ನಿದ್ದೆಯಿಂದ ಏಳಬೇಕಾಗಿರುವುದು ಮೋದಿ ಸರಕಾರವೋ, ಕಾಂಗ್ರೆಸ್ ಪಕ್ಷವೋ?
ಬೆಂಗಳೂರು, ಮಾರ್ಚ್ 15 : ಇದು ಮೊದಲೇ ಎಲೆಕ್ಷನ್ ಸಮಯ. ವಿರೋಧಿಗಳನ್ನು ಕಾಲೆಳೆಯುವುದು, ಕೆಣಕುವುದು, ವ್ಯಂಗ್ಯವಾಡುವುದು, ವಿಡಂಬನೆ ಮಾಡುವುದು ಸರ್ವೇಸಾಮಾನ್ಯ. ಆದರೆ, ಏನೋ ಮಾಡಲು ಹೋಗಿ ನಗೆಪಾಟಲಿಗೀಡಾಗುವುದರಲ್ಲಿ ಯಾವ ಪಕ್ಷ ಸಿದ್ಧಹಸ್ತ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.
ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಬೇಕಾದ ಕರ್ತವ್ಯ ಆಯಾ ರಾಜಕೀಯ ಪಕ್ಷಗಳ ಸೋಷಿಯಲ್ ಮೀಡಿಯಾ ಮೇಲಿರುತ್ತದೆ. ಸ್ವಲ್ಪ ಎಡವಟ್ಟಾದರೂ ಆಯಾ ಪಕ್ಷದ ಇಮೇಜಿಗೆ ಧಕ್ಕೆಯಾಗುತ್ತದೆ ಅಥವಾ ಆಯಾ ಪಕ್ಷದ ನಾಯಕನ ಮೀಸೆ ಮಣ್ಣುಪಾಲಾಗಿರುತ್ತದೆ. ಮೀಸೆಯೇ ಇಲ್ಲದಿದ್ದರೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.
ಅಂಥದೇ ಒಂದು ಯಡವಟ್ಟನ್ನು ಕಾಂಗ್ರೆಸ್ ಪಕ್ಷ ಇಂದು ಮಾಡಿಕೊಂಡಿದೆ. ಈ ಎಡವಟ್ಟನ್ನು ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಹೆಡ್ ರಮ್ಯಾ ಅವರು ಮಾಡಿಕೊಂಡಿದ್ದಾರೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ.
ಆ ಟ್ವೀಟ್ ಏನು, ಅದಕ್ಕೆ ಏನೇನು ಪ್ರತಿಕ್ರಿಯೆಗಳು ಬರುತ್ತಿವೆ, ಯಾಕೆ ಬರುತ್ತಿವೆ ಎಂಬುದನ್ನು ಮುಂದೆ ಓದಿರಿ. ಚುನಾವಣೆಯೆಂದರೇನೇ ತಮಾಷೆ, ಇಲ್ಲಿ ಇಂಥ ಹಲವಾರು ಘಟನೆಗಳು ಘಟಿಸುತ್ತಿರುತ್ತವೆ. ಅಂಥದರಲ್ಲಿ ಇದೂ ಒಂದು. ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ.
| Array |
ದಯವಿಟ್ಟು ಶಬ್ದ ಮಾಡಬೇಡಿ
ಕಾರಣವಿಷ್ಟೇ. ಅವರು ಕಾಂಗ್ರೆಸ್ ಮತ್ತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ಲಾರಿಯ ಚಿತ್ರವಿರುವ ಟ್ವೀಟ್ ಮಾಡಿದ್ದಾರೆ. ಆ ಚಿತ್ರದ ಬುಡದಲ್ಲಿ ಹೀಗೆ ಬರೆಯಲಾಗಿದೆ, "ದಯವಿಟ್ಟು ಶಬ್ದ ಮಾಡಬೇಡಿ, ಮೋದಿ ಸರಕಾರ ನಿದ್ದೆ ಮಾಡುತ್ತಿದೆ!" ಅದಕ್ಕೆ "ನೀವು ಎಚ್ಚರವಿದ್ದರೆ ಇದು ನಿಮಗಾಗಿ, ದುಃಖದ ಸಂಗತಿಯೆಂದರೆ, ಮೋದಿಯವರು ಇದನ್ನು ಓದುವುದಿಲ್ಲ!" ಜೊತೆಗೆ #WorldSleepDay ಅಂತ ಕೂಡ ಹ್ಯಾಶ್ ಟ್ಯಾಗ್ ಹಾಕಿದ್ದಾರೆ.

ದಾಂಡಿ ಚಳವಳಿಯ ವಾರ್ಷಿಕೋತ್ಸವ
ರಮ್ಯಾ ಅವರ ಹಾಸ್ಯಪ್ರಜ್ಞೆಗೆ ಒಂದು ನಮೋನಮಃ. ಕೆಲ ದಿನಗಳ ಹಿಂದೆ ದಾಂಡಿ ಚಳವಳಿಯ ವಾರ್ಷಿಕೋತ್ಸವದ ದಿನ (ಫೆಬ್ರವರಿ 12)ರಂದು ಈ ಬಗ್ಗೆ ಕಾಮೆಂಟ್ ಮಾಡುತ್ತ, ಆರೆಸ್ಸೆಸ್ಸಿಗೆ ದಂಡ ಕಂಡರೆ ಭಯ, ಅದಕ್ಕೇ ದಾಂಡಿ ಚಳವಳಿಯಲ್ಲಿ ಭಾಗವಹಿಸಿರಲಿಲ್ಲ ಎಂದು ತಮಾಷೆಯ ಟ್ವೀಟ್ ಮಾಡಿ ತಮ್ಮ ಜಾಣ್ಮೆಯನ್ನು ಮೆರೆದಿದ್ದರು. ನಂತರ ಮೋದಿ ಬೆಂಬಲಿಗರು 'ಮೂರ್ಖರು' ಎಂದು ಹೇಳಿ ಪ್ರತಿಬಾಣಗಳನ್ನು ಎದುರಿಸಿದ್ದರು.

ಫೋಟೋಶಾಪ್ ನಲ್ಲಿ ಸೃಷ್ಟಿಸಿದ್ದು
ಆದರೆ, ಈಗ ಟ್ವೀಟ್ ಮಾಡಿರುವ ಚಿತ್ರವಿದೆಯಲ್ಲ, ಅದು ನಕಲಿ ಅಥವಾ ಫೇಕ್ ಅಥವಾ ಫೋಟೋಶಾಪ್ ನಲ್ಲಿ ಕ್ರಿಯೇಟ್ ಮಾಡಿದ್ದು ಎಂದು ಶಾಲಾಬಾಲಕ ಕೂಡ ನಿಖರವಾಗಿ ಹೇಳಬಲ್ಲ. ಇದು ಈಗ ಸೃಷ್ಟಿಸಿದ್ದೂ ಅಲ್ಲ. ಸರಿಯಾಗಿ ಒಂದು ವರ್ಷದ ಹಿಂದೆಯೇ ಮಧು ಕಿಶ್ವರ್ ಅವರು ಫೋಟೋಶಾಪ್ ಬಳಸಿ ಸೃಷ್ಟಿಸಿದ್ದ ಈ ಚಿತ್ರವನ್ನು ಟ್ವೀಟ್ ಮಾಡಿ ಟ್ವಿಟ್ಟಿಗರ ಆಕ್ರೋಶ ಎದುರಿಸಿದ್ದರು. ಅಲ್ಲದೆ, ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಕೂಡ ಇದೇ ಫೋಟೋಶಾಪ್ ಚಿತ್ರ ಬಳಸಿ ಮಂಗಳಾರತಿ ಮಾಡಿಸಿಕೊಂಡಿದ್ದರು. ಆಗ, ನಿಜವಾದ ಚಿತ್ರ ಯಾವುದು ಎಂದು ಕೆಲವರು ಆ ಚಿತ್ರವನ್ನು ಟ್ವೀಟ್ ಕೂಡ ಮಾಡಿದ್ದರು.

ಮೇಡಂಜೀ, ನಿಜವಾದ ಚಿತ್ರ ಇಲ್ಲಿದೆ
ಮೇಡಂ, ಇಂದು #WorldConsumerRightsDay. ಅದರಲ್ಲಿ #ಕನ್ನಡ_ಗ್ರಾಹಕದಿನ ಎಂಬ ಹ್ಯಾಶ್ ಟ್ಯಾಗ್ ಇಂದು ಇಡೀದಿನ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ. ಅದರ ಬಗೆಯಾದರೂ ಟ್ವೀಟ್ ಮಾಡಬಹುದಿಲ್ಲತ್ತ ಎಂದು ಕೆಲವರು ಹೇಳಿದ್ದರೆ, ಕೆಲವರು ನೀವು #WorldPhotoshopDay ಆಚರಿಸುತ್ತಿದ್ದೀರಾ? ಎಂದು ಕೆಣಕಿದ್ದಾರೆ. ಮೇಡಂಜೀ, ನಿಜವಾದ ಚಿತ್ರ ಇಲ್ಲಿದೆ, ಸ್ವಲ್ಪ ಸಂಶೋಧನೆ ಮಾಡಿ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಹೆಡ್ ಆಗಿ ಗೂಗಲ್ ನಲ್ಲಿ ನಿಜವಾದ ಫೋಟೋವನ್ನು ಹುಡುಕಿದ್ದರೆ ಸಿಕ್ಕಿರುತ್ತಿತ್ತು. ಹೀಗೆ ಒಂದು ವರ್ಷದ ಹಿಂದೆಯೇ ಚರ್ಚಿತವಾಗಿ ಕಸದಬುಟ್ಟಿಗೆ ಸೇರಿದ ಫೋಟೋವನ್ನು ಮತ್ತೆ ಟ್ವೀಟ್ ಮಾಡಿ ಮಂಗಳಾರತಿ ಮಾಡಿಸಿಕೊಳ್ಳುವ ಅಗತ್ಯವೇನಿತ್ತು?

ಬಣ್ಣಬಣ್ಣದ ಅಕ್ಷರಗಳಲ್ಲಿ ಸ್ಲೋಗನ್
ಲಾರಿ ಅಥವಾ ಆಟೋಗಳ ಮೇಲೆ ಬಣ್ಣಬಣ್ಣದ ಅಕ್ಷರಗಳಲ್ಲಿ ತಮಗೆ ಬೇಕಾದ ಸ್ಲೋಗನ್ ಗಳನ್ನು ಬರೆಯಿಸಿಕೊಳ್ಳುವುದು ಸಾಮಾನ್ಯ. ಮೇಲೆ ಹೇಳಿದಂತೆ ನರೇಂದ್ರ ವಿರೋಧಿಗಳು ಬರೆಯಿಸಿಕೊಂಡಿದ್ದರೂ ಅದಕ್ಕೆ ಅಚ್ಚರಿಪಡಬೇಕಿಲ್ಲ. ಏಕೆಂದರೆ, ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಹೀಗೆ ಬರೆಯಿಸಿಕೊಂಡರೆ ಯಾರೂ ಕೇಸನ್ನೂ ಹಾಕುವುದಿಲ್ಲ. ಆದರೆ, ಫೇಕ್ ಚಿತ್ರವನ್ನೇ ನಿಜ ಅಂದುಕೊಂಡು ವಿರೋಧಿಗಳ ಕಾಲೆಳೆಯುವುದು, ಸ್ವತಃ ನಗೆಪಾಟಲಿಗೀಡಾಗುವುದರ ಬಗ್ಗೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಚಿಂತಿಸಬೇಕು.











Click it and Unblock the Notifications