ರಾತ್ರಿಯಿಂದ ಬೆಳಗಾಗುವುದರಲ್ಲಿ ಏನೇನಾಯ್ತು?: ಮಹಾರಾಷ್ಟ್ರ 'ಕ್ಷಿಪ್ರ ಕ್ರಾಂತಿ'ಯ ಟೈಮ್ಲೈನ್
ಮುಂಬೈ, ನವೆಂಬರ್ 23: ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಮಾತುಕತೆಗಳು ಬಹುತೇಕ ಅಂತಿಮಗೊಂಡಿದ್ದು, ಶಿವಸೇನಾದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಲಿದ್ದಾರೆ. ಎನ್ಸಿಪಿ ಮತ್ತು ಕಾಂಗ್ರೆಸ್ನ ತಲಾ ಒಬ್ಬರು ಉಪ ಮುಖ್ಯಮಂತ್ರಿ ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು.
ಶುಕ್ರವಾರದ ಸಂಜೆಯೂ ಎನ್ಸಿಪಿ ಮತ್ತು ಶಿವಸೇನಾ ನಾಯಕರ ನಡುವೆ ಮಾತುಕತೆ ನಡೆದಿತ್ತು. ಎನ್ಸಿಪಿ ಮತ್ತು ಬಿಜೆಪಿ ಸೇರಿಕೊಂಡು ಸರ್ಕಾರ ನಡೆಸಲು ಅವಕಾಶವಿದ್ದರೂ ಅಧಿಕೃತವಾಗಿ ಈ ಎರಡೂ ಪಕ್ಷಗಳ ನಡುವೆ ಯಾವುದೇ ಮಾತುಕತೆ ನಡೆದಿರಲಿಲ್ಲ. ಬಿಜೆಪಿ ತಾನು ಸರ್ಕಾರ ರಚಿಸುವುದಿಲ್ಲ ಎಂದೇ ಹೇಳಿತ್ತು.
ಆದರೆ, ಈ ಎಲ್ಲ ಬೆಳವಣಿಗೆಗಳ ನಡುವೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಅದರ ಬಳಿಕವೂ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮಾತುಕತೆ ಮುಂದುವರಿದಿತ್ತು. ವಿಶೇಷವೆಂದರೆ ಮಹಾರಾಷ್ಟ್ರದಲ್ಲಿ ಈ ಬೆಳವಣಿಗೆಗಳು ನಡೆಯುವ ಕೆಲವು ಗಂಟೆಗಳ ಮುನ್ನವಷ್ಟೇ ಅಜಿತ್ ಪವಾರ್, ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಸರ್ಕಾರ ರಚನೆಯ ಕುರಿತು ನಾಯಕರೊಂದಿಗೆ ನಡೆದ ಸಮಾಲೋಚನೆಯ ಫೋಟೊಗಳನ್ನು ಹಂಚಿಕೊಂಡಿದ್ದರು.

ಗುಟ್ಟಾಗಿಯೇ ಉಳಿದಿದ್ದ ಬೆಳವಣಿಗೆ
ಅನಿರೀಕ್ಷಿತ ಬೆಳವಣಿಗೆಯಲ್ಲಿ ಎನ್ಸಿಪಿಯ ಕೆಲವು ಶಾಸಕರು ಅಜಿತ್ ಪವಾರ್ ನೇತೃತ್ವದಲ್ಲಿ ಬಿಜೆಪಿಗೆ ಬೆಂಬಲ ನೀಡಿ ಸರ್ಕಾರ ರಚಿಸಿದ್ದಾರೆ. ಅಜಿತ್ ಪವಾರ್ ಮತ್ತು ಬಿಜೆಪಿ ನಡುವೆ ರಾತ್ರಿ ವೇಳೆ ಮಾತುಕತೆ ನಡೆದಿದೆ. ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದ ಮಾಹಿತಿ ದೊರಕುವವರೆಗೂ ಮಾಧ್ಯಮಗಳಿಗೂ ಈ ಬೆಳವಣಿಗೆಯ ಸುಳಿವು ಸಿಕ್ಕಿರಲಿಲ್ಲ ಎಂದರೆ ಇಡೀ ಚಟುವಟಿಕೆ ಬಹಳ ರಹಸ್ಯವಾಗಿ ನಡೆದಿದೆ ಮತ್ತು ಇದು ಹಠಾತ್ತಾಗಿ ನಡೆದಿರುವ ಬೆಳವಣಿಗೆಯಲ್ಲ ಎಂಬುದು ಅರಿವಾಗುತ್ತದೆ.

ಬೆಳಗಾಗುವುದರಲ್ಲಿ ಸಕಲ ಸಿದ್ಧತೆ
ತಡರಾತ್ರಿ ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವಿಸ್ ನಡುವೆ ಮಾತುಕತೆ ನಡೆಯುತ್ತಿದ್ದಂತೆಯೇ ರಾಜ್ಯಪಾಲರಿಗೆ ಮಾಹಿತಿ ರವಾನೆಯಾಗುತ್ತದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಾಷ್ಟ್ರಪತಿ ಆಳ್ವಿಕೆಯನ್ನು ಅಂತ್ಯಗೊಳಿಸುವ ಪ್ರಕ್ರಿಯೆಗಳನ್ನು ತ್ವರಿತವಾಗಿ ಮುಗಿಸಿ, ಪ್ರಮಾಣವಚನ ಸ್ವೀಕಾರಕ್ಕೆ ಸಕಲ ಸಿದ್ಧತೆ ನಡೆಸುವಂತೆ ಸೂಚಿಸಲಾಗುತ್ತದೆ. ಶನಿವಾರ ಬೆಳಿಗ್ಗೆ 7.30ರ ವೇಳೆಗಾಗಲೇ ಪ್ರಮಾಣವಚನ ಸ್ವೀಕಾರಕ್ಕೆ ವೇದಿಕೆ ಸಿದ್ಧವಾಗಿರುತ್ತದೆ.
ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನವರೆಗೆ ನಡೆದ ಘಟನಾವಳಿಯ ಮಾಹಿತಿ ಇಲ್ಲಿದೆ.

ಶುಕ್ರವಾರ ರಾತ್ರಿಯ ಬೆಳವಣಿಗೆ
11.45 pm: ಸರ್ಕಾರ ರಚನೆಗೆ ಅಜಿತ್ ಪವಾರ್- ಬಿಜೆಪಿ ಒಪ್ಪಂದ ಅಂತಿಮ
11.55 pm: ಪಕ್ಷದ ಮುಖಂಡರೊಂದಿಗೆ ಫಡ್ನವಿಸ್ ಮಾತುಕತೆ. ಸೇನಾ-ಎನ್ಸಿಪಿ-ಕಾಂಗ್ರೆಸ್ನ ಯಾರೊಬ್ಬರಿಗೂ ತಿಳಿಯುವ ಮೊದಲೇ ಪ್ರಮಾಣವಚನ ಸ್ವೀಕರಿಸಲು ಮನವಿ.

ನಸುಕಿನಿಂದ ಬೆಳಗಿನ ಜಾವದವರೆಗೆ
12.30am: ದೆಹಲಿ ಪ್ರಯಾಣವನ್ನು ರದ್ದುಗೊಳಿಸಿದ ರಾಜ್ಯಪಾಲ
2.10am: ಬೆಳಿಗ್ಗೆ 5.47ಕ್ಕೆ ರಾಷ್ಟ್ರಪತಿ ಆಳ್ವಿಕೆ ವಾಪಸಾತಿ ಆದೇಶ ಸಲ್ಲಿಸಲು ಮತ್ತು 6.30ಕ್ಕೆ ಪ್ರಮಾಣವಚನ ಸಮಾರಂಭಕ್ಕೆ ಸಿದ್ಧತೆ ನಡೆಸಲು ಸೂಚನೆ.
2.30am: ಎರಡು ಗಂಟೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂತೆಗೆದ ಕಡತ ಸಲ್ಲಿಸುವುದಾಗಿ ಕಾರ್ಯದರ್ಶಿ ಮಾಹಿತಿ. 7.30ಕ್ಕೆ ಪ್ರಮಾಣವಚನ ಸ್ವೀಕರಿಸಲು ಸಲಹೆ
5.30am: ರಾಜಭವನಕ್ಕೆ ಫಡ್ನವಿಸ್, ಅಜಿತ್ ಪವಾರ್ ಆಗಮನ
5.47am: ರಾಷ್ಟ್ರಪತಿ ಆಳ್ವಿಕೆ ವಾಪಸ್. ಆದರೆ ಅದನ್ನು ಪ್ರಕಟಿಸಿದ್ದು ಬೆಳಿಗ್ಗೆ 9ಕ್ಕೆ.
7.50am: ರಾಜ್ಯಪಾಲ ಬಿ.ಎಸ್. ಕೋಶ್ಯಾರಿ ಅವರಿಂದ ಪ್ರಮಾಣವಚನ ಬೋಧನೆ
8.10am: ಫಡ್ನವಿಸ್ ಮತ್ತು ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದ ಸುದ್ದಿ ಬಹಿರಂಗ
8.40am: ಹೊಸ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಅಭಿನಂದನೆ












Click it and Unblock the Notifications