1978ರಲ್ಲಿ ಶರದ್ ಪವಾರ್ ಮಾಡಿದ್ದೇನು?: 'ಕರ್ಮ' ವಾಪಸ್!
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಸತತ ಎರಡನೆಯ ಬಾರಿಗೆ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅಧಿಕಾರ ಸ್ವೀಕರಿಸಿದ್ದಾರೆ. ಮೊದಲ ಬಾರಿ ಅವರಿಗೆ ಮುಖ್ಯಮಂತ್ರಿಯಾಗಲು ನೆರವಾಗಿದ್ದು, ಶಿವಸೇನಾದ ಬೆಂಬಲ. ಎರಡನೆಯ ಅವಧಿಯಲ್ಲಿ ಅವರಿಗೆ ಎನ್ಸಿಪಿಯ ಕೆಲವು ಶಾಸಕರ ಬೆಂಬಲ ದೊರಕಿದೆ. ತಮಗೆ ತಿಳಿಯದಂತೆ ಅಜಿತ್ ಪವಾರ್ ಬಿಜೆಪಿ ಜತೆ ಕೈಜೋಡಿಸಿದ್ದಾರೆ. ಅವರ ನಡೆಗೆ ತಮ್ಮ ಸಹಮತವಿಲ್ಲ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಆದರೆ ರಾಜಕೀಯ ಇತಿಹಾಸವನ್ನು ಕೆದಕುವ ಬಿಜೆಪಿ ಬೆಂಬಲಿಗರು, ಶರದ್ ಪವಾರ್ ಅವರು ಮಾಡಿದ ರಾಜಕಾರಣದ ಕರ್ಮ 41 ವರ್ಷಗಳ ಬಳಿಕ ಅವರಿಗೆ ತಿರುಗೇಟು ನೀಡಿದೆ ಎಂದು ಹೇಳಿದ್ದಾರೆ. ನಾಲ್ಕು ದಶಕಗಳ ಹಿಂದೆ ಇದೇ ಶರದ್ ಪವಾರ್, ಕಾಂಗ್ರೆಸ್ನ ಮೈತ್ರಿಕೂಟಕ್ಕೆ ಕೈಕೊಟ್ಟು ಜನಸಂಘ (ಈಗಿನ ಬಿಜೆಪಿ) ಜತೆ ಕೈಜೋಡಿಸಿ ಸಮ್ಮಿಶ್ರ ಸರ್ಕಾರ ರಚಿಸಿದ್ದಲ್ಲದೆ, ಮುಖ್ಯಮಂತ್ರಿಯೂ ಆಗಿದ್ದರು.
ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ತ್ರಿಪಕ್ಷೀಯ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದೇ ಹೇಳುತ್ತಿರುವಾಗ ಅಜಿತ್ ಪವಾರ್ ನೇತೃತ್ವದಲ್ಲಿ ಎನ್ಸಿಪಿಯ ಒಂದು ತಂಡ ಬಿಜೆಪಿ ಜತೆ ರಾತ್ರೋರಾತ್ರಿ ಸೇರಿಕೊಂಡು ಬೆಳಕು ಹರಿಯುವ ವೇಳೆಗೆ ಪ್ರಮಾಣವಚನ ಸ್ವೀಕರಿಸಿರುವುದು ಸಣ್ಣ ಬೆಳವಣಿಗೆಯೇನಲ್ಲ. ಕ್ರಿಕೆಟ್ನಲ್ಲಿ ಕೊನೆಯ ಬಾಲ್ನಲ್ಲಿ ಏನು ಬೇಕಾದರೂ ಆಗಬಹುದು ಎನ್ನುವಂತೆಯೇ ರಾಜಕಾರಣದಲ್ಲಿ ಯಾವ ಗಳಿಗೆಯಲ್ಲಿ ಯಾವ ತಿರುವು ಬೇಕಾದರೂ ಎದುರಾಗಬಹುದು ಎಂದು ಮಹಾರಾಷ್ಟ್ರ ಬೆಳವಣಿಗೆಯನ್ನು ವಿಶ್ಲೇಷಿಸಲಾಗುತ್ತಿದೆ.

ಅಜಿತ್ ಪವಾರ್ ತಿರುಗುಬಾಣ
1978ರಲ್ಲಿ ಶರದ್ ಪವಾರ್ ಅವರು ವಸಂತ್ದಾದಾ ಪಾಟೀಲ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೇರಿದ್ದರು. ಈ ಮೂಲಕ ಮಹಾರಾಷ್ಟ್ರದ ಅತ್ಯಂತ ಕಿರಿಯ ಮುಖ್ಯಮಂತ್ರಿ ಎನಿಸಿಕೊಂಡಿದ್ದರು. ನಾಲ್ಕು ದಶಕಗಳ ಬಳಿಕ ಅವರ ಅಣ್ಣನ ಮಗ ಅಜಿತ್ ಪವಾರ್ ಅದೇ ಬಾಣವನ್ನು ಅವರತ್ತ ತಿರುಗಿಸಿದ್ದಾರೆ. ಅಜಿತ್ ಪವಾರ್ ಈ ನಡೆ ತೆಗೆದುಕೊಳ್ಳಬಹುದು ಎಂದು ಅವರಿಗೆ ಇಂತಹ ರಾಜಕೀಯ ತಂತ್ರಗಳನ್ನು ಕಲಿಸಿಕೊಟ್ಟ ಸ್ವತಃ ಚಿಕ್ಕಪ್ಪ ಶರದ್ ಪವಾರ್ ಕೂಡ ಊಹಿಸಿರಲಿಲ್ಲ.

ಅಜಿತ್ ಪವಾರ್ ಡಿಸಿಎಂ
ತ್ರಿಪಕ್ಷೀಯ ಮೈತ್ರಿ ಸರ್ಕಾರದ ಬಹುತೇಕ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅಜಿತ್ ಪವಾರ್, ಶುಕ್ರವಾರ ಸಂಜೆ ಶರದ್ ಪವಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಆಗಲೇ ಶಿವಸೇನಾ ಜತೆ ಸೇರಿ ಸರ್ಕಾರ ರಚಿಸಲು ಎನ್ಸಿಪಿ ಮತ್ತು ಕಾಂಗ್ರೆಸ್ ಒಪ್ಪಿಕೊಂಡಿದ್ದವು. ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಅಲ್ಲಿ ಸರ್ಕಾರ ರಚನೆಯಾಗುವುದರಲ್ಲಿತ್ತು. ಎರಡು ಡಿಸಿಎಂ ಹುದ್ದೆಗಳ ಪೈಕಿ ಒಂದು ಅಜಿತ್ ಪವಾರ್ಗೆ ದೊರಕಲಿದೆ ಎನ್ನುವುದು ಖಾತ್ರಿಯಾಗಿತ್ತು.

ಕಾಂಗ್ರೆಸ್ ವಿಭಜನೆ
1977ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜನತಾ ಪಕ್ಷದ ಒಕ್ಕೂಟದೆದುರು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸೋಲು ಅನುಭವಿಸಿತ್ತು. ಮಹಾರಾಷ್ಟ್ರದಲ್ಲಿ ಅಧಿಕ ಸಂಖ್ಯೆಯಲ್ಲಿ ಸೀಟುಗಳನ್ನು ಕಳೆದುಕೊಂಡ ಕಾರಣಕ್ಕಾಗಿ ಅದರ ಹೊಣೆ ಹೊತ್ತು ಮುಖ್ಯಮಂತ್ರಿ ಶಂಕರ್ರಾವ್ ಚವಾಣ್ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ವಸಂತ್ದಾದ ಪಾಟೀಲ್ ಅವರನ್ನು ನೇಮಿಸಲಾಗಿತ್ತು. ಒಂದು ವರ್ಷದಲ್ಲಿ ಕಾಂಗ್ರೆಸ್ನಲ್ಲಿ ಒಡಕು ಮೂಡಿತು. ಕಾಂಗ್ರೆಸ್ (ಯು) ಮತ್ತು ಕಾಂಗ್ರೆಸ್ (ಐ) ಎಂದು ಹೋಳಾಯಿತು. ಆಗ ಶರದ್ ಪವಾರ್ ಕಾಂಗ್ರೆಸ್ (ಯು) ಸೇರ್ಪಡೆಗೊಂಡರು.

ಜನತಾಪಕ್ಷದೊಂದಿಗೆ ಮೈತ್ರಿ-ಪವಾರ್ ಸಿಎಂ
1978ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ (ಯು) ಮತ್ತು ಕಾಂಗ್ರೆಸ್ (ಐ) ಪಕ್ಷಗಳು ವಸಂತ್ದಾದ ಪಾಟೀಲ್ ನೇತೃತ್ವದಲ್ಲಿ ಮೈತ್ರಿ ಸರ್ಕಾರ ರಚಿಸಿದವು. ಆಗ ಜನತಾಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರ್ಕಾರ ರಚಿಸಲು ಅಗತ್ಯ ಬಹುಮತವಿರಲಿಲ್ಲ. ಪಾಟೀಲ್ ಸರ್ಕಾರದಲ್ಲಿ ಸಚಿವರಾಗಿದ್ದ ಶರದ್ ಪವಾರ್, 1978ರ ಜುಲೈನಲ್ಲಿ ಕಾಂಗ್ರೆಸ್ (ಯು) ಪಕ್ಷದಿಂದ ಹೊರಬಂದು ಜನತಾಪಾರ್ಟಿಯೊಂದಿಗೆ ಸೇರಿ ಸರ್ಕಾರ ರಚಿಸಿದರು. ಇದರಿಂದ ಕಾಂಗ್ರೆಸ್ನ ಎರಡು ಬಣಗಳ ಮೈತ್ರಿ ಸರ್ಕಾರ ಪತನಗೊಂಡಿತು. 38 ವರ್ಷದ ಪವಾರ್, ಮಹಾರಾಷ್ಟ್ರದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾದರು.

ಸರ್ಕಾರ ಕಿತ್ತೊಗೆದ ಇಂದಿರಾ ಗಾಂಧಿ
1980ರಲ್ಲಿ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಬಂದರು. ಮಹಾರಾಷ್ಟ್ರದಲ್ಲಿದ್ದ ಪ್ರೋಗ್ರೆಸಿವ್ ಡೆಮಾಕ್ರಟಿಕ್ ಫ್ರಂಟ್ ಸರ್ಕಾರವನ್ನು ಕಿತ್ತೊಗೆದರು. ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿತು. ಆಗ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಅಧಿಕಾರದಲ್ಲಿದ್ದದ್ದು 580 ದಿನ ಮಾತ್ರ. ಕಾಂಗ್ರೆಸ್ನಿಂದ ಇನ್ನೊಂದು ಭಾಗವಾಗಿದ್ದ ಕಾಂಗ್ರೆಸ್ (ಎಸ್) ಪಕ್ಷಕ್ಕೆ ಸೇರಿಕೊಂಡ ಪವಾರ್ ಅದರ ಅಧ್ಯಕ್ಷರೂ ಆದರು. 1984ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. 1985ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ರಾಜ್ಯ ರಾಜಕೀಯಕ್ಕೆ ಮರಳಿದರು. ಅವರು ಇಂದಿರಾ ಕಾಂಗ್ರೆಸ್ಗೆ ವಾಪಸಾಗಲು 1986ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅನುಮತಿ ನೀಡಿದರು.

ಎನ್ಸಿಪಿ ಸ್ಥಾಪಿಸಿದ ಪವಾರ್
1988ರಲ್ಲಿ ಶರದ್ ಪವಾರ್ ಪ್ರಧಾನಿ ರಾಜೀವ್ ಗಾಂಧಿ ಬೆಂಬಲದ ಮೂಲಕ ಮತ್ತೆ ಮುಖ್ಯಮಂತ್ರಿಯಾದರು. 1990ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳ ಬೆಂಬಲದೊಂದಿಗೆ ಪುನಃ ತ್ತೆ ಮುಖ್ಯಮಂತ್ರಿಯಾದರು. 1999ರಲ್ಲಿ ಲೋಕಸಭೆ ವಿಸರ್ಜನೆಯಾದಾಗ ವಿದೇಶಿ ಮೂಲದ ಸೋನಿಯಾ ಗಾಂಧಿ ಪ್ರಧಾನಿಯಾಗಬಾರದು, ಭಾರತೀಯರೇ ಪ್ರಧಾನಿಯಾಗಬೇಕು ಎಂದು ಪಟ್ಟು ಹಿಡಿದ ಕಾಂಗ್ರೆಸ್ ಮುಖಂಡರಲ್ಲಿ ಶರದ್ ಪವಾರ್ ಒಬ್ಬರು. ಜೂನ್ನಲ್ಲಿ ಶರದ್ ಪವಾರ್ ಮತ್ತು ಪಿಎ ಸಂಗ್ಮಾ ಅವರನ್ನು ಕಾಂಗ್ರೆಸ್ ಉಚ್ಚಾಟನೆ ಮಾಡಿತು. ನಂತರ ಇಬ್ಬರೂ ಸೇರಿ ಎನ್ಸಿಪಿ ಸ್ಥಾಪನೆ ಮಾಡಿದ್ದರು.












Click it and Unblock the Notifications