ವ್ಯಾಸರಾಜರ ವೃಂದಾವನ ಮುಂಚಿನಂತೆ ಕಾಣುವಂತೆ ಮಾಡಿದವರು 'ಇವರಿಬ್ಬರು'
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನದಲ್ಲಿ ಹದಿನಾರನೇ ಶತಮಾನದ ವ್ಯಾಸರಾಜರ ವೃಂದಾವನವನ್ನು ನಿಧಿಗಳ್ಳರು ಧ್ವಂಸ ಮಾಡಿದ್ದು ಕೇವಲ ನಾಲ್ಕು ಗಂಟೆಯಲ್ಲಿ. ಆದರೆ ಐನೂರು ವರ್ಷಗಳ ಹಿಂದಿನ ಈ ವೃಂದಾವನದ ಪುನರ್ ರಚಿಸುವ ಸವಾಲಿನ ಕೆಲಸ ಪೂರೈಸಲು ಹತ್ತೊಂಬತ್ತೂವರೆ ಗಂಟೆ ಸಮಯ ಹಿಡಿಸಿದೆ.
ವ್ಯಾಸರಾಜರ ಮೂಲ ವೃಂದಾವನ ಮೊದಲಿನಂತೆ ಕಾಣುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಬೆಂಗಳೂರು ಮೂಲದ ಇಬ್ಬರು- ವಾಸ್ತುಶಿಲ್ಪಿ ಹಾಗೂ ವಿದ್ವಾಂಸ ಕೆ.ಎಂ. ಶೇಷಗಿರಿ ಮತ್ತು ಶಿಲ್ಪಿ ನಾಗೇಂದ್ರ ರಾಮಮೂರ್ತಿ. ಮಧ್ವಾಚಾರ್ಯರ ಜನ್ಮ ಸ್ಥಳವಾದ ಉಡುಪಿಯ ಪಾಜಕದಲ್ಲಿ 2017ರಲ್ಲಿ ಸ್ಥಾಪಿಸಿದ 32 ಅಡಿ ಎತ್ತರದ ಮಧ್ವಾಚಾರ್ಯರ ವಿಗ್ರಹ ಸ್ಥಾಪನೆಯಲ್ಲಿ ಮುಖ್ಯ ವಾಸ್ತು ಶಿಲ್ಪಿ ಆಗಿದ್ದವರು ಶೇಷಗಿರಿ.
ಫೈನ್ ಆರ್ಟ್ಸ್ ನಲ್ಲಿ ಶೇಷಗಿರಿ ಅವರದು ಸ್ನಾತಕೋತ್ತರ ಪದವಿ ಆಗಿದೆ. ಪ್ರಖ್ಯಾತ ಸಾಫ್ಟ್ ವೇರ್ ಕಂಪೆನಿಯಲ್ಲಿ ತಾಂತ್ರಿಕ ವಾಸ್ತುಶಿಲ್ಪಿ ಆಗಿದ್ದಾರೆ. ವ್ಯಾಸರಾಜರ ವೃಂದಾವನ ಧ್ವಂಸದ ಮಾಹಿತಿ ದೊರೆತ ತಕ್ಷಣ ಆನೆಗೊಂದಿಗೆ ಧಾವಿಸಿದ್ದಾರೆ ಶೇಷಗಿರಿ ಹಾಗೂ ನಾಗೇಂದ್ರ.

ಮುಖ್ಯವಾದ ಶಿಲೆಯನ್ನು ಮುಟ್ಟದಿರುವಂತೆ ಸ್ವಾಮೀಜಿ ಮತ್ತು ಇತರರನ್ನು ಕೇಳಿಕೊಂಡಿದ್ದಾರೆ. ಪುರಾತತ್ವ ಇಲಾಖೆಯ ಗುರುರಾಜ್ ದಿಗ್ಗಾವಿ, ಇನ್ನು ವಿಜಯನಗರದ ಕೃಷ್ಣದೇವರಾಯನ ವಂಶಸ್ಥರಾದ ಕೃಷ್ಣದೇವರಾಯ ಹಾಗೂ ನೂರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ಬಂದಿದ್ದಾರೆ.
ಶಿಲೆಯು ವೃಂದಾವನದ ಎರಡೂ ಬದಿಗೆ ಬಿದ್ದಿತ್ತು. ದುಷ್ಕರ್ಮಿಗಳು ಮೂರೂವರೆ ಅಡಿ ಆಳಕ್ಕೆ ತೋಡಿದ್ದರು. ಮಣ್ಣು ಸಡಿಲವಾಗಿತ್ತು ಹಾಗೂ ವೃಂದಾವನವನ್ನು ನಾಶಪಡಿಸುವುದಕ್ಕೆ ದುಷ್ಕರ್ಮಿಗಳಿಗೆ ನಾಲ್ಕು ಗಂಟೆ ಸಮಯ ಹಿಡಿಸಿರಬಹುದು ಎಂಬುದು ನಮ್ಮ ಅಂದಾಜು ಎನ್ನುತ್ತಾರೆ ನಾಗೇಂದ್ರ.
ಕಳೆದ ಗುರುವಾರ ಸಂಜೆ 5.30ರ ವೇಳೆಗೆ ಕೆಲಸ ಶುರು ಆಯಿತು. ಆ ವ್ಟಂದಾವನ 9 ಅಡಿ ಎತ್ತರ ಇತ್ತು. ಇದು 500 ವರ್ಷದ ಹಿಂದೆ ಕಟ್ಟಿದ ವೃಂದಾವನವೇ ಎಂದು ಅಚ್ಚರಿ ಪಡುವಂತೆ ಇತ್ತು. ಅಲ್ಲಿ 22 'ಎಲ್' ಆಕಾರದ ತುಂಡುಗಳಿದ್ದವು. ಒಂದಕ್ಕೊಂದು ಬೆಸೆದುಕೊಂಡಿದ್ದವು. ನಿರ್ಮಾಣ ಮಾಡುವ ವೇಳೆ ಫೋಟೋ ಆಧಾರ ಇತ್ತು. ಇದರಿಂದ ಈ ಹಿಂದಿನಂತೆಯೇ ನಿರ್ಮಿಸಲು ಸಾಧ್ಯವಾಯಿತು ಎನ್ನುತ್ತಾರೆ ನಾಗೇಂದ್ರ.

ವೃಂದಾವನದ ಮುಂಭಾಗದಲ್ಲಿ ಶ್ರೀರಾಮನ ಅಭಯಹಸ್ತ ಇರುವ ಕೆತ್ತನೆ ಇದೆ.ಆ ಕೆತ್ತನೆ 2 ಅಗಲ ಹಾಗೂ 1.5 ಅಡಿ ಎತ್ತರವಿದೆ. ಅದು ನಾಶವಾದಾಗ ಹಾಗೂ ನೆಲಕ್ಕೆ ಬಿದ್ದಾಗ ರಾಮನ ಕೆತ್ತನೆಯ ಕೈ ಹಾಗೂ ಮೂಗಿಗೆ ಹಾನಿಯಾಗಿತ್ತು.
"ಮುಂಚಿನಂತೆಯೇ ವಿಗ್ರಹ ಕಾಣಿಸಿಕೊಳ್ಳಲು ಮಧ್ವಾಚಾರ್ಯರು ರಚಿಸಿದ ತಂತ್ರಸಾರ ಸಂಗ್ರಹದಲ್ಲಿನ ಶಿಲ್ಪಶಾಸ್ತ್ರದ ಅಧ್ಯಯನ ನೆರವಿಗೆ ಬಂತು. ಅದರಲ್ಲಿ ಮುಖ ಚಹರೆ ಹೇಗಿರಬೇಕು ಎಂಬ ವಿವರಣೆ ಇದೆ. ಮುಖಕ್ಕೆ ಹಾನಿಯಾದ ಶಿಲೆಯನ್ನೇ ಮತ್ತೆ ಕೆತ್ತಲಾಯಿತು. 'ಅಭಯ ಹಸ್ತ'ವನ್ನು ಕೆತ್ತಿದೆವು. ಬಣ್ಣ ಬದಲಾಗಬಹುದು ಎಂಬ ಕಾರಣಕ್ಕೆ ಬೇರೆ ಶಿಲೆ ಬಳಸಲು ಸಾಧ್ಯವಿರಲಿಲ್ಲ. ಎಲ್ ಆಕಾರದ ಎಲ್ಲ ಇಪ್ಪತ್ತೆರಡು ಶಿಲೆಗಳು ಒಂದೇ ಬಣ್ಣದ್ದಾಗಿದ್ದವು. ಬೃಂದಾವನದ ಒಂದು ಕಡೆ ವಿಠ್ಠಲ ದೇವರ ಕೆತ್ತನೆ ಇತ್ತು. ಆದರೆ ವಿಗ್ರಹದ ಪ್ರಭಾವಳಿಗೆ ಹಾನಿಯಾಗಿತ್ತು. ಶಾಸ್ತ್ರಗಳ ಪ್ರಕಾರವೇ ಅವುಗಳನ್ನು ಮತ್ತೆ ಸೃಷ್ಟಿಸಲಾಯಿತು" ಎಂದು ಶೇಷಗಿರಿ ಹೇಳಿದ್ದಾರೆ.
ಶಿಲ್ಪ ಶಾಸ್ತ್ರದ ಬಗ್ಗೆ ಚೆನ್ನಾಗಿ ಗೊತ್ತಿರುವ ನಾಗೇಂದ್ರ ಮಾತನಾಡಿ, ತುಂಡುಗಳನ್ನು ಜೋಡಿಸಲು ನಾವು ಸಿಮೆಂಟ್ ಬಳಸಿಲ್ಲ. ಸಹಜವಾಗಿರಲಿ ಎಂದು ಬೆಲ್ಲ, ಕಬ್ಬಿನಹಾಲು ಹಾಲು ಮತ್ತು ಸುಣ್ಣದ ಕಲ್ಲನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬಳಸಲಾಗಿದೆ ಎಂದಿದ್ದಾರೆ.
ವೃಂದಾವನದ ತಳದಿಂದ ಏಳು ಹಂತಗಳಲ್ಲಿ ಶಿಲೆಗಳಿವೆ. ಮೊದಲ ಸಾಲಿನಲ್ಲಿ ಆನೆಗಳು, ಎರಡರಲ್ಲಿ ವರಾಹ, ಸಿಂಹ ಮತ್ತು ಇತರವು ಇವೆ. "ಕೆತ್ತನೆಗಳು ಹಂಪಿಯಲ್ಲಿ ಇರುವಂಥವನ್ನೇ ಹೋಲುತ್ತವೆ. ಹಂಪಿಯಲ್ಲಿ ಯಾರು ಕೆತ್ತನೆ ಮಾಡಿದರೋ ಅವರೇ ವ್ಯಾಸರಾಜರ ವೃಂದಾವನವನ್ನು ಶತಮಾನಗಳ ಹಿಂದೆ ಕೆತ್ತನೆ ಮಾಡಿದ್ದಾರೆ ಎಂದು ಶೇಷಗಿರಿ ಹೇಳಿದ್ದಾರೆ.
ಕೆಲಸವು ಶುಕ್ರವಾರ ಮಧ್ಯ ರಾತ್ರಿ 1.30ರ ವರೆಗೂ ನಡೆಯಿತು. "ನಾವು ವೃಂದಾವನವನ್ನು ಪವಿತ್ರ ಎಂದು ಭಾವಿಸುವುದರಿಂದ ಆಹಾರ ಸೇವನೆ ಮಾಡುವಂತಿರಲಿಲ್ಲ. ಆದ್ದರಿಂದ ಊಟ- ನೀರು ಸೇವಿಸಿರಲಿಲ್ಲ. ಶುಕ್ರವಾರ 4 ಗಂಟೆ ಮೇಲೆ ಪೂಜೆ ಆದ ನಂತರವೇ ನಾವು ಊಟ ಮಾಡಿದೆವು. ವ್ಯಾಸರಾಜ ಮಠ, ಉತ್ತರಾದಿ ಮಠ, ಮಂತ್ರಾಲಯ ಮಠ, ಉಡುಪಿ ಮತ್ತಿತರ ಮಠಗಳ ಸ್ವಾಮಿಗಳು ಇದ್ದರು" ಎಂದು ಶೇಷಗಿರಿ ಹೇಳಿದ್ದಾರೆ.












Click it and Unblock the Notifications