ಪುತ್ರನಿಗೆ ಶಿಕಾರಿಪುರ ಬಿಟ್ಟುಕೊಟ್ಟ ಬಿಎಸ್ವೈ: ಕಾರಣ ಆ 5 ರಹಸ್ಯಗಳು?
ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿಯುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನಿರ್ಧಾರ, ರಾಜ್ಯ ಬಿಜೆಪಿ ವಲಯದಲ್ಲಿ ಅಚ್ಚರಿ ಮತ್ತು ಸಂಚಲನ ಮೂಡಿಸಿದೆ. ತಮ್ಮ ರಾಜಕೀಯ ಕರ್ಮಭೂಮಿ ಶಿಕಾರಿಪುರದಿಂದ ಪುತ್ರ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎನ್ನುವ ಘೋಷಣೆಯನ್ನೂ ಬಿಎಸ್ವೈ ಮಾಡಿದ್ದಾರೆ.
ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿದ ನಂತರ ಅವರು ಮುಂದೆ ಸ್ಪರ್ಧಿಸಲಾರರು ಎನ್ನುವುದು ಬಹುತೇಕ ಖಚಿತವಾಗಿತ್ತು. 75+ ವಯಸ್ಸಿನವರಿಗೆ ಟಿಕೆಟ್ ನೀಡದೇ ಇರುವ ಪರಿಪಾಠ ಬಿಜೆಪಿಯಲ್ಲಿ ಇರುವುದರಿಂದ ಬಿಎಸ್ವೈ ಈ ನಿರ್ಧಾರಕ್ಕೆ ಬಂದಿರಬಹುದು.
ಯಡಿಯೂರಪ್ಪನವರ ಈ ನಿರ್ಧಾರದ ಬಗ್ಗೆ ವಿರೋಧ ಪಕ್ಷದವರೂ ಪ್ರತಿಕ್ರಿಯೆಯನ್ನು ನೀಡಿದ್ದಾಗಿದೆ. ಯಡಿಯೂರಪ್ಪನವರ ಅವಶ್ಯಕತೆಯ ಬಗ್ಗೆ ಈಗಾಗಲೇ ವರಿಷ್ಠರು ಹಲವು ಬಾರಿ ಹೇಳಿಕೆ ನೀಡಿದ್ದಾರೆ. ಹಾಗಾಗಿ, ಚುನಾವಣಾ ಪ್ರಚಾರದಿಂದ ಬಿಎಸ್ವೈ ಹಿಂದಕ್ಕೆ ಸರಿಯಲಾರರು.
ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧಿಸುವುದಾಗಿ ಯಡಿಯೂರಪ್ಪನವರು ಹೇಳಿದ್ದರೂ, ಅದು ಅವರ ನಿರ್ಧಾರವೇ ಹೊರತು ಹೈಕಮಾಂಡಿದ್ದಲ್ಲ ಎನ್ನುವುದು ಸ್ಪಷ್ಟ. ಹಾಗಾದರೆ, ಪುತ್ರನಿಗೆ ಕ್ಷೇತ್ರ ಬಿಟ್ಟುಕೊಡುವ ಯಡಿಯೂರಪ್ಪನವರ ನಿರ್ಧಾರದ ಹಿಂದೆ ಯಾವ ಕಾರಣಗಳಿರಬಹುದು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ಒಂದು ಕುಟುಂಬದ ಒಬ್ಬರಿಗೆ ಟಿಕೆಟ್ ಎಂದು ಬಿಜೆಪಿ ವರಿಷ್ಠರು ಹಲವು ಬಾರಿ ಹೇಳಿದ್ದಾಗಿದೆ
ಕಾರಣ - 1: ಒಂದು ಕುಟುಂಬದ ಒಬ್ಬರಿಗೆ ಟಿಕೆಟ್ ಎಂದು ಬಿಜೆಪಿ ವರಿಷ್ಠರು ಹಲವು ಬಾರಿ ಹೇಳಿದ್ದಾಗಿದೆ. ಈಗಾಗಲೇ, ಶಿಕಾರಿಪುರ ಕ್ಷೇತ್ರವನ್ನು ಯಡಿಯೂರಪ್ಪ ಪ್ರತಿನಿಧಿಸುತ್ತಿದ್ದಾರೆ. ಇನ್ನೋರ್ವ ಪುತ್ರ ಬಿ.ವೈ.ರಾಘವೇಂದ್ರ ಶಿವಮೊಗ್ಗದ ಸಂಸದರಾಗಿದ್ದಾರೆ. ಹಾಗಾಗಿ, ತಾನೂ ಸ್ಪರ್ಧಿಸಿ, ವಿಜಯೇಂದ್ರನಿಗೆ ಟಿಕೆಟ್ ಬಯಸಿದರೆ, ಕುಟುಂಬದ ಮೂವರಿಗೆ ಟಿಕೆಟ್ ನೀಡಿದಂತಾಗುತ್ತದೆ. ಇದರಿಂದ, ವಿಜಯೇಂದ್ರನಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಹೆಚ್ಚು. ಹಾಗಾಗಿ, ಯಡಿಯೂರಪ್ಪನವರು ಈ ನಿರ್ಧಾರಕ್ಕೆ ಬಂದಿರಬಹುದು.

ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಎನ್ನುವ ನಿರ್ಧಾರಕ್ಕೆ ಹೈಕಮಾಂಡ್ ಏನಾದರೂ ಬಂದರೆ
ಕಾರಣ - 2: ಕೆಲವೊಂದು ಅಪವಾದದಿಂದ ಹೊರತಾಗಿ 75+ ವಯಸ್ಸಿನವರಿಗೆ ಟಿಕೆಟ್ ನೀಡಲು ಬಿಜೆಪಿ ವರಿಷ್ಠರು ನಿರ್ಧರಿಸಿದರೆ, ತಾನೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಯಡಿಯೂರಪ್ಪ ಹೇಳಿದರೆ, ನಿಮಗೆ ಅಥವಾ ನಿಮ್ಮ ಪುತ್ರನಿಗೆ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಎನ್ನುವ ನಿರ್ಧಾರಕ್ಕೆ ಹೈಕಮಾಂಡ್ ಏನಾದರೂ ಬಂದರೆ, ರಾಜ್ಯ ಬಿಜೆಪಿ ವಲಯದಲ್ಲಿ ಆಗುವ ಮುಜುಗರವನ್ನು ತಪ್ಪಿಸಲು ಈಗಲೇ ಯಡಿಯೂರಪ್ಪ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.

ಶಿಕಾರಿಪುರ ಕ್ಷೇತ್ರ ಬಿಜೆಪಿಯ ಭದ್ರಕೋಟೆ
ಕಾರಣ - 3: ಶಿಕಾರಿಪುರ ಕ್ಷೇತ್ರ ಬಿಜೆಪಿಯ ಭದ್ರಕೋಟೆ, ಯಡಿಯೂರಪ್ಪ ಎಂಟು ಬಾರಿ ಮತ್ತು ಅವರ ರಾಘವೇಂದ್ರ ಒಂದು ಬಾರಿ ಇಲ್ಲಿಂದ ಆಯ್ಕೆಯಾಗಿದ್ದಾರೆ. ವಿಜಯೇಂದ್ರನಿಗೆ ಅತ್ಯಂತ ಸೇಫ್ ಕ್ಷೇತ್ರವೆಂದರೆ ಅದು ಶಿಕಾರಿಪುರವಲ್ಲದೇ ಇನ್ನೊಂದು ಇರಲು ಬಿಎಸ್ವೈ ಕುಟುಂಬಕ್ಕೆ ಸಾಧ್ಯವಿಲ್ಲ. ಹಾಗಾಗಿ, ನಿಶ್ಚಿಂತೆಯಿಂದ ಮಗನನ್ನು ದಡ ಸೇರಿಸಲು ಯಡಿಯೂರಪ್ಪ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಹೇಳಲಾಗುತ್ತಿದೆ.

ನನ್ನ ಮಗನಿಗೆ ಶಿಕಾರಿಪುರದಿಂದಲೇ ಟಿಕೆಟ್ ನೀಡಬೇಕು ಎನ್ನುವ ಒತ್ತಡ
ಕಾರಣ - 4: ಪಕ್ಷದ 75+ ವಯಸ್ಸಿನವರಿಗೆ ಟಿಕೆಟ್ ನೀಡದೇ ಇರುವ ನಿರ್ಧಾರವನ್ನು ಗೌರವಿಸುತ್ತೇನೆ. ನೀವು ಬಯಸಿದಂತೆ ಅತ್ಯಂತ ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇನೆ. ಬಟ್ ಒನ್ ಕಂಡೀಷನ್ ನನ್ನ ಮಗನಿಗೆ ಶಿಕಾರಿಪುರದಿಂದಲೇ ಟಿಕೆಟ್ ನೀಡಬೇಕು ಎನ್ನುವ ಒತ್ತಡವನ್ನು ವರಿಷ್ಠರಿಗೆ ಹಾಕಲು ಯಡಿಯೂರಪ್ಪ ಈ ನಿರ್ಧಾರಕ್ಕೆ ಬಂದಿರಬಹುದು.

ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪ
ಕಾರಣ - 5: ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪನವರಿಗೆ ಉತ್ತರಾಧಿಕಾರಿ ಯಾರು? ಈ ಕಾರಣಕ್ಕಾಗಿ, ಶಿಕಾರಿಪುರದಿಂದ ಮಗನಿಗೆ ಟಿಕೆಟ್ ಕೊಡಿಸಿ, ಗೆಲ್ಲಿಸಿ ಸಮುದಾಯದ ಪ್ರಮುಖ ನಾಯಕನನ್ನಾಗಿ ಹೊರತರುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ, ಸಮುದಾಯದ ಪೀಠಾಧಿಪತಿಗಳ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿರುವ ವಿಜಯೇಂದ್ರ ಅವರನ್ನು ಶಿಕಾರಿಪುರದಿಂದಲೇ ಗೆಲ್ಲಿಸಿಕೊಂಡು ಬಂದರೆ, ಪ್ರಭಲ ನಾಯಕನಾಗಿ ಹೊರಹೊಮ್ಮಬಹುದು ಎನ್ನುವ ಲೆಕ್ಕಾಚಾರವನ್ನು ಯಡಿಯೂರಪ್ಪ ಹೊಂದಿದ್ದಾರೆ ಎಂದು ಚರ್ಚಿಸಲಾಗುತ್ತಿದೆ.












Click it and Unblock the Notifications