ಬೆಂಗಳೂರು ದಕ್ಷಿಣದ ಸಂಭಾವ್ಯ ಬಿಜೆಪಿ ಅಭ್ಯರ್ಥಿ ತೇಜಸ್ವಿನಿ ವ್ಯಕ್ತಿಚಿತ್ರ
ಅದಮ್ಯ ಚೇತನ ಎಂಬ ಎನ್ ಜಿಒ ಮೂಲಕ ನಿರಂತರವಾಗಿ ಸಮಾಜಸೇವೆ ಮಾಡುತ್ತ ಬಂದಿರುವ ತೇಜಸ್ವಿನಿ ಅನಂತ್ ಕುಮಾರ್ ಅವರು ಮಾಜಿ ಕೇಂದ್ರ ಸಚಿವ ದಿ.ಅನಂತ್ ಕುಮಾರ್ ಅವರ ಪತ್ನಿ.
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ, ಸಾಮಾಜಿಕ ಸೇವೆಯ ತುಡಿತದಿಂದಾಗಿ ಅದಮ್ಯಚೇತನಕ್ಕೆ ಹುಟ್ಟು ನೀಡಿದವರು. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನದ ನಂತರ ತೆರವಾದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಎದ್ದಾಗ ಉತ್ತರವಾಗಿ ಕಂಡವರು ತೇಜಸ್ವಿನಿ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಈಗಾಗಲೇ ಸಾಮಾಜಿಕ ಸೇವೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ತೇಜಸ್ವಿನಿ ಅವರನ್ನು ಈ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದರೆ ಅನುಕಂಪದ ಮತವೂ ಸಿಕ್ಕೀತು ಎಂಬ ಲೆಕ್ಕಾಚಾರವೂ ಬಿಜೆಪಿಗೆ ಇದ್ದಂತಿದೆ.

* ತೇಜಸ್ವಿನಿ ಅನಂತ್ ಕುಮಾರ್ ಅವರು ಉಟ್ತಿದ್ದು, 1966 ರ ಮಾರ್ಚ್ 11 ರಂದು.
* ಬೆಳಗಾವಿ ಜಿಲ್ಲೆಯ ಹಿಡ್ಕಲ್ ಗ್ರಾಮದಲ್ಲಿ ಜನನ.
* ತಂದೆ ಪ್ರಭಾಕರ ಎ ಓಕ್, ತಾಯಿ ಪ್ರತಿಭಾ ಪಿ ಓಕ್
* ಧಾರವಾಡ ಮತ್ತು ಬೆಳಗಾವಿಯಲ್ಲಿ ಪ್ರಾಥಮಿಕ ಶಿಕ್ಷಣ
* ಬೆಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ
* ಕರ್ನಾಟಕ ವಿವಿಯ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ
* ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಷಯದಲ್ಲಿ ಬಿಇ
* 1988 ರಿಂದ 1993 ರವರೆಗೆ ಸಾಫ್ಟ್ ವೇರ್ ಇಂಜಿನಿಯರ್ ಆಗಿ, ಬೆಂಗಳೂರಿನ ಬಿಎಂಎಸ್
ಮತ್ತು ಧಾರವಾಡದ ಎಸ್ ಡಿಎಂ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಹೀಗೆ ವಿವಿಧ ವೃತ್ತಿಗಳನ್ನು ಮಾಡಿದರು.
* 1989 ರಲ್ಲಿ ಅನಂತ್ ಕುಮಾರ್ ಅವರೊಂದಿಗೆ ವಿವಾಹ
* ಇಬ್ಬರು ಹೆಣ್ಣು ಮಕ್ಕಳ ತಾಯಿ
* 1990 ರಲ್ಲಿ ಏರೋನಾಟಿಕಲ್ ಡೆವಲಪ್ ಮೆಂಟ್ ಏಜೆನ್ಸಿಯಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
* 1998 ರಲ್ಲಿ ಅದಮ್ಯ ಚೇತನ ಸ್ಥಾಪನೆ.
* ಅತ್ತೆ ದಿ.ಗಿರಿಜಾ ಶಾಸ್ತ್ರಿ ಅವರ ನೆನಪಿಗಾಗಿ ಆರಂಭಿಸಿದ ಈ ಸಂಸ್ಥೆ ಬಡವರು, ಅಶಕ್ತರ ಸೇವೆಯನ್ನು ಆದ್ಯ ಉದ್ದೇಶವನ್ನಾಗಿಸಿಕೊಂಡಿದೆ.

* ಈ ಸಂಸ್ಥೆಯ ಮೂಲಕ ಹೆಣ್ಣು ಮಕ್ಕಳಿಗೆ ಔದ್ಯೋಗಿಕ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಕೆಲಸ ನಡೆಯುತ್ತಿತ್ತು. ಹೀಗೆ ಆರಂಭವಾದ ಅದಮ್ಯ ಚೇತನ ನಂತರ ಅನ್ನ, ಅಕ್ಷರ, ಆರೋಗ್ಯ ಎಂಬ ಧ್ಯೇಯವನ್ನಿಟ್ಟುಕೊಂಡು ಅದರ ಸಾಕಾರಕ್ಕಾಗೇ ತನ್ನನ್ನು ತೊಡಗಿಸಿಕೊಂಡಿತು.
* ಸುಮಾರು 2 ಲಕ್ಷಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತವಾಗಿ ಮಧ್ಯಾಹ್ನದ ಬಿಸಿ ಊಟ ನೀಡುವ ಕೆಲಸವನ್ನು ಆರಂಭಿಸಿದ ಅದಮ್ಯ ಚೇತನ ಸಾಕಷ್ಟು ಜನರ ಶ್ಲಾಘನೆಗೆ ಕಾರಣವಾಯಿತು. ಈ ಎಲ್ಲ ಸಾಧನೆಯ ಹಿಂದೆ ತೇಜಸ್ವಿನಿ ಅನಂತ್ ಕುಮಾರ್ ಅವರ ಅವಿರತ ಶ್ರಮವಿತ್ತು.
* ಅದಮ್ಯ ಚೇತನದಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಜೈವಿಕ ಇಂಧನ ಬಳಸುವ ಮತ್ತು ಆಹಾರ ತಯಾರಿಸಲು ಬಳಸುವ ತರಕಾರಿ ಇತ್ಯಾದಿ ತ್ಯಾಜ್ಯ ಪದಾರ್ಥಗಳಿಂದ ಸಾವಯವ ಗೊಬ್ಬರ ತಯಾರಿಸುವ ಯೋಜನೆಗೂ ತೇಜಸ್ವಿ ಅನಂತ್ ಕುಮಾರ್ ನಾಂದಿ ಹಾಡಿದರು.
* ಪತಿಯೊಂದಿಗೆ ಕೆಲವು ರಾಜಕೀಯ ಸಭೆ-ಸಮಾರಂಭಗಳಲ್ಲಿ ಭಾಗಿವಹಿಸಿದ್ದನ್ನು ಬಿಟ್ಟರೆ ರಾಜಕೀಯಕ್ಕಿಂತ ಹೆಚ್ಚಾಗಿ ಸಾಮಾಜಿಕ ಕ್ಷೇತ್ರವನ್ನೇ ತೇಜಸ್ವಿನಿ ನೆಚ್ಚಿಕೊಂಡವರು.
* ಹಸಿರು ಬೆಂಗಳೂರು ಎಂಬ ಹೆಸರಿನಲ್ಲಿ ಉದ್ಯಾನನಗರಿಯ ಹಸಿರನ್ನು ಕಾಪಾಡುವ ಪಣತೊಟ್ಟ ತೇಜಸ್ವಿನಿ ಅನಂತಕುಮಾರ್, ಪ್ರತಿ ಭಾನುವಾರವೂ ಬೇರೆ ಬೇರೆ ಪ್ರದೇಶಗಳಲ್ಲಿ ಗಿಡ ನೆಡುವ, ಅದನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ
* ಆದರೆ ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗಿ ಪತಿ ಅನಂತ್ ಕುಮಾರ್ ಅವರು ನವೆಂಬರ್ 12 ರಂದು ಅಕಾಲಿಕ ಮರಣವನ್ನಪ್ಪಿದ ಮೇಲೆ ಪತಿಯ ಕ್ಷೇತ್ರದಲ್ಲಿ ಅವರೇ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಮಾತು ಕೇಳಿಬರುತ್ತಿದೆ.
* 2014 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಂತ್ ಕುಮಾರ್ 6,33,816 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಂದನ್ ನೀಲೇಕಣಿ 4,05,241 ಮತಗಳನ್ನು ಪಡೆದಿದ್ದರು.
* ಈ ಬಾರಿಯೂ ಕಾಂಗ್ರೆಸ್ ನಿಂದ ನಂದನ್ ನೀಲೇಕಣಿ ಅವರೇ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
* ಇದುವರೆಗಿನ ಚುನಾವಣೆಗಳಲ್ಲಿ ಪ್ರತಿಬಾರಿಯೂ ಅನಂತ್ ಕುಮಾರ್ ಅವರೊಂದಿಗೆ ಚುನಾವಣಾ ಪ್ರಚಾರಕ್ಕೆಂದು ಹೋಗುತ್ತಿದ್ದ ತೇಜಸ್ವಿನಿ ಅನಂತ್ ಕುಮಾರ್ ಅವರು ಆ ಅನುಭವದ ಮೇಲೆಯೇ ಚುನಾವಣೆಗೆ ತಯಾರಾಗಬಹುದು.












Click it and Unblock the Notifications