Timeline: ಮಹಾ ವಿಕಾಸ ಅಘಾಡಿ ಸರ್ಕಾರದ ಅಂದಿನ ಹುಟ್ಟಿನಿಂದ ಇಂದಿನ ಪತನದವರೆಗೆ!
ಮುಂಬೈ, ಜೂನ್ 29: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರಕ್ಕೆ ಶಿವಸೇನೆಯೇ ಮಗ್ಗಲು ಮುಳ್ಳಾಗಿದೆ. ಶಿವಸೇನೆಯಲ್ಲಿನ ರಾಜಕೀಯ ಬಿಕ್ಕಟ್ಟು ಮೂರು ಪಕ್ಷಗಳ ಮೈತ್ರಿಕೂಟದ ಗೂಡನ್ನು ಒಡೆದು ಹಾಕಿದೆ. ಅಂತಿಮವಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪತನ ಕಂಡಿದೆ.
ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಸೂಚನೆಯಂತೆ ಗುರುವಾರ ಬೆಳಗ್ಗೆ 11 ಗಂಟೆಗೆ ಮಹಾ ವಿಕಾಸ ಅಘಾಡಿ ಸರ್ಕಾರವು ಬಹುಮತ ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತು. ಸರ್ವೋಚ್ಛ ನ್ಯಾಯಾಲಯದಿಂದ ಈ ಆದೇಶ ಹೊರ ಬೀಳುತ್ತಿದ್ದಂತೆ ತಮ್ಮ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಿಸಿ ಬಿಟ್ಟರು. ಅಲ್ಲಿಗೆ ಮಹಾ ವಿಕಾಸ ಅಘಾಡಿ ಸರ್ಕಾರದ ಪತನವು ಖಾತ್ರಿ ಆಯಿತು.
Breaking: ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ
ರಾಜ್ಯಸಭೆ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯು ಮಹಾರಾಷ್ಟ್ರದ ಶಿವಸೇನೆಯಲ್ಲಿ ಬಿರುಕು ಮೂಡುವುದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಬಿಜೆಪಿಯ ಕಡೆಗೆ ಶಿವಸೇನೆ ಒಂದು ಬಣ ಹೊರಳುತ್ತಿರುವುದು ಉದ್ಧವ್ ಠಾಕ್ರೆ ಬಣಕ್ಕೆ ಪೆಟ್ಟು ಕೊಟ್ಟಿತು.
ಮಹಾರಾಷ್ಟ್ರದ ರಾಜಕಾರಣ ದೇಶದ ಮಟ್ಟದಲ್ಲಿ ಸುದ್ದಿ ಮಾಡಿದ್ದು ಹೇಗೆ?, ಮಹಾ ವಿಕಾಸ ಅಘಾಡಿ ಸರ್ಕಾರ ಯಾವ ರೀತಿ ರಚನೆ ಆಯಿತು?, ಮೂರು ಪಕ್ಷಗಳ ಮೈತ್ರಿಕೂಟವು ನಡೆದು ಬಂದ ದಾರಿ ಹೇಗಿತ್ತು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
2019ರ ಅಕ್ಟೋಬರ್ ತಿಂಗಳಿನಲ್ಲೇ ಏನಾಯಿತು?
* ಅಕ್ಟೋಬರ್ 24, 2019:
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಅಖಾಡಕ್ಕೆ ಇಳಿದ ಬಿಜೆಪಿ-ಶಿವಸೇನೆ ಮೈತ್ರಿಕೂಟವು 161 ಸ್ಥಾನಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿ ಆಯಿತು. ಅಂದು ಬಿಜೆಪಿ 106 ಸ್ಥಾನಗಳನ್ನು ಗೆದ್ದುಕೊಂಡರೆ, ಶಿವಸೇನೆಯು 56 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತು. ಈ ವೇಳೆ ಎನ್ಸಿಪಿ 54 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 44 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ ಮತ್ತು ಶಿವಸೇನೆಯು ಒಗ್ಗಟ್ಟಾಗಿ ಇನ್ನೇನು ಸರ್ಕಾರ ರಚನೆ ಮಾಡುತ್ತಾರೆ ಎಂಬುದು ಖಾತ್ರಿಯಾಗಿದ್ದರೂ, ಎರಡು ಪಕ್ಷಗಳ ಮಧ್ಯ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಿತ್ತಾಟ ಶುರುವಾಯಿತು.
* ಅಕ್ಟೋಬರ್ 25, 2019:
ಹೊಸ ವಿಧಾನಸಭೆಯಲ್ಲಿ ಬಿಜೆಪಿಯು ಸರ್ಕಾರ ರಚಿಸುವುದಕ್ಕೆ ಅಗತ್ಯವಾಗುವಷ್ಟು ಸ್ಥಾನವನ್ನು ಗಳಿಸಿಲ್ಲ. ಈ ಹಿನ್ನೆಲೆ ಅದು ತನ್ನ ಮಿತ್ರಪಕ್ಷದ ಮೇಲೆ ಹೆಚ್ಚು ಅವಲಂಬಿತವಾಯಿತು. ಇದರ ಲಾಭ ಪಡೆಯುವುದಕ್ಕಾಗಿ ಅಂದು ಶಿವಸೇನೆಯು ಹೆಚ್ಚು ಸಚಿವ ಸ್ಥಾನಗಳ ಜೊತೆಗೆ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನವನ್ನು ನೀಡುವಂತೆ ಬೇಡಿಕೆ ಇಟ್ಟಿತು. ಶಿವಸೇನಾ ಮುಖವಾಣಿ ಸಾಮ್ನಾ ದೇವೇಂದ್ರ ಫಡ್ನವೀಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅನ್ನು ಹೊಗಳಿದೆ. ಉದ್ಧವ್ ಠಾಕ್ರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆ ಮಾತ್ರ ಮಾತುಕತೆ ನಡೆಸಲಿದ್ದಾರೆ ಎಂದು ಶಿವಸೇನಾ ನಾಯಕರು ಬಿಜೆಪಿಗೆ ತಿಳಿಸಿದ್ದರು.
* ಅಕ್ಟೋಬರ್ 28, 2019:
ವಿಧಾನಸಭೆ ಚುನಾವಣೆಗೆ ಮುನ್ನ ಅಮಿತ್ ಶಾ ಮತ್ತು ಉದ್ಧವ್ ಠಾಕ್ರೆ ನಡುವೆ 50:50 ಸೂತ್ರಕ್ಕೆ ಒಪ್ಪಿಗೆ ನೀಡಲಾಗಿತ್ತು ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿಕೊಂಡರು. ಇದನ್ನು ನಿರಾಕರಿಸಿರುವ ಬಿಜೆಪಿ, ಶಿವಸೇನೆ ಜೊತೆ ಇಂತಹ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿತು. ಬಿಜೆಪಿ ಮತ್ತು ಶಿವಸೇನೆಯ ಪ್ರತ್ಯೇಕ ನಿಯೋಗಗಳು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅನ್ನು ಭೇಟಿಯಾದವು.
* ಅಕ್ಟೋಬರ್ 30, 2019:
ಬಿಜೆಪಿಯ ಅಂದಿನ ರಾಜ್ಯಾಧ್ಯಕ್ಷ ದೇವೇಂದ್ರ ಫಡ್ನವೀಸ್ ಜೊತೆಗಿನ ಸಭೆಯನ್ನು ಶಿವಸೇನೆಯು ರದ್ದುಗೊಳಿಸಿತು. ಇನ್ನೊಂದು ಮಗ್ಗಲಿನಲ್ಲಿ ಎರಡೂವರೆ ವರ್ಷ ಸಿಎಂ ಸ್ಥಾನವನ್ನು ನೀಡುವಂತೆ ಇಟ್ಟ ಬೇಡಿಕೆಗೆ ಬದ್ಧವಾಗಿರುವಂತೆ ಹೇಳಿತು.
ಸರ್ಕಾರ ರಚಿಸುವಂತೆ ಪಕ್ಷಗಳಿಗೆ ರಾಜ್ಯಪಾಲರ ಆಹ್ವಾನ
* ನವೆಂಬರ್ 1, 2019:
ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಸಂಬಂಧ ಹಳಸುತ್ತಿರುವುದರ ಮಧ್ಯೆ ಸಂಜಯ್ ರಾವತ್ ನೀಡಿದ ಅದೊಂದು ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿತು. ಬಿಜೆಪಿ ಜೊತೆಗೆ ಮೈತ್ರಿಯಿಲ್ಲದೇ ನಾವು ಸರ್ಕಾರ ರಚಿಸುತ್ತೇವೆ ಎಂದು ಸಂಜಯ್ ರಾವತ್ ಹೇಳಿದರು. ಶರದ್ ಪವಾರ್ ಅನ್ನು ಸಂಜಯ್ ರಾವತ್ ಭೇಟಿಯಾಗಿರುವ ಬಗ್ಗೆ ಎನ್ಸಿಪಿ ಮತ್ತು ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಹೇಳಿಕೆಗಳನ್ನು ನೀಡುವುದಕ್ಕೆ ಶುರು ಮಾಡಿದರು.
ನವೆಂಬರ್ 8, 2019:
* ಶಿವಸೇನೆ-ಬಿಜೆಪಿಯ ಮೈತ್ರಿಕೂಟ ಅಂದು ಮುರಿದು ಬಿತ್ತು. ಬಿಜೆಪಿ ಮತ್ತು ಶಿವಸೇನೆ ಸರ್ಕಾರ ರಚನೆಯ ಕುರಿತು ಒಪ್ಪಂದ ಮಾಡಿಕೊಳ್ಳಲು ವಿಫಲವಾದ ಕಾರಣ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಗೆ ರಾಜೀನಾಮೆ ಸಲ್ಲಿಸಿದರು. ಆಗಿನ ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 9ರಂದು ಕೊನೆಗೊಳ್ಳಬೇಕಿತ್ತು. ಆದರೆ ಶಿವಸೇನೆ ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆ ಬಿಜೆಪಿ ಮತ್ತು ಶಿವಸೇನೆ ಪರಸ್ಪರ ಆರೋಪ ಹೊರಿಸುವುದಕ್ಕೆ ಶುರು ಮಾಡಿದವು.
ಮಹಾರಾಷ್ಟ್ರದಲ್ಲಿ ಸರ್ಕಾರದ ಮುಂದಿನ ಉಸ್ತುವಾರಿ ನೇಮಿಸುವ ಅಥವಾ ರಾಷ್ಟ್ರಪತಿ ಆಳ್ವಿಕೆ ಹೇರುವ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಆಯ್ಕೆಗಳನ್ನು ರಾಜ್ಯಪಾಲರು ಪರಿಶೀಲಿಸುವುದಕ್ಕೆ ಶುರು ಮಾಡಿದರು.
ನವೆಂಬರ್ 9, 2019:
* ರಾಜ್ಯದ ಹೊಸದಾಗಿ ಚುನಾಯಿತವಾದ 14 ನೇ ವಿಧಾನಸಭೆಯು "ಅಮಾನತುಗೊಳಿಸಿದ ಅನಿಮೇಷನ್" ಗೆ ಹೋಗುತ್ತದೆ. ಏಕೈಕ ಅತಿ ದೊಡ್ಡ ಪಕ್ಷವಾದ ಬಿಜೆಪಿಯ ಚುನಾಯಿತ ಸದಸ್ಯರ ನಾಯಕ ಮತ್ತು ಅದರ ಶಾಸಕಾಂಗ ನಾಯಕ ಶ್ರೀ ಫಡ್ನವಿಸ್ ಅವರು ಸರ್ಕಾರ ರಚಿಸುವ ಇಚ್ಛೆ ಮತ್ತು ಸಾಮರ್ಥ್ಯವನ್ನು ಸೂಚಿಸುವಂತೆ ರಾಜ್ಯಪಾಲ ಕೊಶ್ಯಾರಿ ಕೇಳುತ್ತಾರೆ.
ನವೆಂಬರ್ 10, 2019:
* ಬಿಜೆಪಿಯು ಆಹ್ವಾನವನ್ನು ತಿರಸ್ಕರಿಸಿದ ನಂತರ, ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಎರಡನೇ ಅತಿ ದೊಡ್ಡ ಪಕ್ಷವಾದ ಶಿವಸೇನೆಯನ್ನು ಸರ್ಕಾರ ರಚಿಸುವಂತೆ ಆಹ್ವಾನ ನೀಡಿದರು.
ನವೆಂಬರ್ 11, 2019:
* ಶಿವಸೇನೆಯು ಅವಧಿ ವಿಸ್ತರಿಸುವಂತೆ ಕೋರಿತು, ಆದರೆ ಇದನ್ನು ತಿರಸ್ಕರಿಸಿದ ರಾಜ್ಯಪಾಲರು ಮೂರನೇ ಅತಿದೊಡ್ಡ ಪಕ್ಷ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದರು.
ನವೆಂಬರ್ 12, 2019:
* ಮಹಾರಾಷ್ಟ್ರದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಶಿವಸೇನೆ ಮತ್ತು ಕಾಂಗ್ರೆಸ್ ಸರ್ಕಾರ ರಚಿಸುವ ಮಾರ್ಗಗಳ ಕುರಿತು ಚರ್ಚಿಸುತ್ತಿರುವಾಗಲೇ, ರಾಜ್ಯಪಾಲ ಕೊಶ್ಯಾರಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದರು. ಇದರ ಮಧ್ಯೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಸರ್ಕಾರ ರಚನೆಯ ಮಾರ್ಗಗಳನ್ನು ಹುಡುಕುವ ಕೆಲಸವನ್ನು ಮುಂದುವರಿಸುವುದಾಗಿ ಹೇಳಿದೆ.
ಎನ್ಸಿಪಿ ಮತ್ತು ಕಾಂಗ್ರೆಸ್ನೊಂದಿಗೆ ಮೈತ್ರಿ ಮಾತು
ನವೆಂಬರ್ 12-19, 2019:
* ಶಿವಸೇನೆ ಮತ್ತು ಬಿಜೆಪಿ ನಡುವೆ ವಾಗ್ಯುದ್ಧ ಮುಂದುವರೆಯಿತು. ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ನೊಂದಿಗೆ ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಇದರ ಮಧ್ಯೆ ಶಿವಸೇನೆಯ ಬೇಡಿಕೆಗಳು ಸ್ವೀಕಾರಾರ್ಹವಲ್ಲ. ಆದರೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆಯನ್ನು ಬಿಜೆಪಿಯು ಯಾವುದೇ ಕಾರಣಕ್ಕೂ ಬಯಸುವುದಿಲ್ಲ ಎಂದು ಅಮಿತ್ ಶಾ ಹೇಳಿಕೆ ನೀಡಿದರು. ಇನ್ನೊಂದು ಕಡೆಯಲ್ಲಿ ಬಿಜೆಪಿಯು ವಿಶ್ವಾಸದ್ರೋಹ ಎಸಗಿದೆ ಎಂದು ಶಿವಸೇನೆ ದೂಶಿಸುವುದಕ್ಕೆ ಶುರು ಮಾಡಿತು. ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ನಡುವಿನ ಮಾತುಕತೆಯ ನಂತರ ಸೀಟು ಹಂಚಿಕೆಯ ಬಗ್ಗೆ ಉನ್ನತ ನಾಯಕರು ಸಭೆ ನಡೆಸಲು ಪ್ರಾರಂಭಿಸಿದರು.
ನವೆಂಬರ್ 20, 2019:
* ಸರ್ಕಾರ ರಚನೆಯ ಕುರಿತು ತೀವ್ರ ಚರ್ಚೆಗಳ ನಡುವೆ "ರಾಜ್ಯದಲ್ಲಿ ರೈತರ ಸಂಕಷ್ಟದ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅನ್ನು ಶರದ್ ಪವಾರ್ ಭೇಟಿ ಮಾಡುವ ಮೂಲಕ ಅಚ್ಚರಿ ಮೂಡಿಸಿದರು. ಈ ಸಭೆಯು ಎನ್ಸಿಪಿ-ಸೇನಾ-ಕಾಂಗ್ರೆಸ್ ಒಗ್ಗೂಡಿಸಿ ಮೂರು ಪಕ್ಷಗಳು ಸರ್ಕಾರ ರಚಿಸುವುದು ನಿಜವೇ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿತು.
ನವೆಂಬರ್ 21, 2019:
* ಮುಂಬೈನಲ್ಲಿ ಸರ್ಕಾರ ರಚನೆಯ ಬಗ್ಗೆ ತಮ್ಮ ನಿವಾಸದಲ್ಲಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಜೊತೆಗೆ ನವೆಂಬರ್ 21ರ ತಡರಾತ್ರಿ ಅಂತಿಮ ಚರ್ಚೆ ನಡೆಸಿದರು. ತದನಂತರದಲ್ಲಿ 'ಮಹಾ ವಿಕಾಸ್ ಅಘಾಡಿ' ಹೆಸರಿನೊಂದಿಗೆ ಹೊಸ ಮೈತ್ರಿಕೂಟ ರಚನೆಯು ಪಕ್ಕಾ ಆಯಿತು.
ಮಹಾರಾಷ್ಟ್ರಕ್ಕೆ ಉದ್ಧವ್ ಠಾಕ್ರೆ ಸಿಎಂ ಎಂದು ಘೋಷಣೆ
ನವೆಂಬರ್ 22, 2019:
* ಅಂದು ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ಉದ್ಧವ್ ಠಾಕ್ರೆ ಅನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವುದರೊಂದಿಗೆ ಮೈತ್ರಿಯನ್ನು ಔಪಚಾರಿಕವಾಗಿ ಘೋಷಿಸಲಾಯಿತು.
ನವೆಂಬರ್ 23, 2019:
* ಕೇಂದ್ರವು ವ್ಯವಹಾರ ನಿಯಮಗಳ 1961ರ ನಿಯಮ 12ರ ಪ್ರಕಾರ, ಅಗತ್ಯವಿದ್ದರೆ ಸ್ಥಾಪಿಸಲಾದ ನಿಯಮಗಳಿಂದ ನಿರ್ಗಮಿಸಲು ಪ್ರಧಾನಮಂತ್ರಿಗೆ ಅಧಿಕಾರ ನೀಡಲಾಗುತ್ತದೆ. ಕೇಂದ್ರ ಸಚಿವ ಸಂಪುಟದ ಪೂರ್ವಾನುಮತಿ ಇಲ್ಲದೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಘೋಷಣೆಯನ್ನು ಹಿಂಪಡೆಯಲು ಬಳಸಲಾಗುತ್ತದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಶನಿವಾರ ಮುಂಜಾನೆ ಹೊರಡಿಸಿದ ಅಧಿಸೂಚನೆಯ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಘೋಷಣೆಯನ್ನು ಹಿಂಪಡೆದರು.
ನವೆಂಬರ್ 23, 2019:
* ರಾಜ್ಯ ವಿಧಾನಸಭೆ ಚುನಾವಣಾ ಫಲಿತಾಂಶದ ನಂತರ ಮಹಾರಾಷ್ಟ್ರದಲ್ಲಿ ಪ್ರಾರಂಭವಾದ ರಾಜಕೀಯ ಬಿಕ್ಕಟ್ಟು ನವೆಂಬರ್ 23ರ ಬೆಳಿಗ್ಗೆ ಮತ್ತೊಂದು ತಿರುವು ಪಡೆದುಕೊಂಡಿತು. ಎನ್ಸಿಪಿಯ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಲು ಪಕ್ಷದ ಶಾಸಕರ ಬಣದಿಂದ ಬೇರ್ಪಟ್ಟ ನಂತರ ಬಿಜೆಪಿಯ ದೇವೇಂದ್ರ ಫಡ್ನವೀಸ್ ಸಿಎಂ ಆಗಿ ಮರಳುವ ಪ್ರಯತ್ನ ಮಾಡಿದರು. ಆದರೆ ಠಾಕ್ರೆ ನೇತೃತ್ವದ ಸರ್ಕಾರವನ್ನು ರಚಿಸಲು ಮಕಾ ವಿಕಾಸ ಅಘಾಡಿ ಸಕಲ ಸಿದ್ಧತೆ ಮಾಡಿಕೊಂಡಿದ್ದರಿಂದ ಈ ಕ್ರಮವು ಆಶ್ಚರ್ಯಕರ ಎನಿಸುವಂತಿತ್ತು.
ನವೆಂಬರ್ 23, 2019:
* ಎನ್ಸಿಪಿ-ಕಾಂಗ್ರೆಸ್-ಶಿವಸೇನೆ ಸಂಯೋಜನೆಯು ಬಿಜೆಪಿಯ "ಅಕ್ರಮ ಅಧಿಕಾರದ" ವಿರುದ್ಧ ಜಂಟಿ ಅರ್ಜಿಯೊಂದಿಗೆ ಸುಪ್ರೀಂ ಕೋರ್ಟ್ಗೆ ಮೊರೆ ಹೋಯಿತು. ಕಳೆದ ನವೆಂಬರ್ 24ರಂದು ಬೆಳಿಗ್ಗೆ 11.30ಕ್ಕೆ ನ್ಯಾಯಾಲಯವು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಿತು.
ನವೆಂಬರ್ 24, 2019:
* ಸುಪ್ರೀಂ ಕೋರ್ಟ್ ಈ ವಿಷಯದ ವಿಚಾರಣೆಯನ್ನು ಪ್ರಾರಂಭಿಸಿತು. ಎನ್ಸಿಪಿ-ಕಾಂಗ್ರೆಸ್-ಶಿವಸೇನೆ ಮೈತ್ರಿಕೂಟವು 165 ಶಾಸಕರ ಬೆಂಬಲವನ್ನು ಪಡೆದುಕೊಳ್ಳುವ ಮೂಲಕ ಸರ್ಕಾರ ರಚನೆಗೆ ಸಿದ್ಧವಾಯಿತು. ಇತ್ತ ಬಿಜೆಪಿ ಕೂಡ ಫಡ್ನವಿಸ್-ಅಜಿತ್ ಪವಾರ್ ಸರ್ಕಾರವನ್ನು ಬೆಂಬಲಿಸುವ 170 ಶಾಸಕರನ್ನು ಹೊಂದಿದೆ ಎಂದು ಹೇಳಿತು.
ಮಹಾರಾಷ್ಟ್ರದಲ್ಲಿ ಶಕ್ತಿ ಪ್ರದರ್ಶಿಸಿದ ಮೈತ್ರಿಕೂಟ
ನವೆಂಬರ್ 25, 2019:
* ಒಗ್ಗಟ್ಟಿನ ಶಕ್ತಿ ಪ್ರದರ್ಶನದಲ್ಲಿ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ನವೆಂಬರ್ 25ರಂದು ಸಂಜೆ ಮುಂಬೈ ಪಂಚತಾರಾ ಹೋಟೆಲ್ನಲ್ಲಿ 162 ಶಾಸಕರನ್ನು ಮೆರವಣಿಗೆ ಮಾಡಿತು. 162 ಶಾಸಕರು ಮೈತ್ರಿಗೆ ನಿಷ್ಠರಾಗಿರಲು ಪ್ರಮಾಣ ವಚನ ಸ್ವೀಕರಿಸಿದರು.
ನವೆಂಬರ್ 26, 2019:
* ಎರಡು ದಿನಗಳ ಕಾಲ ಎರಡೂ ಕಡೆಯ ವಿಚಾರಣೆ ನಂತರ, ಸುಪ್ರೀಂ ಕೋರ್ಟ್ ಮಹಾರಾಷ್ಟ್ರದಲ್ಲಿ ನವೆಂಬರ್ 27ರಂದು ಸಂಜೆ 5.00 ಗಂಟೆಗೆ ವಿಶ್ವಾಸಮತಯಾಚನೆ ನಡೆಸುವಂತೆ ಆದೇಶಿಸಿತು. .
ಸುಪ್ರೀಂ ಕೋರ್ಟ್ ಆದೇಶದ ಕೆಲವು ಗಂಟೆಗಳ ನಂತರ, ಪ್ರಮಾಣವಚನ ಸ್ವೀಕರಿಸಿದ ಕೇವಲ 80 ಗಂಟೆಗಳಲ್ಲಿ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಿದರು. ವೈಯಕ್ತಿಕ ಕಾರಣಗಳನ್ನು" ಉಲ್ಲೇಖಿಸಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ರಾಜೀನಾಮೆ ಸಲ್ಲಿಸುವುದು ಅನಿವಾರ್ಯವಾಯಿತು.
ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಉದ್ಧವ್ ಠಾಕ್ರೆ
ನವೆಂಬರ್ 27, 2019:
* ಅಸಾಧಾರಣ ರಾಜಕೀಯ ಬೆಳವಣಿಗೆಗಳ ನಂತರ, ಹಂಗಾಮಿ ಸ್ಪೀಕರ್ ಕಾಳಿದಾಸ್ ಕೊಲಂಬ್ಕರ್, ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಹೊಸದಾಗಿ ಚುನಾಯಿತ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ನವೆಂಬರ್ 28, 2019:
* ಮಹಾರಾಷ್ಟ್ರದ 18ನೇ ಮುಖ್ಯಮಂತ್ರಿಯಾಗಿ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕರಿಸಿದರು, ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆಗಿನ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ನೇತೃತ್ವ ವಹಿಸಿಕೊಂಡರು.
ಮಹಾ ಮೈತ್ರಿಕೂಟದಲ್ಲಿ ಬಿರುಕು ಹುಟ್ಟಿದ್ದು ಹೇಗೆ?
ಜೂನ್ 10, 2022:
* ಕಾಂಗ್ರೆಸ್, ಎನ್ಸಿಪಿಯೊಂದಿಗೆ ಶಿವಸೇನೆಯ ಮೈತ್ರಿ ಅಸಂಭವವಾಗಿದ್ದರೂ ಸಹ ಮಹಾ ವಿಕಾಸ ಅಘಾಡಿ ಸರ್ಕಾರವು ಇಲ್ಲಿಯವರೆಗೆ ಸುಗಮವಾಗಿ ಸಾಗಿತ್ತು. ಆದರೆ, ರಾಜ್ಯಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಿಂದ ಬಿಜೆಪಿ ಹೆಚ್ಚುವರಿ ಸ್ಥಾನವನ್ನು ಗೆದ್ದುಕೊಂಡಿತು, ಇದು ಆಡಳಿತಾರೂಢ ಮೈತ್ರಿಕೂಟದಲ್ಲಿ ದೋಷಾರೋಪಕ್ಕೆ ಕಾರಣವಾಯಿತು.
ಜೂನ್ 20, 2022 -
* ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ತೀವ್ರ ಜಟಾಪಟಿ ನಡುವೆಯೇ 10 ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ಬಿಜೆಪಿಯು ಗೆದ್ದುಕೊಂಡಿತು. ಆ ಮೂಲಕ ಬಿಜೆಪಿಯ ಪರವಾಗಿ 12 ಶಿವಸೇನೆ ಶಾಸಕರು ಅಡ್ಡ ಮತದಾನ ಮಾಡಿದ್ದರು.
ಜೂನ್ 21, 2022:
* ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಶಿವಸೇನೆಯ ವಿರುದ್ಧ ಬಂಡಾಯ ಬಾವುಟ ಹಾರಿಸಿದ ಏಕನಾಥ್ ಶಿಂಧೆ 11 ಬೆಂಬಲಿತ ಶಾಸಕರೊಂದಿಗೆ ಮುಂಬೈನಿಂದ ಸೂರತ್ನ ಲೇ ಮೆರಿಡಿಯನ್ ಹೋಟೆಲ್ನಲ್ಲಿ ರಾಜಕೀಯ ಆಟ ಶುರುವಿಟ್ಟುಕೊಂಡರು. ದಿಢೀರ್ ರಾಜಕೀಯ ಬೆಳವಣಿಗೆಯ ಮಧ್ಯೆ 40ಕ್ಕೂ ಹೆಚ್ಚು ಶಿವಸೇನೆ ಶಾಸಕರು ಏಕನಾಥ್ ಶಿಂಧೆ ಬಣವನ್ನು ಸೇರಿಕೊಂಡರು.
ಜೂನ್ 28, 2022:
* ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದೆಹಲಿಯಿಂದ ಮುಂಬೈಗೆ ವಾಪಸ್ ಆಗುತ್ತಿದ್ದಂತೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಯನ್ನು ಭೇಟಿ ಮಾಡಿದರು. ಮಹಾ ವಿಕಾಸ ಅಘಾಡಿ ಸರ್ಕಾರವು ಬಹುಮತ ಕಳೆದುಕೊಂಡಿದ್ದು, ವಿಶ್ವಾಸಮತಯಾಚನೆ ಸಾಬೀತುಪಡಿಸಲು ಆಹ್ವಾನ ನೀಡುವಂತೆ ಮನವಿ ಮಾಡಿಕೊಂಡರು. ಬಿಜೆಪಿಯ ಮನವಿಯ ಬೆನ್ನಲ್ಲೇ ಜೂನ್ 30ರ ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತಯಾತನೆ ನಡೆಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣಕ್ಕೆ ರಾಜ್ಯಪಾಲರು ಸೂಚನೆ ನೀಡಿದರು.
ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಉದ್ಧವ್ ಠಾಕ್ರೆ
ಜೂನ್ 29, 2022:
* ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಿಸಿದರು. ಗುರುವಾರವೇ ಬಹುಮತ ಸಾಬೀತುಪಡಿಸಬೇಕು ಎಂಬ ಸುಪ್ರೀಂಕೋರ್ಟ್ ಸೂಚನೆ ಬೆನ್ನಲ್ಲೇ ತಮ್ಮ ನಿರ್ಧಾರ ಪ್ರಕಟಿಸಿದರು. ಫೇಸ್ಬುಕ್ ಲೈವ್ನಲ್ಲಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಎರಡು ವರ್ಷಗಳ ತಮ್ಮ ಆಡಳಿತವು ತೃಪ್ತಿ ತಂದಿದೆ ಎಂದರು. ಶರದ್ ಪವಾರ್ ಮತ್ತು ಸೋನಿಯಾ ಗಾಂಧಿಗೆ ಧನ್ಯವಾದ ತಿಳಿಸಿದರು.
ಮುಖ್ಯಮಂತ್ರಿ ಸ್ಥಾನದ ಜೊತೆಗೆ ತಮ್ಮ ವಿಧಾನ ಪರಿಷತ್ ಸ್ಥಾನಕ್ಕೂ ಉದ್ಧವ್ ಠಾಕ್ರೆ ರಾಜೀನಾಮೆಯನ್ನು ಘೋಷಿಸಿದ್ದಾರೆ. "ನಾನು ಅನಿರೀಕ್ಷಿತ ರೀತಿಯಲ್ಲಿ (ಅಧಿಕಾರಕ್ಕೆ) ಬಂದಿದ್ದೇನೆ ಮತ್ತು ನಾನು ಅದೇ ರೀತಿಯಲ್ಲಿ ಹೊರಡುತ್ತಿದ್ದೇನೆ. ನಾನು ಶಾಶ್ವತವಾಗಿ ಹೋಗುವುದಿಲ್ಲ, ನಾನು ಇಲ್ಲೇ ಇರುತ್ತೇನೆ ಮತ್ತು ಮತ್ತೊಮ್ಮೆ ಶಿವಸೇನಾ ಭವನದಲ್ಲಿ ಕುಳಿತುಕೊಳ್ಳುತ್ತೇನೆ. ನನ್ನ ಎಲ್ಲಾ ಜನರನ್ನು ನಾನು ಒಟ್ಟುಗೂಡಿಸುವೆನು. ನಾನು ಸಿಎಂ ಮತ್ತು ಎಂಎಲ್ಸಿ ಸ್ಥಾನಕ್ಕೆ ಈಗ ರಾಜೀನಾಮೆ ನೀಡುತ್ತಿದ್ದೇನೆ," ಎಂದು ಉದ್ಧವ್ ಠಾಕ್ರೆ ತಮ್ಮ ಭಾವನಾತ್ಮಕ ಭಾಷಣದಲ್ಲಿ ಹೇಳಿದರು.