Get Updates
Get notified of breaking news, exclusive insights, and must-see stories!

"ಅರ್ಜೆಂಟಾಗಿ ಮಹಾರಾಷ್ಟ್ರದಲ್ಲಿ ಪಾಟೀಲ ಪುಟ್ಟಪ್ಪನಂತವ ಒಬ್ಬ ಹುಟ್ಟಬೇಕು' ಎಂದಿದ್ರು ಠಾಕ್ರೆ!

ಬೆಂಗಳೂರು, ಮಾರ್ಚ್ 17: 'ನೀವು ಸ್ಪೀಕರ್, ನಿಮ್ಮ ಸ್ಥಾನ ದೊಡ್ಡದು, ಅದು ನಿಸ್ಸಂದೇಹ. ಸದನದ ಸಭೆಯಲ್ಲಿ ನಿಮಗಿಂತ ಹೆಚ್ಚಿನವರು ಯಾರೂ ಇಲ್ಲ. ಆದರೆ ಸಭೆಯ ಒಳಗೆ ಮತ್ತು ಹೊರಗೆ ನೀವು ಕೂಡ ಒಬ್ಬ ಕನ್ನಡಿಗರು. ಕನ್ನಡಕ್ಕಿಂತ ನೀವು ದೊಡ್ಡವರೇನೂ ಅಲ್ಲ. ರಾಜ್ಯದ ಗವರ್ನರ್ ಇರಲಿ. ಮುಖ್ಯಮಂತ್ರಿ ಇರಲಿ, ಸ್ವೀಕರ್ ಇರಲಿ, ಯಾರೇ ಇದ್ದರೂ ಅವರು ಕನ್ನಡಕ್ಕೆ ಅಧೀನರೇ ಹೊರತು, ಕನ್ನಡಕ್ಕೆ ಮೇಲಿನವರು ಅಲ್ಲ'

Recommended Video

      Former minister D.K.Shiva Kumar appointed as KPCC president | Oneindia Kannada

      'ಕನ್ನಡವನ್ನು ಉಪಯೋಗಿಸಬೇಕು ಎಂದು ಹೇಳುವುದನ್ನೇ ಒಂದು ಅಪರಾಧವೆಂದು ನಮ್ಮ ಶಾಸನಸಭೆ ಖಂಡಿತವಾಗಿಯೂ ತೀರ್ಮಾನಿಸಲಾರದು. ನೀವು ಪದೇ ಪದೇ ಹಕ್ಕುಬಾಧ್ಯತೆ ಉಲ್ಲಂಘನೆಯಾಯಿತು ಎಂದು ನನಗೆ ಹೆದರಿಕೆ ಹಾಕಬೇಕಾದ ಅವಶ್ಯಕತೆಯಿಲ್ಲ. ಸಾರ್ವಜನಿಕ ಪ್ರಶ್ನೆಗಳ ಪ್ರತಿಪಾದನೆ ಮಾಡುವಾಗ ನಾನು ಯಾರ ಹೆದರಿಕೆ, ಬೆದರಿಕೆಗಳಿಗೆ ಮಣಿಯುವುದಿಲ್ಲ. ಹೆದರಿಕೆ ಎನ್ನುವ ಮಾತು ನನ್ನ ಶಬ್ಧಕೋಶದಲ್ಲಿಯೇ ಇಲ್ಲ'

      ಕನ್ನಡದ, ಕರ್ನಾಟಕದ ಸಿಂಹದ್ವನಿಯಾಗಿದ್ದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು ಕರ್ನಾಟಕ ಸರಕಾರದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದಾಗ ಅಂದಿನ ವಿಧಾನಸಭಾಧ್ಯಕ್ಷರಿಗೆ ಪಾಟೀಲ ಪುಟ್ಟಪ್ಪ ಬರೆದ ಪತ್ರದ ಸಾಲುಗಳಿವು. ಕನ್ನಡ, ಕರ್ನಾಟಕ, ಕನ್ನಡ ಪತ್ರಿಕೋಧ್ಯಮವನ್ನೇ ತಮ್ಮ ಜೀವನದ ಉಸಿರನ್ನಾಗಿಸಿಕೊಂಡು ಬಂದ ನಾಡೋಜ ಡಾ ಪಾಟೀಲ ಪುಟ್ಟಪ್ಪ ಅವರು ತಮ್ಮ 101 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿ ಹೋಗಿದ್ದಾರೆ. ಮುಂದೆ ಓದಿ...

      "ಮಹಾರಾಷ್ಟ್ರದಲ್ಲಿ ಪುಟ್ಟಪ್ಪರಂತಹವ ಒಬ್ಬ ಹುಟ್ಟಬೇಕಿದೆ'

      1987 ರಲ್ಲಿ ಮಹಾರಾಷ್ಟ್ರದ ಅಗ್ರಪಂಕ್ತಿಯ ಮರಾಠಿ ದೈನಿಕ "ಲೋಕಸತ್ತಾ' ತನ್ನ ಸಂಪಾದಕೀಯದಲ್ಲಿ, "ಮರಾಠಿ ಮಮತೆಯ ಸಹ ಮರಾಠಿ ಪುಟ್ಟಪ್ಪನ ಅವತಾರ ನಿರೀಕ್ಷಿಸುತ್ತಿದ್ದಾಳೆ'. ಪಕ್ಕದ ಮಹಾರಾಷ್ಟ್ರದ ಮರಾಠಿ ಜನ ಸಹ ತಮ್ಮೊಳಗೊಬ್ಬ ಕನ್ನಡ, ಕನ್ನಡಿಗ ಕರ್ನಾಟಕ ತತ್ವಕ್ಕಾಗಿ ಹೋರಾಡುವ ಪಾಟೀಲ ಪುಟ್ಟಪ್ಪನವರಂತಹ ನಾಯಕ ಮಹಾರಾಷ್ಟ್ರದಲ್ಲಿ ಮರಾಠಿಗಾಗಿ ಜನ್ಮವೆತ್ತಬಾರದೇ? ಎಂದು ಹೇಳಿತ್ತು. ಶಿವಸೇನೆಯ ಸ್ಥಾಪಕ ಕಟ್ಟರ್ ಮರಾಠಿ ನಾಯಕ ಬಾಳಾ ಠಾಕ್ರೆ ಕೂಡ ಪಾಟೀಲ ಪುಟ್ಟಪ್ಪನಂತವ ಒಬ್ಬ ಅರ್ಜೆಂಟಾಗಿ ಮಹಾರಾಷ್ಟ್ರದಲ್ಲಿ ಹುಟ್ಟಬೇಕಿದೆ ಎಂದು ಪಾಟೀಲ ಪುಟ್ಟಪ್ಪರ ನಾಡಪ್ರೇಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

      ಅಮೆರಿಕದಲ್ಲಿ ಪತ್ರಿಕೋದ್ಯಮ ಪದವಿ

      ಅಮೆರಿಕದಲ್ಲಿ ಪತ್ರಿಕೋದ್ಯಮ ಪದವಿ

      ಹಾವೇರಿ ಜಿಲ್ಲೆಯ ಕುರುಬಗೊಂಡ, ಬ್ಯಾಡಗಿ, ಹಾವೇರಿಯಲ್ಲಿ ಓದಿದ ಡಾ. ಪಾಟೀಲ ಪುಟ್ಟಪ್ಪನವರು ಪ್ರೌಢಶಾಲಾ ವಿದ್ಯಾಭ್ಯಾಸಕ್ಕೆಂದು ಧಾರವಾಡದ ಮುರುಘಾಮಠದಲ್ಲಿ ಉಳಿದು ಆರ್.ಎಲ್.ಎಸ್ ಹೈಸ್ಕೂಲಿನಲ್ಲಿ ಓದು ಮುಂದುವರಿಸಿ ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿ ಬೆಳಗಾವಿಯ ಕಾಲೇಜಿನಲ್ಲಿ ಎಲ್.ಎಲ್.ಬಿ. ವ್ಯಾಸಂಗ ಮಾಡಿದರು. ಅನಂತರ ಮುಂಬೈನಲ್ಲಿ ಪುನಃ ಹುಬ್ಬಳ್ಳಿಯಲ್ಲಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಪಾಟೀಲ ಪುಟ್ಟಪ್ಪ 1949 ರಲ್ಲಿ ಅಮೆರಿಕದ ಕ್ಯಾಲಿಫೊರ್ನಿಯ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಸ್ಸಿ ಪದವಿ ಪಡೆದರು.

      ಕನ್ನಡ ಪತ್ರಿಕೋಧ್ಯಮದ ಭೀಷ್ಮ

      ಕನ್ನಡ ಪತ್ರಿಕೋಧ್ಯಮದ ಭೀಷ್ಮ

      ಕನ್ನಡದ ಪತ್ರಿಕೋಧ್ಯಮದ ಇತಿಹಾಸವನ್ನು ಕೆದುಕುತ್ತಾ ಹೊರಟರೆ ಅದರಲ್ಲಿ ಕನ್ನಡದ ಕಟ್ಟಾಳು ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರದೇ ಅಗ್ರಪಾಲು. ಆ ಕಾಲದಲ್ಲಿ ಪತ್ರಿಕೆಗಳನ್ನೇ ಹೊರತರುವುದು ದುಸ್ತರವಾಗಿದ್ದಾಗ ಅರ್ಧ ಡಜನ್ ಪತ್ರಿಕೆಗಳಿಗೆ ಸಂಪಾದಕರಾಗಿ ಪತ್ರಿಕೆಗಳನ್ನು ತಂದು, ಜನರ ಪ್ರೀತಿ ವಿಶ್ವಾಸ ಗಳಿಸಿದ್ದವರು ಪಾಪು. ಪಾಟೀಲ ಪುಟ್ಟಪ್ಪನವರು ಅಮೇರಿಕದಿಂದ ವಿದ್ಯಾಭ್ಯಾಸ ಮುಗಿಸಿ ಮರಳಿ ಭಾರತಕ್ಕೆ ಬಂದಾಗ, ಕೆಲಕಾಲ ಮುಂಬೈನಲ್ಲಿ ಕೆಲ ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಗಳಲ್ಲಿ ಕೆಲಸ ಮಾಡಿ ಬಂದು, ಹುಬ್ಬಳ್ಳಿಯಲ್ಲಿ ನೆಲೆ ನಿಂತು, ಪತ್ರಿಕೋಧ್ಯಮಕ್ಕೆ ಕೈ ಹಾಕಿದರು. ಆರಂಭದಲ್ಲಿ ನವಯುಗ ಹಾಗೂ ವಿಶಾಲ ಕರ್ನಾಟಕ ಪತ್ರಿಕೆಗೆ ಸಂಪಾದಕರಾಗಿ ಅವುಗಳನ್ನು ಜನಪ್ರಿಯಗೊಳಿಸಿದರು. 1954 ರಲ್ಲಿ ತಾವೇ "ಪ್ರಪಂಚ' ಎಂಬ ವಾರಪತ್ರಿಕೆ ಆರಂಭಸಿ ಅದನ್ನು ಕರ್ನಾಟಕದ ಮನೆ ಮಾತಾಗುವಂತೆ ಮಾಡಿದರು. ಪ್ರಪಂಚ ಪತ್ರಿಕೆ ಆ ಕಾಲದಲ್ಲಿ ದೊಡ್ಡ ಹವಾನೇ ಸೃಷ್ಠಿಸಿತ್ತು. ಪ್ರಪಂಚದ ಯಶಸ್ಸಿನಿಂದ 1956 ರಲ್ಲಿ "ವಿಶ್ವವಾಣಿ' ದಿನಪತ್ರಿಕೆಯನ್ನು ಆರಂಭಿಸಿದರು. ಅಲ್ಲದೇ ಮನೋರಮಾ ಎಂಬ ಸಿನಿಮಾ ಪಾಕ್ಷಿಕವನ್ನು, ಸಂಗಮ ಮತ್ತು ಸ್ತ್ರೀ ಎಂಬ ಮಾಸಿಕಗಳನ್ನು ಆರಂಭಿಸಿ ಸೈ ಎನಿಸಿಕೊಂಡರು. ಪಾಪು ಅವರು ಸಾವಿರಾರು ಜನ ಪತ್ರಕರ್ತರನ್ನು ಹುಟ್ಟಿಹಾಕಿದರಲ್ಲದೇ ಲೆಕ್ಕವಿಲ್ಲದಷ್ಟು ಜನ ಬರಹಗಾರರಾಗಲು ಕಾರಣರಾಗಿದ್ದರು.

      ನಾಡು ನುಡಿ ಕಟ್ಟುವ ಕೆಲಸಕ್ಕೆ ಪ್ರೇರೆಪಣೆ

      ನಾಡು ನುಡಿ ಕಟ್ಟುವ ಕೆಲಸಕ್ಕೆ ಪ್ರೇರೆಪಣೆ

      ಪುಟ್ಟಪ್ಪನವರು ಅಮೇರಿಕದಲ್ಲಿ ಓದುವಾಗ ಅಲ್ಲಿನ ಹಿರಿಯ ಪ್ರಾಧ್ಯಾಪಕ, ಅಂತಾರಾಷ್ಟ್ರೀಯ ಮನ್ನಣೆಯ ಚಿಂತಕ ವಿಲ್ ಡ್ಯೂರಾಂಟ್ ಶಿಷ್ಯತ್ವದಿಂದ ಹಿಡಿದು ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ, ಮೊರಾರ್ಜಿ ದೇಸಾಯಿ, ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆಯವರಂತಹ ರಾಷ್ಟ್ರೀಯ ಮುತ್ಸದ್ಧಿಗಳ ಒಡನಾಟ ಅವರಿಗಿತ್ತು. ವಿ.ಕೆ.ಗೋಕಾಕ, ಡಾ. ಸಿದ್ಧಯ್ಯ ಪುರಾಣಿಕ, ಡಾ. ಆರ್.ಸಿ. ಹಿರೇಮಠ, ಡಾ. ಹಿರೇಮಲ್ಲೂರ ಈಶ್ವರನ್, ಗೌರೀಶ್ ಕಾಯ್ಕಿಣಿ, ಡಿ.ವ್ಹಿ.ಜಿ, ಖಾದ್ರಿಶಾಮಣ್ಣ, ಬೆಟಗೇರಿ ಕೃಷ್ಣಶರ್ಮ, ಡಾ. ಗಂಗೂಬಾಯಿ ಹಾನಗಲ್, ಎಚ್ಚೆಸ್ಕೆ, ಡಾ. ದೇ. ಜವರೇಗೌಡ, ಕ್ಯಯ್ಯಾರ ಕಿಞ್ಞಣ್ಣರೈ ಮೊದಲಾದವರೊಂದಿಗಿನ ಸಹವರ್ತಿ ಧೋರಣೆ ಕೇವಲ ಸ್ನೇಹವಾಗುಳಿಯದೇ ನಾಡು ನುಡಿ ಕಟ್ಟುವ ಕೆಲಸ ಮಾಡಿದರು ಎನ್ನುತ್ತಾರೆ ಹಿರಿಯ ಕವಿ ಚನ್ನವೀರ ಕಣವಿ.

      ಅಗಾದ ಜ್ಞಾಪಕ ಶಕ್ತಿ

      ಅಗಾದ ಜ್ಞಾಪಕ ಶಕ್ತಿ

      ಪಾಟೀಲ ಪುಟ್ಟಪ್ಪ ಅವರ ಬರವಣಿಗೆ ಮತ್ತು ವ್ಯಕ್ತಿತ್ವ ಚಲಿಸುವ ವಿಶ್ವಕೋಶವನ್ನೇ ನೆನಪಿಸುತ್ತವೆ. ಆಗಾಧ ಜ್ಞಾಪಕಶಕ್ತಿ, ತಮ್ಮ ಏರುಸ್ವರದಿಂದ ಸಂತೆಯಲ್ಲೂ ಏಕಾಗ್ರತೆ ಮೂಡಿಸಿ ತಮ್ಮೆಡೆ ಸೆಳೆದುಕೊಳ್ಳಬಲ್ಲ ಅವರ ಭಾಷಣದ ಪರಿ ಎಂತವರನ್ನೂ ಬಡಿದೆಬ್ಬಿಸಬಲ್ಲದಾಗಿತ್ತು. ಆಯಾ ಕಾಲಕ್ಕೆ, ಸನ್ನಿವೇಶಕ್ಕೆ, ಘಟಿತಕ್ಕೆ, ನಾಡು ನುಡಿಯ ಅಪಮಾನಕ್ಕೆ ಕೂಡಲೇ ಕೆರಳಿ ನಿಲ್ಲುವ ಡಾ. ಪಾಟೀಲ ಪುಟ್ಟಪ್ಪನವರ ಚರ್ಚೆಯ ನಿಲಿಕೆಗೆ ನಿಲುಕದೇ ಹೋದ ವಿಷಯಗಳಿಲ್ಲ. ಕನ್ನಡದ ವಿಷಯದಲ್ಲವರಿಗೆ ತೆರೆಯದ ಬಾಗಿಲುಗಳಿಲ್ಲ. ಪ್ರಧಾನ ಮಂತ್ರಿಯೇ ಇರಲಿ, ಮುಖ್ಯಮಂತ್ರಿಯೇ ಇರಲಿ, ಅವರಿಗೆ ಯಾರದೂ ಮುಲಾಜಿರುತ್ತಿರಲಿಲ್ಲ. ಕೂಡಲೇ ಪತ್ರ ಬರೆಯುವ, ನೇರವಾಗಿಯೇ ಭೇಟಿಯಾಗಿ ಅಬ್ಬರಿಸಿ ಅಧಿಕಾರಸ್ಥರ ವ್ಯಕ್ತಿಯಲ್ಲಿ ಕುಬ್ಜತೆ ಮೂಡಿಸುವ ಪುಟ್ಟಪ್ಪನವರ ಮೆದುಳಿನಲ್ಲಿ ಕಾಲಕೋಶ ಯಾವತ್ತೂ ಬಿಚ್ಚಿಕೊಂಡೇ ಕುಳಿತಿರುತ್ತಿತ್ತು ಎನ್ನುತ್ತಾರೆ ವಿದ್ಯಾವರ್ಧಕ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ.

      ಕನ್ನಡದ ಸಿಂಹದ್ವನಿ

      ಕನ್ನಡದ ಸಿಂಹದ್ವನಿ

      ಕನ್ನಡ ನಾಡಿನಲ್ಲಿ ಪಾಟೀಲ ಪುಟ್ಟಪ್ಪರ ಉಪನ್ಯಾಸಗಳನ್ನು ಕೇಳದ ನಗರಗಳಿಲ್ಲವೆಂದೇ ಹೇಳಬಹುದು. ಕನ್ನಡದ, ಕರ್ನಾಟಕದ ಬಗ್ಗೆ ಮಾತನಾಡುವಾಗ ಅವರದು ಸಿಂಹದ್ವನಿ. ಇಂತಹ ಅಪರೂಪದ ವ್ಯಕ್ತಿ ‘ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರು 1967 ರಿಂದ ಇದುವರೆಗೆ 50 ವರ್ಷಕ್ಕೂ ಹೆಚ್ಚು ಕಾಲ ನಾಡಿನ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾಯಿತ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾ ಬಂದಿದ್ದು ಒಂದು ಅಪರೂಪದ ದಾಖಲೆಯಾಗಿತ್ತು

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+