ತೇಜಸ್ವಿಗಾಗಿ 'ರಾಜೇಶ್ವರಿ ಆದ ರಚೆಲ್': ದೀಘ್ರ ಕಾಲದ ಗೆಳತಿ ಈಗ ಆರ್ಜೆಡಿ ನಾಯಕನ ಮಡದಿ
ನವದೆಹಲಿ, ಡಿಸೆಂಬರ್ 10: ಆರ್ಜೆಡಿ ನಾಯಕ, ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ರ ಪುತ್ರ ತೇಜ್ ಪ್ರತಾಪ್ ಯಾದವ್ರ ವಿವಾಹವೂ ಮೇ 2018 ರಂದು ನಡೆದಿದೆ. ಈ ವಿವಾಹವು ಭಾರೀ ಜನಜಂಗುಳಿಯಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ತನ್ನ ಅಣ್ಣನ ವಿವಾಹದ ಬಗ್ಗೆ ಮಾತನಾಡಿದ ತೇಜಸ್ವಿ ಯಾದವ್, "ನಾನು ಯಾರಿಗೂ ಹೇಳದೆಯೇ ವಿವಾಹ ಆಗುತ್ತೇನೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಚಿತ್ರವನ್ನು ಪೋಸ್ಟ್ ಮಾಡಿ ವಿವಾಹ ಆಗಿದ್ದೇನೆ ಎಂದು ಹೇಳುತ್ತೇನೆ," ಎಂದು ತನ್ನ ಆಪ್ತರ ಬಳಿ ಹೇಳಿಕೊಂಡಿದ್ದರು. ಅದರಂತೆಯೇ ಹೆಚ್ಚು ಜನರಿಗೆ ತಿಳಿಸದೆ ತೇಜಸ್ವಿ ಯಾದವ್ ಗುರುವಾರ ವಿವಾಹವಾಗಿದ್ದಾರೆ.
ತೇಜಸ್ವಿ ಯಾದವ್ ತನ್ನ ಬಹುಕಾಲದ ಗೆಳತಿ ರಚೆಲ್ ಗುಡಿನ್ಹೊರನ್ನು ತನ್ನ ಕೆಲವು ಕಟುಂಬಸ್ಥರು, ಕೆಲವು ಪ್ರಮುಖ ಆರ್ಜೆಡಿ ನಾಯಕರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಈ ವಿವಾಹ ಸಮಾರಂಭದಲ್ಲಿ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಪತ್ನಿ ಡಿಂಪಲ್ ಯಾದವ್ ಕಾಣಿಸಿಕೊಂಡಿದ್ದಾರೆ. ಆರ್ಜೆಡಿ ನಾಯಕರಲ್ಲಿ ಪ್ರಮುಖವಾಗಿ ಸಂಸದ ಪ್ರೇಮ್ ಗುಪ್ತಾ ಮಾತ್ರ ಕಾಣಿಸಿಕೊಂಡಿದ್ದಾರೆ.
ಬಹುಕಾಲದ ಸ್ನೇಹಿತೆ ರಾಜಶ್ರೀ ಜೊತೆ ತೇಜಸ್ವಿ ಯಾದವ್ ನಿಶ್ಚಿತಾರ್ಥ
ಈ ವಿವಾಹವು ಹಿಂದೂ ಸಂಪ್ರದಾಯದಂತೆಯೇ ನಡೆದಿದ್ದು, ರಚೆಲ್ ಗುಡಿನ್ಹೊ, ರಾಜೇಶ್ವರಿ ಯಾದವ್ ಆಗಿ ಬದಲಾಗಿದ್ದಾರೆ. ಈ ಜೋಡಿಯು ಏಳು ವರ್ಷಗಳಿಂದ ಸ್ನೇಹಿತರಾಗಿದ್ದು, ಮಂಗಳವಾರ ರಾತ್ರಿ ನಿಶ್ಚಿತಾರ್ಥ ಆಗಿದ್ದಾರೆ. ಈ ಸಂದರ್ಭದಲ್ಲಿಯೂ ಕೆಲವೇ ಜನರು ಮಾತ್ರ ಉಪಸ್ಥಿತರಿದ್ದರು. ತೇಜಸ್ವಿ ಯಾದವ್ಗೆ ಏಳು ಜನರು ಸಹೋದರ, ಸಹೋದರಿಯರು ಇದ್ದಾರೆ. ಈ ಪೈಕಿ ಸಿಂಗಾಪುರದಲ್ಲಿರುವ ತೇಜಸ್ವಿಯ ಸಹೋದರಿ ಟ್ವೀಟ್ ರೋಹಿಣಿ ಆಚಾರ್ಯ ಮಾಡಿದ್ದು ವಧುವಿನ ಹೆಸರು ರಚೆಲ್ ಎಂಬುವುದನ್ನು ಗೊತ್ತುಪಡಿಸಿದ್ದಾರೆ. ಬಳಿಕ ತೇಜ್ ಪ್ರತಾಪ್ ಯಾದವ್ ಕೂಡಾ ಟ್ವೀಟ್ ಮಾಡಿದ್ದಾರೆ. ಈ ನಡುವೆ ಕುಟುಂಬಸ್ಥರು ಅಸಮಾಧಾನ ಹೊಂದಿದ್ದಾರೆ ಎಂದು ವರದಿಯಾಗಿದೆ. ಹಾಗಾದರೆ ಈ ರಚೆಲ್ ಯಾರು?, ಕುಟುಂಬಸ್ಥರು ಯಾಕೆ ಅಸಮಾಧಾನ ಹೊಂದಿದ್ದಾರೆ ಎಂದು ತಿಳಿಯಲು ಮುಂದೆ ಓದಿ..,
ರಾಜೇಶ್ವರಿಯಾದ ರಚೆಲ್ ಯಾರು?
ಈವರೆಗೆ ರಚೆಲ್ ಯಾದವ್ ಬಗ್ಗೆ ಹೆಚ್ಚಿನ ಮಾಹಿತಿ ಮಾಧ್ಯಮಗಳಿಗೆ ಲಭ್ಯವಾಗಿಲ್ಲ. ಆದರೆ ಈ ಬಗ್ಗೆ ಮಾಹಿತಿ ನೀಡಿರುವ ತೇಜಸ್ವಿ ಯಾದವ್ರ ಆಪ್ತ, "ರಚೆಲ್ ಕ್ರೈಸ್ತ ಹುಡುಗಿ, ಹರಿಯಾಣ ಮೂಲದವರು, ಸಣ್ಣ ವಯಸ್ಸಿನಿಂದಲೇ ದೆಹಲಿಯಲ್ಲಿ ವಾಸಿಸುತ್ತಿದ್ದಾರ," ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ನವದೆಹಲಿಯ ಡಿಪಿಎಸ್ ಶಾಲೆಯಲ್ಲಿ ತೇಜಸ್ವಿ ಯಾದವ್ ಹಾಗೂ ರಚೆಲ್/ರಾಜೇಶ್ವರಿ ಯಾದವ್ ಜೊತೆಯಾಗಿ ಕಲಿತಿದ್ದಾರೆ. ಬಳಿಕ ಸ್ನೇಹಿತರಾಗಿದ್ದರು. 2015 ರಲ್ಲಿ ತೇಜಸ್ವಿ ಯಾದವ್ ಓರ್ವ ಯುವತಿ ಜೊತೆ ಇರುವ ಚಿತ್ರವು ಭಾರೀ ವೈರಲ್ ಆಗಿತ್ತು. ಆರ್ಜೆಡಿ ನಾಯಕರನ್ನು ಗುರಿಯಾಗಿಸಿಕೊಳ್ಳಲು ಈ ಚಿತ್ರವನ್ನೇ ಬಳಸಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿದ ತೇಜಸ್ವಿ ಆಪ್ತರು, "ಈ ಯುವತಿ ಆ ಚಿತ್ರದಲ್ಲಿ ಇದ್ದ ಯುವತಿಯೇ ಆಗಿದ್ದಾರೆ," ಎಂದು ಹೇಳಿದ್ದಾರೆ. ಇನ್ನು ಟ್ವಿಟ್ಟರ್ನಲ್ಲಿ ರಚೆಲ್ ತೇಜಸ್ವಿ ಯಾದವ್, ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್ ತಾಯಿ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ತೇಜಸ್ವಿ ಸಹೋದರಿ ಮೀಸಾ ಬಾರ್ತಿರನ್ನು ಫಾಲೋ ಮಾಡುತ್ತಿದ್ದಾರೆ. ಹಾಗೆಯೇ ಹಲವಾರು ಬಿಜೆಪಿ ವಿರೋಧ ಟ್ವೀಟ್ಗಳನ್ನು ರೀಟ್ವೀಟ್ ಮಾಡಿದ್ದಾರೆ.
ವಿವಾಹದ ಬಗ್ಗೆ ಬಿಹಾರದ ಆರ್ಜೆಡಿ ನಾಯಕರಿಗೆಯೇ ತಿಳಿದಿರಲಿಲ್ಲ!
ಇನ್ನು ಈ ವಿವಾಹವನ್ನು ಎಷ್ಟು ಗೌಪ್ಯವಾಗಿ ತೇಜಸ್ವಿ ಯಾದವ್ ತಾನು ಈ ಹಿಂದೆ ಹೇಳಿದ್ದಂತೆ ನಡೆಸಿದ್ದಾರೆ ಎಂದರೆ ಈ ವಿವಾಹದ ಬಗ್ಗೆ ಆರ್ಜೆಡಿ ನಾಯಕರುಗಳಿಗೆಯೇ ತಿಳಿದಿರಲಿಲ್ಲ. ಬಿಹಾರದ ಆರ್ಜೆಡಿ ನಾಯಕರುಗಳಿಗೆ ಈ ಬಗ್ಗೆ ಮಾಹಿತಿಯೇ ಇಲ್ಲದಿರುವುದು ಆಶ್ಚರ್ಯದ ವಿಚಾರ ಕೂಡಾ ಹೌದು, ಮಂಗಳವಾರ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿ ಒಂದು ಆಗಿತ್ತು. ಆದರೆ ಈಗ ವಿವಾಹವೇ ನಡೆದಿದೆ. ನಿಶ್ಚಿತಾರ್ಥದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಜೆಡಿ ನಾಯಕ, ಬಿಹಾರದ ಮಾಜಿ ಸಚಿವ ಅಬ್ದುಲ್ ಬರಿ ಸಿದ್ದೀಕ್, "ನನಗೆ ಆಹ್ವಾನ ಬಂದಿಲ್ಲ. ನನಗೆ ವಿವಾಹಕ್ಕೆ ಆಹ್ವಾನ ನೀಡಬಹುದು," ಎಂದಿದ್ದಾರೆ. ಇನ್ನು ಮಂಗಳವಾರ ಆರ್ಜೆಡಿಯ ಪಾಟ್ನಾ ನಿವಾಸದಲ್ಲಿ ಆರ್ಜೆಡಿ ಶಾಸಕ ಬಾಯ್ ಬಿರೆಂದರ್ ಸಿಹಿಯನ್ನು ಹಂಚಿದ್ದಾರೆ. ಆದರೆ ವಧುವಿನ ಹೆಸರು ಕೇಳಿದಾಗ ಮಾತ್ರ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಇನ್ನು ಗುರುವಾರ ಈ ಬಗ್ಗೆ ಮಾತನಾಡಿದ ಆರ್ಜೆಡಿ ಮುಖ್ಯಸ್ಥ ಜಗದಾನಂದ ಸಿಂಗ್ ಈ ಯುವತಿ ಕ್ರೈಸ್ತ ಯುವತಿ ಎಂದು ಬಹಿರಂತಗಪಡಿಸಿದ್ದಾರೆ, ಹಾಗೆಯೇ ಯಾವುದೇ ರಾಜಕೀಯ ಪರಿವಾರಕ್ಕೆ ಸೇರಿದವರು ಅಲ್ಲ ಎಂದಿದ್ದಾರೆ. "ತೇಜಸ್ವಿ ಯಾದವ್ ಬಹಳ ಬುದ್ಧಿವಂತ ಕಾರ್ಯವನ್ನು ಮಾಡಿದ್ದಾರೆ. ಅವರಿಗೆ ಎಲ್ಲಾ ಬೆಂಬಲಿಗರು ಆಶೀರ್ವಾದವಿದೆ," ಎಂದು ಕೊರೊನಾ ಹಿನ್ನೆಲೆಯಲ್ಲಿ ಜಗದಾನಂದ ಸಿಂಗ್ ಹೇಳಿದ್ದಾರೆ.
ಇನ್ನು ಆರ್ಜೆಡಿ ನಾಯಕ ಸಮೀರ್ ಮಹಾಂತೇಶ್ ಮಾತನಾಡಿ, "ಅಖಿಲೇಶ್ ಯಾದವ್ ಬೇರೆ ಜಾತಿಯ ಯುವತಿಯನ್ನು ವಿವಾಹವಾದರು. ಸಚಿನ್ ಪೈಲಟ್ ಬೇರೆ ಧರ್ಮದವರು ಮದುವೆ ಆದರು. ಸುಶೀಲ್ ಕುಮಾರ್ ಮೋದಿ ಕೂಡಾ ಕ್ರೈಸ್ತ ಯುವತಿಯನ್ನು ವಿವಾಹವಾದರು. ಇವರ್ಯಾರ ರಾಜಕೀಯ ಜೀವನಕ್ಕೂ ಈ ವಿವಾಹ ಪರಿಣಾಮ ಬೀರಿಲ್ಲ. ಹಾಗಿರುವಾಗ ತೇಜಸ್ವಿ ಯಾದವ್ ರಾಜಕೀಯ ಜೀವನಕ್ಕೆ ಯಾಕೆ ಪರಿಣಾಮ ಬೀರುತ್ತದೆ," ಎಂದು ಅಭಿಪ್ರಾಯಿಸಿದ್ದಾರೆ.
ಕುಟುಂಬಸ್ಥರಲ್ಲಿ ಅಸಮಾಧಾನ
ಯಾವುದೇ ಆಹ್ವಾನವನ್ನು ನೀಡದಿರುವುದು ಹಾಗೂ ಯಾವುದೇ ಸುಳಿವು ನೀಡದೆಯೇ ವಿವಾಹ ಆಗಿರುವುದಕ್ಕೆ ತೇಜಸ್ವಿ ಕುಟುಂಬಸ್ಥರು ಅಸಮಾಧಾನ ಹೊಂದಿದ್ದಾರೆ ಎಂದು ವರದಿಗಳು ಉಲ್ಲೇಖ ಮಾಡಿದೆ. ಇನ್ನು ಅದರಲ್ಲೂ ಮುಖ್ಯವಾಗಿ ಕ್ರೈಸ್ತ ಯುವತಿಯನ್ನು ವಿವಾಹವಾಗಿದ್ದು ಕುಟುಂಬದಲ್ಲಿ ಇರಿಸು ಮುರಿಸಿಗೆ ಕಾರಣವಾಗಿದೆ. "ನನಗೆ ಯಾವುದೇ ಆಹ್ವಾನವನ್ನು ನೀಡಿಲ್ಲ. ತೇಜ್ ಪ್ರತಾಪ್ ವಿವಾಹಕ್ಕೆ ನನಗೆ ಆಹ್ವಾನ ನೀಡಲಾಗಿತ್ತು," ಎಂದು ಚಿಕ್ಕಪ್ಪ ಸಾಧು ಯಾದವ್ ಹೇಳಿದ್ದಾರೆ. ಹಾಗೆಯೇ ಈ ವೇಳೆ "ತೇಜಸ್ವಿ ಯಾದವ್ ಕ್ರೈಸ್ತ ಯುವತಿಯನ್ನು ವಿವಾಹವಾಗಿದ್ದಕ್ಕೆ ಯಾದವರಿಗೆ ಅಸಮಾಧಾನ ಉಂಟಾಗಿದೆ," ಎಂದಿದ್ದಾರೆ. ಇನ್ನು ಲಾಲು ಪ್ರಸಾದ್ರ ಕಿರಿಯ ಸಹೋದರ ಪಾಟ್ನಾದಲ್ಲಿ ಔತಣಕೂಟ ನಡೆಯಲಿದೆ ಎಂದಿದ್ದಾರೆ.
ಲಾಲು ಪ್ರಸಾದ್ ಯಾದವ್ ಆರೋಗ್ಯ ಕೂಡಾ ಸರಳ ವಿವಾಹಕ್ಕೆ ಕಾರಣ
ಇನ್ನು ಲಾಲು ಪ್ರಸಾದ್ ಯಾದವ್ರ ಆರೋಗ್ಯವು ಕೂಡಾ ತೇಜಸ್ವಿ ಯಾದವ್ ಕಡಿಮೆ ಜನ ಸಮ್ಮುಖದಲ್ಲಿ ವಿವಾಹಕ್ಕೆ ಕಾರಣವಾಗಿದೆ. ಈ ಹಿಂದೆ ಲಾಲುರ ಮಕ್ಕಳ ವಿವಾಹವು ಪಾಟ್ನಾದಲ್ಲಿ ಭಾರೀ ಜನಸಮೂಹ ಸೇರಿ ನಡೆದಿತ್ತು. ಇದರಲ್ಲಿ ರಾಜಕೀಯ ನಾಯಕರು ಮಾತ್ರವಲ್ಲದೇ ಬೇರೆ ಬೇರೆ ವಿಭಾಗದ ನಾಯಕರುಗಳು ಹಾಜರಾಗಿದ್ದರು. ಆರ್ಜೆಡಿ ಬೆಂಬಲಿಗರು ಕೂಡಾ ಭಾರೀ ಸಂಖ್ಯೆಯಲ್ಲಿ ಹಾಜರಾಗಿದ್ದರು. ಇನ್ನು ತೇಜ್ ಪ್ರತಾಪ್ ವಿವಾಹದಲ್ಲಿ ಭಾರೀ ಗದ್ದಲವೇ ಎದ್ದಿತ್ತು. ವಿವಾಹದಲ್ಲಿ ಆಹಾರಕ್ಕಾಗಿ ದೊಡ್ಡ ಗಲಾಟೆಯೇ ನಡೆದಿತ್ತು, ಎಲ್ಲೆಂದರಲ್ಲಿ ತುಂಡಾದ ತಟ್ಟೆ, ಟೇಬಲ್ಗಳು ಬಿದ್ದಿದ್ದವು. ಆದರೆ ಈ ಬಾರಿ ಈ ಕೊರೊನಾ ಸಂದರ್ಭದಲ್ಲಿ ಲಾಲು ಪ್ರಸಾದ್ರ ಆರೋಗ್ಯದ ನಿಟ್ಟಿನಲ್ಲಿ ಬಹಳ ಕಡಿಮೆ ಜನ ಸೇರಿ ವಿವಾಹ ನಡೆಸಲಾಗಿದೆ. ಈ ನಡುವೆ ತೇಜ್ ಪ್ರತಾಪ್ ಯಾದವ್ರ ಪತ್ನಿ ಐಶ್ವರ್ಯಾ ರಾಯ್ ವಿವಾಹಕ್ಕೆ ಆಗಮಿಸಿಲ್ಲ. ಪಾಟ್ನಾದಲ್ಲಿ ಈಗಲೂ ಈ ಜೋಡಿಯ ವಿಚ್ಛೇಧನ ಅರ್ಜಿ ವಿಚಾರಣೆ ನಡೆಯುತ್ತಿದೆ.
(ಒನ್ಇಂಡಿಯಾ ಸುದ್ದಿ)