ಜಿ-23 ಲೆಕ್ಕಾಚಾರ: ದೇಶದ ಚುನಾವಣಾ ಚಾಣಕ್ಯನ ಮೇಲೆ ಕಾಂಗ್ರೆಸ್ ಒಲವು
ನವದೆಹಲಿ, ಸೆಪ್ಟೆಂಬರ್ 13: ಕಾಂಗ್ರೆಸ್ಸಿನ ಕೆಲವು ನಾಯಕರು ಜಿ-23 ಅನ್ನು ದುರುಪಯೋಗಪಡಿಸಿಕೊಂಡರು ಎಂದು ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ದೂಷಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸುಧಾರಣೆಯು ಈಗಾಗಲೇ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದೆ. ಈ ಮಧ್ಯೆ ಜಿ-23 ಅನ್ನು ಸಾಂಸ್ಥೀಕರಣಗೊಳಿಸುವುದಕ್ಕೆ ಮುಂದಾದರೆ ಅದು ಪಟ್ಟಭದ್ರ ಹಿತಾಸಕ್ತಿ ಆಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ದೇಶದ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸುವವರು ಸುಧಾರಣೆ ವಿರೋಧಿಗಳು ಎಂದು ಹೇಳಿದ್ದಾರೆ.
ಕಳೆದ ವರ್ಷ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದ 23 ನಾಯಕರಲ್ಲಿ ಒಬ್ಬರಾಗಿದ್ದ ಮೊಯ್ಲಿ, ಜಿ -23 ರ ಸಾಂಸ್ಥೀಕರಣವನ್ನು ವಿರೋಧಿಸಿದರು. "ನಮ್ಮಲ್ಲಿ ಕೆಲವರು ಪಕ್ಷದ ಒಳಗಿನಿಂದ ಪಕ್ಷದ ಸುಧಾರಣೆಗಾಗಿ ಮತ್ತು ಪಕ್ಷವನ್ನು ಪುನರ್ ನಿರ್ಮಾಣಕ್ಕೆ ಮಾತ್ರ ನಮ್ಮ ಸಹಿ ಹಾಕಿದ್ದಾರೆಯೇ ಹೊರತು ಅದನ್ನು ನಾಶಪಡಿಸಲು ಅಲ್ಲ," ಎಂದಿದ್ದಾರೆ. ಯಾವುದೇ ನಾಯಕರ ಹೆಸರು ಉಲ್ಲೇಖಿಸದೇ, ನಮ್ಮ ಕೆಲವು ನಾಯಕರು ಜಿ -23 ಅನ್ನು ದುರುಪಯೋಗಪಡಿಸಿಕೊಂಡರು ಎಂದು ಮೊಯ್ಲಿ ದೂಷಿಸಿದ್ದಾರೆ. ಸೋನಿಯಾ ಗಾಂಧಿಯವರು ಪಕ್ಷವನ್ನು ಒಳಗಿನಿಂದ ಮತ್ತು ತಳಮಟ್ಟದಿಂದ ಸುಧಾರಿಸಲು ಯೋಚಿಸಲಿಲ್ಲ, ನಾವು ಜಿ -23 ರ ಕಲ್ಪನೆಗೆ ಬೆಂಬಲಿಸುವುದಿಲ್ಲ," ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಜಿ-23 ಮುಂದುವರಿದರೆ ಪ್ರತಿಸ್ಪರ್ಧಿಗಳಿಗೆ ಹೆಚ್ಚಿನ ಲಾಭ
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರಾರಂಭಿಕ ಸುಧಾರಣೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಅದರಲ್ಲಿ ಜಿ-23ಯ ಯಾವುದೇ ಪಾತ್ರವಿಲ್ಲ. ಜಿ-23 ಎನ್ನುವುದು ಅಪ್ರಸ್ತುತವಾಗಿದೆ ಎಂದು ಹೇಳಿದ್ದಾರೆ. "ಕೆಲವು ನಾಯಕರು ಜಿ-23ಯನ್ನು ಮುಂದುವರಿಸಿದರೆ ಅವರಲ್ಲಿ ಕೆಲವರಿಗೆ ಕಾಂಗ್ರೆಸ್ ಪಕ್ಷದ ವಿರುದ್ಧ ಕೆಲಸ ಮಾಡಲು ಪಟ್ಟಭದ್ರ ಹಿತಾಸಕ್ತಿ ಇದೆ. ಅದಕ್ಕೆ ನಾವು ಬೆಂಬಲ ನೀಡುವುದಿಲ್ಲ ಮತ್ತು ಅದನ್ನು ವಿರೋಧಿಸುತ್ತೇವೆ" ಎಂದು ಮೊಯ್ಲಿ ಹೇಳಿದರು.
ಕಾಂಗ್ರೆಸ್ಸಿನಲ್ಲಿ ಯಾವ ನಾಯಕರೂ ಕೂಡ ಜಿ-23 ಅನ್ನು ಮುಂದುವರಿಸಕೂಡದು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮತ್ತು ಅದರ ಪರಂಪರೆಗೆ ಜಿ-23 ಮೂಲಕ ದೊಡ್ಡ ಅಪಚಾರವಾಗಲಿದೆ. ಅಂತಹ ಕ್ರಮಗಳನ್ನು ಮುಂದುವರಿಸಿದರೆ ನಮ್ಮ ಪ್ರತಿಸ್ಪರ್ಧಿಗಳಿಗೆ ಅದರಿಂದ ಸಹಾಯ ಮಾಡಿದಂತೆ ಆಗುತ್ತದೆ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ. ಕಳೆದ ವರ್ಷ ಪತ್ರ ಬರೆದ ಜಿ-23 ನಾಯಕರಲ್ಲಿ ಹಲವರು ಅದರಿಂದ ಅಂತರ ಕಾಯ್ದುಕೊಂಡಿದ್ದು, ಇನ್ನು ಕೆಲವರು ಮೌನಕ್ಕೆ ಶರಣಾಗಿದ್ದಾರೆ. ಅದೇ ಪೈಕಿ ಜಿತನ್ ಪ್ರಸಾದ್ ಬಿಜೆಪಿಗೆ ಪಕ್ಷಾಂತರವಾಗಿದ್ದಾರೆ.

ಜಿ-23 ಸಭೆಯಲ್ಲಿ ಕಾಂಗ್ರೆಸ್ ನಾಯಕರ ಚರ್ಚೆ
ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ನಿವಾಸದಲ್ಲಿ ಜಿ-23 ಸದಸ್ಯರು ಒಂದೆರಡು ಬಾರಿ ಸಾಮಾಜಿಕ ಕೂಟ ನಡೆಸಿದರು. ಕಾಂಗ್ರೆಸ್ ಪಕ್ಷದ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಸಭೆಯಲ್ಲಿ ಕೆಲವು ವಿರೋಧ ಪಕ್ಷದ ನಾಯಕರಿಗೂ ಸಿಬಲ್ ಆಹ್ವಾನ ನೀಡಿದ್ದರು ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಪಕ್ಷದ ಸುಧಾರಣೆ ಮತ್ತು ಪುನರ್ ನಿರ್ಮಾಣದ ದೃಷ್ಟಿಯಿಂದ ಮೇಜರ್ ಸರ್ಜರಿ ನಡೆಸುವ ಬಗ್ಗೆ ಸೋನಿಯಾ ಗಾಂಧಿ ಚಿಂತನೆ ನಡೆಸಿದ್ದಾರೆ. ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಅವರು, ಸೂಕ್ತ ಸಮಯದಲ್ಲಿ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ. ಅವರು ತೆಗೆದುಕೊಳ್ಳುವ ಮುಂದಿನ ಹೆಜ್ಜೆಗಳ ಬಗ್ಗೆ ಸಂತೋಷವಿದೆ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಕಾಂಗ್ರೆಸ್ಸಿಗೆ ಪ್ರಶಾಂತ್ ಕಿಶೋರ್ ಸೇರ್ಪಡೆ ಸುದ್ದಿ
ಕಾಂಗ್ರೆಸ್ ಪಕ್ಷಕ್ಕೆ ಪ್ರಶಾಂತ್ ಕಿಶೋರ್ ಸೇರ್ಪಡೆಯ ಊಹಾಪೋಹಗಳ ಬಗ್ಗೆ ಪ್ರಶ್ನಿಸಿದಾಗ, ವೀರಪ್ಪ ಮೊಯ್ಲಿ ಅದಕ್ಕೆ ಬೆಂಬಲ ಸೂಚಿಸಿದರು. ಅವರು ಕಾಂಗ್ರೆಸ್ ಪಕ್ಷವನ್ನು ಸೇರಿಕೊಳ್ಳುವುದು ಆ ಮೂಲಕ ಪಕ್ಷದಲ್ಲಿ ಇದ್ದುಕೊಂಡು ಸುಧಾರಣೆಗೆ ಕ್ರಮ ತೆಗೆದುಕೊಳ್ಳುವುದು ಉತ್ತಮ ಎಂದು ಹೇಳಿದರು. ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪ್ರವೇಶಿಸುವುದಕ್ಕೆ ಪಕ್ಷದೊಳಗಿನವರು ವಿರೋಧಿಸಬೇಡಿ. ದೇಶ ಮತ್ತು ಕಾಂಗ್ರೆಸ್ಗೆ ಪಕ್ಷ ಸುಧಾರಣೆಯಾಗುವುದು ಮುಖ್ಯ, ಇದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಉದ್ದೇಶ ಎಂದು ಮೊಯ್ಲಿ ಹೇಳಿದ್ದಾರೆ. ಮೂಲಗಳ ಪ್ರಕಾರ, ಕಾಂಗ್ರೆಸ್ಸಿಗೆ ಪ್ರಶಾಂತ್ ಕಿಶೋರ್ ಸೇರ್ಪಡೆಗೊಳಿಸುವುದರ ಬಗ್ಗೆ ಕೆಲವು ಹಿರಿಯ ನಾಯಕರೊಂದಿಗೆ ಸೋನಿಯಾ ಗಾಂಧಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಶಾಂತ್ ಕಿಶೋರ್ ಚಾಣಕ್ಯ ನೀತಿ ಬಗ್ಗೆ ಮೊಯ್ಲಿ ಉಲ್ಲೇಖ
ಒಂದು ವೇಳೆ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಯಾದರೆ ಅದರಿಂದ ಪಕ್ಷಕ್ಕೆ ಲಾಭವಾಗಲಿದೆ. ಅವರು ಚುನಾವಣಾ ಚಾಣಕ್ಯ ಎನ್ನುವುದನ್ನು ಈ ಹಿಂದೆ ಸಾಕಷ್ಟು ಚುನಾವಣೆಗಳಲ್ಲಿ ಸಾಬೀತು ಮಾಡಿದ್ದಾರೆ. ಪಕ್ಷದ ಹೊರಗಿದ್ದುಕೊಂಡು ಈ ಕೆಲಸ ಮಾಡುವುದರ ಬದಲಿಗೆ ಅವರು ನಮ್ಮ ಪಕ್ಷವನ್ನು ಸೇರಿಕೊಂಡು ಈ ಕಾರ್ಯವನ್ನು ಮಾಡಿದರೆ ಹೆಚ್ಚಿನ ಲಾಭವಾಗಬಹುದು. ಸೋನಿಯಾ ಗಾಂಧಿಯವರ ಜೊತೆ ಕೈಜೋಡಿಸುವ ಮೂಲಕ ಪಕ್ಷದ ಸಂಘಟನೆ ಮತ್ತು ಸುಧಾರಣಾ ಕ್ರಮಗಳ ಮೂಲಕ ಕಾಂಗ್ರೆಸ್ ಅನ್ನು ಬಲಪಡಿಸಬೇಕಿದೆ. ಆದ್ದರಿಂದ ಪ್ರಶಾಂತ್ ಕಿಶೋರ್ ನಮ್ಮ ಪಕ್ಷದೊಳಗೆ ಇದ್ದುಕೊಂಡು ಆ ಕಾರ್ಯವನ್ನು ಮಾಡಬೇಕಾಗುತ್ತದೆ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.

ದೇಶದ ಪ್ರಮುಖ ರಾಜಕೀಯ ನೆಲೆ ಆಗಿರುವ ಕಾಂಗ್ರೆಸ್
ಭಾರತದಲ್ಲಿ ಕಾಂಗ್ರೆಸ್ ಪಕ್ಷವು ಪ್ರಮುಖ ರಾಜಕೀಯ ನೆಲೆಯಾಗಿದೆ. "ನಾವು ಕೆಲವು ಬಾರಿ ಸೋಲು ಕಂಡಿರಬಹುದು, ಆದರೆ ಅದು ಶಾಶ್ವತವಾಗಿ ಸೋಲುತ್ತೇವೆ ಎಂದು ಅರ್ಥವಲ್ಲ. ಉದಾಹರಣೆಗೆ, 1977ರಲ್ಲಿ ನಾವು ಸೋತೆವು, 1980ರಲ್ಲಿ ಇಂದಿರಾ ಗಾಂಧಿ ವಿರುದ್ಧದ ಸಾಲು ಸಾಲು ಆರೋಪಗಳ ನಡುವೆಯೂ ದೇಶಕ್ಕೆ ಕಾಂಗ್ರೆಸ್ ಮತ್ತು ಇಂದಿರಾ ಗಾಂಧಿ ಅವಶ್ಯಕತೆಯಿದೆ ಎನ್ನುವುದನ್ನು ಜನರು ತೋರಿಸಿ ಕೊಟ್ಟರು. ಇದು ಕಾಂಗ್ರೆಸ್ ಪಕ್ಷದ ಇತಿಹಾಸವಾಗಿದೆ," ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ. ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ಹಿಂದೆ ಹಲವು ರಾಜ್ಯಗಳಲ್ಲಿ ಬಿಜೆಪಿಯನ್ನು ಎದುರಿಸಿ ನಿಲ್ಲುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಅವರೇ ಹೇಳಿದ್ದಾರೆ ಅಂತಾ ಉಲ್ಲೇಖಿಸಿದರು.

ಕೇಂದ್ರದಲ್ಲಿ ಬಿಜೆಪಿ ಎದುರಿಸಲು ಮೈತ್ರಿ ರಚಿಸುತ್ತಾ ಕಾಂಗ್ರೆಸ್
"2024ರಲ್ಲಿ ಬಿಜೆಪಿಯನ್ನು ಎದುರಿಸುವುದಕ್ಕೆ ಕಾಂಗ್ರೆಸ್ ಪಕ್ಷವು ಮೈತ್ರಿ ಮಾಡಿಕೊಳ್ಳುತ್ತದೆ ಎಂಬ ಪ್ರಶ್ನೆಗೆ ವೀರಪ್ಪ ಮೊಯ್ಲಿ ಸ್ಪಷ್ಟವಾಗಿ ಉತ್ತರಿಸಿದರು. ಕಾಂಗ್ರೆಸ್ ಪಕ್ಷವು ದೇಶದ ರಾಜಕೀಯ ವಲಯದ ಪೂರ್ಣಶಕ್ತಿಯಾಗಿದೆ. ಇದನ್ನು ಮಾಡಲು ಸಾಧ್ಯವಿಲ್ಲ, ಅಂತಿಮವಾಗಿ ಸರ್ಕಾರವು ಜನರ ಗುಂಪು, ಕೆಲವು ಜಾತಿಗಳು ಅಥವಾ ಕೆಲವು ಧರ್ಮಗಳ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಜನರು ಮೌನವಾಗಿದ್ದರೆ, ರಾಜಕೀಯ ಕ್ರಾಂತಿ ಮಾಡಲು ಸಾಧ್ಯವಿಲ್ಲ ಎಂದು ಅರ್ಥವಲ್ಲ, ಕಾಂಗ್ರೆಸ್ ನಾಯಕತ್ವದಲ್ಲಿ ಮಾತ್ರ ಅವರು ಅದನ್ನು ಮಾಡಬಹುದು," ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.
"ಸೋನಿಯಾ ಗಾಂಧಿ ಅವರು ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿಯಂತಹ ಹುತಾತ್ಮರನ್ನು ಪ್ರತಿನಿಧಿಸುತ್ತಾರೆ ಎನ್ನುವುದನ್ನು ನಾವು ಮರೆಯಬಾರದು. ಕಾಂಗ್ರೆಸ್ನ ಸದ್ಗುಣಗಳಿಂದಲೇ ರಾಷ್ಟ್ರದಲ್ಲಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಂಡಿವೆ" ಎಂದು ಮೊಯ್ಲಿ ಹೇಳಿದರು.












Click it and Unblock the Notifications