ಇದು ನನ್ನ ಪ್ರೀತಿಯ ಕಥೆ, ಆದರೆ ಯಾರಿಗೂ ಆದರ್ಶವಲ್ಲ...
ಇದು ನನ್ನ ಜೀವನದ ಘಟನೆ. ನಿಮಗೆ- ಅದರಲ್ಲೂ ಪ್ರೀತಿ ಮಾಡುತ್ತಿರುವವರಿಗೆ, ಇನ್ನೇನು ನಿಮ್ಮ ಪ್ರೀತಿ ಹೇಳಿಕೊಳ್ಳಬೇಕು ಅಂತ ಇರುವವರಿಗೆ ಅಂತಲೇ ಹೇಳಿಕೊಳ್ತಿದೀನಿ. ಮನಸಿನಲ್ಲಿರುವ ವಿಚಾರ ಹೀಗೆ ಹೇಳಿಕೊಂಡಾದರೂ ಹಗುರಾಗುವ ಉದ್ದೇಶ ನನ್ನದು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ನನ್ನ ಹೆಸರು ಶ್ರೇಯಸ್. ಡಿಗ್ರಿ ಕೊನೆ ವರ್ಷದಲ್ಲಿರುವಾಗ 'ಅವಳು' ಇಷ್ಟವಾದಳು. ನಮ್ಮ ಕ್ಲಾಸಿನಲ್ಲಿ ಅಷ್ಟೇನೂ ಚೆನ್ನಾಗಿ ಓದದ, ತುಂಬ ಶ್ರದ್ಧೆಯಿಂದ ನೋಟ್ಸ್ ಬರೆದುಕೊಳ್ಳುತ್ತಿದ್ದ, ಕ್ಲಾಸ್ ನಲ್ಲಿ ನಡೆಯುತ್ತಿದ್ದ ಟೆಸ್ಟ್ ಗಳಲ್ಲಿ ಒಳ್ಳೆ ಮಾರ್ಕ್ಸ್ ಬಾರದ, ಡಿಗ್ರಿಯ ಮೊದಲೆರಡು ವರ್ಷ ಒಂದೆರಡು ಸಬ್ಜೆಕ್ಟ್ ಗಳಲ್ಲಿ ಫೇಲಾಗಿದ್ದ ಅವಳ ಬಗ್ಗೆ ಒಂಥರಾ ತಮಾಷೆ ಅನ್ನಿಸುತ್ತಿತ್ತು ನನಗೆ.
ಪ್ರೇಯಸಿ ಗಮನ ಸೆಳೆಯಲು ರಸ್ತೆ ಮೇಲೆ ಪ್ರೇಮ ಸಂದೇಶ!
ಅದ್ಯಾವ ಕ್ಷಣದಲ್ಲೋ ಅವಳ ಬಗ್ಗೆ ಪ್ರೀತಿ ಇದೆಯೇನೋ ಅಂದುಕೊಂಡು ಹೇಳಿಬಿಟ್ಟೆ. ಮನಸಿನಲ್ಲಿ ಇದ್ದಿದ್ದೇನೋ ಹೇಳಾಯಿತು. ಅದಾಗಿ ಐದು ದಿನ ಕಾಲೇಜಿಗೇ ಹೋಗಿರಲಿಲ್ಲ. ಏಕೆಂದರೆ ಎಂಥದೋ ಭಯ. ಅವಳನ್ನು ಎದುರಿಸಲು ಸಾಧ್ಯವಿಲ್ಲವೇನೋ ಎಂಬ ಅಳುಕು. ಅಂತೂ ಧೈರ್ಯ ಮಾಡಿ ಮತ್ತೆ ಕಾಲೇಜಿಗೆ ಹೋದೆ.
ಅವಳ ಜತೆ ಕೆಲ ದಿನ ನಾನು ಮಾತನಾಡ್ತಾ ಇರಲಿಲ್ಲ. ಕ್ರಮೇಣ ಗೊತ್ತಾಗಿದ್ದು ಏನೆಂದರೆ, ಅವಳಿಗೂ ನಾನಂದರೆ ಇಷ್ಟ. ಅಂತೂ ಪ್ರೀತಿ ಎರಡೂ ಕಡೆ ಒಪ್ಪಿಗೆ ಆಯ್ತು. ಸರಿಯಾಗಿ ಅದೇ ಸಮಯಕ್ಕೆ ಡಿಗ್ರಿ ಫೈನಲ್ ಇಯರ್ ಪರೀಕ್ಷೆಗಳು. ಆ ವರೆಗೆ ಒಂದಿಷ್ಟು ಓದಿಕೊಂಡಿದ್ದೆ ಆದ್ದರಿಂದ ಹೇಗೋ ಫಸ್ಟ್ ಕ್ಲಾಸ್ ನಲ್ಲಿ ಪಾಸಾದೆ. ಆದರೆ ಅವಳು ಫೇಲಾಗಿದ್ದಳು.
ಆ ವರ್ಷ ಕಾಲೇಜಿನಲ್ಲಿ, ಅಲ್ಲಿ- ಇಲ್ಲಿ ಹೇಗೋ ಭೇಟಿ ಆಗ್ತಿದ್ದಿವಿ. ಆದರೆ ಅವಳನ್ನು ಮುಟ್ಟುವುದಕ್ಕೋ ಅಥವಾ ಕೈ-ಕೈ ಹಿಡಿಯುವುದು ನಡೆಯುವುದಕ್ಕೋ ಭಯ ಆಗ್ತಾ ಇತ್ತು.
ಹುಡುಗಿ ನಿನ್ನ ನೆನಪಲ್ಲಿ ಇಷ್ಟಿಷ್ಟೇ ಸವೆಯುತ್ತಿರುವ...
ಅವಳು ನನಗಿಂತ ವಯಸ್ಸಿನಲ್ಲಿ ದೊಡ್ಡವಳು. ತುಂಬ ದೊಡ್ಡವಳಲ್ಲದಿದ್ದರೂ ಕೆಲ ದಿನಗಳು ನನಗಿಂತ ಹಿರಿಯಳು. ಜಾತಿ ಬೇರೆ ಬೇರೆ ಆಗಿತ್ತು. ಒಂಚೂರು ಮುಂದುವರಿದರೆ ನಮ್ಮ ಮನೆಯಲ್ಲಿ ಒಪ್ತಾರಾ? ಅಪ್ಪ- ಅಮ್ಮನಿಗೆ ನಾನು ಒಬ್ಬನೇ ಮಗ. ಅವರು ಸಂಪ್ರದಾಯಸ್ಥರು ಎಂಬ ಅಳುಕು ನನ್ನಲ್ಲಿ.
ಅವಳ ಅಕ್ಕ ಅದಾಗಲೇ ಅಂತರ್ಜಾತಿ ಮದುವೆ ಆಗಿದ್ದರು. ಇವಳಿಗೆ ಮನೆಯಲ್ಲಿ ಪ್ರೀತಿಯಿಂದಲೇ ಎಚ್ಚರಿಕೆ ನೀಡಿದ್ದರು: ನೀನು ಲವ್ ಮ್ಯಾರೇಜ್ ಆದರೆ ನಮ್ಮನ್ನು ಮರೆತು ಬಿಡಬೇಕಾಗುತ್ತೆ ಅಂತ.
ಇಬ್ಬರೂ ಯಾವಾಗ ಭೇಟಿ ಆದರೂ ಸ್ವಲ್ಪ ಹೊತ್ತು ಮಾತನಾಡಿ, ಇದು ಆಗುವ ಮಾತಲ್ಲ. ಮುಂದಿನ ಸಲ ಸಿಗೋದು ಬೇಡ ಅಂದುಕೊಂಡೇ ಮನೆಗೆ ವಾಪಸ್ ಆಗ್ತಿದ್ದಿವಿ. ಆದರೆ ಒಂದೆರಡು ತಿಂಗಳಲ್ಲಿ ಯಾವಾಗಲೋ ಮತ್ತೆ ಭೇಟಿ ಆಗ್ತಿದ್ದಿವಿ. ಹೀಗೆ ಒಂದೆರಡು ವರ್ಷ ಕಳೆಯುವಷ್ಟರಲ್ಲಿ ಅವಳಿಗೆ ಮದುವೆ ಫಿಕ್ಸ್ ಆಯಿತು. ಅಷ್ಟೇ ಬೇಗ ಮದುವೆಯೂ ಆಗಿಹೋಯಿತು.
ಆಗ ನನಗೆ ಆದ ಹಿಂಸೆ, ಬೇಸರದಿಂದ ಚೇತರಿಸಿಕೊಳ್ಳುವುದಕ್ಕೆ ಐದು ವರ್ಷ ಬೇಕಾಯಿತು. ಆ ಸಮಯದಲ್ಲಿ ಬೇಸರ ಕಳೆಯುವುದಕ್ಕೆ ಅಂತ ತುಂಬ ಸಾಹಿತ್ಯ ಓದುತ್ತಿದ್ದೆ. ಎಸ್.ಎಲ್.ಭೈರಪ್ಪನವರ ದೂರಸರಿದವರು ಕಾದಂಬರಿ ಓದಿದಾಗಂತೂ ವಾರಗಟ್ಟಲೆ ಕಣ್ಣೀರು ಹಾಕಿದ್ದೆ. ಆ ನಂತರ ಅಪ್ಪ- ಅಮ್ಮನ ಜತೆ ಒಂದಷ್ಟು ಊರುಗಳನ್ನೂ ಸುತ್ತಾಡಿದೆ. ಕೊನೆಗೂ ಮನಸ್ಸು ಒಂದು ಹಂತಕ್ಕೆ ಬಂತು.
ನನಗೀಗ ಮದುವೆ ಆಗಿದೆ. ಮತ್ತು ಅವಳಿಗೆ ಮಕ್ಕಳಾಗಿ, ನೆಮ್ಮದಿಯಾಗಿದ್ದಾಳೆ. ನಾನು ನಿತ್ಯ ಓಡಾಡುವ ರಸ್ತೆಯಲ್ಲಿ ಅವಳ ಹೆಸರಿನಲ್ಲಿ ಒಂದು ಅಂಗಡಿ ಇದೆ. ಅವಳದು ಅಪರೂಪದ ಹೆಸರು. ಅದನ್ನು ನೋಡಿದಾಗ ಹದಿನೈದು- ಇಪ್ಪತ್ತು ಸೆಕೆಂಡ್ ಕಣ್ಣು ಮಂಜಾದಂತೆ ಆಗುತ್ತದೆ. ಆ ನಂತರ ಕೆಲ ನಿಮಿಷ ಮತ್ತದೇ ಹಳೇ ನೆನಪುಗಳು.
ಈಗ ಯಾರಾದರೂ ಪ್ರೇಮಿಗಳನ್ನು ನೋಡಿದಾಗ ಅವರೆದುರು ನನ್ನ ಬಗ್ಗೆ ಹೇಳಿಕೊಳ್ಳೋಣ ಅನಿಸುತ್ತದೆ. ಹಾಗೆಲ್ಲ ಪರಿಚಯವೇ ಇಲ್ಲದವರ ಎದುರು ಹೇಳಿಕೊಳ್ಳುವುದಕ್ಕೆ ಆಗಲ್ಲ ಆದ್ದರಿಂದ ಇಲ್ಲಿ ಬರೆದುಕೊಂಡಿದ್ದೀನಿ. ಪ್ರೀತಿ-ಪ್ರೇಮದ ವಿಚಾರದಲ್ಲಿ ಸ್ಪಷ್ಟವಾಗಿದ್ದರೆ ಒಳ್ಳೆಯದು.
ಅನುಮಾನ- ಗೊಂದಲ ಇದ್ದರೆ ಆರಂಭಿಸಲೇ ಬೇಡಿ. ಬೇರೆಯಾಗುವ ನೋವನ್ನು ವರ್ಷಗಟ್ಟಲೆ ಅನುಭವಿಸ ಬೇಕಾಗುತ್ತದೆ. ಕೆಲವರು ತಮಗೆ ತಾವೇ ತೊಂದರೆ ಮಾಡಿಕೊಂಡೂ ಬಿಡ್ತಾರೆ. ನಿಮಗೆ ನನ್ನಂತೆ ಆಗದಿರಲಿ. ನೀವಂದುಕೊಂಡ ಪ್ರೀತಿ ಸಿಗಲಿ.