ಮಡಿಕೇರಿಯ ಮೋಹಕ ಮಂಜಿನ ಚಿತ್ತಾರ ನೋಡಲು ಪ್ರವಾಸಿಗರೇ ಇಲ್ಲ!

ಕಳೆದ ಕೆಲವು ವರ್ಷಗಳಿಂದ ಮಡಿಕೇರಿಯ ವಾತಾವರಣದಲ್ಲಿ ತುಸು ಬದಲಾವಣೆಯಾಗಿದೆ. ಮೊದಲೆಲ್ಲ ಈ ವೇಳೆಗೆಲ್ಲ ಮುಂಜಾನೆ ಮೈಕೊರೆಯುವ ಚಳಿ... ಬಾನಿಗೆ ಮಂಜು ಮುಸುಕಿನ ತೆರೆ... ಮಧ್ಯಾಹ್ನ ಮೈಬೆಚ್ಚಗಾಗಿಸುತ್ತಿದ್ದ ರವಿ... ಒಂದಷ್ಟು ಉಲ್ಲಾಸದ ವಾತಾವರಣ ಮುದಗೊಳಿಸುತ್ತಿತ್ತು. ಇಂತಹ ಸುಂದರ ಪರಿಸರದಲ್ಲಿ ಅಡ್ಡಾಡಲೆಂದೇ ಪ್ರವಾಸಿಗರು ಕೊಡಗಿನತ್ತ ಬರುತ್ತಿದ್ದರು.

ಇದರಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಗರಿಗೆದರಿ ಆರ್ಥಿಕ ವಹಿವಾಟುಗಳಲ್ಲಿ ಚೇತರಿಕೆ ಕಾಣುತ್ತಿತ್ತು. ಆದರೆ ಮೊದಲಿಗೆ ಹೋಲಿಸಿದರೆ ಈಗ ಪ್ರವಾಸಿಗರು ಕೊಡಗಿನತ್ತ ಹೆಚ್ಚಾಗಿ ಧಾವಿಸುತ್ತಿಲ್ಲ. ಇದರಿಂದ ಎಲ್ಲೆಡೆಯೂ ಖಾಲಿಯಾದಂತಹ ಅನುಭವವಾಗುತ್ತಿದೆ. ಈ ಹಿಂದೆ ಕೊಡಗಿನ ಸುಂದರ ಪರಿಸರ ಮತ್ತು ಆಹ್ಲಾದಕರ ವಾತಾವರಣಕ್ಕೆ ಮಾರು ಹೋದ ಜನ ಒಂದಷ್ಟು ಸಮಯವನ್ನು ಇಲ್ಲಿಯೇ ಕಳೆಯುವ ಸಲುವಾಗಿ ಬರುತ್ತಿದ್ದರು. ಹೀಗೆ ಬಂದವರೆಲ್ಲ ಮುಂಜಾನೆಯ ಮಂಜಿನಲ್ಲಿ ಅಡ್ಡಾಡಿ ಮೈಮರೆಯುತ್ತಿದ್ದರು.

 ಕವಿ ಜಿ.ಪಿ.ರಾಜರತ್ನಂ ಕಂಡಂತೆ ಮಂಜು...

ಕವಿ ಜಿ.ಪಿ.ರಾಜರತ್ನಂ ಕಂಡಂತೆ ಮಂಜು...

ಅವತ್ತಿನ ಮಡಿಕೇರಿ ಮೇಲಿನ ಮಂಜಿನ ವೈಭವವನ್ನು ಕಣ್ಣಾರೆ ಕಂಡ ಕವಿ ಜಿ.ಪಿ.ರಾಜರತ್ನಂ ಅವರು ಸುಂದರ ಕವನವನ್ನು ಹೆಣೆದಿದ್ದರು.
ಬೂಮಿನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ
ಮಡಿಕೇರಿಲಿ ಮಂಜು...
ಎಂಬ ಸುಂದರ ಕವನವನ್ನು ಬರೆದಿದ್ದರು. ಸಾಮಾನ್ಯವಾಗಿ ಮಡಿಕೇರಿಗೆ ಹೋದವರಿಗೆ ಮುಂಜಾನೆಯ ಮಂಜಿನ ಆಟ ಸುಂದರ ನೆನಪುಗಳಿಗೆ ಮುನ್ನುಡಿ ಬರೆಯುತ್ತದೆ. ಕಳೆದ ಕೆಲವು ವರ್ಷಗಳಿಂದ ಕೊಡಗಿನ ವಾತಾವರಣದಲ್ಲಿ ಏರುಪೇರಾಗಿದೆ. ಸದಾ ಜಿಟಿ ಜಿಟಿ ಸುರಿಯುತ್ತಿದ್ದ ಮಳೆ ಕುಂಭದ್ರೋಣವಾಗಿದೆ. ಪರಿಣಾಮ ಪ್ರವಾಹ, ಭೂಕುಸಿತಕ್ಕೆ ದಾರಿ ಮಾಡಿಕೊಡುತ್ತಿದೆ. ಸದಾ ತಂಪಾಗಿರುತ್ತಿದ್ದ ಬೇಸಿಗೆಯ ಹವೆ ಬದಲಾಗಿ ಉರಿಬಿಸಿಲು ಕಾಣಿಸಿಕೊಳ್ಳುತ್ತಿದೆ. ಕಾಲಕ್ಕೆ ತಕ್ಕಂತೆ ಮಳೆ, ಚಳಿ, ಬಿಸಿಲು ಕಾಣಿಸಿಕೊಳ್ಳದ ಕಾರಣದಿಂದ ಕೃಷಿಕರು ಸಂಕಷ್ಟ ಎದುರಿಸುವಂತಾಗಿದೆ.

 ಬೋರ್ ಹೊಡೆಸುವ ವಾತಾವರಣ

ಬೋರ್ ಹೊಡೆಸುವ ವಾತಾವರಣ

ಈ ವೇಳೆಗೆಲ್ಲ ಮಳೆ ದೂರವಾಗಿ ಕೆಸರು ಒಣಗಿ ಸಣ್ಣಗಿನ ಮೈ ನಡುಗಿಸುವ ಚಳಿ ಶುರುವಾಗಬೇಕಾಗಿತ್ತು. ಆದರೆ ಅದ್ಯಾವುದೂ ಆಗುತ್ತಿಲ್ಲ. ಮೋಡ ಕವಿದ ವಾತಾವರಣದೊಂದಿಗೆ ಮಳೆ ಆಗೊಮ್ಮೆ ಈಗೊಮ್ಮೆ ಸುರಿಯುತ್ತಿರುವುದು ಭತ್ತ ಬೆಳೆದ ರೈತರನ್ನು ಆತಂಕಕ್ಕೀಡು ಮಾಡಿದೆ. ಜತೆಗೆ ಅರೇಬಿಕಾ ಕಾಫಿ ಹಣ್ಣಾಗಲು ಆರಂಭವಾಗಿದ್ದು, ಕೊಯ್ಲು ಮಾಡಬೇಕಾಗಿದೆ. ಈ ಸಮಯದಲ್ಲಿ ಹಣ್ಣಾದ ಕಾಫಿಯನ್ನು ಒಣಗಿಸಲು ಬಿಸಿಲಿನ ಅವಶ್ಯಕತೆಯಿದೆ. ಆದರೆ ಈಗ ಮೋಡ ಕವಿದ ವಾತಾವರಣವಿರುವುದು ಬೆಳೆಗಾರರನ್ನು ಕಂಗೆಡಿಸುವಂತೆ ಮಾಡಿದೆ.

 ನಿಸರ್ಗದ ನೋಟ ಹರಿಸಲು ಪ್ರವಾಸಿಗರಿಲ್ಲ

ನಿಸರ್ಗದ ನೋಟ ಹರಿಸಲು ಪ್ರವಾಸಿಗರಿಲ್ಲ

ಒಂದು ವೇಳೆ ಕೊರೊನಾ ಇಲ್ಲದೆ ಹೋಗಿದ್ದರೆ ಇಷ್ಟು ಹೊತ್ತಿಗೆ ಮಡಿಕೇರಿ ಸೇರಿದಂತೆ ಕೊಡಗಿನ ವಿವಿಧ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಬಹಳಷ್ಟು ಪ್ರವಾಸಿಗರು ವರ್ಷದ ಕೊನೆಯ ವೇಳೆಯಲ್ಲಿ ಕೊಡಗಿಗೆ ಪ್ರವಾಸ ಬರುವುದನ್ನು ರೂಢಿಸಿಕೊಂಡಿದ್ದರು. ಕಾರಣ ಈ ಸಮಯದಲ್ಲಿ ಮಳೆ ದೂರವಾಗಿರುತ್ತದೆ. ಎಲ್ಲೆಡೆ ಪರಿಸರ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ವಿಶಾಲ ಬಯಲ ಭತ್ತದ ಬೆಳೆ ಹೊನ್ನಿನ ಬಣ್ಣಕ್ಕೆ ತಿರುಗಿರುತ್ತದೆ. ಕಾಫಿ ಹಣ್ಣಾಗಿ ತೊನೆಯುತ್ತಿರುತ್ತದೆ. ಸಣ್ಣಗೆ ಮೈನಡುಗಿಸುವ ಚಳಿ ಮುದ ನೀಡುತ್ತದೆ. ಇದರ ನಡುವಿನ ನಿಸರ್ಗದ ನೋಟವೂ ಕಣ್ಣಿಗೆ ಹಬ್ಬವಾಗುತ್ತದೆ.

 ಮಂಜಿನ ನೋಟ ಬಲು ಚೆಂದ

ಮಂಜಿನ ನೋಟ ಬಲು ಚೆಂದ

ದೂರದ ಬೆಟ್ಟಗುಡ್ಡಗಳು ಅವುಗಳ ನಡುವಿನ ಕಣಿವೆಗಳಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ಹಸಿರು ವನದ ರಾಶಿ... ಅದೆಲ್ಲವನ್ನೂ ಮುಚ್ಚಿ ಹಾಕುವಂತೆ ಪರದೆ ಎಳೆದ ಮಂಜು ಒಂದಷ್ಟು ವಿಸ್ಮಯದ ನೋಟವನ್ನು ಉಣಬಡಿಸುತ್ತದೆ.

ಇನ್ನು ಮುಂಜಾನೆ ಮಡಿಕೇರಿ ನಗರದಲ್ಲಿ ಅಡ್ಡಾಡಿದರೆ ಪುರಾಣದ ಸ್ವರ್ಗಲೋಕ ಎದುರಿಗೆ ಬಂದ ಅನುಭವವಾಗುತ್ತದೆ. ನಮ್ಮನ್ನು ಮಂಜಿನ ಮುಸುಕಿನಲ್ಲಿ ಕಟ್ಟಿ ಹಾಕಿ ತೇಲಿ ಹೋಗುವ ಮಂಜಿನ ತೆರೆಗಳು ಏರು-ತಗ್ಗು ಹಳ್ಳ-ಕೊಳ್ಳಗಳನ್ನೆಲ್ಲಾ ತುಂಬಿಕೊಂಡು ಒಂದು ಕ್ಷಣ ತಬ್ಬಿಬ್ಬಾಗಿಸುತ್ತದೆ. ಇದರ ನಡುವೆ ಒಬ್ಬರಿಗೆ ಮತ್ತೊಬ್ಬರು ಕಾಣದಷ್ಟು ದಟ್ಟವಾಗಿ ಆವರಿಸಿಕೊಳ್ಳುವ ಮಂಜು ರವಿಯ ಪ್ರಖರತೆ ಹೆಚ್ಚಾಗುತ್ತಿದ್ದಂತೆಯೇ ನೆಗೆದು ಓಡುತ್ತದೆ.

ಆದರೆ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯ ಅನಾಹುತ ನಡೆಯುತ್ತಲೇ ಇದೆ. ಇದರಿಂದ ಇಲ್ಲಿನ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರವಾಸೋದ್ಯಮ ನೆಲಕಚ್ಚಿದೆ. ಅಲ್ಲಲ್ಲಿ ಹುಟ್ಟಿಕೊಂಡಿದ್ದ ಹೋಂ ಸ್ಟೇಗಳು, ಲಾಡ್ಜ್, ರೆಸಾರ್ಟ್ ಗಳು ಖಾಲಿ ಖಾಲಿಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+