ಕೈ ಗ್ಯಾಂಗಿಗೆ ಸಿದ್ದುವೇ ಚಕ್ರವರ್ತಿ, ಮಿಡ್ಲ್ ಮನ್ನುಗಳಿಗೆ ಫುಲ್ಲು ನಿಶ್ಯಕ್ತಿ!
ರಾಜ್ಯ ಕಾಂಗ್ರೆಸ್ ನ ಮಟ್ಟಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅನಭಿಷಿಕ್ತ ಚಕ್ರವರ್ತಿ ಎಂಬುದನ್ನು ಸಂಪುಟ ಪುನಾರಚನೆ ಪ್ರಕ್ರಿಯೆ ಸಾಬೀತುಪಡಿಸಿದೆ.
ಅಂದ ಹಾಗೆ ಕೈ ಪಾಳೆಯದಲ್ಲಿ ನಂಬರ್ ಒನ್ ಜನನಾಯಕ ಅಂತ ಯಾರನ್ನಾದರೂ ಗುರುತಿಸುವುದಿದ್ದರೆ ಅದು ಸಿದ್ದರಾಮಯ್ಯ ಅವರನ್ನೇ ಎಂಬುದು ನಿರ್ವಿವಾದ. ಯಾವ ನಾಯಕ ತನ್ನ ಸಮುದಾಯದ ಮತಗಳನ್ನು ಬೇರೆ ಸಮುದಾಯದ ಕ್ಯಾಂಡಿಡೇಟುಗಳಿಗೂ ಹಾಕಿಸಬಲ್ಲರೋ? ಅವರು ನಿಸ್ಸಂಶಯವಾಗಿ ಜನನಾಯಕರು.
ಕರ್ನಾಟಕದಲ್ಲಿ ಈ ಶಕ್ತಿ ಇರುವುದು ಜೆಡಿಎಸ್ ನ ದೇವೇಗೌಡ, ಬಿಜೆಪಿಯ ಯಡಿಯೂರಪ್ಪ ಮತ್ತು ಕಾಂಗ್ರೆಸ್ ನ ಸಿದ್ದರಾಮಯ್ಯ ಅವರಿಗೆ ಮಾತ್ರ. ಉಳಿದವರ ಶಕ್ತಿ ಏನಿದ್ದರೂ ತಮ್ಮ ಕ್ಷೇತ್ರಕ್ಕೆ ಇಲ್ಲವೇ ಜಿಲ್ಲೆಯ ನಿರ್ದಿಷ್ಟ ಭಾಗಕ್ಕೆ ಅನ್ನುವುದು ರಹಸ್ಯವೇನಲ್ಲ.
ಇದು ಗೊತ್ತಿದ್ದ ಕಾರಣದಿಂದಲೇ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಸಿದ್ದರಾಮಯ್ಯ ಅವರನ್ನು ಸೈಡ್ ಲೈನ್ ಮಾಡಲು ಜೆಡಿಎಸ್ ವರಿಷ್ಠ ದೇವೇಗೌಡ ನಿರಂತರ ಯತ್ನ ನಡೆಸುತ್ತಾ ಬಂದರು.
ಒಂದು ಮಟ್ಟದಲ್ಲಿ ಅದು ಯಶಸ್ವಿಯಾಗುವಂತೆ ಕಾಣಿಸಿತಾದರೂ ಆಳದಲ್ಲಿ ಸಿದ್ದರಾಮಯ್ಯ ಅವರ ಪವರ್ರು ಡೌನ್ ಆಗುವ ಬದಲು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು. ಅಂದ ಹಾಗೆ ಈಗ ದೇವೇಗೌಡರಿಗೂ ಮನವರಿಕೆಯಾಗಿರುವ ಸತ್ಯವೆಂದರೆ, ಈ ಸರ್ಕಾರವನ್ನು ಬೀಳಿಸುವ ಶಕ್ತಿ ಅಂತಿದ್ದರೆ ಅದು ಸಿದ್ದರಾಮಯ್ಯ ಅವರಿಗೆ ಮಾತ್ರ ಎನ್ನುವುದು.

ನೀವೇ ಪವರ್ ಫುಲ್ ಲೀಡರ್ ಎಂದ ಗೌಡ್ರು
ಇದೇ ಕಾರಣಕ್ಕಾಗಿ ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ಅವರ ಜತೆ ರಹಸ್ಯ ಮಾತುಕತೆ ನಡೆಸಿದ್ದ ಮಾಜಿ ಪ್ರಧಾನಿ ದೇವೇಗೌಡ, ನಿಮ್ಮ ಪಕ್ಷದ ಮಟ್ಟಿಗೆ ನೀವೇ ಪವರ್ ಫುಲ್ ಲೀಡರು. ನಿಮ್ಮ ದಾರಿಗೆ ನಾವು ಅಡ್ಡಿ ಬರುವುದಿಲ್ಲ. ನಮ್ಮ ದಾರಿಗೆ ನೀವು ಅಡ್ಡಿ ಬರಬೇಡಿ ಎಂದು ರಾಜಿ ಮಾಡಿಕೊಂಡಿದ್ದರು.
ಇದಕ್ಕೆ ಮತ್ತೊಂದು ಕಾರಣವೂ ಇತ್ತು. ಮೊದಲನೆಯದಾಗಿ, ಸಿದ್ದರಾಮಯ್ಯ ಅವರನ್ನು ಬಡಿದು ಹಾಕಲು ತಾವು ಕೈ ಪಾಳೆಯದ ಯಾವ ನಾಯಕರನ್ನು ನಂಬಿದ್ದೇವೋ? ಅವರಿಂದ ಅದು ಸಾಧ್ಯವಿಲ್ಲ ಎಂಬುದು. ಎರಡನೆಯದಾಗಿ, ಲೋಕಸಭಾ ಚುನಾವಣೆ ಹತ್ತಿರದಲ್ಲೇ ಇರುವುದರಿಂದ ಜೆಡಿಎಸ್ ಗೆ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಅಹಿಂದ ಸಮುದಾಯದ ಮತಗಳು ದಕ್ಕುವಂತಾಗಬೇಕು ಎಂಬುದು.
ಹೀಗಾಗಿ ಈ ಸಲ ಸಚಿವ ಸಂಪುಟ ಪುನಾರಚನೆ ಪ್ರಹಸನಕ್ಕೆಂದು ಕಾಂಗ್ರೆಸ್ ನಾಯಕರು ದಿಲ್ಲಿಗೆ ಹೋದಾಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೆದುರು ಕರ್ನಾಟಕದ ಕೈ ಪಾಳೆಯದ ಸ್ಥಿತಿಯ ಬಗ್ಗೆ ಸ್ಪಷ್ಟವಾಗಿ ವಿವರಿಸಿದವರು ಸಿದ್ದರಾಮಯ್ಯ ಅವರೇ.

ಸಿದ್ದು ಇಶಾರೆಯಂತೆ ನಡೆದ ರಾಹುಲ್
ರಾಹುಲ್ ಜೀ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಶಕ್ತಿಯುತವಾಗಿ ಬೆಳೆಯಲು ಏನು ಮಾಡಬೇಕು ಅನ್ನುವುದು ನಮ್ಮ ಮೊದಲ ಆದ್ಯತೆ. ಹಿಂದೆ ಮಂತ್ರಿಯಾಗಿದ್ದಾಗ ತಮ್ಮ ಇಲಾಖೆಗಳಲ್ಲಿ ದಂಡಿಯಾಗಿ ಶಕ್ತಿ ಪಡೆದರೂ ಇಂತಿಂತವರು ಚುನಾವಣೆ ಟೈಮಿನಲ್ಲಿ ಕೈ ಎತ್ತಿ ಬಿಟ್ಟರು.
ಅನ್ನಭಾಗ್ಯ ಯೋಜನೆಯಡಿ ಸವಲತ್ತು ಪಡೆದವರು ಸಮಯ ಬಂದರೆ ತಮ್ಮ ಅಕ್ಕ ಪಕ್ಕದವರ ಹಸಿವು ನೀಗಿಸಬೇಕು. ಆದರೆ ಬಹುತೇಕರು ಯೋಜನೆಯ ಲಾಭ ಪಡೆದರು. ಆದರೆ ಎಲೆಕ್ಷನ್ ಟೈಮಿನಲ್ಲಿ ನಾಪತ್ತೆಯಾದರು.
ವಾಸ್ತವವಾಗಿ ಪಕ್ಷ ಅಧಿಕಾರದಲ್ಲಿದ್ದಾಗ ಅನ್ನಭಾಗ್ಯ ಯೋಜನೆಯ ಸವಲತ್ತು ಪಡೆದವರು ಚುನಾವಣೆ ಟೈಮಿನಲ್ಲಿ ಶಕ್ತಿ ತುಂಬಿದ್ದರೆ ನಾವು ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿತ್ತು. ಆದರೆ ಬೆರಳೆಣಿಕೆಯಷ್ಟು ಜನರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಪಕ್ಕದಲ್ಲಿದ್ದೇ ನರಳುತ್ತಿರುವವರ ಹಸಿವು ನೀಗಿಸಲು ಮುಂದಾಗಲಿಲ್ಲ. ಹೀಗಾಗಿ ಅಂತವರಿಗೆ ಮಂತ್ರಿಗಿರಿ ತಪ್ಪಿಸಿ ಎಂದು ನಾನು ಹೇಳಿದ್ದು ನಿಜ.

ಇಂಥವರನ್ನೇ ಮಂತ್ರಿ ಮಾಡಿ ಎಂದ ಸಿದ್ದು
ಈಗಲೂ ಹೇಳುತ್ತೇನೆ. ಮಂತ್ರಿಯಾಗಿದ್ದುಕೊಂಡು, ತಮ್ಮ ಸಮುದಾಯದ ಮತಗಳನ್ನು ಪಕ್ಷಕ್ಕಾಗಿ ಕ್ರೋಢೀಕರಿಸಲು ಸಹಕರಿಸಿದ್ದಲ್ಲದೆ, ಅಕ್ಕ ಪಕ್ಕದಲ್ಲಿ ಹಸಿವಿನಿಂದ ನರಳುತ್ತಿರುವವರನ್ನೂ ನೋಡಿಕೊಂಡ ನಾಯಕರು ಇಂತವರು. ಅವರನ್ನುಮಂತ್ರಿ ಮಾಡಿ. ಅದೇ ರೀತಿ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಲಾಭವಾಗುವಂತೆ ಮಾಡಬಲ್ಲವರು ಇಂತಿಂತವರು. ಅವರನ್ನು ಮಂತ್ರಿ ಮಾಡಿ ಎಂದು ಸಿದ್ದರಾಮಯ್ಯ ವಿವರಿಸಿದಾಗ ಜತೆಯಲ್ಲಿದ್ದ ನಾಯಕರ ಪೈಕಿ ಕೆಲವರು ಮಂಕಾಗಿದ್ದರು.

ಸಿದ್ದು ಶಿಫಾರಸಿಲ್ಲದೆ ಯಾರಿಗೂ ಮಂತ್ರಿಗಿರಿಯಿಲ್ಲ
ವಾಸ್ತವವಾಗಿ ಈ ಬಾರಿ ಮಂತ್ರಿಗಿರಿಯ ಲಕ್ಕು ಪಡೆದ ಸೆವೆಂಟಿ ಫೈವ್ ಪರ್ಸೆಂಟು ಲೀಡರುಗಳು ಸಿದ್ದರಾಮಯ್ಯ ಅವರ ಶಿಫಾರಸಿನ ಮೇಲೆ ಮೇಲೆದ್ದು ನಿಂತವರು. ಸಿದ್ದರಾಮಯ್ಯ ಅವರ ಶಿಫಾರಸಿಲ್ಲದೆ ಖಡಕ್ಕಾಗಿ ನಿಂತವರು ಕೂಡಾ ಸಿದ್ದರಾಮಯ್ಯ ಅವರ ವಿರೋಧಿಗಳಲ್ಲ. ಬದಲಿಗೆ ತಮ್ಮ ಸಮುದಾಯಗಳ ಕಾರಣದಿಂದ ಮೇಲೆದ್ದು ನಿಂತವರು. ಈ ಸಮುದಾಯಗಳ ಬೆಂಬಲವಿರುವವರೇ ಈಗ ಮಂತ್ರಿಗಿರಿ ಸಿಗದೆ ಸಿಡಿದೆದ್ದಿದ್ದಾರೆ.

ಶಕ್ತಿ ತುಂಬಿದ ಪಂಚರಾಜ್ಯಗಳ ಫಲಿತಾಂಶ
ವಸ್ತುಸ್ಥಿತಿ ಎಂದರೆ, ಇದುವರೆಗೆ ಹೈಕಮಾಂಡ್ ಜತೆ ಚರ್ಚೆ ನಡೆಯುವಾಗಲೆಲ್ಲ ಸಿದ್ದರಾಮಮಯ್ಯ ವಿಷಯ ಲಂಬಿಸುತ್ತಿರಲಿಲ್ಲ. ಆದರೆ ಹೀಗೇ ಬಿಟ್ಟರೆ ಸರ್ಕಾರವಿದ್ದಾಗ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿದ್ದೂ ನೆರವಿಗೆ ಬಾರದವರ ಕೈಮೇಲಾಗುತ್ತದೆ ಎಂಬ ಕಾರಣಕ್ಕಾಗಿ ಪೂರ್ವ ತಯಾರಿ ಮಾಡಿಕೊಂಡೇ ದಿಲ್ಲಿಗೆ ದೌಡಾಯಿಸಿದ್ದರು.
ಇದಕ್ಕೆ ಮತ್ತೊಂದು ಕಾರಣವೂ ಇತ್ತು. ಪಂಚರಾಜ್ಯಗಳ ಚುನಾವಣೆ ಮುಗಿಯುವವರೆಗೆ ತಾವೇನೇ ಹೇಳಿದರೂ ಪರಿಸ್ಥಿತಿ ಪಕ್ಷಕ್ಕೆ ಉಲ್ಟಾ ಹೊಡೆಯಬಹುದು ಅನ್ನುವುದು. ಆದರೆ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ರಾಜಸ್ತಾನ, ಮಧ್ಯ ಪ್ರದೇಶ, ಛತ್ತೀಸ್ ಘಡ್ ನಂತಹ ಸೇನಾನೆಲೆಗಳು ಸಿಕ್ಕ ಮೇಲೆ ಸಿದ್ದರಾಮಯ್ಯ ಅವರಿಗೆ ಈ ಚಿಂತೆ ದೂರವಾಗಿದೆ.

ಕಳಂಕ ಒಂದೇ ಏಟಿಗೆ ಬಡಿದು ಹಾಕಿದ ಸಿದ್ದು
ಹಾಗಂತಲೇ ಮೊನ್ನೆ ದೆಹಲಿಗೆ ಹೋದವರು ಸರ್ಕಾರ ಇದ್ದಾಗ ಮಂತ್ರಿಗಳಾದವರು ಯಾರು? ಮಂತ್ರಿಗಳಾಗಿದ್ದು ಅನ್ನಭಾಗ್ಯ ಯೋಜನೆಯ ಲಾಭ ಪಡೆದವರು ಯಾರು? ಹೀಗೆ ನೆರವು ಪಡೆದು ಕೈ ಕೊಟ್ಟವರು ಯಾರು? ಕೈ ಹಿಡಿದವರು ಯಾರು? ಅನ್ನುವುದನ್ನು ಸಿದ್ದರಾಮಯ್ಯ ವಿವರವಾಗಿ ಹೇಳಿದ ಮೇಲೆ ಕೈ ಪಾಳೆಯದ ದೃಷ್ಟಿಕೋನವೇ ಬದಲಾಗಿದೆ.
ಹೀಗಾಗಿ ಮಂತ್ರಿ ಮಂಡಲ ವಿಸ್ತರಣೆಯ ವಿಷಯದಲ್ಲಿ ಸಿದ್ದರಾಮಯ್ಯ ಯಾರ ಹೆಸರು ಹೇಳಿದ್ದಾರೋ? ಅವರೆಲ್ಲರೂ ಪಟ್ಟಿಯಲ್ಲಿ ಜಾಗ ಪಡೆದುಕೊಂಡಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ತಮಗೆ ತಗಲಿಕೊಳ್ಳಬಹುದಾಗಿದ್ದ ಕಳಂಕವನ್ನು ಒಂದೇ ಏಟಿಗೆ ಬಡಿದು ಹಾಕಿದ್ದಾರೆ.

ಭೇದ ಮರೆತು ಒಂದಾದ ಗೌಡರು, ಸಿದ್ದರಾಮಯ್ಯ
ಅಂದ ಹಾಗೆ ಅವರಿಗೆ ಕೈ ಪಾಳೆಯವನ್ನು ಹೊರತುಪಡಿಸಿ ಸ್ವಲ್ಪ ಮಟ್ಟಿನ ಭಿನ್ನಾಭಿಪ್ರಾಯ ಅಂತಿದ್ದುದು ಜೆಡಿಎಸ್ ವರಿಷ್ಠ ದೇವೇಗೌಡರ ವಿಷಯದಲ್ಲಿ. ಆದರೆ ಒಂದು ಕಾಲದ ಈ ಆತ್ಮೀಯರು ತಮ್ಮ ಇತ್ತೀಚಿನ ವೈಮನಸ್ಯ ಮರೆತು ಒಂದಾಗಿದ್ದಾರೆ.
ಯಾಕೆಂದರೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆ ಸಿದ್ದರಾಮಯ್ಯ ಅವರಿಗೂ ಇದೆ, ದೇವೇಗೌಡರಿಗೂ ಇದೆ. ಯಾಕೆಂದರೆ ಉಭಯ ನಾಯಕರಿಗೂ ರಾಷ್ಟ್ರ ರಾಜಕೀಯದ ಮೇಲೆ ಕಣ್ಣಿದೆ. ಸಿದ್ದರಾಮಯ್ಯ ಅವರ ಗುರಿ ನೇರವಾಗಿದ್ದರೆ, ದೇವಗೌಡರ ಲೆಕ್ಕಾಚಾರ ಬೇರೆ ಸ್ವರೂಪದಲ್ಲಿದೆ. ಹೀಗಾಗಿ ಇಬ್ಬರೂ ಒಂದಾಗಿದ್ದಾರೆ. ಆ ಮೂಲಕ ಕೈ ಪಾಳೆಯಕ್ಕೆ ಸಿದ್ದರಾಮಯ್ಯ ಅವರೇ ಅನಭಿಷಿಕ್ತ ಚಕ್ರವರ್ತಿ ಎಂದು ದೇವೇಗೌಡರು ಒಪ್ಪಿಕೊಂಡಿರುವುದಷ್ಟೇ ಅಲ್ಲ, ಖುದ್ದು ಕಾಂಗ್ರೆಸ್ ಪಕ್ಷವೇ ಅದನ್ನು ಸಾಬೀತುಪಡಿಸಿದೆ.
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications