ಶ್ರೀಲಂಕಾ ಮತ್ತು ಪೆಟ್ರೋಲ್ ಕಥೆ- 20 ರೂ ಇಳಿದರೂ ಕಣ್ಣೀರು ತರಿಸುತ್ತೆ ಬೆಲೆ
ಕೊಲಂಬೋ: ಶ್ರೀಲಂಕಾದಲ್ಲಿ ವಿಪರೀತ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ಎದುರಾಗಿ ಜನರು ಹೈರಾಣವಾಗಿದ್ದಾರೆ. ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ ತೀರಾ ದುಬಾರಿಯಾಗಿಹೋಗಿದೆ. ಈ ಹೊತ್ತಿನಲ್ಲಿ ಶ್ರೀಲಂಕಾದ ಪೆಟ್ರೋಲಿಯಂ ಕಂಪನಿಗಳು ಪೆಟ್ರೋಲ್ ದರಗಳನ್ನು ಇಳಿಸಿವೆ.
ಸರಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್ (ಸಿಪಿಸಿ) ಮತ್ತು ಲಂಕನ್ ಆಯಿಲ್ ಕಾರ್ಪೊರೇಶನ್ (ಎಲ್ಐಒಸಿ) ಪೆಟ್ರೋಲ್ ಬೆಲೆಯನ್ನು ಒಂದು ಲೀಟರ್ಗೆ 20 ರೂನಷ್ಟು ತಗ್ಗಿಸಿವೆ. ಡೀಸೆಲ್ ಬೆಲೆಯೂ 20 ರೂ ಇಳಿದಿವೆ.
ಬುಧವಾರ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ; ಇವರೇ ಪ್ರಬಲ ಆಕಾಂಕ್ಷಿಗಳು
ಭಾರತದಲ್ಲಿ 20 ರೂನಷ್ಟು ಬೆಲೆ ಇಳಿಕೆಯಾದರೆ ಜನರು ಕುಣಿದು ಕುಪ್ಪಳಿಸುವಂತಾಗುತ್ತಿತ್ತು. ಆದರೆ, ಶ್ರೀಲಂಕಾದಲ್ಲಿ 20 ರೂ ಬೆಲೆ ಇಳಿಕೆಯಾಗಿರುವುದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ. ಶೇ. 4ರ ಆಸುಪಾಸಿನಷ್ಟು ಬೆಲೆ ಇಳಿಕೆಯಾಗಿದೆ.
ಶ್ರೀಲಂಕಾದಲ್ಲಿ 470 ರೂ ಇದ್ದ ಆಕ್ಟೇನ್ 92 ಪೆಟ್ರೋಲ್ ಈಗ 450 ರೂಪಾಯಿಗೆ ತಗ್ಗಿದೆ. ಆಕ್ಟೇನ್ 95 ಪೆಟ್ರೋಲ್ ಬೆಲೆ 10 ರೂ ತಗ್ಗಿದ್ದು, ಈಗ ಲೀಟರ್ಗೆ 540 ರೂಪಾಯಿಗೆ ಇಳಿದಿದೆ.
ಇನ್ನು ಡೀಸೆಲ್ ಬೆಲೆ ಲೀಟರ್ಗೆ 440 ರೂಗೆ ಇಳಿದಿದೆ. ಸೂಪರ್ ಡೀಸೆಲ್ ಬೆಲೆ 510 ರೂ ಆಗಿದೆ.
ಅಧ್ಯಕ್ಷರ ಭವನದಲ್ಲಿ ಶ್ರೀಲಂಕಾ ಯುವತಿಯ ಫೋಟೋ ಪೋಸ್: ಚಿತ್ರಗಳು ವೈರಲ್
ಶ್ರೀಲಂಕಾದಲ್ಲಿ ಪೆಟ್ರೋಲ್ ಇಷ್ಟು ದುಬಾರಿಯಾಗಲು ಕಾರಣ?
ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಲು ಮೂರು ಕಾರಣ. ಒಂದು ಆರ್ಥಿಕ ಪರಿಸ್ಥಿತಿ, ಮತ್ತೊಂದು ಪೆಟ್ರೋಲ್ ಅಲಭ್ಯತೆ, ಮಗದೊಂದು ಲಂಕಾ ಕರೆನ್ಸಿ ಮೌಲ್ಯ ಕುಸಿದಿರುವುದು.
ಶ್ರೀಲಂಕಾದಲ್ಲಿ ಪೆಟ್ರೋಲ್ ಅಮದು ಮಾಡಿಕೊಳ್ಳಲು ಸಾಕಾವುಷ್ಟು ಹಣ ಇಲ್ಲ. ಹೀಗಾಗಿ, ಪೆಟ್ರೋಲ್ ದಾಸ್ತಾನು ಕಡಿಮೆ ಆಗಿದೆ. ಅನೇಕ ಕಡೆ ಜನರು ಸ್ವಂತ ವಾಹನ ಬಳಸುವುದನ್ನೇ ಬಿಟ್ಟಿದ್ದಾರೆ.
ಇನ್ನೊಂದೆಡೆ, ಆರ್ಥಿಕ ದುಸ್ಥಿತಿಯಿಂದಾಗಿ ಲಂಕಾದ ರೂಪಾಯಿ ಕರೆನ್ಸಿ ಮೌಲ್ಯ ಗಣನೀಯವಾಗಿ ಕುಸಿಯುತ್ತಿದೆ. ಒಂದು ಯುಎಸ್ ಡಾಲರ್ 358.81 ಶ್ರೀಲಂಕನ್ ರೂಪಾಯಿ ಆಗಿದೆ. ಹೀಗಾಗಿ, ಪೆಟ್ರೋಲ್ ಬೆಲೆ ಅಷ್ಟು ಏರಿಕೆಯಾದಂತೆ ತೋರುತ್ತಿದೆ. ವಾಸ್ತವದಲ್ಲಿ ರೂಪಾಯಿ ಮೌಲ್ಯ ತೀರಾ ಕುಸಿದಿರುವುದು ಇದಕ್ಕೆ ಕಾರಣ.
ಡಾಲರ್ ಲೆಕ್ಕದಲ್ಲಿ ನೋಡುವುದಾದರೆ ಶ್ರೀಲಂಕಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 1.25 ಯುಎಸ್ ಡಾಲರ್ ಇದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಇದು 100 ರೂಪಾಯಿ ಮಾತ್ರ. ಅಂದರೆ ಭಾರತಕ್ಕಿಂತಲೂ ಕಡಿಮೆ ಬೆಲೆ ಎಂದು ಅರ್ಥ ಮಾಡಿಕೊಳ್ಳಬಹುದು. ಈ ಕಡಿಮೆ ಬೆಲೆಯ ವಸ್ತುವನ್ನು ಕೊಳ್ಳಲೂ ಆಗದಷ್ಟು ಹಣಕಾಸು ಕೊರತೆ ಶ್ರೀಲಂಕಾದಲ್ಲಿದೆ. ಇದೇ ಆರ್ಥಿಕ ದುಸ್ಥಿತಿ.
ಪೆಟ್ರೋಲ್ ವಿತರಣೆಗೆ ವಿನೂತನ ವ್ಯವಸ್ಥೆ
ಕಳೆದ ಒಂದೆರಡು ತಿಂಗಳಿಂದ ಶ್ರೀಲಂಕಾದಲ್ಲಿ ಪೆಟ್ರೋಲ್ ಬಹುತೇಕ ಬರಿದಾಗಿತ್ತು. ಈಗ ಒಂದಿಷ್ಟು ಪ್ರಮಾಣದ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಮಟ್ಟಿಗಾದರೂ ಶ್ರೀಲಂಕಾದಲ್ಲಿ ಸೀಮಿತ ಪ್ರಮಾಣದಲ್ಲಿ ಪೆಟ್ರೋಲ್ ಸಿಗಲಿದೆ.
ಜುಲೈ 21ರಿಂದ ಶ್ರೀಲಂಕಾದಲ್ಲಿ ಪೆಟ್ರೋಲ್ ವಿತರಣೆಗೆ ಹೊಸ ಡಿಜಿಟಲ್ ವ್ಯವಸ್ಥೆ ಜಾರಿ ಮಾಡಲಾಗುತ್ತದೆ. ಟ್ರಕ್ಗಳ ಮೂಲಕ ಕೆಲ ನಿರ್ದಿಷ್ಟ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಹಾಕಲು ಅವಕಾಶ ಕೊಡಲಾಗುವುದು. ಈ ಟ್ರಕ್ಗಳು ಅಥವಾ ಗಾಡಿಗಳು ಯಾವುದಾದರೂ ಬಯಲು ಪ್ರದೇಶದಲ್ಲಿ ನಿಲ್ಲುತ್ತವೆ. ಪೆಟ್ರೋಲ್ ಬಂಕ್ಗಳಲ್ಲಿ ಉದ್ದುದ್ದ ಕ್ಯೂ ನಿರ್ಮಾಣವಾಗುವುದನ್ನು ಕಡಿಮೆ ಮಾಡಲು ಈ ವ್ಯವಸ್ಥೆ ಮಾಡಲಾಗುತ್ತಿದೆ.
ಫುಯೆಲ್ ಪಾಸ್
ಪೆಟ್ರೋಲ್ ಬಳಕೆ ಆದಷ್ಟೂ ಕಡಿಮೆ ಮಾಡುವಂತೆ ಜನರನ್ನು ಉತ್ತೇಜಿಸಲು ಸರಕಾರ ಪ್ರಯತ್ನಿಸುತ್ತಿದೆ. ಈಗಾಗಲೇ ಜನರೂ ಕೂಡ ಹಲವೆಡೆ ವಾಹನ ಬಳಕೆಯನ್ನೇ ಬಿಟ್ಟಿದ್ಧಾರೆ. ಈಗ ಶ್ರೀಲಂಕಾದಲ್ಲಿ ನ್ಯಾಷನಲ್ ಫುಯಲ್ ಪಾಸ್ ನೀಡಲಾಗುತ್ತಿದೆ. ಇದು ವಾಹನ ಸವಾರರಿಗೆ ನೀಡಲಾಗುವ ಪೆಟ್ರೋಲ್ ಪಾಸ್.
ಪ್ರತಿಯೊಂದು ವಾಹನದ ಗುರುತು ಸಂಖ್ಯೆ ಮತ್ತಿತರ ಮಾಹಿತಿ ಎಲ್ಲವನ್ನೂ ಮೊದಲು ಕಲೆಹಾಕಲಾಗುತ್ತದೆ. ಬಳಿಕ ನಾಗರಿಕರ ಐಡೆಂಟಿಟಿ ಕಾರ್ಡ್ ನಂಬರ್ಗೆ (ಎನ್ಐಸಿ) ಕ್ಯೂಆರ್ ಕೋಡ್ ಕಳುಹಿಸಲಾಗುತ್ತದೆ.
ಒಬ್ಬರಿಗೆ ವಾರಕ್ಕೊಮ್ಮೆ ಮಾತ್ರ ಪೆಟ್ರೋಲ್ ಹಾಕಿಸಿಕೊಳ್ಳಲು ಅವಕಾಶ. ಅಥವಾ ವಾರದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಕೊಡಲಾಗುತ್ತದೆ. ಒಂದು ಗುರುತು ಸಂಖ್ಯೆಯವರು ಒಂದು ವಾಹನಕ್ಕೆ ಮಾತ್ರ ಪೆಟ್ರೋಲ್ ಹಾಕಿಸಬಹುದು.
ಶ್ರೀಲಂಕಾದಲ್ಲಿ ಬರಲಿದ್ದಾರೆ ಹೊಸ ಅಧ್ಯಕ್ಷರು
ಆರ್ಥಿಕ ಮುಗ್ಗಟ್ಟು, ಜನರ ಪ್ರತಿಭಟನೆಗಳಿಂದಾಗಿ ಶ್ರೀಲಂಕಾ ಅಧ್ಯಕ್ಷ ಮತ್ತು ಪ್ರಧಾನಿ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಬುಧವಾರ ಹೊಸ ಅಧ್ಯಕ್ಷರ ಆಯ್ಕೆ ಆಗಲಿದೆ. ಹಾಲಿ ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ವಿಪಕ್ಷ ನಾಯಕ ಸಜಿತ್ ಪ್ರೇಮದಾಸ ಸೇರಿದಂತೆ ಏಳೆಂಟು ಜನರು ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.
ಇದೇ ವೇಳೆ, ಅಗತ್ಯ ವಸ್ತುಗಳನ್ನು ಕೊಳ್ಳಲೂ ಹಣ ಇಲ್ಲದ ಸ್ಥಿತಿಯಲ್ಲಿರುವ ಶ್ರೀಲಂಕಾ ಈಗ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ಪಡೆಯಲು ಕಸರತ್ತು ಮಾಡುತ್ತಿದೆ. ವಾಸ್ತವವಾಗಿ ಐಎಂಎಫ್ ಅಷ್ಟು ಸುಲಭಕ್ಕೆ ಸಾಲ ಕೊಡುವುದಿಲ್ಲ. ಒಂದು ದೇಶದ ಆರ್ಥಿಕ ಮತ್ತು ಹಣಕಾಸು ನೀತಿ ಸರಿಯಾದ ನಿಟ್ಟಿನಲ್ಲಿ ಇದ್ದರೆ ಮಾತ್ರ ಸಾಲ ಕೊಡುತ್ತದೆ. ಶ್ರೀಲಂಕಾ ಸಬ್ಸಿಡಿಗಳನ್ನು ಹೆಚ್ಚು ಕೊಡುತ್ತಿದ್ದುದು, ತೆರಿಗೆ ಕಡಿತ ಮಾಡಿದ್ದುದು ಈ ಕಾರಣದಿಂದಾಗಿ ಐಎಂಎಫ್ ಸಾಲ ಕೊಡಲು ಹಿಂದೇಟು ಹಾಕಿತ್ತು. ಐಎಂಎಫ್ ಸಾಲಕ್ಕೋಸ್ಕರ ಶ್ರೀಲಂಕಾ ತೆರಿಗೆ ಕಡಿತ ನಿರ್ಧಾರವನ್ನು ಹಿಂಪಡೆದುಕೊಂಡಿತು.
ಈಗ ಪೆಟ್ರೋಲ್ ದರ ಇಳಿಕೆ ಮಾಡಿರುವುದೂ ಕೂಡ ಐಎಂಎಫ್ ಅಪಸ್ವರ ಎತ್ತಲು ಕಾರಣವಾಗುತ್ತದಾ ಗೊತ್ತಿಲ್ಲ. ವರದಿಗಳ ಪ್ರಕಾರ, ಶ್ರೀಲಂಕಾಗೆ ಐಎಂಎಫ್ ಸಾಲ ಸಿಗುವುದು ಬಹುತೇಕ ಖಚಿತವಾಗಿದೆ.
ಐಎಂಎಫ್ ಎಚ್ಚರಿಕೆ
ಇದೇ ವೇಳೆ ಸಾಲದ ಶೂಲಕ್ಕೆ ಸಿಲುಕಿಕೊಳ್ಳಬೇಡಿ ಎಂದು ಶ್ರೀಲಂಕಾವನ್ನು ಉದಾಹರಣೆಯಾಗಿ ನೀಡುತ್ತಾ ಐಎಂಎಫ್ ಎಲ್ಲರಿಗೂ ಎಚ್ಚರಿಕೆಯ ಕರೆಗಂಟೆ ಒತ್ತಿದೆ. ಅಧಿಕ ಸಾಲ ಹೊಂದಿರುವ ದೇಶಗಳು ಶ್ರೀಲಂಕಾ ಪರಿಸ್ಥಿತಿ ನೋಡಿ ಪಾಠ ಕಲಿಯಬೇಕು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯ ನಿರ್ವಾಹಕ ನಿರ್ದೇಶಕ ಕ್ರಿಸ್ಟಲಿನಾ ಜಾರ್ಜಿಯೇವಾ ತಿಳಿಸಿದ್ದಾರೆ.
ಇಂಡೋನೇಷ್ಯಾದಲ್ಲಿ ಮೂರು ದಿನಗಳ ಹಿಂದೆ ನಡೆದ ಜಿ20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್ಗಳ ಸಭೆಯಲ್ಲಿ ಐಎಂಎಫ್ ಮುಖ್ಯಸ್ಥರು ಈ ಮಾತುಗಳನ್ನು ಹೇಳಿರುವುದು ತಿಳಿದುಬಂದಿದೆ.
(ಒನ್ಇಂಡಿಯಾ ಸುದ್ದಿ)