ಮೈಸೂರು ದಸರಾ ಗಜಪಡೆಗಳಿಗೆ ನಡೆಯುತ್ತಿದೆ ರಾಜಾತಿಥ್ಯ!
ಮೈಸೂರು, ಅಕ್ಟೋಬರ್ 3: ಮೈಸೂರು ದಸರಾ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದೆ. ಒಂದೆಡೆ ತಾಲೀಮು ನಡೆಯುತ್ತಿದ್ದರೆ, ಮತ್ತೊಂದೆಡೆ ಗಜಪಡೆಗಳಿಗೆ ರಾಜಾತಿಥ್ಯ ಜೋರಾಗಿಯೇ ನಡೆಯುತ್ತಿದೆ. ವಿವಿಧ ಶಿಬಿರಗಳಿಂದ ಬಂದಿರುವ ಆನೆಗಳಿಗೆ ಸಮಯಕ್ಕೆ ಸರಿಯಾಗಿ ಶಕ್ತಿಯುತ, ಸ್ವಾದಿಷ್ಟ ಆಹಾರಗಳನ್ನು ನೀಡುವ ಮೂಲಕ ದೈಹಿಕವಾಗಿ ಬಲಿಷ್ಠಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.
ಹಾಗೆ ನೋಡಿದರೆ ಜಂಬೂಸವಾರಿಯಲ್ಲಿ ಆನೆಗಳ ಆಹಾರಕ್ಕೆ ಹೆಚ್ಚಿನ ಖರ್ಚಾಗುತ್ತದೆ. ಏಕೆಂದರೆ ಕೊಡುವ ಆಹಾರದ ಮೇಲೆ ಅವುಗಳ ಶಕ್ತಿ, ಸಾಮರ್ಥ್ಯ ಅವಲಂಬಿತವಾಗುತ್ತದೆ. ಉತ್ತಮ ಆಹಾರ ನೀಡಿ ಶಕ್ತಿ, ಸಾಮರ್ಥ್ಯವನ್ನು ಹಿಗ್ಗಿಸುವ ಕೆಲಸವೂ ನಡೆಯುತ್ತದೆ. ಅವುಗಳಿಗೆ ವಿಶೇಷ ಆಹಾರ ನೀಡಿ ಉಪಚಾರ ಮಾಡಿದರೆ ಮಾತ್ರ ಜಂಬೂ ಸವಾರಿಯಲ್ಲಿ ಆನೆಗಳು ರಾಜಗಾಂಭೀರ್ಯದಲ್ಲಿ ನಡೆಯಲು ಸಾಧ್ಯ.[ಅಂಬಾರಿ ಹೊರಲು ಸೈ ಎನಿಸಿಕೊಂಡ ಅರ್ಜುನ!]
ಹೀಗಾಗಿ ಆನೆಗಳ ಶಕ್ತಿ ಮತ್ತು ಗಾತ್ರಕ್ಕೆ ಅನುಸಾರವಾಗಿ ಬೆಳಗ್ಗೆ ಮತ್ತು ಸಂಜೆ ವಿಶೇಷ ಆಹಾರ ಕೊಡಲಾಗುತ್ತದೆ. ಬೆಳಗ್ಗೆ ವಾಕಿಂಗ್ ಹೋಗುವ ಮುನ್ನ ಕುಸುರೆ ಎಂದು ಕರೆಯುವ ಹೆಸರು ಕಾಳು, ಹುರುಳಿ ಕಾಳು, ಗೋಧಿ, ಕುಸುಲಕ್ಕಿ ಇವೆಲ್ಲ ಬೇಯಿಸಿ ಉಂಡೆ ಮಾಡಿ ಕೊಡಲಾಗುತ್ತದೆ.
ಅಲ್ಲಿಂದ ಬಂದ ಮೇಲೆ ತರಕಾರಿಗಳನ್ನ 1/2 ಕೆ.ಜಿ ಬೆಣ್ಣೆಯಲ್ಲಿ ಬೇಯಿಸಿ ಕೊಡಲಾಗುತ್ತದೆ. ಇವೆಲ್ಲ ತಿಂದ ನಂತರ ಮಧ್ಯಾಹ್ನದಿಂದ ಸಂಜೆಯವರೆಗೆ ಚುರುಮುರಿಯಂತೆ ಹಸಿರು ಸೊಪ್ಪು ತಿನ್ನುತ್ತಿರುತ್ತವೆ. ಸಂಜೆ ಭತ್ತದ ಹುಲ್ಲಿನಲ್ಲಿ ಕುಸುರೆಯ ಸುತ್ತಿ ಭತ್ತವನ್ನ ಬೇಯಿಸಿ ಹಾಕಿ, ಬೆಲ್ಲ ಹಿಂಡಿ, ತೆಂಗಿನ ಕಾಯಿ, ಈರುಳ್ಳಿ, ಬೇಯಿಸಿ ಒಟ್ಟಿಗೆ ಕೊಡಲಾಗುತ್ತದೆ.[ಮೈಸೂರಿನಲ್ಲಿ ಮೇಳೈಸಿದೆ ದಸರಾ ಸಂಭ್ರಮ]
ಪ್ರತಿ ಆನೆಗೆ ಕನಿಷ್ಠ 12 ಕೆಜಿ ಭತ್ತ, 250 ಗ್ರಾಂ ಬೆಲ್ಲ, 2 ತೆಂಗಿನ ಕಾಯಿ, 1/2 ಕೆ.ಜಿ ಬೆಣ್ಣೆ ಕೊಡಲಾಗುತ್ತದೆ. ಒಂದು ಆನೆ ದಿನಕ್ಕೆ ಮುನ್ನೂರರಿಂದ ಐನೂರು ಕೆ.ಜಿ.ಯಷ್ಟು ಹಸಿರು ಸೊಪ್ಪನ್ನು ತಿನ್ನುತ್ತದೆ. ಕಾಡಿನಿಂದ ಬಂದ ಆನೆಗಳು ಒಂದೇ ಬಾರಿಗೆ ಇವೆಲ್ಲ ತಿನ್ನಲಾರವು. ಹೀಗಾಗಿ ಇವುಗಳಿಗೆ ಹುಳದ ಔಷಧಿ ಕೊಡಲಾಗುತ್ತದೆ. ಆಗ ಆನೆಗಳಿಗೆ ಚೆನ್ನಾಗಿ ಹೊಟ್ಟೆ ಹಸಿದು, ಸ್ವಲ್ಪ ಹೆಚ್ಚಾಗಿ ತಿನ್ನಲು ಸಾಧ್ಯವಾಗುತ್ತದೆ.
ಮೊದಲ ದಿನ ಈ ರೀತಿಯ ಆಹಾರವನ್ನು ಆನೆಗಳು ತಿನ್ನಲು ಹಿಂದೇಟು ಹಾಕಿದರೂ ಈಗ ಬಾಯಿ ಚಪ್ಪರಿಸಿ ತಿನ್ನುತ್ತಿವೆ. ಇದಿಷ್ಟು ನಿತ್ಯ ಸೇವಿಸೋ ಆಹಾರವಾದರೆ, ಆಯುಧ ಪೂಜೆಯ ದಿನ ಮತ್ತು ಅಂಬಾರಿ ಹೊರುವ ದಿನ ವಿಶೇಷ ಆಹಾರ ನೀಡಲಾಗುತ್ತದೆ. ಅದಕ್ಕೆ ಸ್ಪೆಷಲ್ ಕುಸುರೆ ಎಂದೇ ಹೆಸರು.[ರಾಜ್ಯದ ಪಾಲಿಗೆ ತಮಿಳುನಾಡು ಮಗ್ಗುಲ ಮುಳ್ಳು: ಕಣವಿ]
ಅವಲಕ್ಕಿ, ಗ್ಲುಕೋಸ್, ಬೆಣ್ಣೆ, ಬೆಲ್ಲ, ತೆಂಗಿನಕಾಯಿ ಎಲ್ಲವನ್ನೂ ಹಸಿ ಹುಲ್ಲಿನಲ್ಲಿ ಸುತ್ತಿ ಕುಸುರೆ ಮಾಡಿ ತಿನ್ನಿಸಲಾಗುತ್ತದೆ. ಜತೆಗೆ ಹಸಿ ಹುಲ್ಲು ನೀಡಿ, ಜಂಬೂ ಸವಾರಿ ಸಂದರ್ಭದಲ್ಲಿ ಮಾರ್ಗ ಮಧ್ಯ ನೀರಡಿಕೆ ಅಗದಿರುವಂತೆ ನೋಡಿಕೊಳ್ಳಲಾಗುತ್ತದೆ.