ತಮಿಳುನಾಡಿನಲ್ಲಿ ಸಿದ್ದರಾಮಯ್ಯ ಅಬ್ಬರ ಮತ್ತು ರಾಜ್ಯಕ್ಕೆ ನೀಡಿದ ಸಂದೇಶ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ತಮಿಳುನಾಡಿಗೆ ಭೇಟಿ ನೀಡಿದ್ದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸುಡರ್ ಪ್ರಶಸ್ತಿ ಸ್ವೀಕರಿಸಲು ಸಿದ್ದರಾಮಯ್ಯ ಅಲ್ಲಿಗೆ ಹೋಗಿದ್ದರೂ, ಅವರ ಆ ಭೇಟಿ ಮತ್ತು ಅವರಿಗೆ ಸಿಕ್ಕ ಅಭೂತಪೂರ್ವ ಸ್ವಾಗತ ಕರ್ನಾಟಕದ ರಾಜಕೀಯಕ್ಕೆ ಮಹತ್ವದ್ದು.
ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಕಾಂಗ್ರೆಸ್ ವಲಯದಲ್ಲಿನ ಚರ್ಚೆಯ ನಡುವೆ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧಿಕಾರದಲ್ಲಿರುವ ತಮಿಳುನಾಡಿಗೆ ಸಿದ್ದರಾಮಯ್ಯ ನೀಡಿದ ಭೇಟಿಯನ್ನು ವಿಶೇಷ ಅರ್ಥದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಸಿದ್ದರಾಮಯ್ಯನವರೇ ಹೇಳುವಂತೆ ಸಾಮಾನ್ಯವಾಗಿ ಅವರು ಪ್ರಶಸ್ತಿಯನ್ನು ಸ್ವೀಕರಿಸಲು ಹೋಗುವ ಉದಾಹರಣೆಗಳು ಕಮ್ಮಿ. "ನನ್ನ ಯೌವ್ವನದ ದಿನಗಳಲ್ಲಿ ಪೆರಿಯಾರ್ ಅವರ ಬಗ್ಗೆ ಕೇಳಿದ್ದೆ, ಅವರ ಚಿಂತನೆಗಳನ್ನು ಒಂದಷ್ಟು ಓದಿ ತಿಳಿದುಕೊಂಡು ಪ್ರಭಾವಿತನಾಗಿದ್ದೇನೆ" ಎಂದು ಸಿದ್ದರಾಮಯ್ಯ ಪ್ರಶಸ್ತಿ ಸ್ವೀಕರಿಸುತ್ತಾ ಭಾಷಣವನ್ನು ಮಾಡಿದ್ದಾರೆ.
ಕುರಿ-ದನ ಮೇಯಿಸಿಕೊಂಡು ಇರಬೇಕಾದ ನಾನು ಮುಖ್ಯಮಂತ್ರಿವರೆಗೆ ಬರುತ್ತೇನೆ ಎಂದರೆ ಅದಕ್ಕೆ ಡಾ. ಅಂಬೇಡ್ಕರ್ ಅವರೇ ಪ್ರೇರಣೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇವರ ತಮಿಳುನಾಡು ಭೇಟಿಯನ್ನು ಕರ್ನಾಟಕದ ಚುನಾವಣಾ ವರ್ಷದಲ್ಲಿ ಹಲವು ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ತಮಿಳುನಾಡಿನ ಜೊತೆಗಿನ ಸಂಬಂಧ ಉತ್ತಮವಾಗಿರಲಿ ಎನ್ನುವ ಉದ್ದೇಶ
ಸಿದ್ದರಾಮಯ್ಯನವರು ತಮಿಳುನಾಡು ಪ್ರವಾಸದ ವೇಳೆ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಭೇಟಿಯಾಗಿದ್ದಾರೆ. ಇದಾದ ನಂತರ, ದೇಶದೆಲ್ಲೆಡೆ ಕೋಮುವಾದಿ ಶಕ್ತಿಗಳು ಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ಇಲ್ಲಿ ಅವರನ್ನು ಬಿಟ್ಟು ಕೊಡದೇ ಇರುವುದಕ್ಕೆ ದ್ರಾವಿಡ ಸಹೋದರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆ ಮೂಲಕ, ಕಾಂಗ್ರೆಸ್ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಡಿಎಂಕೆ ಜೊತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಲೆಕ್ಕಾಚಾರ ಎನ್ನುವುದು ಒಂದು ಕಡೆ. ಇನ್ನೊಂದು ಕಡೆ, ಒಂದು ವೇಳೆ ಮತ್ತೆ ತಾವು ಮುಖ್ಯಮಂತ್ರಿಯಾದರೆ, ತಮಿಳುನಾಡಿನ ಜೊತೆಗಿನ ಸಂಬಂಧ ಉತ್ತಮವಾಗಿರಲಿ ಎನ್ನುವ ಉದ್ದೇಶವನ್ನು ಸಿದ್ದರಾಮಯ್ಯ ಹೊಂದಿರಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ತಮಿಳುನಾಡಿಗೆ ಹೊಂದಿಕೊಂಡಿರುವ ಕ್ಷೇತ್ರಗಳಲ್ಲಿ ತಮಿಳರ ಪ್ರಭಾವ
ರಾಜ್ಯದ ಹಲವು ಕ್ಷೇತ್ರಗಳಲ್ಲಿ ಅದರಲ್ಲೂ ಪ್ರಮುಖವಾಗಿ ಬೆಂಗಳೂರು ನಗರದ ಕೆಲವು ಮತ್ತು ತಮಿಳುನಾಡಿಗೆ ಹೊಂದಿಕೊಂಡಿರುವ ಕ್ಷೇತ್ರಗಳಲ್ಲಿ ತಮಿಳರ ಪ್ರಭಾವ ಹೆಚ್ಚು. ಮುಂದಿನ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಷಕ್ಕೆ ಮತ್ತು ತಾವು ಸ್ಪರ್ಧಿಸುವ ಕ್ಷೇತ್ರದಲ್ಲಿ ಈ ಸಮುದಾಯದ ಮತವನ್ನು ಸೆಳೆಯಲು ಸಿದ್ದರಾಮಯ್ಯನವರ ತಮಿಳುನಾಡು ಭೇಟಿ ಪ್ರಾಮುಖ್ಯ ಪಡೆದಿದೆ ಎಂದೂ ಹೇಳಲಾಗುತ್ತಿದೆ.

ಸಿದ್ದರಾಮಯ್ಯ ತಮಿಳುನಾಡಿಗೆ ಹೋಗಿದ್ದರೇ ಎನ್ನುವ ಚರ್ಚೆಯೂ ಪ್ರಸ್ತುತ
ಕಾರ್ಯಕರ್ತರ ಆಕ್ರೋಶದಿಂದ ಬಿಜೆಪಿ ತಬ್ಬಿಬ್ಬಾಗಿದೆ, ಇನ್ನೊಂದು ಕಡೆ ಕಾಂಗ್ರೆಸ್ ಬಲಿಷ್ಟವಾಗುತ್ತಾ ಸಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ಈಗಾಗಲೇ ಜೋರಾಗಿ ನಡೆಯುತ್ತಿದೆ. ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಎನ್ನುವ ಚರ್ಚೆ ನಡುವೆ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ನಡೆಯುತ್ತಿದೆ. ಅದಕ್ಕೆ ಪೂರ್ವಭಾವಿಯಾಗಿ, ಶಕ್ತಿ ಪ್ರದರ್ಶನವಿರಲಿ ಎನ್ನುವ ಕಾರಣಕ್ಕಾಗಿ ಸಿದ್ದರಾಮಯ್ಯ ತಮಿಳುನಾಡಿಗೆ ಹೋಗಿದ್ದರೇ ಎನ್ನುವ ಚರ್ಚೆಯೂ ಪ್ರಸ್ತುತದಲ್ಲಿದೆ. ಯಾಕೆಂದರೆ, ವಿಮಾನ ನಿಲ್ದಾಣದಲ್ಲೇ ಸಿದ್ದರಾಮಯ್ಯನವರಿಗೆ ಉತ್ತಮ ಸ್ವಾಗತ ದೊರಕಿತ್ತು.

ಸಮಾಜವಾದಿ, ಮತ್ತು ಅಂಬೇಡ್ಕರ್ ವಾದಿ ದಲಿತ ಹೋರಾಟಗಳಿಂದ ಪ್ರೇರಣೆ
"ನನ್ನ ಸಾರ್ವಜನಿಕ ಬದುಕಿನ ವ್ಯಕ್ತಿತ್ವವನ್ನು ರೂಪಿಸಿರುವ ರಾಜಕೀಯ ಚಿಂತನೆಗಳು, ಆಲೋಚನೆಗಳು, ಸಮಾಜವಾದಿ, ಮತ್ತು ಅಂಬೇಡ್ಕರ್ ವಾದಿ ದಲಿತ ಹೋರಾಟಗಳಿಂದ ಪ್ರೇರಣೆ ಪಡೆದು, ರೂಪುಗೊಂಡಿದೆ" ಎಂದು ಸಿದ್ದರಾಮಯ್ಯ ಚೆನ್ನೈ ಭೇಟಿಯ ವೇಳೆ ಹೇಳಿದ್ದರು. ಆ ಮೂಲಕ ತಾವು ಹೆಚ್ಚಾಗಿ ನಂಬಿಕೊಂಡು ಬಂದಿರುವ ಮತಬ್ಯಾಂಕ್ ಅನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನವನ್ನು ತಮಿಳುನಾಡು ಭೇಟಿ ಮೂಲಕ ಸಿದ್ದರಾಮಯ್ಯ ಮಾಡಿದರೇ ಎನ್ನುವ ಪ್ರಶ್ನೆಗೆ ಮುಂದಿನ ಚುನಾವಣೆ ಉತ್ತರ ಕೊಡಬಹುದು.












Click it and Unblock the Notifications