ಅಂಬಾರಿ ಹೊರಲು ಸೈ ಎನಿಸಿಕೊಂಡ ಅರ್ಜುನ!
ಮೈಸೂರು, ಅಕ್ಟೋಬರ್. 03 : ಈ ಬಾರಿಯ ನಾಡ ಹಬ್ಬ ದಸರೆಯ ಆಕರ್ಷಕ ಜಂಬೂಸವಾರಿಯಲ್ಲಿ ಅರ್ಜುನ ಅಂಬಾರಿಯನ್ನು ಹೊತ್ತು ಸಾಗಲಿದ್ದಾನೆ. ಜಂಬೂಸವಾರಿಗೆ ಕೆಲವೇ ದಿನಗಳು ಬಾಕಿ ಇರುವುವರಿಂದ ಭಾನುವಾರದಿಂದಲೇ ಅರ್ಜುನನಿಗೆ ಮರದ ಅಂಬಾರಿಯನ್ನು ಕಟ್ಟಿ ತಾಲೀಮು ನಡೆಸಲಾಗುತ್ತಿದೆ.
ಮರದ ಅಂಬಾರಿಯನ್ನು ಹೊತ್ತು ಅರ್ಜುನ ಸುಮಾರು ಆರು ಕಿಲೋ ಮೀಟರ್ ದೂರವನ್ನು ಮುಕ್ಕಾಲು ಗಂಟೆಯಲ್ಲಿ ಕ್ರಮಿಸಿದ್ದಾನೆ. ನಮ್ದಾ ಎಂದು ಕರೆಯುವ ಹೊದಿಕೆಯನ್ನು ಮೊದಲು ಆನೆಯ ಬೆನ್ನಿನ ಮೇಲೆ ಹೊದಿಸಲಾಗುತ್ತದೆ. ಅದರ ಮೇಲೆ ಮೆತ್ತನೆಯ ಹೊದಿಕೆ 'ಗಾದಿ' ಎಂದು ಕರೆಯುವ ಚೌಕಾಕಾರದ ದೊಡ್ಡ ಹೊರೆಯನ್ನು ಹೊರಿಸಲಾಗುತ್ತದೆ. [ಮೈಸೂರಿನಲ್ಲಿ ಮೇಳೈಸಿದೆ ದಸರಾ ಸಂಭ್ರಮ]
ಈ ಗಾದಿಯ ತೂಕ ಸುಮಾರು 300 ಕೆ.ಜಿ ತೂಕ ಇರುತ್ತದೆ. ದೊಡ್ಡ ಗೋಣಿ ಚೀಲದಲ್ಲಿ ಕೆರೆಯಲ್ಲಿ ಬೆಳೆಯುವ ಜೊಂಡು ಹುಲ್ಲು ತುಂಬಲಾಗಿರುತ್ತದೆ. ಇದನ್ನು ಸುಮಾರು ಸುಮಾರು 80 ರಿಂದ 90 ಅಡಿ ಉದ್ದದ ಹಗ್ಗದಿಂದ ಬಿಗಿಯಲಾಗುತ್ತದೆ. ಅದರ ಮೇಲೆ ಮತ್ತೊಂದು ಬಟ್ಟೆ (ಛಾಪು)ಯನ್ನು ಹೊದಿಸಲಾಗುತ್ತದೆ. [ಮೈಸೂರು ದಸರಾ: ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ]
ಇದರ ಮೇಲೆ ಮರದ ಅಂಬಾರಿಯನ್ನಿರಿಸಿ ಆನೆಯ ಹಿಂಭಾಗದಿಂದ 'ದುಮುಚಿ' ಎಂಬ ರಬ್ಬರ್ ಮತ್ತು ಆನೆಯ ಹೊಟ್ಟೆ ಭಾಗಕ್ಕೆ ಚೆಸ್ಟ್ ಲೆಗ್ ರಬ್ಬರ್ ಹಗ್ಗ ಬಿಗಿಯಲಾಗುತ್ತದೆ. ಹೀಗೆ ಕಟ್ಟಿದ ಚಿನ್ನದ ಅಂಬಾರಿಯಂತೆಯೇ ಕಾಣುವ ಮರದ ಅಂಬಾರಿ ಇದೀಗ ಎಲ್ಲರ ಗಮನಸೆಳೆಯುತ್ತದೆ.
ಯಾವುದೇ ತೊಂದರೆಯಿಲ್ಲದೆ ನಿರಾಳವಾಗಿ ಬನ್ನಿಮಂಟಪದವರೆಗೆ ಸಾಗುತ್ತಿದ್ದಾನೆ. ಸದ್ಯದ ಸ್ಥಿತಿಯಲ್ಲಿ ಅರ್ಜುನ ಈ ಬಾರಿಯೂ ನಾನೇ ಅಂಬಾರಿಯನ್ನು ಹೊರಲು ಸನ್ನದ್ಧನಾಗಿದ್ದೇನೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಹೀಗಾಗಿ ಅರಣ್ಯಾಧಿಕಾರಿಗಳು ನಿರಾಳರಾಗಿದ್ದಾರೆ. ಆದ್ದರಿಂದ ಜಂಬೂಸವಾರಿ ಯಾವುದೇ ಆತಂಕವಿಲ್ಲದೆ ನಡೆಯುತ್ತಿದೆ ಎಂಬ ಧೈರ್ಯ ಬಂದಂತಾಗಿದೆ.