ಹಬ್ಬಕ್ಕೆ ಬೆಂಗಳೂರು ಮಾರುಕಟ್ಟೆಗಳು ಗಿಜಿಗಿಜಿ
ಬೆಂಗಳೂರು, ಅ.8: ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬಗಳ ಪ್ರಯುಕ್ತ ಬೆಂಗಳೂರಿನ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಶಿವಾಜಿನಗರ, ಬನಶಂಕರಿ ಸೇರಿದಂತೆ ವಿವಿಧ ಮಾರುಕಟ್ಟೆಗಳು ಜನಸಂದಣಿಯಿಂದ ಗಿಜಿಗುಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಮಂಗಳವಾರ ಬೆಳಗ್ಗೆ ಮಾರುಕಟ್ಟೆ ಪ್ರದೇಶಗಳು ಬಿಕೋ ಎನ್ನುತ್ತಿದ್ದವು. ನಂತರ ಬಿರುಸುಗೊಂಡ ವ್ಯಾಪಾರಿ ಚಟುವಟಿಕೆಗಳು ಮಾರುಕಟ್ಟೆಗೆ ರಂಗೇರಿಸಿದವು. ಬಾಳೆಕಂದು, ಮಾವಿನ ಸೊಪ್ಪು, ಹೂವು ಹಣ್ಣು, ಬೂದಗುಂಬಳಕಾಯಿಗಳ ವ್ಯಾಪಾರ ಜೋರಾಗಿತ್ತು. ಸಾಮಗ್ರಿಗಳ ಬೆಲೆಗಳು ಗಗನಕ್ಕೇರಿದ್ದರಿಂದ ವ್ಯಾಪಾರಿಗಳೊಂದಿಗೆ ಗ್ರಾಹಕರು ಚೌಕಾಸಿ ಮಾಡುತ್ತಿದ್ದದ್ದು ಕಂಡುಬಂತು.
ಬುಧವಾರ ಆಯುಧಪೂಜೆ ಪ್ರಯುಕ್ತ ಸರ್ಕಾರಿ ರಜೆ ಇರುವ ಕಾರಣ ಬಹುತೇಕ ಸರ್ಕಾರಿ ಕಚೇರಿಗಳು ಹಾಗೂ ಕೆಲವು ಐಟಿಬಿಟಿ ಕಂಪನಿಗಳು ಇಂದೇ ಆಯುಧ ಪೂಜೆಯನ್ನು ಆಚರಿಸಿಕೊಂಡವು. ವಿಧಾನಸೌಧ, ವಿಕಾಸಸೌಧ ಸೇರಿದಂತೆ ನಗರದ ಬಹುತೇಕ ಸರ್ಕಾರಿ ಕಚೆರಿಗಳು ಬಾಳೆಕಂದು, ಮಾವಿನ ತೋರಣಗಳಿಂದ ನವವಧುವಿನಂತೆ ಸಿಂಗಾರಗೊಂಡಿದ್ದವು.
ಸರ್ಕಾರಿ ಕಚೇರಿಗಳಲ್ಲಿ ನೌಕರರೆಲ್ಲಾ ಹಬ್ಬದ ಸಂಭ್ರಮದಲ್ಲಿ ಮುಳುಗಿದ ಕಾರಣ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದವು. ಬಿಎಂಟಿಸಿಯ ಬಹುತೇಕ ಬಸ್ಸುಗಳು ಸಿಂಗಾರಗೊಂಡು ರಸ್ತೆಯಲ್ಲಿ ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
(ದಟ್ಸ್
ಕನ್ನಡ
ವಾರ್ತೆ)