2021ರ ಸೆಪ್ಟೆಂಬರ್: ತಾಯಿ ತೋಳಲ್ಲಿರುವ ಕಂದನಿಗೂ ಕೊವಿಡ್-19 ಚಿಂತೆ!
ನವದೆಹಲಿ, ಡಿಸೆಂಬರ್ 28: ಭಾರತದಲ್ಲಿ ಸೆಪ್ಟೆಂಬರ್ ತಿಂಗಳ ಹೊತ್ತಿಗೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಕೊಂಚ ತಗ್ಗಿತು. ಪ್ರತಿನಿತ್ಯ 50,000 ಗಡಿ ದಾಟುತ್ತಿದ್ದ ಸೋಂಕಿತ ಪ್ರಕರಣಗಳ ಸಂಖ್ಯೆ ಬಹುತೇಕ ನಿಯಂತ್ರಣಕ್ಕೆ ಬಂದಿತ್ತು.
ದೇಶದಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಜಾರಿಗೊಳಿಸಿದ್ದ ಬಿಗಿ ನಿಯಮಗಳನ್ನು ಸಡಿಲಗೊಳಿಸಲಾಯಿತು. ಶಾಲೆ-ಕಾಲೇಜು ಕ್ರಮೇಣವಾಗಿ ತೆರೆಯುವುದಕ್ಕೆ ಅನುಮತಿ ನೀಡಲಾಯಿತು. ಅದಾಗ್ಯೂ, ಸೋಂಕಿನ ಪರೀಕ್ಷೆ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಆರಂಭಗೊಂಡ ಕಾಲೇಜುಗಳಲ್ಲಿ ಕೊವಿಡ್-19 ಪರೀಕ್ಷಿಸುವ ಚಿತ್ರಗಳು ಇಡೀ ತಿಂಗಳಿನ ಕಥೆಯನ್ನು ಹೇಳುತ್ತಿದ್ದವು.
2021ರ ಸೆಪ್ಟೆಂಬರ್ ತಿಂಗಳಿನಲ್ಲಿ 18,000 ಅಡಿ ಎತ್ತರದಿಂದ ಪರ್ವತ ಪ್ರದೇಶದಲ್ಲಿ 27 ಕಿಮೀಗಳವರೆಗೆ ಕಾಲ್ನಡಿಗೆಯಲ್ಲಿ ಸ್ಟ್ರೆಚರ್ಗಳ ಮೇಲೆ 2 ಮೃತದೇಹಗಳನ್ನು ಐಟಿಬಿಪಿ ಸಾಗಿಸಿದ ಚಿತ್ರವೂ ಸಹ ಸಾಕಷ್ಟು ಸುದ್ದಿ ಮಾಡಿತ್ತು. ಶಿಮ್ಲಾದಲ್ಲಿ ಭಾರಿ ಮಳೆಗೆ ಬಹು ಅಂತಸ್ತಿನ ಕಟ್ಟಡವೇ ನೆಲಕ್ಕೆ ಕುಸಿಯಿತು. ಇದರ ಮಧ್ಯೆ ಮಹಾತ್ಮ ಗಾಂಧೀಜಿಯವರ ಜಯಂತಿ ದಿನ ಕಾರ್ಮಿಕನೊಬ್ಬ ಪ್ರತಿಮೆಯನ್ನು ಒರೆಸುತ್ತಿರುವ ಚಿತ್ರವೂ ಕೂಡಾ ಸೆಪ್ಟೆಂಬರ್ ತಿಂಗಳಿನ ಪ್ರಮುಖ ಚಿತ್ರ ಸುದ್ದಿಯಾಗಿತ್ತು. ಈ ಎಲ್ಲ ಚಿತ್ರಗಳ ಜೊತೆಗೆ ಅವುಗಳ ಹಿಂದಿನ ಪರಿಸ್ಥಿತಿ ಮತ್ತು ಸುದ್ದಿಯ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಅಮ್ಮನಿಗೆ ಕೊರೊನಾವೈರಸ್ ಪರೀಕ್ಷೆ ಮಾಡ್ತೀರಾ ಅನ್ನುವ ಲುಕ್!
ಭಾರತದಲ್ಲಿ ಸೆಪ್ಟೆಂಬರ್ ತಿಂಗಳು ಎನ್ನುವುದು ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು ಒಟ್ಟು ಪರೀಕ್ಷೆಯ ಮೇಲೆ ನಿರ್ಧಾರವಾಗುವ ಕಾಲವಾಗಿತ್ತು. ತಿಂಗಳ ಆರಂಭದಲ್ಲಿ 45,000ದ ಆಸುಪಾಸಿನಲ್ಲಿದ್ದ ಸೋಂಕಿತ ಪ್ರಕರಣಗಳ ಸಂಖ್ಯೆ ತಿಂಗಳ ಕೊನೆಯಲ್ಲಿ ಅರ್ಧದಷ್ಟು ಕುಸಿದಿದ್ದು, 23,000ಕ್ಕಿಂತ ಕಡಿಮೆಯಾಗಿತ್ತು. ಇದರ ಮಧ್ಯೆ ಮುಂಬೈ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರಿಗೆ ಆರೋಗ್ಯ ಕಾರ್ಯಕರ್ತೆಯೊಬ್ಬರು ಕೊರೊನಾವೈರಸ್ ಸೋಂಕಿನ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಣಿಕನ ದೇಹದ ಉಷ್ಣತೆ ಪರೀಕ್ಷಿಸಿದರು. ಇದೇ ಸಂದರ್ಭದಲ್ಲಿ ಅಮ್ಮನ ತೋಳಿನಲ್ಲಿದ್ದ ಪುಟ್ಟ ಮಗುವೊಂದು, ಅಯ್ಯೋ ನಮ್ಮ ಅಮ್ಮನಿಗೇನು ಪರೀಕ್ಷೆ ಮಾಡುತ್ತಿದ್ದೀರಾ ಅನ್ನುವ ರೀತಿಯಲ್ಲಿ ಲುಕ್ ಕೊಟ್ಟಿರುವ ಫೋಟೋ ಅಂದು ಸಖತ್ ವೈರಲ್ ಆಗಿತ್ತು.

ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಉಪ ಚುನಾವಣೆ
ಪಶ್ಚಿಮ ಬಂಗಾಳದ ಮೂರು ಹಾಗೂ ಒಡಿಶಾದ ಒಂದು ವಿಧಾನಸಭೆಗೆ ಅಕ್ಟೋಬರ್ 30ರಂದು ಮತದಾನ ನಡೆಯಿತು. ಪಶ್ಚಿಮ ಬಂಗಾಳದ ಬಾಬಿನೀಪುರ, ಸಂಸೇರ್ನಗರ್, ಜಾಂಗೀಪುರ್ ಹಾಗೂ ಒಡಿಶಾದ ಪಿಪ್ಲಿ ಕ್ಷೇತ್ರಗಳಿಗೆ ಮತದಾನ ನಡೆಯಿತು. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮುನ್ನೆಚ್ಚರಿಕೆ ಕ್ರಮವಾಗಿ ಉಪ ಚುನಾವಣೆ ಮತಗಟ್ಟೆಯಲ್ಲಿ ಮತದಾನಕ್ಕೆ ಆಗಮಿಸುವ ಪ್ರತಿಯೊಬ್ಬ ಮತದಾರನ ದೇಹದ ಉಷ್ಣತೆಯನ್ನು ಪರೀಕ್ಷಿಸಲಾಯಿತು. ಸೆಪ್ಟೆಂಬರ್ 30ರಂದು ನಡೆದ ಮತದಾನದ ಫಲಿತಾಂಶ ಅಕ್ಟೋಬರ್ 3ರಂದು ಹೊರ ಬಿದ್ದಿತು. ಒಡಿಶಾದ ಪುರಿ ಜಿಲ್ಲೆಯ ಪಿಪ್ಲಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸುತ್ತಿರುವುದನ್ನು ಚಿತ್ರವು ತೋರಿಸುತ್ತದೆ.

18,000 ಅಡಿ ಎತ್ತರದಲ್ಲಿ 2 ಮೃತದೇಹ ಹೊತ್ತು ಸಾಗಿದ ಐಟಿಬಿಪಿ
17ನೇ ಬೆಟಾಲಿಯನ್ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿಯಲ್ಲಿ 18,000 ಅಡಿ ಎತ್ತರದಿಂದ ಪರ್ವತ ಪ್ರದೇಶದಲ್ಲಿ 27 ಕಿಲೋಮೀಟರ್ಗಳಷ್ಟು ಕಾಲ್ನಡಿಗೆಯಲ್ಲಿ ಸ್ಟ್ರೆಚರ್ಗಳ ಮೇಲೆ 2 ಮೃತ ದೇಹಗಳನ್ನು ಸಾಗಿಸಿದ್ದರು. ಕಾಜಾದಲ್ಲಿ 2 ಮೃತದೇಹಗಳು ಮತ್ತು 4 ಪೋರ್ಟರ್ಗಳನ್ನು ಶೀಘ್ರದಲ್ಲೇ ನಾಗರಿಕ ಆಡಳಿತಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿತ್ತು. ಅದು ಐಟಿಬಿಪಿ ಪೊಲೀಸರು ಮೃತದೇಹಗಳನ್ನು ತಮ್ಮ ಹೆಗಲಿನ ಮೇಲೆ ಹೊತ್ತು ಸಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಅದರ ಒಂದು ಚಿತ್ರ ಹೀಗಿದೆ ನೋಡಿ.

ಭಾರಿ ಮಳೆಯಿಂದ ಶಿಮ್ಲಾದಲ್ಲಿ ಕುಸಿದ 8 ಅಂತಸ್ತಿನ ಕಟ್ಟಡ
ಶಿಮ್ಲಾದ ಕಚಿಘಾಟಿ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ ಸೆಪ್ಟೆಂಬರ್ 30ರಂದು ಬಹುಮಹಡಿ ಕಟ್ಟಡ ಕುಸಿಯಿತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಎಂಟು ಅಂತಸ್ತಿನ ಕಟ್ಟಡದಲ್ಲಿ ಗುರುವಾರ ಬೆಳಗ್ಗೆ ಕೆಲವು ಬಿರುಕುಗಳು ಕಾಣಿಸಿಕೊಂಡಿದ್ದು, ನಂತರ ಕಟ್ಟಡವನ್ನು ತೆರವು ಮಾಡಲಾಯಿತು. ಕೆಲವು ಗಂಟೆಗಳ ನಂತರ ಕಟ್ಟಡವು ಧರೆಗುರುಳಿತು.

ಮಹಾತ್ಮ ಗಾಂಧೀಜಿ ಪ್ರತಿಮೆ ಶುದ್ಧಗೊಳಿಸುತ್ತಿರುವ ಕಾರ್ಮಿಕ
ಮಹಾತ್ಮ ಗಾಂಧೀಜಿ ಜಯಂತಿ ಹಿನ್ನೆಲೆ ಮುಂಚಿತವಾಗಿ ಮುಂಬೈನಲ್ಲಿ ಇರುವ ಗಾಂಧಿಯವರ ಪ್ರತಿಮೆಯನ್ನು ಕಾರ್ಮಿಕನೊಬ್ಬನು ಸ್ವಚ್ಛಗೊಳಿಸುತ್ತಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಅಂದಿನ ಸುದ್ದಿಯಾಗಿತ್ತು.












Click it and Unblock the Notifications