ಕೀನ್ಯಾದಲ್ಲಿ ಕನ್ನಡ ಡಿಂಡಿಮ ಬಾರಿಸಿದ ಕಾರ್ಕಳದ ವಿಷ್ಣು ಮಾಧವ್ ಪೈ
Recommended Video
ಮೈಸೂರು, ಅಕ್ಟೋಬರ್. 30 : ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ ಎಂಬ ಮಾತಿದೆ. ಅದನ್ನು ಪಾಲಿಸುವವರು ನೂರಕ್ಕೆ ಒಬ್ಬರು. ಕರ್ನಾಟಕದಲ್ಲಿ ಇದ್ದು ಕನ್ನಡ ಮಾತನಾಡುವವರೇ ಕಡಿಮೆ. ಅಂತಹದ್ದರಲ್ಲಿ ದೂರದ ಕೀನ್ಯಾದಲ್ಲಿದ್ದು, ಆ ಊರಿನ ಭಾಷೆಯನ್ನು ಪ್ರೀತಿಸಿ ಕನ್ನಡವನ್ನು ಆಲಂಗಿಸುತ್ತಿರುವ ಈ ಯುವಕ ನಮಗೆ ಮಾದರಿ.
ಹೌದು, ಕೆಲವು ವರ್ಷಗಳ ಹಿಂದೆ ಕೀನ್ಯಾಕ್ಕೆ ಕೆಲಸಕ್ಕೆಂದು ತೆರಳಿದ ಆ ಯುವಕ ನೈರೋಬಿಯದಲ್ಲಿ ಕನ್ನಡದ ಕಂಪನ್ನು ಹೊರಸೂಸೂವಂತೆ ಮಾಡುತ್ತಿದ್ದಾರೆ. ಮೂಲತಃ ಕುಂದಾಪುರದವರಾದ ಆ ಯುವಕನ ಹೆಸರು ವಿಷ್ಣು ಮಾಧವ್ ಪೈ. ಹುಟ್ಟು ಕನ್ನಡಾಭಿಮಾನಿ. ಹುಟ್ಟಿ ಬೆಳೆದದ್ದು ಕಾರ್ಕಳ. ಮೊದಲಿನಿಂದಲೂ ಕನ್ನಡ ಚಿತ್ರಗಳು, ಕನ್ನಡ ಸಾಹಿತ್ಯವೆಂದರೆ ವಿಷ್ಣುಗೆ ಅಪಾರ ಆಸಕ್ತಿ.
ಹೀಗಿರುವಾಗ ದೂರದ ಕೀನ್ಯಾ ದೇಶದ ರಾಜಧಾನಿ ನೈರೋಬಿಯದಲ್ಲಿ ಕಾರವಾರದ ಪ್ರಭು-ಯೋಗಿಣಿಯವರು 'ಫನ್ ಆಂಡ್ ಶಾಪ್' ಎಂಬ ಹೆಸರಿನಲ್ಲಿ ಸೂಪರ್ ಮಾರ್ಕೆಟ್ ಆರಂಭಿಸಿದ್ದರು. ಆಗ ವಿಷ್ಣು ಬಂಧುಗಳೇ ಆಗಿದ್ದ ಸೂಪರ್ ಮಾರ್ಕೆಟ್ ಸಂಸ್ಫಾಪಕ ಪ್ರಭುರವರು ಕೀನ್ಯಾದಲ್ಲಿರುವ ಸೂಪರ್ ಮಾರ್ಕೆಟ್ ನಲ್ಲಿ ವಿಷ್ಣುಗೆ ಮ್ಯಾನೇಜರ್ ಆಗುವ ಅವಕಾಶ ನೀಡಿದರು.
ಫಾಲನೇತ್ರಗೆ ಚಿರಂಜೀವಿ ಪ್ರಶಸ್ತಿ, ನಾಗರಾಜ್ ಗೆ ಅರವಿಂದ ಪ್ರಶಸ್ತಿ
ಮ್ಯಾನೇಜರ್ ಆಗಿ ಸೇರಿಕೊಂಡ ನಂತರ ಎಂದಿನಂತೆ ವಿಷ್ಣುರವರು ಕರ್ನಾಟಕವನ್ನು ಹಾಗೂ ಕನ್ನಡಾಭಿಮಾನವನ್ನು ಪಸರಿಸಲು ಪಣತೊಟ್ಟರು. ದೂರದ ದೇಶದಲ್ಲಿಯೂ ಸಹ ಕನ್ನಡದ ಕಂಪನ್ನು ಸೂಸಲು ವಿಷ್ಣು ಮಾಡಿದ ಮೊದಲ ಕೆಲಸವೆಂದರೆ ತಮ್ಮ ಅಂಗಡಿಯ ನಾಮಫಲಕಕ್ಕೆ ಕನ್ನಡ ಸೇರಿಸುವುದು.
ಕನ್ನಡ ನಾಮಫಲಕ ಹಾಕುವ ಬಗ್ಗೆ ಪ್ರಭು ಅವರ ಬಳಿ ವಿಷ್ಣು ಕೇಳಿಕೊಂಡಾಗ ಅವರು ಕೂಡ ಯಾವ ಮುಲಾಜಿಲ್ಲದೇ ಒಪ್ಪಿಗೆ ಸೂಚಿಸಿದರು. ಅಂದಿನಿಂದ ಆರಂಭವಾಯ್ತು ಕನ್ನಡವನ್ನು ಉತ್ತುಂಗಕ್ಕೇರಿಸುವ ಕಾಯಕ.
ಸೂಪರ್ ಮಾರ್ಕೆಟ್ ನಲ್ಲಿ ಗೋಲಿಬಜ್ಜಿ, ಚಕ್ಕುಲಿ...
ಮೊದಲಿಗೆ ಕರಾವಳಿಯ ಹೊಸ ಹೊಸ ಅಡುಗೆಗಳನ್ನು ತಯಾರಿಸಲು ಮುಂದಾದ ವಿಷ್ಣು, ಆನಂತರ ನೈರೋಬಿಯದ ಸೂಪರ್ ಮಾರ್ಕೆಟ್ ನಲ್ಲಿ ಗೋಲಿಬಜ್ಜಿ, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ರವೆ ಉಂಡೆ, ಪತ್ರೊಡೆ, ಬನ್ಸ್, ಬಜ್ಜಿ, ಹಲಸಿನಕಾಯಿ, ಗುಳ್ಳ, ತೊಂಡೆಕಾಯಿ ಸೇರಿದಂತೆ ಎಲ್ಲಾ ಪದಾರ್ಥಗಳನ್ನು ಮಂಗಳೂರಿನಿಂದ ತಂದು ಮಾರಲು ಶುರುವಿಟ್ಟುಕೊಂಡರು. ಅಲ್ಲದೇ ತಿಂಡಿ ಮಾಡುವ ಪರಿಯನ್ನು ನೈರೋಬಿಯಾ ಮಂದಿಗೆ ಪರಿಚಯಿಸಿದ ಕೀರ್ತಿಯೂ ಸಹ ಇವರಿಗೆ ಸಲ್ಲುತ್ತದೆ.
ರಾಜ್ಯೋತ್ಸವದಿಂದ ಕನ್ನಡದಲ್ಲೇ ಬೋರ್ಡ್ ಹಾಕಿ ಇಲ್ಲವೇ ರೈಟ್ ಹೇಳಿ
ಅದೆಷ್ಟೋ ವ್ಯವಹಾರಗಳು ಕನ್ನಡಮಯ
ಸೂಪರ್ ಮಾರ್ಕೆಟ್ ನಲ್ಲಿ ಸಿಗುವ ರಾಗಿ ಹಿಟ್ಟು, ಮೆಂತ್ಯೆ ಹಿಟ್ಟು, ಚಟ್ನಿ ಪುಡಿಗೆ ಎಲ್ಲಿಲ್ಲದ ಬೇಡಿಕೆ. ನೈರೋಬಿಯದಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಿಲ್ಲ. ಆದರೂ ಕನ್ನಡದ ಮೇಲಿನ ಪ್ರೀತಿಯಿಂದಾಗಿ ಈ ಸೂಪರ್ ಮಾರ್ಕೆಟ್ ತುಂಬಾ ಕನ್ನಡದ ಬೋರ್ಡ್ ಗಳನ್ನೇ ಹಾಕಲಾಗಿದೆ. ಅಲ್ಲಿನ 10ಕ್ಕೂ ಹೆಚ್ಚು ನೈರೋಬಿಯಾದ ಜನರಿಗೆ ವಿಷ್ಣು ಕನ್ನಡ ಹೇಳಿಕೊಡುತ್ತಿದ್ದಾರೆ. ಅಲ್ಲಿನ ಎಷ್ಟೋ ವ್ಯವಹಾರಗಳು ಕನ್ನಡಮಯವಾಗಿದೆ.
ನಾಮಫಲಕದಲ್ಲಿ ಕನ್ನಡವೇ ಪ್ರಧಾನ, ಸುತ್ತೋಲೆ ಹಿಂದಕ್ಕೆ?
ಕನ್ನಡ ಹಾಡಿಗೆ ಹೆಜ್ಜೆ
ಅಲ್ಲಿನ ಜನರ ಕನ್ನಡ ಪ್ರೇಮ ಎಷ್ಟಿದೆ ಎಂದರೆ ಕನ್ನಡದ ಧಾರಾವಾಹಿಗಳನ್ನು, ಸಿನಿಮಾಗಳನ್ನು ಯ್ಯೂಟ್ಯೂಬ್ ನಲ್ಲಿ ವೀಕ್ಷಿಸಿ ಅದರ ಅರ್ಥ ತಿಳಿಸುವಂತೆ ವಿಷ್ಣುರವರಿಗೆ ಕೇಳುತ್ತಾರಂತೆ.
ಇನ್ನು ವಿಷ್ಣುಗೆ ಕನ್ನಡ ಹಾಡುಗಳೆಂದರೆ ಬಲು ಅಚ್ಚುಮೆಚ್ಚು. ಅವರು ಕನ್ನಡ ಹಾಡು ಹಾಡುತ್ತಿದ್ದರೆ ಇಲ್ಲಿನ ಮಂದಿ ಅವರ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ. ತಮ್ಮ ಬಿಡುವಿನ ವೇಳೆ ಹಾಡನ್ನು ಹಾಡುವ ವಿಷ್ಣುರವರಿಗೆ ಮತ್ತಷ್ಟು ಹಾಡನ್ನು ಹಾಡುವಂತೆ ಕೇಳುತ್ತಾರೆ. ಅಲ್ಲದೇ ಅದರ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನ ಸಹ ಮಾಡುತ್ತಾರೆ.
ಕನ್ನಡ ಕಲಿಸುವ ಹಂಬಲ
"ನನಗೆ ನೈರೋಬಿಯನ್ನರು ನಮ್ಮ ಕನ್ನಡದ ಮೇಲೆ ಇಟ್ಟಿರುವ ಅಭಿಮಾನ ನೋಡಿ ಸಂತಸ ತರಿಸುತ್ತದೆ. ಅವರಿಗೆ ಮತ್ತಷ್ಟು ಕನ್ನಡವನ್ನು ಕಲಿಸುವ ಹಂಬಲವಿದೆ" ಎಂದು ಸಂತಸದಿಂದ ನುಡಿಯುತ್ತಾರೆ ವಿಷ್ಣು ಮಾಧವ್ ಪೈ.
ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು....ಎಂಬ ಹಾಡಿನಂತೆ ಎಲ್ಲಿದ್ದರೂ ಕನ್ನಡವನ್ನು ಉಳಿಸಿ ಬೆಳೆಸಿ ಮತ್ತೊಬ್ಬರಿಗೂ ಹೇಳಿಕೊಟ್ಟು ನೀರೆರೆದು ಪೋಷಿಸುತ್ತಿರುವ ಇಂತಹವರ ಸಂಖ್ಯೆ ನೂರ್ಮಡಿಯಾಗಲಿ ಎಂಬುದೇ ನಮ್ಮೆಲ್ಲರ ಆಶಯ.