Year ender 2022 : ಕರ್ನಾಟಕದಲ್ಲಿ ಈ ವರ್ಷ ನಿಧನರಾದ ರಾಜಕೀಯ ಗಣ್ಯರು
ಬೆಂಗಳೂರು,ಡಿಸೆಂಬರ್ 22: 2022 ಕರ್ನಾಟಕ ರಾಜಕೀಯಕ್ಕೆ ಕರಾಳ ವರ್ಷ ಕೂಡ ಹೌದು. ಹಲವು ರಾಜಕೀಯ ನಾಯಕರು, ಮಾಜಿ ಶಾಸಕರು ಇದೇ ವರ್ಷ ಇಹಲೋಕ ತ್ಯಜಿಸಿದ್ದಾರೆ. ಪ್ರಮುಖವಾಗಿ ಉತ್ತರ ಕರ್ನಾಟಕದ ರಾಜಕಾರಣಿ, ಮಾಜಿ ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧರಾಗಿದ್ದು ರಾಜ್ಯ ರಾಜಕೀಯಕ್ಕೆ ತುಂಬಲಾರದ ನಷ್ಟ ಉಂಟು ಮಾಡಿತು. ಅವರ ಜೊತೆ ವಿಧಾನಸಭೆ ಉಪಸಭಾಪತಿಯಾಗಿದ್ದ ಆನಂದ್ ಮಾಮನಿ ಕೂಡ ತಮ್ಮ 56ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ನಿಧನರಾದರು.
ಅಷ್ಟೇ ಅಲ್ಲದೇ ಗದಗದ ಮಾಜಿ ಶಾಸಕ ಶ್ರೀಶೈಲಪ್ಪ ಬಿದನೂರು ಅವರು ಪಕ್ಷದ ಕಾರ್ಯಕ್ರಮಕ್ಕೆ ಬಂದಾಗಲೇ ಇಹಲೋಕ ತ್ಯಜಿಸಿದ್ದರು. ಡಾ ಎಚ್ಡಿ ಚೌಡಯ್ಯ, ಜಿವಿ ಮಂಟೂರ, ಎಜಿ ಕೊಡ್ಲಿ ಸೇರಿ ಹಲವು ಮಾಜಿ ಸಂಸದ ಪಟುಗಳನ್ನು ಕರ್ನಾಟಕ 2022ರಲ್ಲಿ ಕಳೆದುಕೊಂಡಿದೆ. ಅದರಂತೆ 2022ರಲ್ಲಿ ಇಹಲೋಕ ತ್ಯಜಿಸಿದ ಕರ್ನಾಟಕದ ಪ್ರಮುಖ ರಾಜಕೀಯ ನಾಯಕರು ಈ ಕೆಳಗಿನಂತೆ ಇದ್ದಾರೆ.
ಸಾಹುಕಾರ ಉಮೇಶ್ ಕತ್ತಿ ಇನ್ನಿಲ್ಲ
ಬೆಳಗಾವಿಯ ಪ್ರಭಾವಿ ನಾಯಕ ಹಾಗೂ ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಉಮೇಶ್ ಕತ್ತಿ ಅವರು ಹೃದಯಾಘಾತದಿಂದ ಸೆಪ್ಟೆಂಬರ್ 6 ರಂದು ಇಹಲೋಕ ತ್ಯಜಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು, ಅರಣ್ಯ ಇಲಾಖೆ ಹಾಗೂ ವಿಜಯಪುರ ಉಸ್ತುವಾರಿ ಸಚಿವರಾಗಿ ಉಮೇಶ್ ಕತ್ತಿ ನಿರ್ವಹಿಸುತ್ತಿದ್ದರು. ಆದರೆ, ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದರು. ಹಲವು ವಿವಾದಾತ್ಮಕ ಹೇಳಿಕೆಗಳಿಂದಲೇ ರಾಜ್ಯ ರಾಜಕಾರಣದಲ್ಲಿ ಉಮೇಶ್ ಕತ್ತಿ ಹೆಚ್ಚು ಗುರುತಿಸಿಕೊಂಡಿದ್ದರು.
ಅದಲ್ಲದೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕೆಂದು ಹಲವು ಸಲ ಹೇಳಿಕೆಯನ್ನು ನೀಡಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದ ಉಮೇಶ್ ಕತ್ತಿ ಅವರು ಬರೋಬ್ಬರಿ 8 ಬಾರಿ ಶಾಸಕರಾಗಿದ್ದ ಉಮೇಶ್ ಕತ್ತಿ ಅವರು 9 ಬಾರಿ ಚುನಾವಣೆ ಎದುರಿಸಿದ್ದರು. ಆ ಪೈಕಿ ನಾಲ್ಕು ಬಾರಿ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. 6 ಪಕ್ಷಗಳನ್ನು ಬದಲಿಸಿದ್ದರು ಕೇವಲ ಒಂದು ಬಾರಿ ಮಾತ್ರ ಉಮೇಶ್ ಕತ್ತಿ ಸೋಲು ಅನುಭವಿಸಿದ್ದರು. 1961ರ ಮಾರ್ಚ್ 14 ರಂದು ಜನಿಸಿದ್ದ ಉಮೇಶ್ ಕತ್ತಿಯವರಿಗೆ 61 ವರ್ಷ ವಯಸ್ಸಾಗಿತ್ತು.

ಆನಂದ್ ಮಾಮನಿ ನಿಧನ
ರಾಜ್ಯ ವಿಧಾನಸಭೆಯ ಉಪ ಸಭಾಪತಿಯಾಗಿದ್ದ ಸವದತ್ತಿ ಶಾಸಕ ಆನಂದ್ ಮಾಮನಿ ಅಕ್ಟೋಬರ್ 23ರಂದು ನಿಧನರಾದರು. ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು, ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಆಗಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗಿದೇ ನಿಧನರಾಗಿದ್ದರು. 2008 ರಿಂದ ಸತತ ಮೂರು ಬಾರಿ ಸವದತ್ತಿ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. ಸಚಿವರಾಗಬೇಕೆಂಬ ಕನಸನ್ನು ಹೊಂದಿದ್ದ ಅವರನ್ನು ಬಿಜೆಪಿ ಸರ್ಕಾರ ಉಪಸಭಾಪತಿಯನ್ನಾಗಿ ಮಾಡಿತ್ತು. ಇನ್ನೂ, ಅವರ ತಂದೆ ಚಂದ್ರಶೇಖರ್ ಮಾಮನಿ ಕೂಡ ಉಪಸಭಾಪತಿಯಾಗಿದ್ದಾಗಲೇ ತೀರಿಕೊಂಡಿದ್ದರು.
ಮಾಜಿ ಶಾಸಕ ಶ್ರೀಶೈಲಪ್ಪ ಬಿದನೂರು ನಿಧನ
ಗದಗದ ಹಿರಿಯ ರಾಜಕಾರಣಿ ಶ್ರೀಶೈಲಪ್ಪ ಬಿದನೂರು ಅವರು ನವೆಂಬರ್ 25ರಂದು ನಿಧನರಾದರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ಗೆ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಗದಗದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಹೃದಯಾಘಾತದಿಂದ ವಿಧಿವಶರಾಗಿದ್ದರು. ರೋಣ ಮತ್ತು ಗದಗ ಕ್ಷೇತ್ರಗಳಿಂದ ಎರಡು ಬಾರಿ ಶ್ರೀಶೈಲಪ್ಪ ಶಾಸಕರಾಗಿ ಆಯ್ಕೆಯಾಗಿ ಕೆಲಸ ಮಾಡಿದ್ದರು. ಮೊದಲು ಬಿಜೆಪಿಯಲ್ಲಿದ್ದ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗದಗ ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದರು.
ಮಾಜಿ ಶಾಸಕ ಡಾ ಎಚ್ಡಿ ಚೌಡಯ್ಯ ನಿಧನ
ಮಾಜಿ ಶಾಸಕ, ಶಿಕ್ಷಣ ತಜ್ಞ ಡಾ ಎಚ್ ಡಿ ಚೌಡಯ್ಯ ಅವರು ಫೆಬ್ರವರಿ 16ರಂದು ವಿಧಿವಶರಾದರು. ತಮ್ಮ 94ನೇ ವಯಸ್ಸಿನಲ್ಲಿ ಮಂಡ್ಯ ನಗರದ ಹೊಳಲು ನಿವಾಸದಲ್ಲಿ ಚೌಡಯ್ಯ ಅವರು ಕೊನೆಯುಸಿರೆಳೆದರು. 4 ಬಾರಿ ಕೆರಗೋಡು ಕ್ಷೇತ್ರದ ಶಾಸಕರಾಗಿದ್ದ ಚೌಡಯ್ಯ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅಲ್ಲದೆ ಕಾವೇರಿ ಹೋರಾಟದಲ್ಲಿ ಮಾದೇಗೌಡರ ಜತೆ ಭಾಗಿಯಾಗಿದ್ದರು. ಪಿಇಟಿ ಶಿಕ್ಷಣ ಸಂಸ್ಥೆ ಕಟ್ಟಿದ ಪ್ರಮುಖರಲ್ಲಿ ಚೌಡಯ್ಯ ಕೂಡ ಒಬ್ಬರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚೌಡಯ್ಯ ಅವರ ನಿಧನಕ್ಕೆ ಪ್ರಮುಖ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದರು.

ಹಿರಿಯ ರಾಜಕಾರಣಿ ಜಿವಿ ಮಂಟೂರ ವಿಧಿವಶ
ಹಿರಿಯ ರಾಜಕಾರಣಿ ಹಾಗೂ ಬಾಗಲಕೋಟೆ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಜಿವಿ ಮಂಟೂರ ಅವರು ಫೆಬ್ರವರಿ 17ರಂದು ನಿಧನರಾದರು. 70ರ ದಶಕದಲ್ಲಿ ಬಾಗಲಕೋಟೆ ತಾಲೂಕಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದ ಅವರು 1983ರಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಶಾಸಕರಾಗಿದ್ದರು. ಅದಾದ ಬಳಿಕ, 1985ರಲ್ಲಿ ಜನತಾ ಪಕ್ಷದಿಂದ ಮರು ಆಯ್ಕೆಯಾಗಿದ್ದರು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಒಡನಾಡಿಯಾಗಿದ್ದ ಮಂಟೂರ ಅವರು ಬಾಗಲಕೋಟೆಯ ಮಾಜಿ ಸಚಿವ ಎಚ್ವೈ ಮೇಟಿ ಸೇರಿ ಹಲವರನ್ನು ಸಕ್ರಿಯ ರಾಜಕಾರಣಕ್ಕೆ ತಂದವರು. ಕ್ಷೇತ್ರದಲ್ಲಿ ಮಂಟೂರ ಖಾಖಾ ಎಂದೇ ಚಿರಪರಿಚಿತರಾಗಿದ್ದರು.
ಕರಾವಳಿಯ ಭೀಷ್ಮ ಎಜಿ ಕೊಡ್ಗಿ ನಿಧನ
ಬಿಜೆಪಿಯ ಹಿರಿಯ ಮುಖಂಡ ಹಾಗೂ ಕರಾವಳಿಯ ಭೀಷ್ಮ ಎಂದೇ ಕರೆಸಿಕೊಳ್ಳುತ್ತಿದ್ದ ಎಜಿ ಕೊಡ್ಗಿ ಅವರು ಅನಾರೋಗ್ಯದಿಂದ ಜೂನ್ 13ರಂದು ಇಹಲೋಕ ತ್ಯಜಿಸಿದರು. ಎಜಿ ಕೊಡ್ಗಿ ಅವರು ಕಾಂಗ್ರೆಸ್ನಿಂದ 2 ಬಾರಿ ಬೈಂದೂರು ಶಾಸಕರಾಗಿದ್ದರು. ಮಾಜಿ ಶಾಸಕ ಎಜಿ ಕೊಡ್ಗಿ ಅವರು 1993ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಿಜೆಪಿ ಆಡಳಿತದಲ್ಲಿ 3ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದರು. ಪ್ರಗತಿಪರ ಕೃಷಿ, ಸೌರ ವಿದ್ಯುತ್, ಗ್ರಾಮೀಣಾಭಿವೃದ್ಧಿ, ನದಿ ಜೋಡಣೆ ಇವರ ಪ್ರಮುಖ ಆಸಕ್ತಿಯ ಕ್ಷೇತ್ರಗಳಾಗಿದ್ದವು. ತಮ್ಮ ಊರು ಅಮಾಸೆಬೈಲಿನ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದರು. ಅಮಾಸೆಬೈಲು ಸೋಲಾರ್ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ದೇವರಾಜ ಅರಸು ಕಾಲದಲ್ಲಿ ಭೂಮಸೂದೆ ಕಾನೂನು ಅನುಷ್ಠಾನ ದಲ್ಲಿ ಮುಂಚೂಣಿಯಲ್ಲಿದ್ದರು. 2013ರಲ್ಲಿ ರಾಜಕೀಯ ನಿವೃತ್ತಿ ಹೊಂದಿ ಸಂಪೂರ್ಣ ಗ್ರಾಮ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
2022ರಲ್ಲಿ ನಿಧನರಾದ ಇತರ ಪ್ರಮುಖ ರಾಜಕೀಯ ನಾಯಕರು
15 ಏಪ್ರಿಲ್ 2022: ಬಾಗೇಪಲ್ಲಿಯ ಎರಡು ಸಲದ ಶಾಸಕ ಜಿವಿ ಶ್ರೀರಾಮರೆಡ್ಡಿ ನಿಧನ
17 ಏಪ್ರಿಲ್ 2022: ಮಾಜಿ ಶಾಸಕ ಈಶಣ್ಣ ಗುಳಗಣ್ಣನವರ್ ನಿಧನ
23 ಏಪ್ರಿಲ್ 2022: ಕಾಫಿ ಮಂಡಳಿ ಅಧ್ಯಕ್ಷ ಬೋಜೇಗೌಡ ನಿಧನ
18 ಜೂನ್ 2022: ಮಾಜಿ ಸಚಿವ ಎಂ ರಘುಪತಿ ನಿಧನ
05 ಸೆಪ್ಟೆಂಬರ್ 2022: ಕಾರವಾರ, ಜೋಯಿಡಾ ಕ್ಷೇತ್ರದ ಶಿಕ್ಷಕ, ಮಾಜಿ ಸಚಿವ ಪ್ರಭಾಕರ್ ರಾಣೆ ನಿಧನ
08 ಸೆಪ್ಟೆಂಬರ್ 2022: ಪಾಂಡವಪುರ ಕ್ಷೇತ್ರದ ಮಾಜಿ ಶಾಸಕ ಕೆ ಕೆಂಪೇಗೌಡ ನಿಧನ
07 ಅಕ್ಟೋಬರ್ 2022: ಎಸ್ಎಂ ಕೃಷ್ಣ ಸರ್ಕಾರದಲ್ಲಿ ಸಚಿವರಾಗಿದ್ದ ಜಬ್ಬಾರ್ ಖಾನ್ ಹೊನ್ನಳ್ಳಿ ನಿಧನ
12 ಅಕ್ಟೋಬರ್ 2022: ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕ ಎನ್ಟಿ ಬೊಮ್ಮಣ್ಣ ನಿಧನ
23 ಅಕ್ಟೋಬರ್ 2022: ಮಾಜಿ ಸಚಿವ ಸುಧೀಂದ್ರರಾವ್ ಕಸಬೆ ನಿಧನ
26 ನವೆಂಬರ್ 2022: ಬಳ್ಳಾರಿಯಲ್ಲಿ ಮಾಜಿ ಸಂಸದ ಕೋಳೂರು ಬಸವನಗೌಡ ನಿಧನ
15 ಡಿಸೆಂಬರ್ 2022: ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ಎಸ್ಎನ್ ಪಾಟೀಲ್ ನಿಧನ
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications