ಮೈಸೂರು ಅರಮನೆ ಆಯುಧ ಪೂಜೆಯ ವೈಖರಿ, ನಲಿದಾಡಿದ ಯದುವೀರ್ ಪತ್ನಿ ತ್ರಿಷಿಕಾ ಕುಮಾರಿ
ಮೈಸೂರು, ಅಕ್ಟೋಬರ್ 10 : ಮೈಸೂರು ನಗರದಾದ್ಯಂತ ಆಯುಧಪೂಜಾ ಸಂಭ್ರಮ ಮನೆ ಮಾಡಿದೆ. ಬೆಳಿಗ್ಗೆಯಿಂದಲೇ ಜನರು ತಮ್ಮ ವಾಹನಗಳನ್ನು ತೊಳೆದು ಪೂಜಾ ವಿಧಿವಿಧಾನಗಳನ್ನು ತಮ್ಮ ಮನೆಗಳಲ್ಲಿಯೇ ಮಾಡಿದರೆ ಮತ್ತೆ ಕೆಲವರು ದೇವಾಲಯಗಳಲ್ಲಿ ಪೂಜೆಯನ್ನು ಮಾಡಿಸುತ್ತಿದ್ದಾರೆ.
ಹೂವು, ಹಣ್ಣು, ಕುಂಬಳಕಾಯಿಯ ವ್ಯಾಪಾರವು ಭರ್ಜರಿಯಾಗಿ ನಡೆಯುತ್ತಿದೆ. ಹಲವರು ಈಗಾಗಲೇ ಪೂಜಾಕಾರ್ಯಕ್ರಮವನ್ನು ಮುಗಿಸಿದ್ದರೆ ಮತ್ತೆ ಕೆಲವರು ರಾತ್ರಿ ತಮ್ಮ ವಾಹನ ಸೇರಿದಂತೆ ಇತರೆ ಆಯುಧಗಳಿಗೆ ಪೂಜೆಯನ್ನು ಸಲ್ಲಿಸುತ್ತಿದ್ದಾರೆ.[In Pics : ಅರಮನೆಯಲ್ಲಿ ಆಯುಧ ಪೂಜೆ ವೀಕ್ಷಿಸಿದ ತ್ರಿಷಿಕಾ]
ಇನ್ನು ಐತಿಹಾಸಿಕ ಅರಮನೆಯಲ್ಲಿ ರಾಜವಂಶಸ್ಥರು ನಡೆಸಿಕೊಂಡು ಬಂಧ ಪೂಜಾ ವಿಧಿವಿಧಾನಗಳನ್ನು ಈ ಬಾರಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಂಬಾ ವಿಲಾಸ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ, ಧನುರ್ ಲಗ್ನದಲ್ಲಿ ಸಂಪ್ರದಾಯದಂತೆ, ಆಯುಧಗಳಿಗೆ ಸೇರಿದಂತೆ ತಮ್ಮಲ್ಲಿರುವ ವಾಹನ, ಪಟ್ಟದ ಆನೆ, ಕುದುರೆ, ಹಸುಗಳಿಗೆ ಪೂಜೆಯನ್ನು ಅತ್ಯಂತ ಶಾಸ್ತ್ರಬದ್ಧವಾಗಿ ನೇರವೇರಿಸಿದರು.
ರಾಜಪರಂಪರೆಯ ಸಂಪ್ರದಾಯದಂತೆ ಆಯುಧ ಪೂಜೆ
ಪ್ರಾತಃಕಾಲ 5.30ರಿಂದ ಆರಂಭಗೊಂಡ ಪೂಜಾ ಕಾರ್ಯ ಮಧ್ಯಾಹ್ನದವರೆಗೂ ನೆರವೇರಿಸಿತು. ಮೊದಲಿಗೆ ಅರಮನೆಯ ಆವರಣದಲ್ಲಿ ಆಯುಧ ಪೂಜೆಯನ್ನು ರಾಜಪರಂಪರೆಯ ಸಂಪ್ರದಾಯದಂತೆ ಆರಂಭಿಸಲಾಯಿತು.
ಚಿನ್ನಲೇಪಿತ ಪಲ್ಲಕ್ಕಿಯಲ್ಲಿ ಬಂದ ಆಯುಧ
ಮೊದಲು ಸಾಲಿಗ್ರಾಮ ಪೂಜೆ ನೇರವೇರಿತು. ಆ ನಂತರ ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯಕ್ಕೆ ಚಿನ್ನದ ಖಡ್ಗ, ಪಿಸ್ತೂಲು ಸೇರಿದಂತೆ ಅರಮನೆಯ ಆಯುಧಗಳನ್ನು ಚಿನ್ನಲೇಪಿತ ಪಲ್ಲಕ್ಕಿಯಲ್ಲಿ ಕೊಂಡೊಯ್ದು ಪುರಾತನ ಬಾವಿಯ ಗಂಗೆಯಿಂದ ಶುಚಿಗೊಳಿಸಿ ಬಳಿಕ ಪೂಜೆ ನೆರವೇರಿಸಿದರು.
ಯದುವೀರರಿಂದ ಪೂಜೆ ಹೋಮ ಹವನ
ಇದೇ ಸಮಯದಲ್ಲಿ ಅರಮನೆಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿವಿಧ ಪೂಜೆ ಹೋಮ ಹವನಗಳನ್ನು ನೇರವೇರಿಸಿದರು. ಕೋಡಿ ಸೋಮೇಶ್ವರ ದೇವಾಲಯದಿಂದ ಶುಚಿಗೊಳಿಸಿ ಪಲ್ಲಕಿಯಲ್ಲಿ ತಂದ ಆಯುಧ ಸೇರಿದಂತೆ ಇತರೆ ವಸ್ತುಗಳನ್ನು ಅರಮನೆಯ ಆನೆಬಾಗಿಲು ಮೂಲಕ ಕಲ್ಯಾಟಮಂಟಪಕ್ಕೆ ಕೊಂಡೊಯ್ದು ಜೋಡಿಸಲಾಯಿತು.
ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ಪೂಜೆ
ಆ ನಂತರ ಆಗಮಿಸಿದ ರಾಜಪುರೋಹಿತರು ನೀಡಿದ ಮಾರ್ಗದರ್ಶನದಂತೆ ಆಯುಧಗಳನ್ನು ಜೋಡಿಸಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎಲ್ಲ ಆಯುಧಗಳಿಗೆ ಪೂಜೆ ಸಲ್ಲಿಸಿದರು. ಇದೆಲ್ಲದರ ನಡುವೆ ಖಾಸಗಿ ದರ್ಬಾರ್ ಆರಂಭವಾಗುವ ಮುನ್ನ ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ಪೂಜೆ ಸಲ್ಲಿಸಿ ವಿಸರ್ಜಿಸಲಾಯಿತು.
ಕರಿಕಲ್ಲು ತೊಟ್ಟಿಯಲ್ಲಿ ಯದುವೀರರಿಂದ ಪೂಜೆ
ಬೆಳಗ್ಗೆ 6.15ಕ್ಕೆ ತುಲಾ ಲಗ್ನದಲ್ಲಿ ಚಂಡಿಕಾ ಹೋಮ ಆರಂಭಿಸಿ ನೆರವೇರಿಸಿದರೆ, 8.15ಕ್ಕೆ ಪೂರ್ಣಾಹುತಿ ನೀಡಲಾಯಿತು. 11ರಿಂದ 11.20ರ ಸಮಯದಲ್ಲಿ ಕರಿಕಲ್ಲು ತೊಟ್ಟಿಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧ ಪೂಜೆಯ ವಿವಿಧ ಕ್ರಮಗಳನ್ನು ನೆರವೇರಿಸಿದರು.
ಆನೆ, ಕುದುರೆ, ಒಂಟೆ, ಹಸುಗಳಿಗೂ ಪೂಜೆ
ಅರಮನೆಯಲ್ಲಿರುವ ಐಷಾರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆಯನ್ನು ಮಾಡಲಾಯಿತು. ಆ ನಂತರ ಅರಮನೆಯಲ್ಲಿರುವ ಪಟ್ಟದ ಆನೆ, ಪಟ್ಟದ ಕುದುರೆಗಳು, ಪಟ್ಟದ ಒಂಟೆಗಳು, ಪಟ್ಟದ ಹಸುಗಳು ಹಾಗೂ ಅರಮನೆ ಆರು ಆನೆಗಳಿಗೂ ಹಿಂದಿನ ಕಾಲದಿಂದ ಬಂದಿರುವ ಸಂಪ್ರದಾಯದಂತೆಯೇ ಯದುವೀರರು ಸಂಪ್ರದಾಯಬದ್ಧ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.
ಗ್ಯಾಲರಿಯಲ್ಲಿ ನಿಂತು ನೋಡಿದ ತ್ರಿಷಿಕಾ ಕುಮಾರಿ
ಆಯುಧ ಪೂಜಾ ಕಾರ್ಯಕ್ರಮಕ್ಕೆ ಖಾಸಗಿಯವರಿಗೆ ಪ್ರವೇಶವಿಲ್ಲದ ಕಾರಣ ಯಾವುದೇ ಗೌಜು ಗದ್ದಲವಿಲ್ಲದೆ ಎಲ್ಲವೂ ಸಾಂಗವಾಗಿ ನೆರವೇರಿತು. ಇನ್ನೊಂದೆಡೆ ಅರಮನೆಯಲ್ಲಿ ನಡೆಯುತ್ತಿದ್ದ ಪೂಜಾ ಕಾರ್ಯವನ್ನು ರಾಣಿ ಪ್ರಮೋದಾದೇವಿ ಹಾಗೂ ಯದುವೀರರ ಪತ್ನಿ ತ್ರಿಷಿಕಾಕುಮಾರಿ ಅವರು ಅರಮನೆಯ ಮೇಲ್ಭಾಗದ ಗ್ಯಾಲರಿಯಲ್ಲಿ ನಿಂತು ನೋಡುತ್ತಿದ್ದ ದೃಶ್ಯ ಗಮನಸೆಳೆಯಿತು.