ಮೈಸೂರು ದಸರಾ ವೇದಿಕೆಯನ್ನೂ ಬಿಡಲಿಲ್ಲವೇ ರಾಜಕೀಯ?!
"ಈಗಾಗಲೇ ಐದು ವರ್ಷ ದಸರಾದಲ್ಲಿ ಭಾಗವಹಿಸಿದ್ದೇನೆ. ಮುಂದಿನ ಐದು ವರ್ಷವೂ ದಸರಾ ಮುನ್ನಡೆಸುವ ಅವಕಾಶ ಸಿಗುತ್ತೆ ಎಂಬ ವಿಶ್ವಾಸವಿದೆ?" ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು(ಸೆ.21) ಮೈಸೂರಿನಲ್ಲಿ 407 ನೇ ದಸರಾ ಮಹೋತ್ಸವವನ್ನು ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹ್ಮದ್ ಉದ್ಘಾಟಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ನಾಡಿನ ಸಮಸ್ತ ಜನತೆಗೂ ದಸರಾ ಶುಭಾಶಯ ಸಲ್ಲಿಸಿ ಮಾತನಾಡಿದ ಮುಖ್ಯಮಂತ್ರಿ, ದಸರಾ ವೇದಿಕೆಯನ್ನೂ ರಾಜಕೀಯಕ್ಕೆ ಬಳಸಿಕೊಂದಿದ್ದು ಮಾತ್ರ ವಿಪರ್ಯಾಸ ಎಂಬ ಮಾತು ಹಲವೆಡೆಯಿಂದ ಕೇಳಿಬಂದಿದೆ.
Recommended Video

"ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರ್ತೀವಿ. ಇನ್ನೈದು ವರ್ಷ ನಾನೇ ದಸರಾವನ್ನು ಮುನ್ನಡೆಸುತ್ತೇನೆ ಎಂಬ ವಿಶ್ವಾಸವಿದೆ. ಜಿ.ಟಿ.ದೇವೇಗೌಡರು ನನಗೆ ವಿಷ್ ಮಾಡ್ತಾರೆ. ಹಾಗೇ ಪ್ರತಾಪ್ ಸಿಂಹ ನೀನು ವಿಷ್ ಮಾಡಪ್ಪ..." ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಪ್ರತಾಪ್ ಸಿಂಹ ಅವರಿಗೆ ಸಿದ್ದು ಹೇಳಿದರು.

ರೈತರ ರಕ್ಷಣೆಗೆ ಬದ್ಧ
"ನಾಡಿನ ಜನತೆಗೆ, ವಿಶೇಷವಾಗಿ ಮೈಸೂರು ಜನತೆಗೆ ದಸರಾ ಶುಭಾಶಯಗಳು. ದಸರಾ ಮಹೋತ್ಸವವನ್ನು ಸರಳ ಮತ್ತು ಸಾಂಪ್ರದಾಯಿಕ ಆಚರಣೆಗೆ ತೀರ್ಮಾನ ಮಾಡಲಾಗಿತ್ತು. ರಾಜ್ಯ ಭೀಕರ ಬರಗಾಲಕ್ಕೆ ತುತ್ತಾದ ಸಂದರ್ಭದಲ್ಲಿ ಈ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ನಂತರ ರಾಜ್ಯ ಉತ್ತಮ ಮಳೆ ಕಂಡು, ರೈತರ ಮೊಗದಲ್ಲೂ ನಗುಮೂಡಿದೆ. ನಮ್ಮ ಸರ್ಕಾರವಂತೂ ಎಂದಿಗೂ ರೈತರ ರಕ್ಷಣೆಗೆ ಬದ್ಧ" ಎಂದು ಸಿದ್ದರಾಮಯ್ಯ ನುಡಿದರು.

ನಿಸಾರ್ ಅಹ್ಮದ್ ಉದ್ಘಾಟಿಸಿದ್ದು ನಮ್ಮ ಸೌಭಾಗ್ಯ
"ಉನ್ನತ ಮಟ್ಟದ ಸಮಿತಿಯಲ್ಲಿ ದಸರಾ ಉದ್ಘಾಟಕರ ಬಗ್ಗೆ ಚರ್ಚೆಯಾದಾಗ ನಾಡೋಜ ನಿಸಾರ್ ಅಹಮದ್ ಹೆಸರು ಹೇಳಿದಾಗ ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡರು. ವೈಚಾರಿಕ ಚಿಂತಕರಾದ ನಿಸಾರ್ ಅಹಮದ್ ದಸರಾ ಉದ್ಘಾಟನೆಗೆ ಆಗಮಿಸಿದ್ದು ನಮಗೆ ಗೌರವ ತಂದಿದೆ. ಅವರೊಂದಿಗೆ ನನಗೆ ಹಲವು ವರ್ಷಗಳ ಒಡನಾಟವಿದೆ. ಅವರು ದಸರಾ ಉದ್ಘಾಟಿಸಿದ್ದು ನಮ್ಮ ಸೌಭಾಗ್ಯ ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದರು.
407 ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದ ಕವಿ ನಿಸಾರ್ ಅಹ್ಮದ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ರಾಜ್ಯವನ್ನು ಚಾಮುಂಡೇಶ್ವರಿ ಕಾಯಲಿ
ದಸರಾ ಮಹೋತ್ಸವ ಸಂದರ್ಭದಲ್ಲಿ ನಾಡಿಗೆ ಒಳ್ಳೆಯದಾಗಲಿ, ಕೆ.ಆರ್.ಎಸ್. ತುಂಬಲಿ ಎಂದು ಎಂದು ಚಾಮುಂಡೇಶ್ವರಿಯನ್ನ ಪ್ರಾರ್ಥಿಸೊಣ ಎಂದು ಮುಖ್ಯಮಂತ್ರಿಗಳು ಜನರಲ್ಲಿ ಮನವಿಮಾಡಿಕೊಂಡರು.

ವೈಭವದ ದಸರಾ
ಇಂದಿನಿಂದ (ಸೆ.21) 9 ದಿನಗಳ ಕಾಲ ನವರಾತ್ರಿ ಸಂಭ್ರಮ ಮೈಸೂರಿನಲ್ಲಿ ನಡೆಯಲಿದ್ದು, ಲಕ್ಷಾಂತರ ಭಕ್ತರು ಮೈಸೂರು ದಸರೆಯ ವೈಭವವನ್ನು ಕಣ್ತುಂಬಿಸಿಕೊಳ್ಳಲಿದ್ದಾರೆ.












Click it and Unblock the Notifications