ಸಿದ್ದು 'ಆಟ'ಕ್ಕೆ ಕೈ ಹಿಸುಕಿಕೊಳ್ಳುತ್ತಿವೆ ಜೆಡಿಎಸ್-ಕಾಂಗ್ರೆಸ್, ಸರಕಾರ ಬೀಳಿಸುತ್ತಾ ಬಿಜೆಪಿ?
ಆಟವನ್ನು ಗೆದ್ದುಬಿಟ್ಟರೆ ಆಡಲು ಬಂದಿದ್ದೆ ಅನ್ನೋದು, ಒಂದು ವೇಳೆ ಸೋತರೆ ನೋಡಲು ಬಂದಿದ್ದೆ ಅಂದುಬಿಟ್ಟರೆ ಆಯಿತು. ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಆಟದ ಸೂತ್ರಧಾರರಾಗಿರುವ ಸಿದ್ದರಾಮಯ್ಯ ಅವರ ತಂತ್ರವಿದು. ಈ ಕಾರಣಕ್ಕೇ ಬಿಜೆಪಿ ಕಡೆಯಿಂದ ಸರಕಾರ ರಚನೆಗೆ ಆಕ್ರಮಣಕಾರಿ ಹೆಜ್ಜೆಯನ್ನು ಇರಿಸುತ್ತಿಲ್ಲ ಎಂದು ಕೇಸರಿ ಪಕ್ಷದ ಒಳಗೇ ಮಾತುಗಳು ಕೇಳಿಬರುತ್ತಿವೆ.
ಇದೇನು ರಾಜಕೀಯ 'ಜಟ್ಟಿ' ಸಿದ್ದರಾಮಯ್ಯ ಅವರ ಪಟ್ಟುಗಳು ಅಂದರೆ, ಒಂದೊಂದೇ ಅಂಶಗಳು ತೆರೆದುಕೊಳ್ಳುತ್ತವೆ. ಇವುಗಳಲ್ಲಿ ಎಷ್ಟು ನಿಜ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ. ಈಗ ಜಾರಕಿಹೊಳಿ ಸೋದರರು ಮುನ್ನೆಲೆಯಲ್ಲಿ ಕಾಣುತ್ತಿದ್ದರೂ ಅವರ ಹಿಂದಿನ ಶಕ್ತಿ ಹಾಗೂ ನಂಬಿಕೆ ಎರಡೂ ಸಿದ್ದರಾಮಯ್ಯ ಅವರೇ ಅನ್ನೋದರಲ್ಲಿ ಕಾಂಗ್ರೆಸ್ಸಿಗರಿಗೇ ಅನುಮಾನವಿಲ್ಲ.
ಸಮ್ಮಿಶ್ರ ಸರಕಾರದ ಅಸ್ಥಿರತೆ: ಗುಪ್ತಚರ ಇಲಾಖೆ ನೀಡಿದ ಸ್ಪೋಟಕ ವರದಿಯಲ್ಲಿ ಏನಿದೆ?
ತನ್ನ ಬೆಂಬಲಿಗರನ್ನು ಮೈತ್ರಿ ಸರಕಾರದಲ್ಲಿ ಬೇಕೆಂತಲೇ ಡಮ್ಮಿ ಮಾಡಲಾಗಿದೆ ಅನ್ನೋದು ಸಿದ್ದರಾಮಯ್ಯ ಅವರ ಸಿಟ್ಟು. ಆ ಕಾರಣಕ್ಕೆ ಅವರು ಆರಿಸಿಕೊಂಡಿದ್ದು 'ಡಬಲ್ ಚೆಕ್ ಮೇಟ್' ತಂತ್ರ. ಹದಿನೈದಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಗೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದರೆ ಸಹಜವಾಗಿಯೇ ಮೈತ್ರಿ ಸರಕಾರ ಬಹುಮತ ಕಳೆದುಕೊಳ್ಳುತ್ತದೆ. ಬಿಜೆಪಿಯು ಅಧಿಕಾರ ಹಿಡಿಯಲು ದಾರಿಯಾಗುತ್ತದೆ.
ಸರಕಾರದ ಮೇಲೆ ಪರೋಕ್ಷವಾಗಿ ಹಿಡಿತ
ಸರಿ, ಬಿಜೆಪಿ ಅಧಿಕಾರ ಹಿಡಿದರೆ ಸಿದ್ದರಾಮಯ್ಯ ಅವರಿಗೇನು ಲಾಭ ಅಂತೀರಾ? ರಾಜೀನಾಮೆ ನೀಡುವ ಬಣದ ಮುಂದಾಳತ್ವ ವಹಿಸುವ ರಮೇಶ್ ಜಾರಕಿಹೊಳಿ ಬಿಜೆಪಿ ಜತೆಗೆ ಚೌಕಾಸಿಗೆ ಇಳಿಯುತ್ತಾರೆ. ಉಪಮುಖ್ಯಮಂತ್ರಿ ಸ್ಥಾನ, ಗೃಹ ಸಚಿವ ಹುದ್ದೆಯಂಥ ತೂಕದ ಪೋರ್ಟ್ ಫೋಲಿಯೋ ಬೇಕೇಬೇಕು ಎಂದು ಪಟ್ಟು ಹಿಡಿದರೆ ಕೇಸರಿ ಪಕ್ಷ ಕೂಡ ಯಾವುದೇ ಕೊಸರಾಡದೆ ಒಪ್ಪಿಕೊಳ್ಳಬೇಕಾಗುತ್ತದೆ. ಅಂಥದ್ದೊಂದು ಪರಿಸ್ಥಿತಿ ಉದ್ಭವವಾದರೆ ಪರೋಕ್ಷವಾಗಿಯೇ ಸರಕಾರದ ಮೇಲೆ ಸಿದ್ದರಾಮಯ್ಯ ಅವರ ಹಿಡಿತ ಇರುತ್ತದೆ. ಈಗ ಅಸಮಾಧಾನ ಇರುವ ಬೆಂಬಲಿಗರಿಗೂ ಸೂಕ್ತ ಸ್ಥಾನಮಾನ ದೊರೆತಂತಾಗುತ್ತದೆ.
ಸಿದ್ದರಾಮಯ್ಯ ವಾಪಸ್, ಕಾಂಗ್ರೆಸ್ನಲ್ಲಿ ಬಿರುಸಿನ ಚಟುವಟಿಕೆ!
ಕುಮಾರಸ್ವಾಮಿಯನ್ನು ಸಿಎಂ ಹುದ್ದೆಯಲ್ಲಿ ಸಹಿಸಲು ಆಗ್ತಿಲ್ಲ
ಮುಖ್ಯವಾಗಿ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ನೋಡುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಧರಂ ಸಿಂಗ್ ಸರಕಾರದ ವೇಳೆ ಉಪಮುಖ್ಯಮಂತ್ರಿ ಸ್ಥಾನ ತಪ್ಪಲು ಹಾಗೂ ಅವಮಾನ ಆಗಲು ದೇವೇಗೌಡರು-ಕುಮಾರಸ್ವಾಮಿ ಹೆಣೆದ ತಂತ್ರವೇ ಕಾರಣ ಎಂಬ ಸಿಟ್ಟಿದೆ. ಜತೆಗೆ ಕುಮಾರಸ್ವಾಮಿ ಕೂಡ ಅವಕಾಶ ಸಿಕ್ಕಾಗಲೆಲ್ಲ ಹಿಂದಿನ ಸರಕಾರ ಸರಿ ಇರಲಿಲ್ಲ ಅಂತಾರೆ. ಕಾಂಗ್ರೆಸ್ ಹೈ ಕಮಾಂಡ್ ಬಳಿ ಸಿದ್ದು ವಿರುದ್ಧ ದೂರು ಹೇಳುತ್ತಾರೆ. ಸಿದ್ದು ಬೆಂಬಲಿಗರಿಗೆ ಪ್ರಮುಖ ಸ್ಥಾನಗಳಲ್ಲಿ ಅವಕಾಶ ಇಲ್ಲದಂತೆ ಮಾಡಿದ್ದಾರೆ ಎಂಬ ಆಕ್ರೋಶವೆಲ್ಲ ಮಡುವಾಗಿ ಡಬಲ್ ಚೆಕ್ ಮೇಟ್ ಗೆ ಮುಂದಾಗಿದ್ದಾರೆ.
ಇದು ಅನುರಾಗವೇ ಮೂಡಲು ಸಾಧ್ಯವಿಲ್ಲದ ಅನುಮಾನದ ಸರಕಾರ, ಇಲ್ಲಿವೆ ಕಾರಣ
ಯಡಿಯೂರಪ್ಪ ಕೂಡ ಸಮಾನ ದುಃಖಿಗಳು
ಸಿದ್ದು ತಂತ್ರಕ್ಕೆ ಸರಿಯಾಗಿ ಜತೆಯಾಗಿರುವವರು ಯಡಿಯೂರಪ್ಪ. ತಮಗೂ ಕುಮಾರಸ್ವಾಮಿ ವಂಚನೆ ಮಾಡಿದ್ದಾರೆ. ಸಮ್ಮಿಶ್ರ ಸರಕಾರ ಇದ್ದಾಗ ದೇವೇಗೌಡರು ಹಾಗೂ ಕುಮಾರಸ್ವಾಮಿ ಇನ್ನಿಲ್ಲದ ಹಿಂಸೆ ಕೊಟ್ಟರು. ಆ ನಂತರ ಮುಖ್ಯಮಂತ್ರಿ ಗಾದಿಯಿಂದ ಇಳಿಯಲು ಕಾರಣರಾದರು. ಎಲ್ಲೆಲ್ಲಿ ಅವಕಾಶ ಸಿಗುತ್ತದೋ ಅಲ್ಲೆಲ್ಲ ತಿವಿಯುತ್ತಲೇ ಇರುವ ಕುಮಾರಸ್ವಾಮಿ ಬಗ್ಗೆ ಬಿಎಸ್ ವೈಗೆ ಅಗಾಧ ಸಿಟ್ಟಿದೆ. ಆದ್ದರಿಂದ ಸಮಾನ ಶತ್ರುವಾದ ಕುಮಾರಸ್ವಾಮಿಯನ್ನು ಶತಾಯಗತಾಯ ಹಣಿದು ಹಾಕಲು ನಿರ್ಧಾರ ಮಾಡಿ, ಸಿದ್ದು-ಬಿಎಸ್ ವೈ ಜಾರಕಿಹೊಳಿ ಸೋದರರ ಮೂಲಕ ಬಂಡಾಯದ ಕಾವು ಜೋರಾಗಿಯೇ ಎಬ್ಬಿಸಿದ್ದಾರೆ. ಇದಕ್ಕೆ ಬಿಜೆಪಿ ಹೈಕಮಾಂಡ್ ಸಂಪೂರ್ಣ ಬೆಂಬಲ ಇದೆ. ಜತೆಗೆ ಯಡಿಯೂರಪ್ಪ ಅವರಿಗೆ ಪೂರ್ಣ ಸ್ವಾತಂತ್ರ್ಯ ನೀಡಿ, ನೀವು ಏನು ಮಾಡುತ್ತೀರೋ ಗೊತ್ತಿಲ್ಲ. ಕರ್ನಾಟಕದಲ್ಲಿ ಅಧಿಕಾರ ಹಿಡಿಯಬೇಕು. ಆದರೆ ಅದರಿಂದ ಬಿಜೆಪಿಗೆ ಕೆಟ್ಟ ಹೆಸರು ಬರಬಾರದು ಹಾಗೊಂದು ವೇಳೆ ಮಾಡಿದರೆ ಪೂರ್ತಿ ಅವಧಿಗೆ ನೀವೇ ಮುಖ್ಯಮಂತ್ರಿ. ನಿಮ್ಮಿಂದ ಈ ಕೆಲಸ ಆಗದಿದ್ದಲ್ಲಿ ನಾವೇ ಸರಕಾರ ಉರುಳಿಸುತ್ತೇವೆ. ಆಗ ನಾವು ಯಾರನ್ನಾದರೂ ಮುಖ್ಯಮಂತ್ರಿ ಮಾಡಬಹುದು ಎಂದಿದ್ದಾರೆ.
ಯಡಿಯೂರಪ್ಪ ಪುತ್ರನ ಮೇಲೆ ಕುಮಾರಸ್ವಾಮಿ ಸಿಡಿಸಿದ ಹೊಸ ಬಾಂಬ್?
ಡಿಕೆಶಿಯನ್ನು ಸಂಕಷ್ಟಕ್ಕೆ ಸಿಲುಕಿಸಲಾಯಿತು
ಸಿದ್ದುಗೆ ಈ ಸರಕಾರ ಬೇಕಿಲ್ಲ, ಬಿಎಸ್ ವೈಗೆ ಹೈ ಕಮಾಂಡ್ ನೀಡಿರುವ ಸಮಯ ಮುಗಿಯುತ್ತಾ ಬಂದಿತ್ತು. ಆಗ ಎದ್ದಿದ್ದೇ ಬೆಳಗಾವಿ ಬಂಡಾಯ. ಮೈತ್ರಿ ಸರಕಾರದಲ್ಲಿ ತನ್ನ ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ಸಿಗಬೇಕು. ಆ ಮೂಲಕ ತಮ್ಮ ಮಾತು ನಡೆಯುವಂತಾಗಬೇಕು. ಕುಮಾರಸ್ವಾಮಿ- ದೇವೇಗೌಡರಿಗೆ ಒಂದು ಎಚ್ಚರಿಕೆ ರವಾನಿಸಬೇಕು ಎಂದು ನಿರ್ಧರಿಸಿದ ಸಿದ್ದರಾಮಯ್ಯ, ಆಪ್ತರ ಮೂಲಕ ಬಿಜೆಪಿ ಜತೆಗೆ ಡೀಲು ಕುದುರಿಸಿ, ಈ ಸರಕಾರದ ನೆಮ್ಮದಿ ಹಾಳು ಮಾಡಿ ಎಂದು ಇಶಾರೆ ಮಾಡಿಯೇ ವಿದೇಶಕ್ಕೆ ಹೊರಟಿದ್ದರು. ಇತ್ತ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಬಿಎಸ್ ವೈಗೆ ಅಡ್ಡಗಾಲು ಹಾಕಬಹುದಾದವರನ್ನು ಕಟ್ಟಿಹಾಕಿ, ಕರ್ನಾಟಕದಲ್ಲಿ ನಿಮ್ಮ ಕೆಲಸ ಮಾಡಿಕೊಳ್ಳಿ ಎಂದು ಸೂಚಿಸಿದ ಅಮಿತ್ ಶಾ, ಬಿಎಸ್ ವೈ ಮತ್ತು ಕೆಲವರನ್ನು ವಾಪಸ್ ಕಳಿಸಿದರು. ಅದೇ ವೇಳೆಗೆ ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಸ್ವತಃ ಸಂಕಷ್ಟಕ್ಕೆ ಸಿಲುಕುವಂಥ ಸನ್ನಿವೇಶ ಸೃಷ್ಟಿಸಲಾಯಿತು.
ಒಂದೇ ಒಂದು ಪಾನ್ ಅಲ್ಲಾಡಿಸಲಿ ನೋಡೋಣ : ಅಖಾಡಕ್ಕಿಳಿದ ಡಿಕೆಶಿ!
ಸಿದ್ದು ಬಣ ಬಿಜೆಪಿಗೆ ವಲಸೆ ಹೋಗುತ್ತದೆ
ಕರ್ನಾಟಕದಲ್ಲಿ ಸರಕಾರ ಕೆಡವಲು ಬಹುತೇಕ ಸಿದ್ಧತೆ ಪೂರ್ಣಗೊಂಡಿದೆ. ಆದರೆ ಈಗ ಇರುವ ಅನುಮಾನ ಏನೆಂದರೆ, ಸಿದ್ದು ಬಣಕ್ಕೆ ಕಾಂಗ್ರೆಸ್ ನಲ್ಲೇ ಸೂಕ್ತ ಸ್ಥಾನ-ಮಾನ ಸಿಕ್ಕಿದರೆ ಆಗ ಉಲ್ಟಾ ಹೊಡೆದು ಬಿಡಬಹುದು. ಯಡಿಯೂರಪ್ಪ ಅವಮಾನದ ಪಾಲಾಗುತ್ತಾರೆ. ಕಾಂಗ್ರೆಸ್ ನಲ್ಲಿ ಇನ್ನೇನೂ ಸಿಗುವ ಸಾಧ್ಯತೆ ಇಲ್ಲ ಅಂದರೆ ಆಗ ಬಿಜೆಪಿಗೆ ಸಿದ್ದು ಬಣ ವಲಸೆ ಹೋಗಿಬಿಡುವುದು ಆಲೋಚನೆ. ಅಂಥ ಪರಿಸ್ಥಿತಿ ಬಂದರೆ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಬಗ್ಗೆ ಒಂದು ರೀತಿಯ ಅಸಹನೆ, ಅಸಮಾಧಾನ ಸೃಷ್ಟಿಯಾಗಬಹುದು. ಅಂಥ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಸರಕಾರದಿಂದ ಯಾವುದಾದರೂ ಒಂದು ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡಿ, ಗೌರವಯುತವಾದ ಬೀಳ್ಕೊಡುಗೆಗೆ ಅವಕಾಶ ನೀಡುವ ಚಿಂತನೆ ನಡೆದಿದೆ. ಪ್ರಸ್ತುತ ಸನ್ನಿವೇಶದಲ್ಲಿ ಬಹಳ 'ರೆ'ಗಳು ಆಗಬೇಕಿರುವುದರಿಂದ ಮುಂದಿನ ದಿನಗಳಲ್ಲಿ ರೆಸಾರ್ಟ್ ರಾಜಕಾರಣ, ಬಂಡಾಯ, ಬೆಂಕಿ ಕಾಣಿಸಬಹುದು. ಒಂದು ವೇಳೆ ಸರಕಾರ ಉಳಿಸಿಕೊಳ್ಳಲು ಕಾಂಗ್ರೆಸ್ 'ಮುಕ್ತ' ಮನಸ್ಸು ಮಾಡಿಬಿಟ್ಟರೆ ಎಲ್ಲ ತಮಣಿಯೂ ಆಗಬಹುದು.