ಪೆಟ್ರೋಲ್ ಬೆಲೆ ಹೆಚ್ಚಳದ ನಿಜವಾದ ಕಾರಣ, ಭಾರತ ಬಂದ್ ಯಾಕೆ ಹೇಳ್ರಣ್ಣ
ಸೋಮವಾರ ಬೆಳಗ್ಗೆ ಆದರೆ ಭಾರತ ಬಂದ್. ಇಡೀ ಭಾರತ ಬಂದ್ ಆಗುತ್ತದೋ ಬಿಡುತ್ತದೋ ಆದರೆ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟದ ಸರಕಾರ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರದ ವಿರುದ್ಧದ ಈ ಬಂದ್ ಗೆ ಬೆಂಬಲ ನೀಡುತ್ತದೆ. ಅದು ಯಶಸ್ವಿ ಆಗುವಂತೆ ನೋಡಿಕೊಳ್ಳುತ್ತದೆ.
ಹಾಗಂತ ಇದು ನನ್ನ ಸ್ವಂತ ಅಭಿಪ್ರಾಯ ಅಂದುಕೊಳ್ಳಬೇಡಿ. ನಾಲ್ಕು ಮಂದಿ ನಿಂತು ಮಾತಾಡುವ ಸ್ಥಳದಲ್ಲಿ ಹಾಗೇ ಕೆಲ ಹೊತ್ತು ನಿಂತರೂ ಇದೇ ಚರ್ಚೆ. ಅಲ್ಲಿ ಬಿಜೆಪಿ ಇದೆ. ಆದ್ದರಿಂದ ಕಾಂಗ್ರೆಸ್-ಜೆಡಿಎಸ್ ನಿಂದ ಈ ಬಂದ್ ಗೆ ಬೆಂಬಲ ಸಿಗುತ್ತದೆ ಅನ್ನೋದೇ ತರ್ಕ. ಇರಲಿ, ಪೆಟ್ರೋಲ್ ಬೆಲೆ ಏರಿಕೆ ಸೋಮವಾರದ ಬಂದ್ ಕರೆಗೆ ಕಾರಣ.
ಒಂದು ' ಭಾರತ್ ಬಂದ್' ನಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುವ ಹಾಗಿದ್ದರೆ!?
ಪೆಟ್ರೋಲ್ ಎಂಬ ದೇಶದ 'ಜೀವದ್ರವ್ಯ'ದ ಬೆಲೆ ಏರಿಕೆ ಎಲ್ಲ ವರ್ಗದ ಜನರಿಗೂ ಹೊರೆಯೇ. ಅದು ಏಕೆ ಹಾಗಾಗುತ್ತಿದೆ ಅನ್ನೋದನ್ನು ಮೊದಲಿಗೆ ತಿಳಿದುಕೊಳ್ಳೋಣ. ಮೊದಲಿಗೆ ಭಾರತವು ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುತ್ತಿತ್ತು. ಅದಕ್ಕೆ ಹಣ ಪಾವತಿಸುತ್ತಿದ್ದದ್ದು ಭಾರತದ ರುಪಾಯಿಯಲ್ಲೇ.
ಇರಾನ್ ನಿಂದ ತೈಲ ಖರೀದಿಸುವುದರ ಅನುಕೂಲ ಇದು
ರುಪಾಯಿ ಪಡೆದುಕೊಂಡ ಇರಾನ್ ಕೂಡ ನಮ್ಮ ದೇಶದಿಂದ ಕೆಲವು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದು ಎರಡೂ ದೇಶಗಳ ಪಾಲಿಗೆ ಲಾಭದಾಯಕವಾದ ವ್ಯವಹಾರ. ಆದರೆ ಅಮೆರಿಕಕ್ಕೆ ಇರಾನ್ ಮೇಲೆ ಸಿಟ್ಟಿದೆ. ಅದು ಇತ್ತೀಚೆಗೆ ಕೆಲವು ಅಣ್ವಸ್ತ್ರ ಪ್ರಯೋಗಗಳನ್ನು ಮಾಡಿದೆ. ಇದರಿಂದ ಅಕ್ಕಪಕ್ಕದ ರಾಷ್ಟ್ರಗಳಿಗೆ ಅಪಾಯಕಾರಿ ಎಂದು ಘೋಷಿಸಿ, ಆರ್ಥಿಕ ದಿಗ್ಬಂಧನ ಕೂಡ ಹೇರಿದೆ. ಅದು ಅಲ್ಲಿಗೇ ನಿಂತಿಲ್ಲ. ಆ ದೇಶದ ಪ್ರಮುಖ ಆದಾಯ ಮೂಲ ತೈಲ. ಆ ದೇಶದಿಂದ ಯಾರಾದರೂ ತೈಲ ಆಮದು ಮಾಡಿಕೊಂಡರೆ ಅವರ ಜತೆಗೂ ನಮ್ಮ ಸ್ನೇಹ ಇರಲ್ಲ ಅಂತ ಸ್ವಲ್ಪ ಮಟ್ಟಿಗೆ ಬಲಿಷ್ಠರಿಗೆ ಮೆದುವಾಗಿಯೂ, ಏಯ್, ಹುಷಾರು ಎಂದು ದುರ್ಬಲರಿಗೂ ಹೆದರಿಸಿದೆ.
ಭಾರತ-ಚೀನಾಕ್ಕೆ ಧಮಕಿ ಹಾಕಿದ ಅಮೆರಿಕ
ಈ ಬೆದರಿಕೆ-ಧಮಕಿ ಹೊರತಾಗಿಯೂ ಹೇಗೋ ಅಮೆರಿಕವನ್ನು ಓಲೈಸಿ, ತೀರಾ ಇರಾನ್ ನನ್ನು ತೆಗೆದುಹಾಕದೆ ಭಾರತ-ಚೀನಾ ತೈಲ ಆಮದು ಮಾಡಿಕೊಳ್ಳಲು ಮುಂದಾದಾಗ ದೊಡ್ಡಣ್ಣನಿಗೆ ಸಿಟ್ಟು ಬಂದಿದೆ. ಮೊನ್ನೆ ಅಮೆರಿಕದಲ್ಲಿ ಭಾರತ-ಚೀನಾದಂಥ ದೇಶಗಳಿಗೆ ಯಾಕೆ ಸಬ್ಸಿಡಿ ಕೊಡಬೇಕು? ನಾವೂ ಅಭಿವೃದ್ಧಿ ಹೊಂದುತ್ತಿರುವ ದೇಶ. ಮೊದಲು ನಮಗೆ. ಆಮೇಲೆ ಉಳಿದವರಿಗೆ ಎಂದು ಟ್ರಂಪ್ ಸಿಕ್ಕಾಪಟ್ಟೆ ಕೂಗಾಡಿದ್ದು-ಚಪ್ಪಾಳೆ ಗಿಟ್ಟಿಸಿದ್ದು ಇದೇ ಹಿನ್ನೆಲೆಯಲ್ಲಿ. ಹಾಗೆ ನೋಡಿದರೆ ಭಾರತಕ್ಕಿಂತ ಚೀನಾ ಮೇಲೆ ಟ್ರಂಪ್ ಗೆ ಹೆಚ್ಚು ಸಿಟ್ಟು ಇರುವುದರಿಂದ ನಾಲ್ಕು ಮಾತು ಜಾಸ್ತಿಯೇ ಆ ದೇಶಕ್ಕೆ ಬೈಯ್ದಿದ್ದಾರೆ.
ಸೆ.10 ರಂದು ಭಾರತ ಬಂದ್, ಏನಿರುತ್ತೆ? ಏನಿರೋಲ್ಲ?
ಅಮೆರಿಕ ಡಾಲರ್ ನಲ್ಲೇ ಪಾವತಿಸಬೇಕು
ಆದರೆ, ಪೂರ್ಣ ಪ್ರಮಾಣದಲ್ಲಿ ಇರಾನ್ ನಿಂದ ತೈಲ ಖರೀದಿ ಸಾಧ್ಯವಿಲ್ಲ ಆದ್ದರಿಂದ ಒಪೆಕ್ ನ ಪಟ್ಟಿಯಲ್ಲಿರುವ ಬೇರೆ ಕಡೆಯಿಂದ ತೈಲ ಖರೀದಿ ಮಾಡುವುದು ಭಾರತಕ್ಕೆ ಅನಿವಾರ್ಯ. ಏಕೆಂದರೆ ಇಷ್ಟು ಜನಸಂಖ್ಯೆ ಇರುವ ದೇಶಕ್ಕೆ ದಿನವೊಂದಕ್ಕೆ ಎಷ್ಟು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೇಕಾಗಬಹುದು ಅನ್ನೋದನ್ನು ಊಹಿಸಿ. ಬೇರೆ ಕಡೆಯಿಂದ ಹಾಗೆ ತೈಲ ಖರೀದಿ ಮಾಡುವಾಗ ಅಮೆರಿಕದ ಡಾಲರ್ ನಲ್ಲೇ ಪಾವತಿ ಮಾಡಬೇಕಾಗುತ್ತದೆ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ನಿಯಮ. ಆಗ ಸಹಜವಾಗಿ ಡಾಲರ್ ಬಲಿಷ್ಠವಾಗುತ್ತದೆ. ಮೊದಲಿಗೆ ಇರಾನ್ ನಿಂದ ಖರೀದಿಸುವಾಗ ಅವರು ರುಪಾಯಿ ಪಡೆಯುತ್ತಿದ್ದರು. ಜತೆಗೆ ನಮ್ಮಿಂದ ಅನೇಕ ವಸ್ತುಗಳನ್ನು ಖರೀದಿಸುತ್ತಿದ್ದರು. ಅದರಿಂದ ಭಾರತದ ಆರ್ಥಿಕತೆ ಬಹಳ ಅನುಕೂಲವಿತ್ತು.
ಕೇಂದ್ರ-ರಾಜ್ಯ ಸರಕಾರದ ವ್ಯಾಟ್ ನಿಂದ ಸಿಕ್ಕಾಪಟ್ಟೆ ದುಬಾರಿಯಾಗಿದೆ
ಇನ್ನು ಭಾರತದಲ್ಲಿ ಪೆಟ್ರೋಲ್ ಉತ್ಪನ್ನ ಸಿದ್ಧವಾಗುವುದು ನಲವತ್ತು ರುಪಾಯಿ ಚಿಲ್ಲರೆಯೊಳಗೇ. ಅದಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರದ ವ್ಯಾಟ್ ಸೇರಿ ಎಂಬತ್ತೂ ಚಿಲ್ಲರೆ ಆಗುತ್ತದೆ. ಅಂದರೆ ಶೇಕಡಾ ತೊಂಬತ್ತೆಂಟಕ್ಕಿಂತ ಹೆಚ್ಚು ಬೀಳುತ್ತದೆ. ಈ ವರೆಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತಂದಿಲ್ಲ. ಆದ್ದರಿಂದಲೇ ಹೀಗಾಗುತ್ತಿದೆ. ಜನರ ಬಗ್ಗೆ ಕಾಳಜಿ ಇರುವ ರಾಜ್ಯ ಹಾಗೂ ಕೇಂದ್ರ ಸರಕಾರಗಳು ತಮ್ಮ ಆದಾಯವಾದ ಈ ವ್ಯಾಟ್ ಅನ್ನು ಬಿಟ್ಟುಕೊಟ್ಟು, ಜಿಎಸ್ ಟಿ ಒಳಗೆ ತಂದುಬಿಡಲಿ. ಆಗ ಈ ಹೊರೆ ತಾನಾಗಿಯೇ ಇಳಿದು ಹೋಗುತ್ತದೆ. ಇಡೀ ದೇಶದಲ್ಲಿ ಸಂಸದರು-ಶಾಸಕರು ಎಲ್ಲ ಸೇರಿ ತಮ್ಮ ವೇತನ-ಸವಲತ್ತಿನಲ್ಲಿ ಇಪ್ಪತ್ತು-ಇಪ್ಪತ್ತೈದು ಪರ್ಸೆಂಟ್ ಬಿಟ್ಟುಕೊಟ್ಟು ಸರಕಾರದ ಆದಾಯವನ್ನು ಸರಿತೂಗಿಸಲಿ. ಇದಕ್ಕೆ ನೀವೇನಂತೀರಿ?
ಭಾರತ ಬಂದ್ ಆದರೆ ಒಂದು ದಿನಕ್ಕೆ ಆಗುವ ನಷ್ಟ ಎಷ್ಟು?
ಭಾರತ ಬಂದ್ ಬೆಂಬಲಿಸುತ್ತಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಆಯಾ ರಾಜ್ಯ ಸರಕಾರಗಳು ಪೆಟ್ರೋಲ್-ಡೀಸೆಲ್ ಮೇಲೆ ವಿಧಿಸುತ್ತಿರುವ ಸೆಸ್ ಪ್ರಮಾಣವನ್ನು ಜನರ ಮುಂದೆ ತೆರೆದಿಡಬೇಕು. ಒಂದು ಲೀಟರ್ ಪೆಟ್ರೋಲ್ ಉತ್ಪಾದನೆಗೆ ಎಷ್ಟು ಖರ್ಚಾಗುತ್ತದೆ. ಅದರಿಂದ ಕೇಂದ್ರ ಸರಕಾರಕ್ಕೆ ಬರುವ ಆದಾಯ ಎಷ್ಟು ಎಂಬುದನ್ನು ಕೇಂದ್ರ ಸರಕಾರವೂ ಬಹಿರಂಗ ಪಡಿಸಲಿ. ಬೆಲೆ ಏರಿಕೆ ಎಂಬ ಬೃಹತ್ ಮರದ ಬೇರಿರುವುದು ಇಂಧನ ಬೆಲೆಯಲ್ಲಿ ಎಂಬುದನ್ನು ಒಪ್ಪುವುದಾದರೆ ದೇಶದ ಜನರ ಹಿತಕ್ಕಾಗಿ ಅದನ್ನು ಕಡಿಮೆ ಮಾಡಲಿ. ಒಂದು ದಿನ ಭಾರತದಂಥ ದೇಶದ ಆರ್ಥಿಕತೆ ಬಾಗಿಲು (ಬಂದ್) ಮುಚ್ಚಿದರೆ ಅದೆಷ್ಟು ಸಾವಿರ ಕೋಟಿ ನಷ್ಟ ಗೊತ್ತಾ? ಹಾಗಂತ ಪ್ರತಿಭಟನೆ ಮಾಡಬಾರದಾ ಅಂದರೆ, ಖಂಡಿತಾ ಪ್ರತಿಭಟಿಸಬೇಕು. ಆದರೆ ಈ ವಿಧಾನದಲ್ಲಿ ಅಲ್ಲ.