'ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ!' ಬಿಸಿತುಪ್ಪವಾದ ಅತೃಪ್ತರ ನಡೆ
Recommended Video
ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲಿ ಎಂದು ಕಾಂಗ್ರೆಸ್ ನ ಅತೃಪ್ತ ಶಾಸಕರು ದಿನೇ ದಿನೇ ಹೇಳಿಕೆ ನೀಡುತ್ತಿರುವುದು ಮೈತ್ರಿ ಸರ್ಕಾರಕ್ಕೆ ಇರಿಸುಮುರಿಸುಂಟು ಮಾಡಿದೆ.
ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಶಾಸಕರನ್ನು ಕಡೆಗಣಿಸಲಾಗಿದೆ ಎಂಬ ದೂರು ಕೇಳಿಬರುತ್ತಿರುವುದು ಹೊಸ ವಿಷಯವಲ್ಲ. ಆ ದೂರು ಸತ್ಯವೂ ಹೌದು. ಆದರೆ ಸಮನ್ವಯ ಸಮಿತಿಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೊತ್ತ ಸಿದ್ದರಾಮಯ್ಯ ಅವರು ಪಕ್ಷದಲ್ಲಿ ಇಂಥ ಭಿನ್ನಾಭಿಪ್ರಾಯಗಳು ಮೂಡದಂತೆ ನೋಡಿಕೊಳ್ಳುವ ಹೊಣೆಯನ್ನೂ ಹೊತ್ತಿದ್ದಾರೆ.
ಆದರೆ ಈಗ ಮತ್ತೆ 'ಮುಖ್ಯಮಂತ್ರಿ ಬದಲಾಗಲಿ', 'ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿಯಾಗಲಿ' ಎಂಬ ಮಾತುಗಳು ಕೇಳಿಬರುತ್ತಿದ್ದು, ಅದಕ್ಕೆ ಸಿದ್ದರಾಮಯ್ಯ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಮೌನವೇ ಉತ್ತರ!
ಮೈಸೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಸುತ್ತುವರಿದ ಪತ್ರಕರ್ತರು ಅವರ ಬಳಿ ಲೋಕಸಭೆ ಚುನಾವಣೆಯ ಕುರಿತು ಯಾವುದೇ ಪ್ರಶ್ನೆ ಕೇಳದೆ, 'ನೀವೇ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ನಿಮ್ಮ ಆಪ್ತ ಶಾಸಕರು ಬೇಡಿಕೆ ಇಡುತ್ತಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?' ಎಂದು ಕೇಳಿದರು. ಆದರೆ ಅದಕ್ಕೆ ತುಟಿಪಿಟಿಕನ್ನದ ಸಿದ್ದರಾಮಯ್ಯ, 'ನೋ ಕಮೆಂಟ್ಸ್' ಎಂಬಂತೆ ಹೊರನಡೆದರು. ಈ ಪ್ರಶ್ನೆಗೆ ಅವರ ಮೌನವನ್ನೇ ಉತ್ತರ ಎಂದುಕೊಳ್ಳಬಹುದೇನೋ.

ಬೇಡ ಅನ್ನೋ ಹಾಗಿಲ್ಲ, ಬೇಕು ಅಂದ್ರೂ ಕಷ್ಟ!
ಅತೃಪ್ತರ ಈ ನಡೆಯಿಂದ ಸಿದ್ದರಾಮಯ್ಯ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕಸ್ಮಾತ್ ಸಿದ್ದರಾಮಯ್ಯ ಅತೃಪ್ತರ ಬಳಿ ಇಂಥ ಹೇಳಿಕೆ ನೀಡದಂತೆ ಖಡಕ್ ಎಚ್ಚರಿಕೆ ನೀಡಿದರೆ ತಾವು ಮತ್ತೆ ಮುಖ್ಯಮಂತ್ರಿಯಾಗುವ ಕನಸಿಗೆ ತಾವೇ ಬೆಂಕಿ ಇಟ್ಟಂತಾಗುತ್ತದೆ. ತಡೆಯದೆ ಇದ್ದರೆ ಮೈತ್ರಿ ಸರ್ಕಾರದಲ್ಲಿ ಬಿರುಕು ಗ್ಯಾರಂಟಿ! ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ ಸಿದ್ದರಾಮಯ್ಯ ಪರಿಸ್ಥಿತಿ!

ಲೋಕಸಭೆ ಚುನಾವಣೆಯ ನಂತರ...
ಲೋಕಸಭೆ ಚುನಾವಣೆಯ ನಂತರ ಕರ್ನಾಟಕ ರಾಜಕೀಯದಲ್ಲೂ ಭಾರೀ ಬದಲಾವಣೆಯಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಅಕಸ್ಮಾತ್ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಕರ್ನಾಟಕದಲ್ಲಿ ಬಿಜೆಪಿ ಉತ್ತಮ ಸಾಧನೆ ಮೆರೆದರೆ, ಅತೃಪ್ತ ಶಾಸಕರನ್ನು ಸೆಳೆಯುವುದು ಕಷ್ಟವಾಗಲಾರದು. ಬಿಜೆಪಿ ಕಣ್ಣಿಟ್ಟಿರುವ ಶಾಸಕರಲ್ಲಿ ಸಿದ್ದರಾಮಯ್ಯ ಆಪ್ತರೇ ಹೆಚ್ಚು. ಇದು ಸಿದ್ದರಾಮಯ್ಯ ಅವರ ವರ್ಚಸ್ಸಿಗೂ ಹಾನಿಯನ್ನುಂಟು ಮಾಡಬಹುದು.

ಮಂಡ್ಯ ಫಲಿತಾಂಶವೂ ನಿರ್ಣಾಯಕ!
ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಿದರೆ ಮೈತ್ರಿ ಸರ್ಕಾರಕ್ಕೆ ಸಮಸ್ಯೆ ಇಲ್ಲ. ಆದರೆ ಅಕಸ್ಮಾತ್ ಅವರು ಸೋತು, ಸುಮಲತಾ ಗೆಲುವು ಸಾಧಿಸಿದರೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೂ ಭಾರೀ ಮುಖಭಂಗವಾಗುವುದು ಖಂಡಿತ. ಕಾಂಗ್ರೆಸ್ ನಾಯಕರ ಬೇಡಿಕೆಗೆ ಕಿವಿಯನ್ನೇ ಕೊಡದೆ, ಅವರ್ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೆಲವೇ ನಾಯಕರು ನಿರ್ಧರಿಸಿದ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದು ಆ ಸಂದರ್ಭದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಬಹುದು. ಅದರಿಂದ ಪಕ್ಷದ ಒಳಗೇ ಮತ್ತೆ ಭಿನ್ನಮತ ಏರ್ಪಡುವುದು ಖಂಡಿತ. ಮಂಡ್ಯದಲ್ಲಿ ಸುಮಲತಾ ಗೆದ್ದರೆ ಬಿಜೆಪಿ ಮೈತ್ರಿ ಸರ್ಕಾರವನ್ನು ಒಡೆಯಲು ಬಿರುಸಿನ ಕಾರ್ಯಾಚರಣೆ ನಡೆಸಬಹುದು. ಆಗಲೂ ಅವರ ಗುರಿ ಸಿದ್ದರಾಮಯ್ಯ ಆಪ್ತ, ಅತೃಪ್ತ ಶಾಸಕರೇ. ಈ ಎಲ್ಲ ಬೆಳವಣಿಗೆಗಳೂ ಸಿದ್ದರಾಮಯ್ಯ ರಾಜಕೀಯ ಬದುಕಿನ ಮೇಲೆ ಭಾರೀ ಪರಿಣಾಮ ಬೀರಿದರೆ ಅಚ್ಚರಿಯಿಲ್ಲ.












Click it and Unblock the Notifications