ದೀಪಾವಳಿಯಲ್ಲಿ ವಿಶೇಷ ಪೂಜೆ, ಚಾರಣಕ್ಕೂ ಹೇಳಿ ಮಾಡಿಸಿದ ಸ್ಥಳ ಈ ಕೊಂಗಳ್ಳಿ ಬೆಟ್ಟ
ದೀಪಾವಳಿ ಅಮಾವಾಸ್ಯೆಯಂದು ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಅದ್ಧೂರಿಯಾಗಿ ಜಾತ್ರೆ ನಡೆಯುವುದು ಎಲ್ಲರಿಗೂ ತಿಳಿದ ವಿಚಾರವೇ.. ಆದರೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗಡಿಭಾಗದ ತಾಳವಾಡಿ ಸಮೀಪದ ಇತಿಹಾಸ ಪ್ರಸಿದ್ಧ ಶ್ರೀ ಕೊಂಗಳ್ಳಿ ಬೆಟ್ಟದ ಮಲ್ಲಿಕಾರ್ಜುನ ದೇಗುಲದಲ್ಲಿಯೂ ವಿಶೇಷ ಪೂಜೆ ನಡೆಯುತ್ತದೆ.
ದೀಪಾವಳಿ ಹಿನ್ನಲೆಯಲ್ಲಿ ಜಿಲ್ಲೆ ಮಾತ್ರವಲ್ಲದೆ, ಹೊರ ಊರುಗಳಿಂದ ಆಗಮಿಸಿದ ಭಕ್ತರು ಕೊಂಗಳ್ಳಿ ಮಲ್ಲಿಕಾರ್ಜುನನ್ನು ಪೂಜಿಸಿ ಹರಕೆ ಸಲ್ಲಿಸಿ, ಹುಲಿವಾಹನ ಸೇವೆ ಮಾಡಿ, ಸಾಮೂಹಿಕ ಬೋಜನ ಮಾಡಿ ಹಿಂತಿರುಗುವುದು ಇಲ್ಲಿನ ವಿಶೇಷವಾಗಿದೆ. ಮೊದಲೆಲ್ಲ ಈ ಬೆಟ್ಟಕ್ಕೆ ದೀಪಾವಳಿ ಹಬ್ಬ ಹಾಗೂ ಕಾರ್ತಿಕ ಮಾಸಗಳಲ್ಲಿ ಅತಿ ಹೆಚ್ಚಿನ ಭಕ್ತರು ಆಗಮಿಸಿ ವಿಶೇಷ ಪೂಜೆಗಳನ್ನು ಮಾಡಿ ಅಲ್ಲಿಯೇ ಒಂದು ರಾತ್ರಿ ಕಳೆದು ತಮ್ಮ ಹರಕೆಯನ್ನು ತೀರಿಸಿಕೊಂಡು ಹೋಗುತ್ತಿದ್ದರು.
ಆದರೆ ಕೊಂಗಳ್ಳಿ ಬೆಟ್ಟ ಪ್ರದೇಶವು ತಮಿಳುನಾಡು ಅರಣ್ಯ ಸಂರಕ್ಷಣಾವಲಯಕ್ಕೆ ಸೇರಿರುವುದರಿಂದ ಇಲ್ಲಿ ಹುಲಿ, ಕರಡಿ, ಕಾಡಾನೆ ಸೇರಿದಂತೆ ಹಲವು ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕಳೆದ ಕೆಲವು ವರ್ಷಗಳಿಂದ ಇಲ್ಲಿ ರಾತ್ರಿ ತಂಗುವುದಾಗಲೀ, ರಾತ್ರಿ 6 ಗಂಟೆಯ ನಂತರ ಪ್ರವೇಶ ಮಾಡುವುದನ್ನು ನಿಷೇಧಿಸಲಾಗಿದೆ.

ಚಾರಣಿಗರಿಗೆ ಕೂಡ ಹೇಳಿ ಮಾಡಿಸಿದ ಬೆಟ್ಟ
ಕೊಂಗಳ್ಳಿ ಬೆಟ್ಟದ ಬಗ್ಗೆ ಹೇಳಬೇಕೆಂದರೆ ಈ ಬೆಟ್ಟವು ತನ್ನದೇ ಆದ ನಿಸರ್ಗ ಸೌಂದರ್ಯವನ್ನು ಹೊಂದಿದೆಯಲ್ಲದೆ, ದೈವಿಕ ತಾಣವಾಗಿಯೂ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಲೂ ಬರುತ್ತಿದೆ. ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿದ್ದು, ಚಾರಣಿಗರಿಗೆ ಕೂಡ ಹೇಳಿ ಮಾಡಿಸಿದ ಬೆಟ್ಟವಾಗಿದೆ. ಕೊಂಗಳ್ಳಿ ಮಲ್ಲಪ್ಪನ ಬೆಟ್ಟದಲ್ಲಿ ಮಲ್ಲಿಕಾರ್ಜುನ ದೇಗುಲವಿದ್ದು, ಮಲ್ಲಿಕಾರ್ಜುನನೇ ಆದಿ ದೈವನಾಗಿದ್ದಾನೆ..

ಪ್ರಕೃತಿ ಸೌಂದರ್ಯಕ್ಕೆ ಮನಸೋತ ಮಲ್ಲಿಕಾರ್ಜುನ
ಇನ್ನು ಕೊಂಗಳ್ಳಿ ಬೆಟ್ಟದಲ್ಲಿ ಮಲ್ಲಿಕಾರ್ಜುನ ಹೇಗೆ ನೆಲೆನಿಂತ ಎಂಬುದರ ಬಗ್ಗೆ ತಿಳಿಯುತ್ತಾ ಹೋದರೆ ಒಂದಷ್ಟು ಮಾಹಿತಿಗಳು ದೊರೆಯುತ್ತವೆ. ಅದೇನೆಂದರೆ ಹಿಂದಿನ ಕಾಲದಲ್ಲಿ ಕೊಂಗಳ್ಳಿ ಮಲ್ಲಪ್ಪನ ಬೆಟ್ಟವು ದಟ್ಟಕಾಡಿನಿಂದ ಕೂಡಿದ ಪ್ರದೇಶವಾಗಿತ್ತು. ಹೀಗಿರುವಾಗ ಎಂಟನೇ ಶತಮಾನದಲ್ಲಿ ಶ್ರೀಶೈಲದಿಂದ ಚನ್ನಮಲ್ಲಿಕಾರ್ಜುನ ಸ್ವಾಮಿ, ಬಸಪ್ಪ ಎತ್ತಗಟ್ಟಿ ಈ ಮಾರ್ಗವಾಗಿ ಬಂದಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯ ಮತ್ತು ಪ್ರಶಾಂತ ವಾತಾವರಣ ಅವರ ಮನಸೆಳೆಯಿತು ಹೀಗಾಗಿ ಮಲ್ಲಿಕಾರ್ಜುನ ಮುಂದೆ ತೆರಳದೆ ಕೊಂಗಳ್ಳಿ ಬೆಟ್ಟದಲ್ಲಿ ನೆಲೆನಿಂತರಂತೆ. ಹೀಗಾಗಿ ಜತೆಗಿದ್ದ ಬಸಪ್ಪ ಎತ್ತಗಟ್ಟಿಯೂ ಸಮೀಪದಲ್ಲಿಯೇ ನೆಲೆನಿಂತರು ಎನ್ನಲಾಗಿದೆ.

ಮಹಿಳೆಯರು ದೇಗುಲಕ್ಕೆ ತೆರಳಲ್ಲ!
ಇದೆಲ್ಲದರ ನಡುವೆ ಈ ಬೆಟ್ಟವನ್ನು ಕೊಂಗಳ್ಳಿ ಬೆಟ್ಟ ಎಂದು ಏಕೆ ಕರೆಯುತ್ತಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಹೋದರೆ ದಟ್ಟಕಾಡಿನಿಂದ ಕೂಡಿದ ಬೆಟ್ಟವು ರೈತರು ಒಕ್ಕಣೆ ಸಮಯದಲ್ಲಿ ಬಳಸುವ ಸಾಧನವಾದ ಕೊಂಗದ ಆಕಾರದಲ್ಲಿರುವುದರಿಂದ ಕೊಂಗಳ್ಳಿ ಬೆಟ್ಟ ಎಂಬ ಹೆಸರು ಬಂದಿರಬಹುದು ಎಂದು ಹಿರಿಯರು ಹೇಳುತ್ತಾರೆ.
ಸಾಮಾನ್ಯವಾಗಿ ಕೊಂಗಳ್ಳಿಬೆಟ್ಟಕ್ಕೆ ಮಹಿಳೆಯರನ್ನು ಹೊರತುಪಡಿಸಿ ಉಳಿದವರೆಲ್ಲರೂ ತೆರಳುತ್ತಾರೆ. ಸುಮಾರು ಐನೂರು ವರ್ಷಕ್ಕೂ ಹಿಂದೆ ಇಲ್ಲಿಗೆ ಭೇಟಿ ನೀಡಿದ ಗಾಣಗಿತ್ತಿ ಮಹಿಳೆಯೊಬ್ಬರು ಕಲ್ಲಾದಳು ಎಂಬುದು ಪ್ರಚಲಿತದಲ್ಲಿದೆ. ಹೀಗಾಗಿ ಹೆಚ್ಚಿನ ಮಹಿಳೆಯರು ಕೊಂಗಳ್ಳಿ ಮಲ್ಲಪ್ಪನ ಬೆಟ್ಟಕ್ಕೆ ತೆರಳದೆ ಎತ್ತಗಟ್ಟಿ ಬಸಪ್ಪ ಮತ್ತು ಹನುಮಂತರಾಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿಕೊಂಡು ಬರುತ್ತಾರೆ.

ಮಹಿಳೆಯರೊಂದಿಗೆ ತೆರಳಿ ಮೌಢ್ಯ ಮುರಿದಿದ್ದ ಮುರುಘಾ ಶ್ರೀ
ದಶಕಗಳ ಹಿಂದೆ ಇದೊಂದು ಮೌಢ್ಯವಾಗಿದ್ದು ಇದನ್ನು ಹೋಗಲಾಡಿಸಬೇಕೆಂದು ಪಣತೊಟ್ಟ ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಶಿವಮೂರ್ತಿ ಸ್ವಾಮಿಗಳು ಚಾಮರಾಜನಗರದಿಂದ ಸುಮಾರು ಇಪ್ಪತ್ತು ಮಂದಿ ಮಹಿಳೆಯರನ್ನು ಬೆಟ್ಟಕ್ಕೆ ಕರೆದೊಯ್ದು ಪೂಜೆ ಸಲ್ಲಿಸಿ ಬಂದಿದ್ದರು. ಆ ನಂತರ ಯಾವುದೇ ಮಹಿಳೆಯರು ಇಲ್ಲಿಗೆ ತೆರಳಿಲ್ಲ ಎನ್ನಲಾಗಿದೆ. ಅದು ಏನೇ ಇರಲಿ ಕಳೆದ ಎರಡು ವರ್ಷಗಳ ಕಾಲ ಕೊರೊನಾ ಕಾರಣದಿಂದ ದೀಪಾವಳಿ ಸಂದರ್ಭ ಪೂಜೆ ಸಲ್ಲಿಸಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕೊಂಗಳ್ಳಿ ಬೆಟ್ಟದ ಮಲ್ಲಿಕಾರ್ಜುನನತ್ತ ಮುಖ ಮಾಡುವ ಸಾಧ್ಯತೆಯಿದೆ.

ತಲುಪುವುದೇಗೆ
ಮೈಸೂರಿನಿಂದ ಸುಮಾರು ನೂರು ಕಿ.ಮೀ, ಚಾಮರಾಜನಗರದಿಂದ ನಲುವತ್ತು ಕಿ.ಮೀ. ಹಾಗೂ ಗುಂಡ್ಲುಪೇಟೆಯಿಂದ ಸುಮಾರು ಮೂವತ್ತೆರಡು ಕಿಮೀ ದೂರದಲ್ಲಿದೆ. ಇಲ್ಲಿಗೆ ತೆರಳಲು ಚಾಮರಾಜನಗರದಿಂದ ಬಸ್ ಸೌಕರ್ಯವಿದ್ದು, ತಾಳವಾಡಿ ಹಾಗೂ ಎತ್ತಗಟ್ಟಿ ಬೆಟ್ಟದ ಮಾರ್ಗದಲ್ಲಿ ತೆರಳಬಹುದಾಗಿದೆ. ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತಿದ್ದರೂ ತಮಿಳುನಾಡಿಗೆ ಸೇರಿದ್ದು, ತಾಳವಾಡಿ ಪಿರ್ಕಾಕ್ಕೆ ಒಳಪಟ್ಟಿದೆ.












Click it and Unblock the Notifications