲದಲ್ಲಿ ಆಸ್ಥಾನದಲ್ಲಿ ಜಗಜಟ್ಟಿಗಳ ದಂಡು ಇದ್ದೇ ಇರುತ್ತಿತ್ತು. ಅಷ್ಟೇ ಅಲ್ಲ, ಆಗಾಗ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸಿ, ಗೆದ್ದವರಿಗೆ ಸನ್ಮಾನ ಮಾಡಿ ರಾಜರು ಗೌರವಿಸುತ್ತಿದ್ದರು.
ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬ ಮೈಸೂರಿಗೆ ಭೇಟಿ ನೀಡಿದ್ದನಂತೆ. ಅರಮನೆ ಸುತ್ತಮುತ್ತಲಿನ ಪ್ರದೇಶ ವೀಕ್ಷಿಸಿದ ಬಳಿಕ ಆತ ಮಹಾರಾಜರೊಂದಿಗೆ ಬಂಡೀಪುರಕ್ಕೆ ತೆರಳಿ ಅಲ್ಲಿ ಆನೆ, ಹುಲಿ ಮುಂತಾದ ಪ್ರಾಣಿಗಳನ್ನು ನೋಡಿಕೊಂಡು ಬಂದು ಅರಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ.[ದಸರಾ ಹಬ್ಬಕ್ಕಾಗಿ ಮೈಸೂರಿಗೆ ತತ್ಕಾಲ್ ರೈಲು ಓಡಲಿದೆ!]
ಆಗ ಆ ಬ್ರಿಟಿಷ್ ಅಧಿಕಾರಿ ಮಹಾರಾಜರನ್ನು ಕುರಿತು, ನಿಮ್ಮಲ್ಲಿ ಹುಲಿಯೊಂದಿಗೆ ಸೆಣಸಿ ಗೆಲ್ಲುವ ಪೈಲ್ವಾನರು ಇದ್ದಾರಾ ಎಂದು ಕೇಳಿದ್ದಾನೆ. ಮಹಾರಾಜರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಆಗ ಅವರ ಬಳಿ ಬಂದ ಪೈಲ್ವಾನನೊಬ್ಬ ತಾವು ಅಪ್ಪಣೆ ನೀಡಿದರೆ ಹುಲಿಯೊಂದಿಗೆ ಕಾದಾಡುವುದಾಗಿ ತಿಳಿಸಿದ್ದಾನೆ.
ಮಾರನೆಯ ದಿನವೇ ಅದಕ್ಕೆ ಅಖಾಡ ತಯಾರಿ ಮಾಡುತ್ತಾರೆ. ಬ್ರಿಟಿಷ್ ಅಧಿಕಾರಿ ಸಮ್ಮುಖದಲ್ಲೇ ಆ ಪೈಲ್ವಾನ ಹುಲಿಯೊಂದಿಗೆ ಕಾದಾಡಿ ಗೆಲುವು ಪಡೆಯುತ್ತಾನೆ. ಇದರಿಂದ ಸಂತಸಗೊಂಡ ಮಹಾರಾಜರು ಆ ಪೈಲ್ವಾನನ್ನು ತಮ್ಮ ಹೆಗಲ ಮೇಲೆ ಹೊತ್ತು ಸಂಭ್ರಮಿಸುತ್ತಾರೆ. ಆತನನ್ನು ಗಂಗಾಧರ ಸುಬ್ಬಾ ಜೆಟ್ಟಪ್ಪ ಎಂದು ಕರೆದು ಗೌರವಿಸುತ್ತಾರೆ.

ಇನ್ನೊಮ್ಮೆ ಮುಮ್ಮುಡಿ ಕೃಷ್ಣರಾಜ ಒಡೆಯರ್ ಬೇಟೆಗೆಂದು ಕಾಡಿಗೆ ತೆರಳಿದ್ದಾಗ ದಿಢೀರ್ ಆಗಿ ಅವರ ಮೇಲೆ ಕರಡಿಯೊಂದು ದಾಳಿ ಮಾಡುತ್ತದೆ. ಆ ಸಂದರ್ಭ ಅವರ ಜತೆಗೆ ಹೋಗಿದ್ದ ಅಂಗರಕ್ಷಕ ಸದಾನಂದ ಸುಬ್ಬಾ ಜೆಟ್ಟಪ್ಪ ಎಂಬುವರು ಕರಡಿಯೊಂದಿಗೆ ಹೋರಾಡಿ ಒಡೆಯರನ್ನು ರಕ್ಷಿಸಿದರು ಎನ್ನಲಾಗಿದೆ.[ಅಂಬಾರಿ ಹೊರಲು ಸೈ ಎನಿಸಿಕೊಂಡ ಅರ್ಜುನ!]
ಇದೇ ಪೈಲ್ವಾನ್ ಆ ನಂತರ ನಜರ್ ಬಾದ್ ನಲ್ಲಿ ಗರಡಿ ಮನೆ ತೆರೆದು, ಹಲವರಿಗೆ ಕುಸ್ತಿಯನ್ನು ಕಲಿಸಿದರು. ಕುಸ್ತಿ ಬಗ್ಗೆ ಹೇಳುತ್ತಾ ಹೋದರೆ ಇಲ್ಲಿ ನೂರಾರು ಸಾಹಸ ಕಥೆಗಳು ಹೊರ ಬರುತ್ತವೆ. ಮುಮ್ಮುಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಗ್ರಾಮವೊಂದನ್ನು ಗೋವಿಂದ ಜೆಟ್ಟಿ ಎಂಬಾತನಿಗೆ ಆತನ ಶೌರ್ಯ ನೋಡಿ ಬಿಟ್ಟುಕೊಟ್ಟಿದ್ದರಲ್ಲದೆ ಜೆಟ್ಟಿಹುಂಡಿ ಎಂದು ಹೆಸರಿಟ್ಟರು ಎಂಬುದು ತಿಳಿದು ಬರುತ್ತಿದೆ.
ವಜ್ರಮುಷ್ಟಿ ಕಾಳಗ ಹೇಗೆ ರೂಢಿಗೆ ಬಂತು ಎಂಬುದನ್ನು ನೋಡುವುದಾದರೆ ಮೈಸೂರು ಒಡೆಯರ್ ದುರ್ಗಾ ಮಾತೆಯ ಶಾಂತಿಗಾಗಿ ನವರಾತ್ರಿಯಲ್ಲಿ ಆಚರಣೆಗೆ ತಂದರು ಎನ್ನಲಾಗುತ್ತದೆ. ಇದು ಎಲ್ಲರಿಗೂ ಸಾಧ್ಯವಿಲ್ಲ. ಇತರೆ ಕುಸ್ತಿಗಿಂತ ಅಪಾಯಕಾರಿ. ತಲೆ ಬೋಳಿಸಿ ದೃಢಕಾಯವಾಗಿರುವ ಅನುಭವಿ ಉಸ್ತಾದ್ ತನ್ನ ಬಲಗೈಗೆ (ಆನೆದಂತ ಅಥವಾ ಸಾರಂಗದ ಕೊಂಬಿನಿಂದ ತಯಾರಿಸಿದ ಆಯುಧ) ವಜ್ರನಖವನ್ನು ಹಿಡಿದು ಎಡಗೈಗೆ ಬಟ್ಟೆ ಕಟ್ಟಿಕೊಂಡಿರುತ್ತಾನೆ.
ಇಂತಹ ನಾಲ್ವರು ಅಖಾಡದಲ್ಲಿ ಸೆಣೆಸಾಡುತ್ತಾರೆ. ತನ್ನ ಬಳಿಯಿರುವ ವಜ್ರನಖದಿಂದ ಎದುರಾಳಿಯ ಮೇಲೆ ಹೋರಾಡಬೇಕು. ಹೊಡೆತವನ್ನು ಆತನ ತಲೆ ಮೇಲೆಯೇ ಹೊಡೆಯಬೇಕು. ಹೀಗೆ ಹೊಡೆದ ಏಟು ತಲೆಗೆ ತಾಗಿ ರಕ್ತ ಚಿಮ್ಮಿದರೆ ಆತ ಸೋತ ಎಂದರ್ಥ. ಆದರೆ ಇಬ್ಬರೂ ದೃಢಕಾಯರಾಗಿ ಇರುವುದರಿಂದ ಪ್ರತಿ ಪ್ರಹಾರವನ್ನು ತಪ್ಪಿಸಿಕೊಂಡು ಕಾಳಗ ನಡೆಸುತ್ತಾರೆ. ಜಟ್ಟಿಗಳ ತಲೆ ಮೇಲೆ ರಕ್ತ ಹೊರ ಬರುವವರೆಗೂ ಕಾಳಗ ನಡೆಯುತ್ತದೆ.[ಮದುವೆ ನಂತರ ಯದುವೀರ್ ಮೊದಲ ಖಾಸಗಿ ದರ್ಬಾರ್!]
ಈಗ ಕೆಲವೇ ಪೈಲ್ವಾನರು ಮಾತ್ರ ವಜ್ರಮುಷ್ಟಿ ಕಾಳಗವನ್ನು ಕರಗತ ಮಾಡಿಕೊಂಡಿದ್ದಾರೆ. ಅವರು ದಸರಾ ಸಂದರ್ಭ ನಡೆಯುವ ಕಾಳಗದಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಭಾಗವಹಿಸುವ ಪೈಲ್ವಾನರು ಕಟ್ಟುನಿಟ್ಟಿನ ವ್ರತವನ್ನು ಸುಮಾರು ಒಂಬತ್ತು ದಿನಗಳ ಕಾಲ ಮಾಡುವುದಲ್ಲದೆ, ಒಂದು ತಿಂಗಳ ಹಿಂದಿನಿಂದಲೇ ತಾಲೀಮು ನಡೆಸಿ ಸಿದ್ಧರಾಗುತ್ತಾರೆ. ದಸರಾ ದಿನ ತಮ್ಮ ಸಾಮರ್ಥ್ಯ ಪ್ರದರ್ಶಿಸಿ, ವಜ್ರಮುಷ್ಟಿ ಕಾಳಗಕ್ಕೆ ಮೆರುಗು ತರುತ್ತಾರೆ.












Click it and Unblock the Notifications