Maha Kumbh Mela 2025: ಮಹಾಕುಂಭ ಮೇಳಕ್ಕೆ ವಾಹನದಲ್ಲಿ ಹೋದವರು ಇದನ್ನ ತಿಳಿದಿರಲೇಬೇಕು
ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ನಿತ್ಯವೂ ಕೋಟ್ಯಂತರ ಮಂದಿ ಭಕ್ತರು ಭೇಟಿ ನೀಡಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಪ್ರಯಾಗ್ರಾಜ್ಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಫೆಬ್ರವರಿ 12ರಂದು ಮಾಘ ಪೂರ್ಣಿಮೆ ಇರುವ ಹಿನ್ನೆಲೆ ಮಹಾಕುಂಭ ಮೇಳಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಪವಿತ್ರ ಸ್ನಾನಕ್ಕೆ ಬರುತ್ತಿದ್ದಾರೆ. ಈ ಕಾರಣದಿಂದ ಅಲ್ಲಿ ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ.
ಮಹಾಕುಂಭ ಮೇಳಕ್ಕಾಗಿ ಭಕ್ತರು ವಿವಿಧ ರಾಜ್ಯಗಳಿಂದ ವಾಹನಗಳಲ್ಲಿ ಪ್ರಯಾಗ್ರಾಜ್ನತ್ತ ಬರುತ್ತಿರುವ ಹಿನ್ನೆಲೆ ಸುಮಾರು 300 ಕಿಲೋಮೀಟರ್ವರೆಗೆ ಟ್ರಾಫಿಕ್ ಜಾಮ್ ಆಗಿರುವ ಬಗ್ಗೆ ವರದಿಯಾಗಿದೆ. ಪ್ರಯಾಗ್ರಾಜ್ನಲ್ಲೂ ವಾಹನಗಳ ದಟ್ಟಣೆ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಹರಸಾಹಸ ಪಡುತ್ತಿದೆ. ನಾಳೆ ಮಾಘ ಪೂರ್ಣಿಮೆ ಇರುವ ಕಾರಣ ಭಕ್ತರು ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, ಸಂಚಾರ ನಿಯಂತ್ರಣಕ್ಕಾಗಿ ವಿಶೇಷ ನಿಯಮಗಳನ್ನು ಹೇರಿದೆ.

ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ಸರ್ಕಾರಗಳು ಪ್ರಯಾಗ್ರಾಜ್ನತ್ತ ಹರಿದುಬರುತ್ತಿರುವ ಸಹಸ್ರಾರು ಸಂಖ್ಯೆಯ ವಾಹನಗಳನ್ನು ನಿಯಂತ್ರಿಸಲು ಪ್ಲ್ಯಾನ್ ಮಾಡಿಕೊಂಡಿವೆ. ಹಾಗಾಗಿ ಮಹಾಕುಂಭ ಮಾಘ ಪೂರ್ಣಿಮಾ ಪವಿತ್ರ ಸ್ನಾನದ ಪೂರ್ವಭಾವಿಯಾಗಿ ಸಂಜೆ 4 ಗಂಟೆಯಿಂದ ಯಾವುದೇ ವಾಹನ ಸಂಚಾರ ನಿರ್ಬಂಧಿಸಿರುವುದಾಗಿ ಘೋಷಿಸಿದೆ. ಅಲ್ಲದೆ ಸಂಜೆ 5 ಗಂಟೆಯ ನಂತರ ಪ್ರಯಾಗ್ರಾಜ್ನ ಮಹಾಕುಂಭ ಮೇಳ ನಡೆಯುವ ಜಾಗವು ವಾಹನ ಮುಕ್ತ ವಲಯ (No vehicle zone) ಆಗಿರಲಿದೆ. ಇಂದಿನಿಂದಲೇ ನಾಳೆಯವರೆಗೆ ಈ ನಿಯಮಗಳು ಜಾರಿಯಲ್ಲಿರುತ್ತವೆ.
ಮಂಗಳವಾರ (ಫೆ.11) ಮುಂಜಾನೆ 4ರಿಂದ ಅಗತ್ಯ ಮತ್ತು ತುರ್ತು ಸೇವೆಗಳನ್ನು ಹೊರತುಪಡಿಸಿ ಇಡೀ ಮೇಳ ಪ್ರದೇಶವನ್ನು 'ವಾಹನ ರಹಿತ ವಲಯ'ವೆಂದು ಘೋಷಿಸಲಾಗಿದೆ ಎಂದು ಪ್ರಯಾಗರಾಜ್ ಪೊಲೀಸರು ತಿಳಿಸಿದ್ದಾರೆ. ಪ್ರಯಾಗರಾಜ್ ನಗರದಲ್ಲಿ ಮಹಾಕುಂಭಕ್ಕೆ ಹೊರಗಿನಿಂದ ಬರುವ ಭಕ್ತರ ವಾಹನಗಳನ್ನು ಮಂಗಳವಾರ ಬೆಳಿಗ್ಗೆ 4 ಗಂಟೆಯಿಂದಲೇ ಆಯಾ ಮಾರ್ಗದ ಪಾರ್ಕಿಂಗ್ನಲ್ಲಿ ನಿಲ್ಲಿಸಲಾಗುತ್ತದೆ. ಅಗತ್ಯ ಮತ್ತು ತುರ್ತು ಸೇವೆಗಳ ವಾಹನಗಳಿಗೆ ಮಾತ್ರ ಸಂಚಾರಕ್ಕೆ ವಿನಾಯಿತಿ ನೀಡಿದೆ.
ಕಳೆದ ಜನವರಿ 29ರಂದು ಮೌನಿ ಅಮವಾಸ್ಯೆಯಂದು ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ ಸಂಭವಿಸಿ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಕಾಲ್ತುಳಿತದಲ್ಲಿ ಯಾತ್ರಾರ್ಥಿಗಳು ಗಾಯಗೊಂಡಿದ್ದರು. ಹಾಗಾಗಿ ಜನರ ದಟ್ಟಣೆ ನಿಯಂತ್ರಿಸಲು ಕೂಡ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ನಾಳೆ ಮಾಘ ಪೂರ್ಣಿಮೆ ದಿನ ಯಾವುದೇ ಅನಾಹುತ ನಡೆಯದಂತೆ ತಡೆಯಲು ಈ ಕ್ರಮ ಕೈಗೊಂಡಿದ್ದಾರೆ.
ಫೆಬ್ರವರಿ 12ರಂದು ಮಹಾಕುಂಭ ಮೇಳದ ಪ್ರದೇಶದಿಂದ ಭಕ್ತರು ಸುಗಮವಾಗಿ ನಿರ್ಗಮಿಸುವವರೆಗೆ ಈ ಸಂಚಾರ ವ್ಯವಸ್ಥೆ ಜಾರಿಯಲ್ಲಿರುತ್ತದೆ ಎಂದು ಪೊಲೀಸರು ತಿಳಿಸಿದ್ದು, ಪ್ರಯಾಗರಾಜ್ ನಗರ ಮತ್ತು ಮೇಳದ ಪ್ರದೇಶಗಳಿಗೆ ವಾಹನಗಳ ಪ್ರವೇಶ ಮತ್ತು ನಿರ್ಗಮನದ ಮೇಲಿನ ನಿರ್ಬಂಧಗಳು ಕಲ್ಪವಾಸಿಗಳ ವಾಹನಗಳಿಗೂ ಅನ್ವಯಿಸುತ್ತವೆ ಎಂದಿದ್ದಾರೆ. ಕಲ್ಪವಾಸವು ಮಾಘ ಪೂರ್ಣಿಮಾ ಸ್ನಾನದೊಂದಿಗೆ ಕೊನೆಗೊಳ್ಳುವುದರಿಂದ ಹೆಚ್ಚಿನ ಮಂದಿ ಬುಧವಾರ ಪ್ರಯಾಗ್ರಾಜ್ನಲ್ಲಿ ಸೇರಲಿದ್ದಾರೆ.












Click it and Unblock the Notifications