Maha Kumbh Mela 2025: ಮಹಾಕುಂಭ ಮೇಳದಲ್ಲಿ ಮೊಳಗಲಿದೆ ಶಂಕರ್ ಮಹಾದೇವನ್ ಗಾನ, ಯಾವ ದಿನ?
ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳ-2025ಕ್ಕೆ ಸಕಲ ಸಿದ್ಧತೆ ನಡೆಯುತ್ತಿವೆ. ಜನವರಿ 13ರಿಂದ ಮಹಾಕುಂಭ ಮೇಳ ಶುರುವಾಗಲಿದ್ದು, ಕೋಟ್ಯಂತರ ಜನ ಸೇರುವ ನಿರೀಕ್ಷೆ ಇದೆ. ಈ ವೇಳೆ ಹಲವು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಖ್ಯಾತ ಗಾಯಕ ಶಂಕರ್ ಮಹಾದೇವನ್ ಅವರ ಗಾನ ಕೂಡ ಮೊಳಗಲಿದೆ.
ಗ್ರ್ಯಾಮಿ ವಿಜೇತ ಸಂಯೋಜಕ ಹಾಗೂ ಗಾಯಕ ಶಂಕರ್ ಮಹಾದೇವನ್ ಅವರು ಜನವರಿ 16ರಂದು ಪ್ರಯಾಗ್ರಾಜ್ನಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮೊದಲ ದಿನ ಹಾಡಲಿದ್ದಾರೆ. ಜನವರಿ 28ರಂದು ಮತ್ತೊಂದು ಕಾರ್ಯಕ್ರಮದಲ್ಲಿ ಶಂಕರ್ ಮಹಾದೇವನ್ ಹಾಡಲಿದ್ದಾರೆ.

ಮಹಾಕುಂಭಮೇಳದಲ್ಲಿ ನನ್ನ ಸಂಗೀತ ಸೇವೆಯನ್ನು ಮಾಡಲು ಬಹಳ ಸಂತೋಷವನ್ನು ಅನುಭವಿಸುತ್ತೇನೆ. ಇದು ನನ್ನ 30-35 ವರ್ಷಗಳ ಸಂಗೀತ ಪಯಣದ ಪುಣ್ಯ ಎಂದೇ ಭಾವಿಸಿದ್ದೇನೆ. ಇದು ಕುಂಭಮೇಳಕ್ಕೆ ನನ್ನ ಮೊದಲ ಭೇಟಿಯಾಗಲಿದೆ. ಅದು ಕೂಡ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭ. ಜ್ಯೋತಿಷ್ಯಶಾಸ್ತ್ರದ ಪ್ರಕಾರ 144 ವರ್ಷಗಳಲ್ಲಿ ಒಮ್ಮೆ ಮಾತ್ರ ಸಂಭವಿಸುವ ಮಹಾಕುಂಭ ಎಂದು ಹೇಳಲಾಗುತ್ತಿದೆ. ಹಾಗಾಗಿ ನಾನು ಕೂಡ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಜನವರಿ 16ರಂದು ಅವರು ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಕೂಡ ಇರುತ್ತಾರೆ. ಇದೇ ಕಾರ್ಯಕ್ರಮದಲ್ಲಿ ನಾನು ಪ್ರದರ್ಶನ ನೀಡಲಿದ್ದೇನೆ. ಜನವರಿ 28ರಂದು ನಾನು ನಿರಂಜನಿ ಅಖಾರದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ಮಹಾರಾಜ್ ಅವರಿಗೆ ಎರಡನೇ ಬಾರಿ ಕಾರ್ಯಕ್ರಮ ನೀಡಲಿದ್ದೇನೆ ಎಂದು ಶಂಕರ್ ಮಹಾದೇವನ್ ಹೇಳಿಕೊಂಡಿದ್ದಾರೆ.

ಕಳೆದ ವರ್ಷ ಜನವರಿ 22ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮ್ ಲಲ್ಲಾನ ಪ್ರತಿಷ್ಠಾಪನೆ ಸಮಾರಂಭದಲ್ಲಿ ಹಾಡಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ, ಅದನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರದರ್ಶನ ನೀಡುವ ಅವಕಾಶ ಸಿಕ್ಕಿತು. ಅಲ್ಲಿ ನಾನು ಭಗವಾನ್ ಶಿವ ಮತ್ತು ಮಾ ಗಂಗೆಯ ಹಾಡುಗಳನ್ನು ಹಾಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ವರ್ಷವೂ ನನ್ನ ಭಜನೆಯನ್ನು ಇಂದು ಶ್ರೀರಾಮ ದೇವಾಲಯದ ಮೊದಲ ವಾರ್ಷಿಕೋತ್ಸವದಂದು ಬಿಡುಗಡೆ ಮಾಡುತ್ತಿದ್ದೇನೆ. ಇದು ಸಂಗೀತದ ನಿಜವಾದ ಶಕ್ತಿ. ದೇವರು ನನ್ನನ್ನು 135 ಕೋಟಿ ಭಾರತೀಯರಿಂದ ವಿಶೇಷವಾಗಿ ಆಯ್ಕೆ ಮಾಡಿದ್ದಾನೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಧನ್ಯತಾ ಮಾತುಗಳನ್ನಾಡಿದ್ದಾರೆ.
ಆಪಲ್ ಸಂಸ್ಥೆಯ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಕೂಡ ಪ್ರಯಾಗರಾಜ್ನಲ್ಲಿ ನಡೆಯುವ ಮಹಾಕುಂಭ 2025ರಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಲಾರೆನ್ ಅವರು ನಿರಂಜನಿ ಅಖಾರದ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದರ ಶಿಬಿರದಲ್ಲಿ ಉಳಿಯುವ ಸಾಧ್ಯತೆ ಇದ್ದು, ವಿವಿಧ ಆಚರಣೆಗಳಲ್ಲಿ ಭಾಗವಹಿಸಲಿದ್ದಾರೆ. ಸಂಗಮದಲ್ಲಿ ಪವಿತ್ರ ಸ್ನಾನ ಕೂಡ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications