ಕುಟುಂಬವೇ ಕಷ್ಟದಲ್ಲಿದ್ದರೂ ಕೊಡಗಿನ ಡಿಸಿ ಶ್ರೀವಿದ್ಯಾ ಕೆಲಸ ಗೊತ್ತೆ?
ಸರಕಾರವನ್ನು, ವ್ಯವಸ್ಥೆಯನ್ನು, ಅಧಿಕಾರಿಗಳನ್ನು ಬಯ್ಯುವುದಕ್ಕೆ ಅಂತಲೇ ಆಣೆ ಮಾಡಿದಂತೆ ವರ್ತಿಸುವವರು ಹೆಜ್ಜೆಹೆಜ್ಜೆಗೂ ಸಿಗುತ್ತಾರೆ. ಕೆಲವು ಸಲ ಅಂಥ ಸನ್ನಿವೇಶ ಎದುರಾಗಿದ್ದಿರಬಹುದು. ಆದರೆ ತಮ್ಮ ಮನೆ-ಮಕ್ಕಳು, ಕುಟುಂಬ ಎಲ್ಲದರ ಕ್ಷೇಮ- ಸೌಖ್ಯವನ್ನು ಮರೆತೂ ತಮ್ಮ ಕೆಲಸ ನಿರ್ವಹಿಸುವ ಅಧಿಕಾರಿಗಳೂ ಹೆಜ್ಜೆಹೆಜ್ಜೆಗೆ ಸಿಗುತ್ತಾರೆ.
ಈಚೆಗೆ ಕೇರಳದಲ್ಲಿ ತಲೆದೋರಿದ ಪ್ರವಾಹ ಪರಿಸ್ಥಿತಿ, ಆ ನಂತರ ಕೊಡಗು ಸೇರಿದಂತೆ ಕರ್ನಾಟಕದ ವಿವಿಧೆಡೆ ಉದ್ಭವಿಸಿದ ನೆರೆ ಸನ್ನಿವೇಶದಲ್ಲಿ ಹಲವು ಅಧಿಕಾರಿಗಳು ಹಗಲು-ಇರುಳೆನ್ನದೆ ಜನರಿಗಾಗಿ ಶ್ರಮಿಸಿದ್ದಾರೆ. ದೊಡ್ಡ ಅನಾಹುತಗಳನ್ನು ತಪ್ಪಿಸಲು ಹೆಣಗಿದ್ದಾರೆ. ಅಂಥವರ ಪೈಕಿ ಐಎಎಸ್ ಅಧಿಕಾರಿ- ಕೊಡಗಿನ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಕೂಡ ಒಬ್ಬರು.
ಚಿತ್ರಗಳು : ಮಳೆ, ಭೂ ಕುಸಿತದ ಬಳಿಕ ಕೊಡಗು ಜಿಲ್ಲೆ
ಎಂಟು ತಿಂಗಳ ಹಿಂದಷ್ಟೇ ಉದ್ಯೋಗಕ್ಕೆ ಸೇರಿದ- ಕೊಡಗಿನ ಜಿಲ್ಲಾಧಿಕಾರಿ ಜವಾಬ್ದಾರಿ ತೆಗೆದುಕೊಂಡ ಶ್ರೀವಿದ್ಯಾ ಅವರಿಗೆ ಆಗಸ್ಟ್ ಹನ್ನೆರಡನೇ ತಾರೀಕು ಕರೆ ಬಂದಿತ್ತು. ಜಿಲ್ಲೆಯಲ್ಲಿ ಸಿಕ್ಕಾಪಟ್ಟೆ ಹಾಗೂ ವಾಡಿಕೆಗಿಂತ ಅತಿ ಹೆಚ್ಚು ಮಳೆ ಆಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ ಅದು ಎಷ್ಟರ ಮಟ್ಟಿದೆ ನಿಜವಾಗುತ್ತದೋ ಎಂದು ಒಂದಿನಿತೂ ಆಲೋಚಿಸದೆ ಶ್ರೀವಿದ್ಯಾ ಅವರು ಅಗತ್ಯ ಸಿದ್ಧತೆಗಳನ್ನು ಆರಂಭಿಸಿದರು.
ಭೂ ಕುಸಿತವನ್ನು ಮುಂದಾಗಿಯೇ ಊಹಿಸಿದ್ದರು
ಕೊಡಗು ಅಂದರೆ ಬೆಟ್ಟ-ಗುಡ್ಡಗಳಿಂದ ಕೂಡಿರುವ ಪ್ರದೇಶ. ಭೂಕುಸಿತ ಪ್ರಮಾಣ ಕೂಡ ಹೆಚ್ಚು. ಆದ್ದರಿಂದಲೇ ತಕ್ಷಣವೇ ಕ್ರಮ ತೆಗೆದುಕೊಳ್ಳದಿದ್ದರೆ ಜೀವಹಾನಿಯ ಪ್ರಮಾಣ ಹೆಚ್ಚಾಗಬಹುದು ಎಂಬುದನ್ನು ಅವರು ಊಹಿಸಿದ್ದರು. ಒಂದೇ ದಿನದಲ್ಲಿ ಇಡೀ ವ್ಯವಸ್ಥೆ ಸಜ್ಜುಗೊಳಿಸಿದರು. ತಾವೇ ಮುಂಚೂಣಿಯಲ್ಲಿ ನಿಂತರು. ಸಾರ್ವಜನಿಕರಿಗೆ ಅಪಾಯದ ಮುನ್ಸೂಚನೆ ನೀಡುವುದು, ಮನೆಗಳಿಂದ್ ಸ್ಥಳಾಂತರ ಮಾಡುವುದು, ಪರಿಹಾರ ಶಿಬಿರಗಳಿಗೆ ಕರೆತರುವುದು ಸೇರಿದಂತೆ ಇತರ ಕಾರ್ಯ ಚಟುವಟಿಕೆಗಳು ಶುರು ಆದವು. ಅದೇ ವೇಳೆಗೆ ಜಿಲ್ಲಾಧಿಕಾರಿ ಕಚೇರಿ ಬಳಿಯೇ ಕಂಟ್ರೋಲ್ ರೂಮ್ ತೆರೆದರು. ಪರಿಹಾರ ಕಾರ್ಯಾಚರಣೆ ಸಲೀಸಾಗಲಿ ಎಂಬ ಕಾರಣಕ್ಕೆ ಅವರು ಈ ನಿರ್ಧಾರ ಮಾಡಿದ್ದರು.
ಚಿತ್ರಗಳು : ಮಡಿಕೇರಿ-ಮಂಗಳೂರು ರಸ್ತೆ ದುರಸ್ಥಿ
ತಂಡ ಕಟ್ಟಿಕೊಂಡು ಪರಿಹಾರ ಕಾರ್ಯಾಚರಣೆ
ಈ ಹಂತದಲ್ಲಿ ಶ್ರೀವಿದ್ಯಾ ಅವರು ಏಕಾಂಗಿ ಏನಾಗಿರಲಿಲ್ಲ. ಶಾಸಕರು, ಜಿಲ್ಲಾ ಪೊಲೀಸ್ ವರಿಷ್ಠರು, ಜನ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ಎಲ್ಲರನ್ನು ಜತೆ ಮಾಡಿಕೊಂಡು ಒಂದು ತಂಡ ಕಟ್ಟಿ, ಪರಿಹಾರ ಕಾರ್ಯಾಚರಣೆ ಯಾವುದೇ ಗೊಂದಲ ಇಲ್ಲದೆ ನಡೆಯುವಂತೆ ನೋಡಿಕೊಂಡರು. ಕೊಡಗು ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಅನಾಹುತ ಜರುಗದಂತೆ ಹಾಗೂ ಅಗತ್ಯ ನೆರವು ಒದಗಿಸಲು ಸಾಧ್ಯವಾಯಿತು. ಮುಂಜಾಗ್ರತಾ ಕ್ರಮಗಳಿಂದ ಜೀವ ಹಾಗೂ ಆಸ್ತಿ ಹಾನಿ ತಡೆಯಬಹುದು ಎಂಬುದು ನಮ್ಮ ಉದ್ದೇಶ ಆಗಿತ್ತು ಎನ್ನುತ್ತಾರೆ ಶ್ರೀವಿದ್ಯಾ.
ಕೊಡಗಿನ ಕಾಫಿಗೆ ನಷ್ಟ ಉಂಟಾಗಿದ್ದು ಬರೋಬ್ಬರಿ 386 ಕೋಟಿ
ಕೇರಳ ಪ್ರವಾಹದಲ್ಲಿ ಪತಿ- ಕೊಡಗಿನಲ್ಲಿ ಪತ್ನಿ
ಒಂದು ಕಡೆ ಅವರೇನೋ ತಮ್ಮ ಕೆಲಸದಲ್ಲಿ ಬಿಡುವಿಲ್ಲದಷ್ಟು ತಲೀನರಾಗಿದ್ದರೆ, ಸ್ವತಃ ಶ್ರೀವಿದ್ಯಾ ಕುಟುಂಬ ಸದಸ್ಯರೇ ಸಂಕಷ್ಟಕ್ಕೆ ಸಿಲುಕಿದ್ದರು. ಅವರ ಪತಿ ಟಿ.ನಾರಾಯಣನ್ ಕೇರಳದ ಪಥನಂಥಿಟ್ಟದಲ್ಲಿ ಪೊಲೀಸ್ ಮುಖ್ಯಸ್ಥರು. ಆ ರಾಜ್ಯದಲ್ಲಿ ಆದ ಅನಾಹುತದಲ್ಲೇ ಅತಿ ಹೆಚ್ಚಿನ ಪ್ರಮಾಣದ ಹಾನಿಯಾಗಿದ್ದು ಅಲ್ಲೇ. ಒಂದು ಕಡೆ ಕೊಡಗಿನಲ್ಲಿ ಪ್ರವಾಹ ಸ್ಥಿತಿ ಎದುರಾಗಿ ಪತ್ನಿ, ಮತ್ತೊಂದು ಕಡೆ ಕೇರಳದಲ್ಲಿ ಪತಿ. ಇಬ್ಬರಿಗೂ ಒಂದೇ ಪರೀಕ್ಷೆ. ಆ ವೇಳೆಯಲ್ಲಿ ಪರಸ್ಪರರಿಗೆ ಫೋನ್ ನಲ್ಲಿ ಕೂಡ ಮಾತನಾಡಲು ಸಾಧ್ಯವಾಗಿರಲಿಲ್ಲ. ಇನ್ನು ವಿದ್ಯಾರ ನಾಲ್ಕು ವರ್ಷದ ಮಗ ತನ್ನ ತಾತ-ಅಜ್ಜಿ ಜತೆಗೆ ಪರಿಹಾರ ಶಿಬಿರದಲ್ಲಿದ್ದ. "ಅವರಿದ್ದ ಸ್ಥಳದಲ್ಲಿ ಅಷ್ಟು ಪ್ರಮಾಣದ ಹಾನಿ ಆಗಿದೆ ಎಂಬುದು ನನಗೆ ಗೊತ್ತಿಲ್ಲ. ಕೊಡಗಿನಲ್ಲಿ ಏನಾಗಿದೆ ಎಂಬುದು ಅವರಿಗೆ ಗೊತ್ತಾಗಿಲ್ಲ. ಆ ಸಮಯದಲ್ಲಿ ನಮ್ಮಿಬ್ಬರ ಮಧ್ಯೆ ಮಾತುಕತೆಯೇ ಸಾಧ್ಯವಾಗಿಲ್ಲ" ಎಂದು ತಮ್ಮ ಪತಿಯ ಬಗ್ಗೆ ಹೇಳುತ್ತಾರೆ ಶ್ರೀವಿದ್ಯಾ.
ಪ್ರವಾಸಿಗರ ಮೇಲೆ ನಿಷೇಧ ಹೇರಲಾಯಿತು
ಆಗಸ್ಟ್ 20ರ ಹೊತ್ತಿಗೆ ಸಾವಿರಾರು ಮಂದಿ ಶಿಬಿರಗಳಲ್ಲಿ ಸುರಕ್ಷಿತವಾಗಿದ್ದರು. ಪರಿಹಾರ ಸಾಮಗ್ರಿಗಳು ಕೊಡಗಿಗೆ ಹರಿದುಬರಲು ಆರಂಭಿಸಿದವು. ಅವುಗಳನ್ನು ಮಡಿಕೇರಿಯಲ್ಲಿ ಪಡೆದುಕೊಂಡು, ಅಲ್ಲಿಂದ ವಿವಿಧ ಪಂಚಾಯಿತಿಗಳ ಮೂಲಕ ಹಂಚುವ ವ್ಯವಸ್ಥೆ ಮಾಡಲಾಯಿತು. ಸ್ಥಳೀಯರನ್ನೇನೋ ರಕ್ಷಿಸಿದ್ದಾಯಿತು. ಆದರೆ ಕೊಡಗಿನ ಪರಿಸ್ಥಿತಿ ಗೊತ್ತಿಲ್ಲದ ಅನೇಕ ಪ್ರವಾಸಿಗರು ಬರುತ್ತಲೇ ಇದ್ದರು. ಇದರಿಂದ ಸಾಗಾಟ ಹಾಗೂ ಪರಿಹಾರ ಕಾರ್ಯಾಚರಣೆಯ ಹೊರೆ ಜಿಲ್ಲಾಡಳಿತಕ್ಕೆ ಮತ್ತೂ ಹೆಚ್ಚಾಯಿತು. ಆ ಕಾರಣದಿಂದಲೇ ಕೆಲ ಕಾಲ ಪ್ರವಾಸಿಗರು ಕೊಡಗಿಗೆ ಬರುವುದು ಬೇಡ ಎಂದು ಶ್ರೀವಿದ್ಯಾ ನಿಷೇಧ ಹಾಕಿದರು. ಒಂದು ಸಲ ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲಷ್ಟೇ ಆ ನಿಷೇಧವನ್ನು ತೆರವು ಮಾಡಲಾಯಿತು. ಶ್ರೀವಿದ್ಯಾರ ಪ್ರಯತ್ನಗಳನ್ನು ಇತರ ಅಧಿಕಾರಿಗಳು, ಜನಸಾಮಾನ್ಯರು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚಿಕೊಂಡರು.