ಮೈಸೂರು ಹೆಸರನ್ನು ಸಿಹಿಯಾಗಿಸಿದ 'ಮೈಸೂರ್ ಪಾಕ್'
ಒಂದೊಂದು ಊರಿಗೆ ಹೋದಾಗಲೂ ಒಂದೊಂದು ವಿಶೇಷತೆಗಳು ನಮ್ಮನ್ನು ಸೆಳೆಯುತ್ತವೆ. ಆದರೆ ಮೈಸೂರಿಗೆ ಭೇಟಿ ನೀಡಿದವರಿಗೆ ಹತ್ತಾರು ವಿಶೇಷತೆಗಳು ಗಮನ ಸೆಳೆಯುತ್ತವೆ. ಆ ಪೈಕಿ ಮೈಸೂರ್ ಪಾಕ್ ಒಂದಾಗಿದೆ. ತನ್ನ ಹೆಸರಿನಲ್ಲಿಯೇ ಮೈಸೂರನ್ನು ಪ್ರತಿನಿಧಿಸುವ ಮೈಸೂರ್ ಪಾಕ್ ದೇಶ ವಿದೇಶಗಳ ತನಕ ಹೆಸರು ವಾಸಿಯಾಗಿದೆ.
ಇಂತಹ ಮೈಸೂರ್ ಪಾಕ್ ನಮ್ಮ ಮೈಸೂರಿನಲ್ಲಿಯೇ ತಯಾರಾಗಿದ್ದು ಎನ್ನುವುದೇ ಕನ್ನಡಿಗರೆಲ್ಲರಿಗೂ ಹೆಮ್ಮೆ ತರುವ ವಿಚಾರ. ಅಷ್ಟೇ ಅಲ್ಲದೆ ದೇಶ ವಿದೇಶಗಳಿಗೆ ಮೈಸೂರಿನ ಹೆಸರನ್ನು ಪರಿಚಯಿಸಿದ ಸಿಹಿ ತಿನಿಸು ಕೂಡ ಹೌದು. ಇಂತಹ ತಿನಿಸು ಮೈಸೂರು ಅರಮನೆಯ ಪಾಕಶಾಲೆಯಲ್ಲಿಯೇ ತಯಾರಾಗಿದ್ದು ಎನ್ನುವುದೇ ಸಂತಸದ ವಿಚಾರವಾಗಿದೆ. ಆದರೆ ಈ ಮೈಸೂರ್ ಪಾಕ್ ತಯಾರಿಯ ಹಿಂದಿನ ರಹಸ್ಯ ಹೆಚ್ಚಿನವರಿಗೆ ತಿಳಿದಿಲ್ಲ.
ಹಿಂದೆ ತಯಾರಾಗುತ್ತಿದ್ದ ಮೈಸೂರ್ ಪಾಕಿಗೂ ಇವತ್ತು ವಿವಿಧ ಸಿಹಿತಿಂಡಿಗಳ ಅಂಗಡಿಗಳಲ್ಲಿ ತಯಾರಾಗುವ ಮೈಸೂರ್ ಪಾಕ್ ಗೆ ಒಂದಷ್ಟು ವ್ಯತ್ಯಾಸಗಳಿವೆ. ಅವು ಕಾಲಕ್ಕೆ ತಕ್ಕಂತೆ ಒಂದಷ್ಟು ಬದಲಾವಣೆ ಕಂಡಿದೆ. ಆದರೂ ಹೆಸರಿಗೆ ಮಾತ್ರ ದಿನಕಳೆದಂತೆಲ್ಲ ಹೊಳಪು ಬಂದಿದೆ ಜತೆಗೆ ಖ್ಯಾತಿಯೂ ಇಮ್ಮಡಿಯಾಗಿದೆ.

ರಾಜಕುಟುಂಬದ ಸಿಹಿತಿಂಡಿ ತಯಾರಕ
ಇನ್ನು ಮೈಸೂರ್ ಪಾಕ್ ಜನ್ಮ ತಾಳಿದ ಬಗ್ಗೆ ಹೇಳುವ ಮುನ್ನ ಇದನ್ನು ತಯಾರಿಸಿದ ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಪನವರ ಬಗ್ಗೆ ಹೇಳಲೇ ಬೇಕಾಗುತ್ತದೆ. ಕಾಕಾಸುರ ಮಾದಪ್ಪನವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯಲ್ಲಿ ಸಿಹಿ ತಿಂಡಿ ತಯಾರಿಸುವ ಕೆಲಸದ ಜವಬ್ದಾರಿ ವಹಿಸಿಕೊಂಡಿದ್ದರು. ರಾಜ ಕುಟುಂಬಕ್ಕೆ ಬೇಕಾದ ಸಿಹಿ ಮತ್ತು ಖಾರವನ್ನು ಇವರೇ ತಯಾರಿಸುತ್ತಿದ್ದರು.

ಮಹರಾಜರಿಂದ ಮೆಚ್ಚುಗೆ ಪಡೆದ ಕಾಕಾಸುರ ಮಾದಪ್ಪ
ಹೀಗಿರುವಾಗಲೇ ಮಹಾರಾಜ ನಾಲ್ವಡಿಕೃಷ್ಣರಾಜಒಡೆಯರು ಒಮ್ಮೆ ಹೊಸದಾದ ಯಾವುದಾದರೊಂದು ತಿಂಡಿ ತಯಾರಿಸುವಂತೆ ಹೇಳಿದರು. ಮಹಾರಾಜರು ಹೇಳಿದ ಮೇಲೆ ಏನಾದರೂ ಹೊಸ ತಿಂಡಿ ಮಾಡಲೇ ಬೇಕು? ಏನು ಹೊಸ ತಿಂಡಿ ಮಾಡುವುದು ಎಂದು ಕಾಕಾಸುರ ಮಾದಪ್ಪನವರು ಆಲೋಚನೆಯಲ್ಲಿ ತೊಡಗಿದರು. ಆ ನಂತರ ಏನಾದರೊಂದು ಆಗಿಯೇ ಬಿಡಲಿ ಎಂಬ ನಿರ್ಧಾರಕ್ಕೆ ಬಂದ ಅವರು ಹೊಸ ತಿಂಡಿಯ ತಯಾರಿಗೆ ಮುಂದಾದರು. ಅದರಂತೆ ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜರಿಗೆ ನೀಡಿದರು. ಈ ಹೊಸ ತಿಂಡಿಗೆ ಮಹಾರಾಜರು ಏನು ಹೇಳುತ್ತಾರೋ ಎಂಬ ತಳಮಳ ಅವರಲ್ಲಿತ್ತು. ಆದರೆ ಇದರ ರುಚಿ ನೋಡಿದ ಮಹಾರಾಜರಿಗೆ ತುಂಬಾ ಖುಷಿಯಾಗಿ ಕಾಕಾಸುರ ಮಾದಪ್ಪನವರನ್ನು ಬೆನ್ನು ತಟ್ಟಿ ಪ್ರಶಂಶಿಸಿದರು.

ಮೈಸೂರು ಪಾಕ್ ಹೆಸರು ಬರಲು ಕಾರಣ
ಮಹರಾಜರೇ ಮೆಚ್ಚಿಕೊಂಡಂತಹ ಈ ಹೊಸ ತಿಂಡಿಯ ಹೆಸರು ಕೇಳಿದಾದ ಕಾಕಾಸುರ ಮಾದಪ್ಪನವರು ಏನು ಹೇಳಬೇಕು ಎಂದು ಗೊತ್ತಾಗದೆ ತಡವರಿಸಿದರು. ಈ ವೇಳೆ ಮಹಾರಾಜರೇ ಏನು ಹೆಸರಿಡುವುದು ಎಂದು ಆಲೋಚಿಸಿ ಕೊನೆಗೊಂದು ನಿರ್ಧಾರಕ್ಕೆ ಬಂದು, ಇದು ಮೈಸೂರು ಅರಮನೆಯಲ್ಲಿ ತಯಾರಾಗಿದ್ದರಿಂದ 'ಮೈಸೂರು ಪಾಕ' ಎಂದು ಹೆಸರಿಡೋಣ ಎಂದು ತೀರ್ಮಾನಿಸಿದರು. ಮುಂದೆ ಅದು ಮೈಸೂರ್ ಪಾಕ್ ಆಗಿದ್ದು ಇತಿಹಾಸ.

ಮೈಸೂರಲ್ಲಿ ಫೇಮ್ಸ್ ಗುರು ಸ್ವೀಟ್ಸ್ ಮಾರ್ಟ್
ಇನ್ನು ಕಾಕಾಸುರ ಮಾದಪ್ಪನವರು ಅರಮನೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಅವರ ಷಡ್ಕ ಬಸವಲಿಂಗಪ್ಪ ಅವರೊಂದಿಗೆ ಸೇರಿ ಅಶೋಕ ರಸ್ತೆಯಲ್ಲಿ ' ಶ್ರೀ ದೇಶಿಕೇಂದ್ರ ಸ್ವೀಟ್ಸ್ ಮಾರ್ಟ್ಸ್' ಎಂಬ ಸ್ವೀಟ್ಸ್ ಅಂಗಡಿ ಆರಂಭಿಸಿದರು. ಅದು ಅಂದಿನ ಕಾಲದಲ್ಲೇ ಪ್ರಸಿದ್ಧವಾಗಿತ್ತು. ಆ ನಂತರ ಆ ಅಂಗಡಿಯನ್ನು ಬಸವಲಿಂಗಪ್ಪನವರಿಗೆ ಬಿಟ್ಟುಕೊಟ್ಟರು. ನಂತರದ ಕಾಲಾವಧಿಯಲ್ಲಿ ಮಾದಪ್ಪನವರ ಪುತ್ರ ಬಸವಣ್ಣನವರು ಸಯ್ಯಾಜಿರಾವ್ ರಸ್ತೆಯಲ್ಲಿರುವ ಚಿಕ್ಕಗಡಿಯಾರದಲ್ಲಿ ನಗರಪಾಲಿಕೆಗೆ ಸೇರಿದ ದೇವರಾಜ ಮಾರ್ಕೆಟ್ಗೆ ಹೊಂದಿಕೊಂಡಂತೆ ಇರುವ ಮಳಿಗೆಯಲ್ಲಿ 1954ರಲ್ಲಿ 'ಗುರು ಸ್ವೀಟ್ಸ್ ಮಾರ್ಟ್ಸ್' ಎಂಬ ಸ್ವೀಟ್ಸ್ ಅಂಗಡಿಯನ್ನು ತೆರೆದರು.
ಸಂಪೂರ್ಣ ಮರದಿಂದಲೇ ಮಾಡಿದ್ದ ಚಿಕ್ಕದಾದ ಕೋಣೆಯೊಂದರಲ್ಲಿ ಶುರುವಾದ ಗುರುಸ್ವೀಟ್ಸ್ ಮಿಠಾಯಿ ಅಂಗಡಿ ಸಿಹಿ ತಿಂಡಿ ಹಾಗೂ ಮೈಸೂರ್ ಪಾಕ್ಗೆ ಹೆಸರುವಾಸಿಯಾಗಿತ್ತು. ಇವತ್ತಿಗೂ ಸಯ್ಯಾಜಿರಾವ್ ರಸ್ತೆಯ ದೇವರಾಜ ಮಾರುಕಟ್ಟೆಗೆ ಹೊಂದಿಕೊಂಡಂತೆ ಗುರುಸ್ವೀಟ್ಸ್ ಅಂಗಡಿಯಿದೆ. ಮೈಸೂರು ಪಾಕ್ ಮಾತ್ರವಲ್ಲದೆ, ಇತರೆ ಸಿಹಿ ಮತ್ತು ಖಾರಾ ತಿನಿಸುಗಳು ಮಾರಾಟವಾಗುತ್ತವೆ.












Click it and Unblock the Notifications