ಷರೀಫ್ ಮತ್ತು ಅಂಬರೀಷ್ ಸಾವಿನಿಂದ ಕಲಿಯಬೇಕಾದ ಪಾಠವೇನು?
Recommended Video

ಕೆಲ ದಿನಗಳ ಹಿಂದೆ ತೀರಿಕೊಂಡ ಹಿರಿಯ ನಾಯಕ ಜಾಫರ್ ಷರೀಫ್ ಹಾಗೂ ಖ್ಯಾತ ನಟ, ರಾಜಕಾರಣಿ ಅಂಬರೀಷ್ ಅವರ ನಿಧನದ ವಿಷಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳು ನಡೆಯುತ್ತಿವೆ. ಹೊಗಳಿಕೆಯ ಮಹಾಪೂರವೇ ಹರಿಯುತ್ತಿದೆ.
ಅದು ತಪ್ಪೇನೂ ಅಲ್ಲ. ಆದರೆ ಇಂತಹ ಹೊಗಳಿಕೆಗಳಿಗಿಂತ ಮುಖ್ಯವಾಗಿ ಅವರ ಬದುಕು ನಮಗೆ ಕಲಿಸಬೇಕಾದ ಪಾಠವನ್ನು ಗಮನಿಸುವುದೇ ಇಂದಿನ ತುರ್ತು ಅಗತ್ಯ. ಉದಾಹರಣೆಗೆ ಜಾಫರ್ ಷರೀಫ್ ಅವರನ್ನೇ ತೆಗೆದುಕೊಳ್ಳಿ.
ರಾಜಕಾರಣದಲ್ಲಿ ತಳಹಂತದಿಂದ ಹಿಡಿದು ದಿಲ್ಲಿಯವರೆಗೆ ತಲುಪಿದ ಜಾಫರ್ ಷರೀಫ್, ಇವತ್ತು ನಮಗೆ ಮಾರ್ಗದರ್ಶಿಯಾಗಬೇಕಿರುವುದು ರಾಷ್ಟ್ರ ಮಟ್ಟದಲ್ಲಿ ಅಧಿಕಾರ ಅಂತ ಹಿಡಿದಾಗ ರಾಜ್ಯದ ಹಿತವನ್ನು ಹೇಗೆ ಕಾಪಾಡಬೇಕು ಎನ್ನುವ ವಿಷಯದಲ್ಲಿ.
ಜಾಫರ್ ಷರೀಫ್ ಅವರು ಕೇಂದ್ರದ ರೈಲ್ವೇ ಸಚಿವರಾದ ನಂತರ ಕರ್ನಾಟಕದ ಸಮಗ್ರ ರೈಲ್ವೇ ವ್ಯವಸ್ಥೆ ಸುಧಾರಣೆಯ ಪಥದತ್ತ ಹೆಜ್ಜೆ ಇರಿಸಿತು. ರೈಲುಗಳು ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ವ್ಯವಸ್ಥೆಗೆ ಬದಲಾಗಿ ದೊಡ್ಡ ಮಟ್ಟದ ಸಂಪರ್ಕಕ್ರಾಂತಿಯೇ ನಡೆಯಿತು.
ಇದಾದ ಇಪ್ಪತ್ತು ವರ್ಷಗಳ ನಂತರ ತಿರುಗಿ ನೋಡಿದರೆ ಕರ್ನಾಟಕದ ರೈಲ್ವೇ ವ್ಯವಸ್ಥೆಗೆ ಜಾಫರ್ ಷರೀಫ್ ಅವರು ಕೊಟ್ಟ ಕೊಡುಗೆಗಳು ಪುನರಾವರ್ತನೆಯಾಗಲಿಲ್ಲ. ಅವತ್ತು ನಾವು ಬಯಸಿದ್ದಕ್ಕಿಂತ ಹೆಚ್ಚಿನದನ್ನು ಜಾಫರ್ ಷರೀಫ್ ಕೊಟ್ಟರು. ಆದರೆ ಇತ್ತೀಚಿನ ವರ್ಷಗಳಲ್ಲಿ ನಾವು ಕೇಳಿದ್ದಕ್ಕಿಂತ ಕಡಿಮೆ ಅನುಕೂಲಗಳು ಲಭ್ಯವಾಗುತ್ತಿವೆ.
ಯಥಾ ಪ್ರಕಾರ, ಕೇಂದ್ರದ ಈ ಧೋರಣೆಯ ಬಗ್ಗೆ ಕರ್ನಾಟಕದಲ್ಲಿರುವ ರಾಷ್ಟ್ರೀಯ ಪಕ್ಷಗಳು ವಿಭಿನ್ನ ನೆಲೆಯಲ್ಲಿ ಪ್ರತಿಕ್ರಿಯೆ ನೀಡುತ್ತವೆ. ಕೇಂದ್ರದಲ್ಲಿ ಯಾರು ಅಧಿಕಾರದಲ್ಲಿದ್ದಾರೋ ಅದರ ಪರವಾಗಿ ಇಲ್ಲಿರುವ ಆ ಪಕ್ಷದ ನಾಯಕರು ಮಾತಾಡುತ್ತಾರೆ.
ಅದೇ ರೀತಿ ಕೇಂದ್ರದಲ್ಲಿರುವ ಸರ್ಕಾರಕ್ಕೆ ವಿರೋಧವಾಗಿರುವ ಪಕ್ಷ ಇಲ್ಲಿ ಅಧಿಕಾರದಲ್ಲಿದ್ದರೆ, ನಾವು ಕೇಳಿದ್ದೇನು? ಅವರು ಕೊಟ್ಟಿದ್ದೇನು? ಅಂತ ವಿರೋಧವನ್ನು ದಾಖಲಿಸಿ ಮೌನವಾಗುತ್ತದೆ. ಹಾಗೆ ನೋಡಿದರೆ ಇದು ಪ್ರತಿ ವರ್ಷದ ಸಂಪ್ರದಾಯವೇ ಆಗಿ ಹೋಗಿದೆ.

ಕರ್ನಾಟಕದ ಸಂಸದರು ಒಗ್ಗಟ್ಟಿನಿಂದ ಹೋರಾಡಿಲ್ಲ
ಇದೇ ರೀತಿ ಕರ್ನಾಟಕದ ನೆಲ, ಜಲ, ಅಭಿವೃದ್ಧಿಯ ವಿಷಯ ಬಂದಾಗ ಇರಬಹುದು ಕರ್ನಾಟಕದ ರಾಜಕಾರಣಿಗಳು ಒಗ್ಗಟ್ಟಿನ ಮಂತ್ರವನ್ನು ಜಪಿಸಿಲ್ಲ. ಸಿದ್ಧರಾಮಯ್ಯ ಅವರ ಕಾಲದಲ್ಲಿ ಕಾವೇರಿ ನದಿ ನೀರಿನ ವಿವಾದ ಭುಗಿಲೆದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಹೋರಾಡಿದರೆ ಬಿಜೆಪಿ ದೂರವೇ ನಿಂತುಕೊಂಡಿತು.
ಆಗಬೇಕಾದ ಹಾನಿಯೆಲ್ಲ ಆದ ನಂತರ, ಅದರಲ್ಲೂ ದೇವೇಗೌಡರು ಉಪವಾಸ ಸತ್ಯಾಗ್ರಹ ಮಾಡಿದ ನಂತರ ಕೇಂದ್ರದಲ್ಲಿ ಸಚಿವರಾಗಿದ್ದ ಅನಂತಕುಮಾರ್ ಒಂದು ಮಟ್ಟದಲ್ಲಿ ನೆರವಿಗೆ ಬಂದರು. ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು.
ಮಹದಾಯಿ ನದಿ ನೀರಿನ ವಿಷಯ ಬಂದಾಗಲೂ ಅಷ್ಟೇ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ರಾಜಕಾರಣ ಮಾಡಿದರೇ ಹೊರತು ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಲಿಲ್ಲ. ಹೀಗಾಗಿ ಒಂದು ಹಂತದಲ್ಲಿ ಇತ್ಯರ್ಥವಾಗುವಂತೆ ಕಂಡಿದ್ದ ಮಹದಾಯಿ ನದಿ ನೀರಿನ ವಿವಾದ ಬಹುಕಾಲ ಮುಂದುವರಿಯಿತು. ಈಗ ಅದಕ್ಕೊಂದು ತಾತ್ಕಾಲಿಕ ಪರಿಹಾರ ಸಿಕ್ಕಿದೆಯಾದರೂ ಅದು ಕರ್ನಾಟಕ ಬಯಸಿದ ಸ್ವರೂಪದಲ್ಲಿಲ್ಲ.

ಅಭಿವೃದ್ಧಿಗಿಂತ ರಾಜಕೀಯ ಲಾಭ ಮುಖ್ಯ
ಇದನ್ನೆಲ್ಲ ಏಕೆ ಗಮನಿಸಬೇಕು ಎಂದರೆ, ಕರ್ನಾಟಕದಿಂದ ಸಂಸದರಾಗಿ ಆಯ್ಕೆಯಾಗಿ ಹೋದವರು ಇಂತಹ ವಿಷಯಗಳಲ್ಲಿ ಏಕ ಅಭಿಪ್ರಾಯ ಹೊಂದಿರಬೇಕು ಮತ್ತು ಕೇಂದ್ರ ಸರ್ಕಾರದ ಮುಂದೆ ಬಾಕಿ ಉಳಿದಿರುವ ರಾಜ್ಯದ ವಿವಿಧ ಪ್ರಸ್ತಾವಗಳನ್ನು ಬಗೆಹರಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.
ಆದರೆ ಕರ್ನಾಟಕದ ವಿವಿಧ ರಾಜಕೀಯ ಪಕ್ಷಗಳಿಂದ ಆಯ್ಕೆಯಾಗಿ ಹೋದ ಸಂಸದರು, ಅಂತಿಮವಾಗಿ ಒಬ್ಬರು ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಾರೆಯೇ ಹೊರತು ಬೇರೇನೂ ಮಾಡುವುದಿಲ್ಲ. ಅರ್ಥಾತ್, ಅವರಿಗೆ ಅಭಿವೃದ್ಧಿಗಿಂತ ಮುಖ್ಯವಾಗಿ ರಾಜಕೀಯ ಲಾಭ ಮುಖ್ಯ.
ಇವತ್ತು ಕೇಂದ್ರದ ಮುಂದೆ ರಾಜ್ಯ ಸರ್ಕಾರ ಕಳಿಸಿದ ನೂರಾರು ಪ್ರಪೋಸಲ್ಲುಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಸಂಸದರಾಗಿ ಆಯ್ಕೆಯಾಗಿ ಹೋದವರ ಕರ್ತವ್ಯ ಏನು? ಅದೇ ರೀತಿ ರಾಜ್ಯದಿಂದ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾದವರ ನಿಜವಾದ ಕೆಲಸವೇನು?

ಷರೀಫ್, ಅನಂತ್ ಮತ್ತು ದೇವೇಗೌಡ
ಇದ್ದುದರಲ್ಲಿ ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ಕರ್ನಾಟಕದ ಹಿತ ರಕ್ಷಿಸಲು ಜಾಫರ್ ಷರೀಫ್ ಅವರಂತೆಯೇ ಹೋರಾಡಿದವರು ಬೆರಳೆಣಿಕೆಯಷ್ಟು. ದೇವೇಗೌಡರು ಪ್ರಧಾನಿಯಾದಾಗ ಕರ್ನಾಟಕದ ಅಭಿವೃದ್ಧಿಗೆ ಹಲವು ಕಾಣಿಕೆ ನೀಡಿದರು. ಅವರನ್ನು ಹೊರತುಪಡಿಸಿದರೆ ಇತ್ತೀಚೆಗೆ ನಿಧನರಾದ ಅನಂತಕುಮಾರ್ ಅವರು ಒಂದಷ್ಟು ಕೆಲಸ ಮಾಡಿದರು.
ಉಳಿದಂತೆ ಬಹುತೇಕರ ಸಾಧನೆ ಶೂನ್ಯ. ಸಂಸದರಾಗಿ ಹೋಗಿ ನಮ್ಮ ನೆಲಕ್ಕೆ ನಾವೇನಾದರೂ ಕೊಡುಗೆ ಸಲ್ಲಿಸಿದ್ದೇವೆ ಎಂಬ ಆತ್ಮತೃಪ್ತಿ ಇರದೆ ಹೋದರೆ ಅಂಥವರು ತಮ್ಮ ವೈಯಕ್ತಿಕ ಹಿತಾಸಕ್ತಿಗಳ ರಕ್ಷಣೆಗೆ ದಿಲ್ಲಿಯಲ್ಲಿದ್ದಾರೆ ಎಂದರ್ಥವೇ ಹೊರತು ಬೇರೇನೂ ಅಲ್ಲ. ಇದೀಗ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಅಂಥವರು ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು. ಆದರೆ, ಆತ್ಮಸಾಕ್ಷಿ ಇದ್ದವರು ಆತ್ಮವಿಮರ್ಶೆ ಮಾಡಿಕೊಳ್ಳುತ್ತಾರೆ. ಇಲ್ಲದವರು?

ಏನೇ ಬರಲಿ ಸಂಸದರು ಒಗ್ಗಟ್ಟು ಪ್ರದರ್ಶಿಸಬೇಕು
ಜಾಫರ್ ಷರೀಫ್ ಅವರ ಸಾವಿನ ಹಿನ್ನೆಲೆಯಲ್ಲಿ ನಾವು ಕಲಿಯಬೇಕಾದ ಪಾಠ ಇದು. ನೆರೆಯ ತಮಿಳ್ನಾಡೇ ಇರಬಹುದು, ಆಂಧ್ರ ಪ್ರದೇಶವೇ ಇರಬಹುದು ಅಲ್ಲಿಂದ ಸಂಸತ್ತಿಗೆ ಯಾರೇ ಆಯ್ಕೆಯಾಗಲಿ ತಮ್ಮ ರಾಜ್ಯದ ಹಿತ ಬಂದಾಗ ಒಗ್ಗೂಡಿ ಹೋರಾಡುತ್ತಾರೆ.
ಅಂತಹ ಇಚ್ಛಾಶಕ್ತಿಯನ್ನು ನಮ್ಮ ಸಂಸದರು ಪ್ರದರ್ಶಿಸಬೇಕು. ರಾಷ್ಟ್ರ ರಾಜಕಾರಣಕ್ಕೆ ನುಗ್ಗುವ ನಾಯಕರಿಗೆ ಇದು ಪಾಠವಾಗಬೇಕು. ಅಂದ ಹಾಗೆ ತಳಹಂತದಿಂದ ಮೇಲ್ಮಟ್ಟದವರೆಗೆ ಏರಿ ಬಂದ ಜಾಫರ್ ಷರೀಫ್ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಲು ಇನ್ನೂ ಹಲವು ವಿಷಯಗಳಿವೆ. ಆದರೆ ಅವರ ಸಾವಿನ ಸಂದರ್ಭದಲ್ಲಿ ನಾಡು ಗಮನಿಸಬೇಕಾದ ಮುಖ್ಯವಾದ ಪಾಠ ಇದು. ಒಗ್ಗಟ್ಟು ಪ್ರದರ್ಶಿಸದಿರುವುದನ್ನು ನಾವು ಹಲವಾರು ವರ್ಷಗಳಿಂದ ಮಾತಾಡುತ್ತಲೇ ಬಂದಿದ್ದೇವೆ. ಆದರೆ, ಯಾವುದೇ ರೀತಿಯಲ್ಲಿಯೂ ಒಗ್ಗಟ್ಟು ಕಂಡುಬಂದಿಲ್ಲ.

ರಾಜಕಾರಣಿಯಾಗಿ ಅಂಬಿ ಯಶಸ್ವಿಯಾಗಿದ್ದರಾ?
ಇನ್ನು ಅಂಬರೀಷ್ ಅವರ ಬಗ್ಗೆ ಹೇಳುವುದಾದರೆ ಅವರು ರಾಜಕಾರಣದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಪಡೆದವರಲ್ಲ. ಆದರೆ ರಾಜಕಾರಣಕ್ಕೆ ಎಂಟ್ರಿಯಾದ ಮೇಲೆ ತಮ್ಮ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸಲು ಅವರು ಪ್ರಾಮಾಣಿಕ ಯತ್ನ ಮಾಡಿದ್ದು ಹೌದು.
ಇವತ್ತಿನ ರಾಜಕಾರಣ ಪ್ರಾಮಾಣಿಕತೆ ಹಾಗೂ ದಕ್ಷತೆಯನ್ನೇ ಮಾನದಂಡವಾಗಿರಿಸಿಕೊಂಡಿಲ್ಲ. ಜತೆಗೆ ನಿರಂತರ ಶ್ರಮ ಮತ್ತು ಚಾಣಾಕ್ಷತೆಯನ್ನೂ ಬೇಡುತ್ತದೆ. ಅಂಬರೀಷ್ ಅವರಿಗೆ ಇವೆರಡೂ ಇರಲಿಲ್ಲ. ರಾಜಕಾರಣಿಯಾಗಿ ಅವರು ಚಾಣಾಕ್ಷರೂ ಅಲ್ಲ, ನಿರಂತರವಾಗಿ ಶ್ರಮ ವಹಿಸುವ ಗುಣವೂ ಅವರಲ್ಲಿರಲಿಲ್ಲ.
ಬದಲಿಗೆ ಜನರ ಸಮಸ್ಯೆಗಳನ್ನು ಬಗೆಹರಿಸಲು ತಮ್ಮದೆ ನೆಲೆಯಲ್ಲಿ ಪ್ರಾಮಾಣಿಕ ಯತ್ನ ಮಾಡುತ್ತಿದ್ದರು. ಕಾನೂನಿಗಿಂತ ಮುಖ್ಯವಾಗಿ ಮಾನವೀಯ ನೆಲೆಯಲ್ಲಿ ಅದನ್ನು ಪರಿಹರಿಸಲು ಯತ್ನಿಸುತ್ತಿದ್ದರು. ಅದು ಹಲವು ಬಾರಿ ಯಶಸ್ವಿಯೂ ಆಗುತ್ತಿತ್ತು.

ರಾಜಕಾರಣದಿಂದ ದೂರವೇ ಉಳಿದ ಅಂಬಿ
ಆದರೆ ಅಷ್ಟರಿಂದಲೇ ಒಬ್ಬ ಯಶಸ್ವಿ ರಾಜಕಾರಣಿ ರೂಪುಗೊಳ್ಳುವುದಿಲ್ಲ ಅನ್ನುವುದು ಅರ್ಥವಾಗಲು ಅಂಬರೀಷ್ ಅವರಿಗೆ ತುಂಬ ಕಾಲ ಬೇಕಾಯಿತು. ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಹೀಗಾಗಿ ಸಕ್ರಿಯ ರಾಜಕಾರಣದಿಂದ ಅವರು ದೂರ ಉಳಿದು ಬಿಟ್ಟರು. ಸಾಲದೆಂಬಂತೆ ಅವರ ಆರೋಗ್ಯವೂ ನಿರಂತರವಾಗಿ ಕೈಕೊಡುತ್ತಲೇ ಇತ್ತು.
ಅರ್ಥಾತ್, ಜಾಫರ್ ಷರೀಫ್ ಹಾಗೂ ಅಂಬರೀಷ್ ಅವರಿಬ್ಬರ ಸಾವುಗಳಿಂದ ನಾವು ಕಲಿಯಬೇಕಾದ ಪಾಠವೇ ಬೇರೆ. ಆದರೆ ಇವತ್ತು ಅವರ ಬಗ್ಗೆ ಪ್ರಸ್ತಾಪವಾಗುತ್ತಿರುವ ವಿಷಯಗಳೇ ಬೇರೆ. ಅಂಬರೀಷ್ ಮಹಾನ್ ಮಾನವತಾವಾದಿಯಾಗಿದ್ದರು, ಜಾಫರ್ ಷರೀಫ್ ಅಧಿಕಾರದಲ್ಲಿದ್ದಾಗ ಕರ್ನಾಟಕಕ್ಕೆ ಇಂತಿಂತಹ ಕೊಡುಗೆಗಳನ್ನು ಕೊಟ್ಟರು ಎಂಬ ಚರ್ಚೆಗೆ ಅವರ ಸಾವು ಸೀಮಿತವಾಗಿದೆ.

ನಿರಾಶೆಯ ಕೂಪದಲ್ಲಿ ಹುಟ್ಟುವ ಮಾತುಗಳು
ಹಾಗೆಯೇ ಅಂಬಿ ಮತ್ತೊಮ್ಮೆ ಹುಟ್ಟಿ ಬಾ, ಷರೀಫ್ ಸಾಹೇಬರೇ ಮತ್ತೊಮ್ಮೆ ಹುಟ್ಟಿ ಬನ್ನಿ ಎಂಬಂತಹ ಮಾತುಗಳು ಪುನರಾವರ್ತನೆಯಾಗುತ್ತಿವೆ. ವಾಸ್ತವವಾಗಿ ಇಂತಹ ಮಾತುಗಳು ನಿರಾಶೆಯ ಕೂಪದಲ್ಲಿ ಹುಟ್ಟುತ್ತವೆ. ಯಾಕೆಂದರೆ ಅವರ ಬದುಕೇ ದೀಪದಂತಿರುವಾಗ, ಬೆಳಕು ಬೀರಿ ನಾವಿಡಬೇಕಾದ ದಾರಿಯನ್ನು ತೋರುತ್ತಿರುವಾಗ ನಡೆಯುವ ಇಚ್ಛಾಶಕ್ತಿ ನಮ್ಮಲ್ಲಿರಬೇಕೇ ಹೊರತು ಮತ್ತೇನಲ್ಲ.
ಹೀಗಾಗಿ ಸಾವು ಎಂಬುದು ಹೊಗಳಿಕೆಗೆ ಸೀಮಿತವಾಗಬಾರದು. ಅದೇ ರೀತಿ ಅವರ ವಿರೋಧಿಗಳನ್ನು ಹಣಿಯುವ ಅವಕಾಶವೂ ಆಗಬಾರದು. ಬದಲಿಗೆ ಅವರಿಂದ ಕಲಿಯಬೇಕಾದ ಪಾಠಗಳ ಕಡೆ ನಮ್ಮ ಗಮನ ಇರಬೇಕು.
ಇದನ್ನು ಮನವರಿಕೆ ಮಾಡಿಕೊಂಡರೆ ಮಾತ್ರ ಅಗಲಿದವರಿಗೆ ನಾವು ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ. ಬರಿಯೇ ಹೊಗಳುವುದಲ್ಲ. ಬದಲಿಗೆ ಅವರ ವ್ಯಕ್ತಿತ್ವಗಳಲ್ಲಿರುವ ಪಾಸಿಟಿವ್ ಅಂಶಗಳನ್ನು ಗಮನಿಸಿ, ಅದನ್ನು ಪಾಲಿಸಿದಾಗ ಮಾತ್ರ ವ್ಯವಸ್ಥೆಗೆ ಶಕ್ತಿ ದಕ್ಕುತ್ತದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications