ಎನ್ ಟಿಆರ್ ಅಳಿಯ ಈಗ ಕಾಂಗ್ರೆಸ್ ದೋಸ್ತಿ, ಏನಾಯ್ತು ತೆಲುಗರ ಸ್ವಾಭಿಮಾನ?

ರಾಜಕಾರಣದಲ್ಲಿ ಯಾವುದನ್ನೂ ವ್ಯಂಗ್ಯ, ವ್ಯರ್ಥ ಎಂದು ಪರಿಗಣಿಸುವಂತಿಲ್ಲ. ಆದರೆ ಟಿಡಿಪಿಯ ಚಂದ್ರಬಾಬು ನಾಯ್ಡು ಹಾಗೂ ಕಾಂಗ್ರೆಸ್ ಜತೆಗೆ ಅವರ ಆಲಿಂಗನ ಅಂಥದ್ದೊಂದು ಭಾವನೆ ಮೂಡಿಸುತ್ತದೆ. ಏಕೆಂದರೆ, ತೆಲುಗು ದೇಶಂ ಪಾರ್ಟಿ ಹುಟ್ಟಿದ್ದು ಕಾಂಗ್ರೆಸ್ ವಿರುದ್ಧದ ಸ್ವಾಭಿಮಾನದ ಧ್ವನಿಯಾಗಿ. ಅದನ್ನು ಹೆಗಲ ಮೇಲೆ ಹೊತ್ತು ಅಧಿಕಾರಕ್ಕೆ ತಂದವರು ಎನ್.ಟಿ.ರಾಮಾರಾವ್ (ಚಂದ್ರಬಾಬು ನಾಯ್ಡು ಮಾವ).

ಆದರೆ, ಯಾವ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಡಿ, ಆ ಪಕ್ಷಕ್ಕೆ ದಶಕಗಳ ಕಾಲ ಆಂಧ್ರಪ್ರದೇಶದಲ್ಲಿ ಅಧಿಕಾರವೇ ಸಿಗದಂತೆ ನೋಡಿಕೊಂಡ ಪ್ರಬಲ ಪ್ರಾದೇಶಿಕ ಪಕ್ಷ ಟಿಡಿಪಿ ಈಗ ಹಾಥ್ ಮಿಲಾಯಿಸುತ್ತಿದೆ. ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಮಿತ್ರ ಪಕ್ಷಗಳನ್ನು ಮಣಿಸಲು ಈ ಮೈತ್ರಿ ಅನಿವಾರ್ಯ ಎನ್ನುತ್ತಿದ್ದಾರೆ ಎನ್.ಟಿ.ರಾಮಾ ರಾವ್ ಅಳಿಯ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು.

ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ನಾಯ್ಡು ಅವರೇನೋ 'ಪ್ರಜಾತಾಂತ್ರಿಕ ಅಗತ್ಯ' ಹಾಗೂ 'ದೇಶವನ್ನು ರಕ್ಷಿಸುವ ಸಲುವಾಗಿ ನಾವು ಕೈ ಜೋಡಿಸಿದ್ದೇವೆ' ಎನ್ನುತ್ತಿದ್ದಾರೆ. 1996ರಲ್ಲಿ ಕಾಂಗ್ರೆಸ್ ಅನ್ನು ವಿರೋಧಿಸಿ, ಸಂಯುಕ್ತ ರಂಗ ಸರಕಾರ ರಚನೆಯಾಗುವಾಗ ಮುಂಚೂಣಿಯಲ್ಲಿದ್ದವರು ಇದೇ ಚಂದ್ರಬಾಬು ನಾಯ್ಡು.

ವಿವಿಧ ಪಕ್ಷಗಳ ನಾಯಕರ ಜತೆಗೆ ಚರ್ಚೆ

ವಿವಿಧ ಪಕ್ಷಗಳ ನಾಯಕರ ಜತೆಗೆ ಚರ್ಚೆ

ಆದರೆ, ಈಗ, ಕಾಂಗ್ರೆಸ್ ಸೈದ್ಧಾಂತಿಕವಾಗಿ ನಮ್ಮ ವಿರೋಧ ಪಕ್ಷ ಎಂದಿದ್ದು, ಬಿಜೆಪಿಯನ್ನು ವಿರೋಧಿಸುವ ಎಲ್ಲ ಪಕ್ಷಗಳು ಒಟ್ಟಾಗಬೇಕು ಹಾಗೂ ಅಂಥ ಎಲ್ಲ ರಾಜಕೀಯ ಪಕ್ಷಗಳು ಒಂದು ವೇದಿಕೆಯಲ್ಲಿ ಜಮೆ ಆಗಲು ಒಂದು ಅವಕಾಶ ಆಗಬೇಕು ಎಂಬುದು ನನ್ನ ಪ್ರಸ್ತಾವ ಎಂದಿದ್ದಾರೆ ನಾಯ್ಡು. ಇದೇ ಸಲಹೆ ಜತೆಗೆ ರಾಹುಲ್ ಗಾಂಧಿಯೊಟ್ಟಿಗೆ ದೆಹಲಿಯಲ್ಲಿ ಮಾತುಕತೆ ನಡೆಸುವ ಮುನ್ನ ಎನ್ ಸಿಪಿಯ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ ನ ಫಾರೂಕ್ ಅಬ್ದುಲ್ಲಾ ಅವರನ್ನು ಸಹ ಗುರುವಾರ ಭೇಟಿ ಆಗಿದ್ದಾರೆ ಚಂದ್ರಬಾಬು ನಾಯ್ಡು. ಅಷ್ಟೇ ಅಲ್ಲ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್, ಸಿಪಿಎಂ ನಾಯಕ ಸೀತಾರಾಂ ಯೆಚೂರಿಯ ಜತೆಗೂ ಚರ್ಚೆ ನಡೆಸಿದ್ದಾರೆ.

ಹಳೆಯ ವೈಷಮ್ಯ ಮರೆತು ಮುನ್ನಡೆಯಬೇಕು

ಹಳೆಯ ವೈಷಮ್ಯ ಮರೆತು ಮುನ್ನಡೆಯಬೇಕು

ಕಳೆದ ಕೆಲ ದಿನಗಳಿಂದ ಭೇಟಿ-ಚರ್ಚೆಗಳು ನಡೆಯುತ್ತಲೇ ಇವೆ. ಇದಕ್ಕೂ ಮುನ್ನ ಬಿಎಸ್ ಪಿಯ ಮಾಯಾವತಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಜೆಪಿ ತೊರೆದಿರುವ ಯಶವತ್ ಸಿನ್ಹಾ, ಲೋಕತಾಂತ್ರಿಕ್ ಜನತಾ ದಳದ ಶರದ್ ಯಾದವ್ ರ ಜೊತೆಗೂ ಚಂದ್ರ ಬಾಬು ನಾಯ್ಡು ಒಂದು ಸುತ್ತು ಮಾತುಕತೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಪುರಾತನ ಹಡಗಿನ ಕ್ಯಾಪ್ಟನ್ ಸೀಟ್ ನಲ್ಲಿ ಕೂತಿರುವ ರಾಹುಲ್ ಗಾಂಧಿ ಸಹ ನಾಯ್ಡು ಭೇಟಿ ನಂತರ ಸಕಾರಾತ್ಮಕ ಮಾತುಗಳನ್ನಾಡಿದ್ದಾರೆ. ಈ ಭೇಟಿ ಮಹತ್ವವಾದದ್ದು. ಎರಡೂ ಪಕ್ಷಗಳು ಹಳೆಯದನ್ನು ಮರೆತು ಬಿಜೆಪಿ ಜತೆಗೆ ಬಡಿದಾಡಬೇಕಿದೆ. ಟಿಡಿಪಿ ಹಾಗೂ ಕಾಂಗ್ರೆಸ್ ಒಟ್ಟಿಗೆ ಕೆಲಸ ಮಾಡುತ್ತದೆ. ತೆಲಂಗಾಣ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ನಾವು ಒಟ್ಟಿಗೆ ಹೋರಾಡುತ್ತೇವೆ ಎಂದಿದ್ದಾರೆ.

ಸಾಂವಿಧಾನಿಕ ಸಂಸ್ಥೆಗಳನ್ನು ಉಳಿಸಿಕೊಳ್ಳಬೇಕು

ಸಾಂವಿಧಾನಿಕ ಸಂಸ್ಥೆಗಳನ್ನು ಉಳಿಸಿಕೊಳ್ಳಬೇಕು

ಇಬ್ಬರೂ ಬಾಚಿ ತಬ್ಬಿಕೊಂಡು, ದೇಶದ ಪ್ರಜಾಪ್ರಭುತ್ವ ಉಳಿಸಬೇಕಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ರಕ್ಷಿಸಬೇಕು. ದೇಶದ ಭವಿಷ್ಯವನ್ನು ಉಳಿಸಬೇಕು. ಆ ಕಾರಣಕ್ಕೆ ನಾವು ಒಟ್ಟಾಗಿದ್ದೇವೆ. ಒಟ್ಟಾಗಿ ಕೆಲಸ ಮಾಡುತ್ತೇವೆ. ದೇಶ ಉಳಿಸಿಕೊಳ್ಳುವ ಸಲುವಾಗಿ ವಿರೋಧ ಪಕ್ಷಗಳೆಲ್ಲ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಮ್ಮ ಮಧ್ಯ್ ಈ ಹಿಂದೆ ವೈಷಮ್ಯ ಇತ್ತು. ಈಗ ನಾವಿಬ್ಬರೂ ಭೂತ ಕಾಲದ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ವರ್ತಮಾನ ಹಾಗೂ ಭವಿಷ್ಯದ ಬಗ್ಗೆ ಮಾತ್ರ ಮಾತನಾಡುತ್ತೇವೆ. ದೇಶ ಸಂಕಷ್ಟದಲ್ಲಿದೆ. ನಮ್ಮ ಮೂಲ ಉದ್ದೇಶ ಬಿಜೆಪಿಯನ್ನು ಸೋಲಿಸುವುದು ಹಾಗೂ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಉಳಿಸುವುದು. ಇತರ ವಿಚಾರಗಳನ್ನು ನಂತರ ಮಾತನಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಮುಖ್ಯವಾದ ವಿರೋಧ ಪಕ್ಷ

ಕಾಂಗ್ರೆಸ್ ಮುಖ್ಯವಾದ ವಿರೋಧ ಪಕ್ಷ

ಇನ್ನು ನಾಯ್ಡು ಪಾಲಿಗೆ ಮೈತ್ರಿಯು 'ಪ್ರಜಾತಾಂತ್ರಿಕ ಅನಿವಾರ್ಯ'. ಇದಕ್ಕೂ ಮುನ್ನ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ರನ್ನು ಚಂದ್ರಬಾಬು ನಾಯ್ಡು ಭೇಟಿ ಆಗಿದ್ದರು. ಆ ಭೇಟಿ ಅನಿರೀಕ್ಷಿತವಾದದ್ದು ಎಂದಿತ್ತು ಟಿಡಿಪಿ. "ಕಾಂಗ್ರೆಸ್ ಮುಖ್ಯವಾದ ವಿರೋಧ ಪಕ್ಷ. ನಾವೆಲ್ಲ ಇರುತ್ತೇವೆ. ಕೂತು, ತೀರ್ಮಾನಿಸಿ ಮುಂದುವರಿಯುತ್ತೇವೆ. ನಮ್ಮೆಲ್ಲರಿಗೂ ಒಂದು ನೆಲೆ ಇದೆ. ಆದರೆ ವಾಸ್ತವ ಏನೆಂದರೆ, ಕಾಂಗ್ರೆಸ್ ಪಕ್ಷವೇ ಮುಖ್ಯ ವಿರೋಧ ಪಕ್ಷ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಉಳಿದ ಪಕ್ಷಗಳು ಅಗತ್ಯ. ಈ ವಿಚಾರದಲ್ಲಿ ನಾವೆಲ್ಲ ಚರ್ಚೆ ಮಾಡುತ್ತೇವೆ. ನಮ್ಮ ಉದ್ದೇಶ ದೇಶವನ್ನು ರಕ್ಷಿಸುವುದು" ಎಂದು ನಾಯ್ಡು ಹೇಳಿದ್ದಾರೆ.

ಟಿಡಿಪಿ ಆರಂಭ ಆಗಿದ್ದೇ ಕಾಂಗ್ರೆಸ್ ವಿರುದ್ಧ ಧ್ವನಿಯಾಗಿ

ಟಿಡಿಪಿ ಆರಂಭ ಆಗಿದ್ದೇ ಕಾಂಗ್ರೆಸ್ ವಿರುದ್ಧ ಧ್ವನಿಯಾಗಿ

ತೆಲುಗು ದೇಶಂ ಪಾರ್ಟಿ ಆರಂಭವಾಗಿದ್ದೇ ತೆಲುಗರ ಅಭಿಮಾನದ ಸಂಕೇತವಾಗಿ. ಕಾಂಗ್ರೆಸ್ ನಿಂದ ತೆಲುಗು ಜನರಿಗೆ ಅವಮಾನವಾಗಿದೆ ಎಂದು ಎನ್.ಟಿ.ರಾಮಾರಾವ್ ಸ್ಥಾಪಿಸಿದ ಪಕ್ಷ. ಇಂದಿರಾ ಗಾಂಧಿಯ ಹತ್ಯೆಯ ನಂತರ ಎದ್ದ ಅನುಕಂಪದ ಅಲೆಯ ಹೊರತಾಗಿ ಗೆದ್ದು ಬಂದ ಪಕ್ಷ. ಎರಡೂ ಪಕ್ಷಗಳ ಮತಬ್ಯಾಂಕ್ ಗಳು ಬೇರೆ ಬೇರೆ. ಆಂಧ್ರಪ್ರದೇಶದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಆಗಾಗ ಹೊಡೆದಾಟಗಳು ನಡೆಯುತ್ತವೆ. "ರಫೇಲ್ ವಿಚಾರದಲ್ಲಿ ಉಳಿದ ವಿರೋಧ ಪಕ್ಷಗಳು ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿಲ್ಲ ಏಕೆ" ಎಂಬ ಪ್ರಶ್ನೆಗೆ, ನಾಯ್ಡುಜೀ ಉತ್ತರಿಸುತ್ತಾರೆ ಎಂದರು ರಾಹುಲ್. ಆ ವೇಳೆ ಮಾತನಾಡಿದ ನಾಯ್ಡು, ಆಂಧ್ರ ವಿಭಜನೆಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಿಸುವ ವಿಚಾರವಾಗಿ ರಾಹುಲ್ ಗಾಂಧಿ ಬೆಂಬಲ ನೀಡಿದರು. ನಾವೆಲ್ಲ ಒಟ್ಟಾಗಿದ್ದೇವೆ. ಏನಾಗುತ್ತಿದೆ ಎಂಬ ಬಗ್ಗೆ ಕಾಳಜಿ ಇದೆ. ಆದ್ದರಿಂದಲೇ ರಾಹುಲ್ ಗಾಂಧಿ ರಫೇಲ್ ಸೇರಿದಂತೆ ಇತರ ಸಮಸ್ಯೆಗಳ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಇತರ ಪಕ್ಷಗಳು ಕೂಡ ಮಾತನಾಡುತ್ತಿವೆ. ನಾನು ಕೂಡ ರಾಷ್ಟ್ರೀಯ ವೇದಿಕೆಗಳಲ್ಲಿ ಮಾತನಾಡುತ್ತಿದ್ದೇನೆ. ಒಂದು ಧ್ವನಿ ಜೋರಾಗಿದ್ದರೆ ಅದರ ಪರಿಣಾಮವೇ ಅದ್ಭುತವಾಗಿರುತ್ತದೆ. ಅದನ್ನು ನಾವು ಮಾಡುತ್ತೇವೆ" ಎಂದಿದ್ದಾರೆ.

ಜನರ ತೀರ್ಪು ಆರು ತಿಂಗಳೊಳಗೆ ದೊರೆಯಲಿದೆ

ಜನರ ತೀರ್ಪು ಆರು ತಿಂಗಳೊಳಗೆ ದೊರೆಯಲಿದೆ

ಮೋದಿ ಸರಕಾರ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ನಾಶಪಡಿಸುತ್ತಿದೆ. ಬಿಜೆಪಿಯನ್ನು ವಿರೋಧಿಸುವ ಎಲ್ಲ ಪಕ್ಷಗಳನ್ನು ಒಟ್ಟು ಮಾಡಬೇಕಿದೆ. ಭವಿಷ್ಯಕ್ಕಾಗಿ ಯೋಜನೆ ರೂಪಿಸಬೇಕಿದೆ. ಕಳೆದ ನಲವತ್ತು ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ. ಇಂಥ ಆಡಳಿತವನ್ನು ಎಂದೂ ನೋಡಿಲ್ಲ. ಸಾಂವಿಧಾನಿಕ ಸಂಸ್ಥೆಗಳಾದ ಆರ್ ಬಿಐ, ಸಿಬಿಐ, ಇಡಿ, ಐಟಿ ಅಷ್ಟೇ ಯಾಕೆ ಸುಪ್ರೀಂ ಕೋರ್ಟ್ ಅನ್ನು ಕೂಡ ನಾಶ ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲ ವಿರೋಧ ಪಕ್ಷಗಳು ಒಂದು ವೇದಿಕೆಯಲ್ಲಿ ಒಟ್ಟಾಗಿ ಎಂದು ಪ್ರಸ್ತಾವ ಇಟ್ಟಿರುವುದಾಗಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಒಟ್ಟಾರೆ ಈ ಮೈತ್ರಿ ಹೇಗೆ ಕೆಲಸ ಮಾಡಬಹುದು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ನಾಯ್ಡು ತೆಗೆದುಕೊಂಡ ನಿಲುವಿಗೆ ಇನ್ನೇನು ಆರು ತಿಂಗಳೊಳಗೆ ಉತ್ತರ ದೊರೆಯಲಿದೆ. ಏಕೆಂದರೆ ಆಂಧ್ರದಲ್ಲಿ 2020ಕ್ಕೆ ವಿಧಾನಸಭಾ ಚುನಾವಣೆ ಇದೆ. ಅದಕ್ಕೂ ಮುನ್ನ 2019ರಲ್ಲಿ ಇರುವ ಲೋಕಸಭೆ ಚುನಾವಣೆಯಲ್ಲಿ ಜನರು ಏನು ತೀರ್ಪು ನೀಡಬಹುದೋ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+