ಕುಡ್ಲ ದಸರಾದಲ್ಲಿ ದೀಪಗಳದ್ದೇ ವೈಭವ

ಮಂಗಳೂರು ದಸರಾಕ್ಕೆ ಶನಿವಾರ ಸಂಜೆ 6.30ಕ್ಕೆ ಕೇಂದ್ರ ರೈಲ್ವೇ ಸಹಾಯಕ ಸಚಿವ ಕೆ.ಎಚ್. ಮುನಿಯಪ್ಪ ಚಾಲನೆ ನೀಡಿದರು. ಕ್ಷೇತ್ರದ ನವೀಕರಣದ ರೂವಾರಿಯಾದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಬಿಲ್ಲವ, ವಿಶ್ವಕರ್ಮ ಸಮುದಾಯದ ಹಲವಾರು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು. ವಿಶ್ವಕರ್ಮ ಸಮುದಾಯದ ಮುಖಂಡ ಕೆ.ಪಿ. ನಂಜುಂಡಿ ಮುಖ್ಯ ಅತಿಥಿಗಳಾಗಿದ್ದರು.
ಸಾಂಸ್ಕೃತಿಕ ವೈಭವ: ರವಿವಾರ ಸಂಜೆ 4.30ಕ್ಕೆ ವೈಭವಯುತ ಶ್ರೀ ಶಾರದಾ ಮಾತೆಯ ಶೋಭಾ ಯಾತ್ರೆ ಆರಂಭಗೊಳ್ಳಲಿದೆ. ದೇವಸ್ಥಾನದ ವತಿಯಿಂದ 14 ಟ್ಯಾಬ್ಲೋಗಳು ಶೋಭಾ ಯಾತ್ರೆಗಳಲ್ಲಿ ಭಾಗವಹಿಸಲಿವೆ. ಇದಲ್ಲದೆ ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬಂಟ್ವಾಳ, ಸುಳ್ಯ, ಬೆಳ್ತಂಗಡಿ ಕಡೆಗಳಿಂದ ಬರುವ ಟ್ಯಾಬ್ಲೋಗಳು ಸೇರಿದಂತೆ ಒಟ್ಟು 60 ಟ್ಯಾಬ್ಲೋಗಳು ಪಾಲ್ಗೊಳ್ಳಲಿವೆ.
ಮೆರವಣಿಗೆ ಸಾಗುವ ಸುಮಾರು 8 ಕಿ.ಮೀ. ಮಾರ್ಗವನ್ನು ಅತ್ಯಾಕರ್ಷಕವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಅಭೂತಪೂರ್ವ ರೀತಿಯಲ್ಲಿ ಈ ಮಾರ್ಗವನ್ನು ಸುಮಾರು 10 ಲಕ್ಷ ದೀಪಗಳಿಂದ ಶೃಂಗರಿಸಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಬಲ್ಬ್ಗಳನ್ನು ಬಳಕೆ ಮಾಡಿರುವ ಉದಾಹರಣೆ ಮತ್ತೊಂದಿಲ್ಲ ಎಂದು ದೇಗುಲದ ಟ್ರಸ್ಟಿಗಳು ಹೇಳುತ್ತಾರೆ.
ಮೆರವಣಿಗೆಯಲ್ಲಿ ಕರ್ನಾಟಕ ಹಾಗೂ ಹೊರರಾಜ್ಯಗಳಿಂದ ಬರುವ ವಿವಿಧ ಕಲಾ - ಸಾಂಸ್ಕೃತಿಕ ತಂಡಗಳು ಪಾಲ್ಗೊಳ್ಳಲಿವೆ. ಅತ್ಯಂತ ಆಕರ್ಷಕ ಹಾಗೂ ವೈಭಯುತ ಶೋಭಾ ಯಾತ್ರೆ ನಡೆಸಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ.
ಶೋಭಾಯಾತ್ರೆ ದಾರಿ: ದೇವಸ್ಥಾನದಿಂದ ಹೊರಟು ಲೇಡಿಹಿಲ್, ಬಲ್ಲಾಳ್ಬಾಗ್, ನವಭಾರತ್ ಸರ್ಕಲ್, ಹಂಪನಕಟ್ಟೆ, ಗಣಪತಿ ಹೈಸ್ಕೂಲ್, ರಥಬೀದಿ, ಚಿತ್ರಾ ಟಾಕೀಸ್ ಮೂಲಕ ಮತ್ತೆ ಶ್ರೀ ಕ್ಷೇತ್ರಕ್ಕೆ ತಲುಪಲಿದೆ. ಸೋಮವಾರ ಬೆಳಗಿನ ಜಾವ ಶ್ರೀ ಶಾರದಾ ವಿಸರ್ಜನೆ ಕಾರ್ಯಕ್ರಮ ಜರಗಲಿವೆ. ಅ. 18ರಂದು ರಾತ್ರಿ 7 ಗಂಟೆಯಿಂದ ಭಜನೆ, ಬಳಿಕ ಗುರುಪೂಜೆ ಕಾರ್ಯಕ್ರಮ ನಡೆಯಲಿದೆ
ಪ್ರತಿವರ್ಷದಂತೆ ಶನಿವಾರ ಮಧ್ಯಾಹ್ನ ಮಹಾ ಸಂತರ್ಪಣೆ ನಡೆಸಲಾಯಿತು, ಸುಮಾರು 25-30 ಸಾವಿರ ಭಕ್ತಾದಿಗಳು ಪ್ರಸಾದ ಸ್ವೀಕರಿಸಿದರು. ಕಳೆದ ವರ್ಷದ ಮಂಗಳೂರು ದಸರಾದ ವೈಭವವನ್ನು ಆಸ್ತಾ ಟಿವಿ ಮೂಲಕ 154 ದೇಶಗಳಲ್ಲಿ ಜನರು ವೀಕ್ಷಿಸಿದ್ದಾರೆ. ಹಾಗಾಗಿ ಈ ಕ್ಷೇತ್ರ ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಪ್ರಸಿದ್ಧಗೊಳ್ಳುತ್ತಿದೆ ಎಂದು ಟ್ರಸ್ಟಿ ರವಿಶಂಕರ ಮಿಜಾರ್,ಹೇಳಿದರು.












Click it and Unblock the Notifications