'ಶೈಕ್ಷಣಿಕ ದತ್ತು' ಎಂಬ ವಿನೂತನ ಯೋಜನೆಗೆ ನಾಂದಿ ಹಾಡಿದ 'ಮಿಂಚು'
Recommended Video

"ಕಲಿಕೆ ಎಂಬುದು ಪಠ್ಯವನ್ನು ಒತ್ತಡದಿಂದ ಮಕ್ಕಳ ತಲೆಗೆ ತುಂಬುವ ಕಾಯಕವಾಗದೆ, ಅದೊಂದು ಕ್ರಿಯಾಶೀಲ ಕಾರ್ಯವಾಗಬೇಕು, ಕಲಿಕೆ ಎಂಬುದು ಮಗುವನ್ನು ಜವಾಬ್ದಾರಿಯುತ ಪ್ರಜೆಯನ್ನಾಗಿಸುವ ಯಜ್ಞವಾಗಬೇಕು." ಇದೇ ಉದ್ದೇಶವನ್ನಿಟ್ಟುಕೊಂಡು ಮಕ್ಕಳಿಗೆ ಪಾಠವನ್ನು ಕಲಿಸುವಲ್ಲಿ ಒಂದು ಸೃಜನಾತ್ಮಕ ಮಾಧ್ಯಮವನ್ನು ಹುಡುಕಿಕೊಂಡವರು ಸಾ.ನಾ.ಶ್ರೀಲಕ್ಷ್ಮಿ.
ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಶ್ರೀರಾಮಪುರ ಎಂಬ ಕುಗ್ರಾಮದವರಾದ ಶ್ರೀಲಕ್ಷ್ಮಿ ಅವರು, ಸರ್ಕಾರಿ ಶಾಲೆಯಲ್ಲಿ, ಕನ್ನಡ ಮಾಧ್ಯಮದಲ್ಲೇ ಓದಿದವರು. ಅದಕ್ಕೆಂದೇ ಕನ್ನಡ ಮಾಧ್ಯಮದಲ್ಲೇ ಓದುತ್ತಿರುವ, ಸರ್ಕಾರಿ ಶಾಲೆಯ ಮಕ್ಕಳೆಂದರೆ ಅವರಿಗೆ ಎಲ್ಲಿಲ್ಲದ ಆಸ್ಥೆ.
ಎಚ್ ಎ ಎಲ್ ಉದ್ಯೋಗಿಯಾಗಿದ್ದ ಎಂ.ವಿಜಯ ಕುಮಾರ್ ಎಂಬುವವರನ್ನು ಮದುವೆಯಾದ ಶ್ರೀಲಕ್ಷ್ಮಿ ಅಂದಿನಿಂದ ಬೆಂಗಳೂರಿನಲ್ಲೇ ನೆಲೆಕಂಡುಕೊಂಡವರು. ಮಹಾಲಕ್ಷ್ಮಿ ಲೇಔಟ್ ನಲ್ಲಿ ವಾಸವಾಗಿರುವ ಇವರದು ಪತಿ, ಇಬ್ಬರು ಮಕ್ಕಳ ಪುಟ್ಟ, ಸುಖೀ ಕುಟುಂಬ.
ಸಮಾಜಶಾಸ್ತ್ರ, ಮನಶ್ಶಾಸ್ತ್ರ, ಪತ್ರಿಕೋದ್ಯಮ ಸೇರಿದಂತೆ ಬೇರೆ ಬೇರೆ ಕೋರ್ಸುಗಳನ್ನು ಓದಿಕೊಂಡು, ಉತ್ತಮ ಸರ್ಕಾರಿ ಕೆಲಸ ಸಿಗುತ್ತಿದ್ದರೂ, ಲಂಚಕ್ಕೆ ಬೇಡಿಕೆ ಇಟ್ಟಾಗ ಆ ಕೆಲಸವೇ ಬೇಡವೆಂದು ಹೊರಬಂದವರು ಶ್ರೀಲಕ್ಷ್ಮಿ. ಹಣದ ಅನಾನುಕೂಲತೆಯಿಲ್ಲ, ತೀರಾ ದುರಾಸೆಯೂ ತಮಗಿಲ್ಲ. ಆದ್ದರಿಂದ ಏನಾದರೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಗುರುತಿಸಿಕೊಳ್ಳುವ ಯೋಚನೆ ಮಾಡಿದ ಅವರಿಗೆ ಪತಿಯ ಶ್ರೀರಕ್ಷೆ, ಪ್ರೊತ್ಸಾಹ ಸದಾ ಸಿಗುತ್ತಲೇ ಇತ್ತು. ಈಗಲೂ ಸಿಗುತ್ತಿದೆ.

ಸರ್ಕಾರಿ ಶಾಲೆಯತ್ತಲೇ ಒಲವು
ಸೇವೆ ಎಂದಾಗ ಆಯ್ದುಕೊಂಡಿದ್ದು ಸರ್ಕಾರಿ ಶಾಲೆಗಳನ್ನ. ಸ್ವ ಇಚ್ಛೆಯಿಂದ ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿರುವ ಮಕ್ಕಳಿಗೆ, ಇರುವ ಪಠ್ಯವನ್ನೇ ಕ್ರಿಯಾಶೀಲವಾಗಿ ಕಲಿಸುವುದಕ್ಕೆ ಆರಂಭಿಸಿದರು. ಅವರಲ್ಲಿ ದೇಶಭಕ್ತಿಯನ್ನು ಬಿತ್ತುವಂತೆ ಕತೆ, ಪದ್ಯ, ಚಟುವಟಿಕೆಗಳಿಂದ ಶುರುಮಾಡಿ, ಪರಿಸರ ಕಾಳಜಿ, ವ್ಯಕ್ತಿತ್ವ ವಿಕಸನ, ಜ್ಞಾನ ವೃದ್ಧಿಗೆ ಸಹಾಯಕವಾಗುವ ಸೃಜನಾತ್ಮಕ ಕೆಲಸಗಳನ್ನು ಮಾಡತೊಡಗಿದರು. ಆಗ ಅವರೊಂದಿಗೆ ಜೊತೆಯಾಗಿದ್ದು, ಸ್ನೇಹಿತೆ ರೇಖಾ.

ಕವಿಯಾಗಿ ಶ್ರೀಲಕ್ಷ್ಮಿ
ಕನ್ನಡ ಸಾಹಿತ್ಯದ ಕುರಿತು ವಿಶೇಷ ಆಸಕ್ತಿ ಹೊಂದಿರುವ ಶ್ರೀಲಕ್ಷ್ಮಿ ಅವರ 'ಕ ಕಾ ಕಿ ಕೀ ಕಾಗುಣಿತ' ಎಂಬ ಪುಸ್ತಕ ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ವಿನೂತನ ಪ್ರಯೋಗವಾಗಿದೆ. ಕವನಗಳ ಮೂಲಕವೇ ಕಾಗುಣಿತ ಕಲಿಸುವ ಈ ಪುಸ್ತಕ, ಇಂದಿನ ಮಕ್ಕಳಿಗೆ ಸುಲಭವಾಗಿ ಕಲಿಯಲು ಸಹಕಾರಿಯಾಗುತ್ತದೆ. ಬೇರೆ ಪತ್ರಿಕೆಗಳಲ್ಲೂ ಲೇಖನಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲ, ಶ್ರೀಲಕ್ಷ್ಮಿ ಅವರು ಗಾಯಕಿಯೂ ಹೌದು.

ಚಿತ್ರ ಕಲಾವಿದೆಯಾಗಿ...
ಬಹುಮುಖೀ ಪ್ರತಿಭೆಯ ಶ್ರೀಲಕ್ಷ್ಮಿ ಸಾಕಷ್ಟು ಚಿತ್ರಗಳನ್ನೂ ರಚಿಸಿ, ಉತ್ತಮ ಕಲಾವಿದೆಯಾಗಿಯೂ ಸೈ ಎನ್ನಿಸಿಕೊಂಡಿದ್ದಾರೆ. ಇವರು ರಚಿಸಿದ ಚಿತ್ರಗಳ ಪ್ರದರ್ಶನವೂ ನಡೆಯುತ್ತಿದೆ. ಉಡುಗೊರೆ ಕೊಡಬೇಕೆಂದರೂ ತಾವೇ ರಚಿಸಿದ, ಮಹೋನ್ನತ ತತ್ವವನ್ನು ಒಳಗೊಂಡ ಚಿತ್ರವನ್ನು ನೀಡುತ್ತಾರೆ.

ಉನ್ನತ ಗುರಿಯೊಂದಿಗೆ 'ಮಿಂಚು ಐಡಿಯಾಸ್'
ರೈತ ಚಳವಳಿ, ಮಹಿಳಾಪರ ಹೋರಾಟ, ಆಪ್ತಸಲಹೆ ಇತ್ಯಾದಿ ಕೆಲಸಗಳಲ್ಲಿ ಸದಾ ನಿರತರಾಗಿರುತ್ತಿದ್ದ ಶ್ರೀಲಕ್ಶ್ಮಿಯವರಿಗೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವುದಕ್ಕೆ ಹೋದಾಗ ತಿಳಿದಿದ್ದು, ಪ್ರತಿಭೆಯಿದ್ದರೂ ಹಣಕಾಸಿನ ಅನಾನುಕೂಲತೆಯಿಂದ ಎಷ್ಟೋ ಬಡಮಕ್ಕಳು ಕಲಿಕೆಯಿಂದ ವಂಚಿತರಾಗುತ್ತಿದ್ದಾರೆಂಬುದು! ಅದಕ್ಕೆಂದೇ ಕೆಲವು ಸಮಾನ ಮನಸ್ಕ ಮಹಿಳೆಯರ ಗುಂಪು ಸೇರಿ 2002 ರಲ್ಲಿ 'ಮಿಂಚು ಐಡಿಯಾಸ್' ಎಂಬ ನಾನ್ ಪ್ರಾಫಿಟ್ ಆರ್ಗನೈಸೇಶನ್ ಅನ್ನು ಆರಂಭಿಸಿದರು.

ಶೈಕ್ಷಣಿಕ ದತ್ತು ಎಂಬ ವಿನೂತನ ಸೇವಾಕಾರ್ಯ
ಶೈಕ್ಷಣಿಕ ದತ್ತು ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದ 'ಮಿಂಚು ಐಡಿಯಾಸ್', ಬಡ ಮಕ್ಕಳನ್ನು ಗುರುತಿಸಿ, ಅವರ ಶಿಕ್ಷಣಕ್ಕಾಗಿ ಹಣಕಾಸಿನ ಸಹಾಯ ಮಾಡುವ ಕೆಲಸ ಮಾಡುತ್ತಿದೆ. ಶಿರಸಿ, ಮಂಡ್ಯ, ಭದ್ರಾವತಿ, ಕೊರಟಗೆರೆ, ದೊಡ್ಡಬಳ್ಳಾಪುರ ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಯ ಸಾವಿರಾರು ಮಕ್ಕಳು ಮಿಂಚುವಿನಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಮಿಂಚುವಿನ ಸಹಾಯದಿಂದ ಎಂಬಿಬಿಎಸ್, ಎಂಬಿಎ ಸೆರಿದಂತೆ ಉನ್ನತ ಶಿಕ್ಷಣ ಪಡೆದ ಮಕ್ಕಳು ಇದೀಗ ತಾವೇ ಮತ್ತೆ ಮಿಂಚುವಿನ ಮೂಲಕ ಬಡ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ.

ನಾಲ್ಕು ಮುಖ್ಯ ಗುರಿಗಳು
ಮಕ್ಕಳು, ಮಹಿಳೆ, ಪರಿಸರ, ಹಿರಿಯನಾಗರಿಕರ ಮೇಲೆ ವಿಶೇಷ ಗಮನವನ್ನಿಟ್ಟಿರುವ ಮಿಂಚು ಅವರ ಏಳ್ಗೆಗಾಗಿ ಶ್ರಮಿಸುತ್ತಿದೆ. ಮಕ್ಕಳ ಅಭಿವೃದ್ಧಿಗಾಗಿ, ವ್ಯಕ್ತಿತ್ವ ವಿಕಸನಕ್ಕಾಗಿ ಶಾಲೆಗಳಿಗೆ ತೆರಳಿ ಸೃಜನಶೀಲ ಚಟುವಟಿಕೆ ಮಾಡಿಸುವುದು. ಮಹಿಳೆಯರಿಗಾಗಿ ಪುನಶ್ಚೇತನ ಕಾರ್ಯಾಗಾರ, ವೃದ್ಧಾಶ್ರಮಗಳಿಗೆ ತೆರಳಿ ಅವರಿಗೆ ಅಗತ್ಯವಿರುವ ಮೆಡಿಸಿನ್, ಹಾಲು, ಇನ್ನಿತರೆ ಸಾಮಗ್ರಿಗಳನ್ನು ನೀಡುವುದು, ಜೊತೆಗೆ ಪರಿಸರಕ್ಕೆ ಸಂಬಂಧಿಸಿದಂತೆ ದಿನ ದಿನವೂ ವಿನೂತನ ಕಾರ್ಯ ಮಾಡುತ್ತಿದೆ. ಪ್ರಸಿದ್ಧ ಗಾಯಕರನ್ನು ಕರೆಸಿ, ಸಂಗೀತ ಕಾರ್ಯಾಗಾರವನ್ನೂ ಮಿಂಚು ಆಯೋಜಿಸುತ್ತದೆ.

ಪಶ್ಚಿಮಘಟ್ಟ ಉಳಿಸಿ ಚಳವಳಿ
ಪಶ್ಚಿಮಘಟ್ಟ ಉಳಿಸಿ ಎಂಬ ಚಳವಳಿಯಲ್ಲಿ ಮಿಂಚು ಸಹ ಸಕ್ರಿಯವಾಗಿತ್ತು. ಮಕ್ಕಳಲ್ಲಿ ಪಶ್ಚಿಮಘಟ್ಟವನ್ನು ಉಳಿಸಬೇಕಾದ ಅನಿವಾರ್ಯತೆಯನ್ನು PPT ಗಳ ಮೂಲಕ ಮನಮುಟ್ಟುವಂತೆ ವಿವರಿಸಿ, ಅವರಲ್ಲಿ ಪರಿಸರ ಕಾಳಜಿ ಮೂಡುವ ಕೆಲಸ ಈಗಲೂ ನಡೆಯುತ್ತಲೇ ಇದೆ. ಸಸ್ಯಸಂವೇದನ, ಮಿಂಚು ಮಲ್ಲಿಗೆ ಇತ್ಯಾದಿ ಪರಿಸರ ಕಾಳಜಿಯ ಕೆಲಸಗಳ ಮೂಲಕ ಹಸಿರನ್ನು ಉಳಿಸಲು ಮಿಂಚು ಕಂಕಣಬದ್ಧವಾಗಿದೆ.

'ಮಿಂಚು' ಕುಟುಂಬದ ಸದಸ್ಯರು
ಮಿಂಚು ಐಡಿಯಾಸ್ ನಲ್ಲಿ ಸಾಕಷ್ಟು ಜನರು ಕೈಜೋಡೀಸಿದ್ದಾರೆ. ಇದು ಯಾರೋ ಒಬ್ಬರ ಕೆಲಸವಲ್ಲ. ಎಲ್ಲರೂ ಒತ್ಟಾಗಿ ದುಡಿಯುತ್ತಿದ್ದೇವೆ ಎನ್ನುವ ಶ್ರೀಲಕ್ಷ್ಮಿಯವರು, ತಮ್ಮ ಸಹೋದರ ಜನಾರ್ದನ್, ಪತಿ ವಿಜಯಕುಮಾರ್, ರೇಖಾ ಶ್ರೀನಿವಾಸ್, ಪದ್ಮಾ ವಿ., ಲತಾಶ್ರೀ, ಶಾಲಿನಿ ಭಟ್, ಮಮತಾ, ಶೈಲಜಾ ಅವರಲ್ಲದೆ, ಪ್ರಸಿದ್ಧ ಗಾಯಕಿ ಸಂಗೀತ ಕಟ್ಟಿ ಕುಲಕರ್ಣಿ ಅವರೂ ನಮ್ಮ ಕಮಿಟಿಯಲ್ಲಿದ್ದು ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂಬುದು ನಮ್ಮ ಸೌಭಾಗ್ಯ ಎನ್ನುತ್ತಾರೆ ಶ್ರೀಲಕ್ಷ್ಮಿ

ಕುಟುಂಬದ ಬೆಂಬಲವಿಲ್ಲದೆ ಯಾವುದೂ ಸಾಧ್ಯವಿಲ್ಲ!
"ಪ್ರತಿ ಹೆಣ್ಣಿಗೂ ಏನನ್ನೇ ಸಾಧಿಸಬೇಕು ಎಂದರೂ ಕುಟುಂಬದ ಬೆಂಬಲ ಮುಖ್ಯ. ಅದಿಲ್ಲದೆ ಏನನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ. ಪ್ರತಿ ಮಹಿಳೆಯೂ ತಮ್ಮ ಸೀಮಿತ ಚೌಕಟ್ಟಿನಲ್ಲೇ ತನ್ನ ಮನಸ್ಸಿಗೆ ತೃಪ್ತಿ ನೀಡುವಂಥದ್ದನ್ನು ಸಾಧಿಸುವುದಕ್ಕೆ ಸಾದ್ಯವಿದೆ. ನನ್ನ ಪತಿ ಮತ್ತು ಮಕ್ಕಳ ಬೆಮಬಲವಿಲ್ಲದೆ ಇದ್ಯಾವುದೂ ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಅಂಥ ಬೆಂಬಲ ಪ್ರತಿಯೊಬ್ಬ ಮಹಿಳೆಗೂ ಸಿಕ್ಕಬೇಕು" ಎಂಬುದು ಶ್ರೀಲಕ್ಷ್ಮಿಯವರ ಇಂಗಿತ.

ದಯವಿಟ್ಟು ಕನ್ನಡ ಮಾತನಾಡಿ
"ಪ್ರತಿಯೊಬ್ಬರೂ ಮನೆಯಲ್ಲಿ ಕನ್ನಡದಲ್ಲೇ ಮಾತನಾಡಿ, ತರಕಾರಿ ಮಾರುಕಟ್ಟೆಯಲ್ಲಿ, ಮಾಲ್ ಗಳಲ್ಲಿ ಎಲ್ಲೆಡೆ ಎಷ್ಟು ಸಾಧ್ಯವೋ ಅಷ್ಟು ಕನ್ನಡ ಮಾತನಾಡಿ. ಮಾತನಾಡುವುದರಿಂದ ಮಾತ್ರವೇ ಕನ್ನಡ ಉಳಿಸುವುದಕ್ಕೆ ಸಾಧ್ಯ. ಕನ್ನಡ ಮಾತನಾಡುವ ಆಂದೋಲನ ಪ್ರತಿ ಮನೆಯಲ್ಲಿಯೂ ಆರಂಭವಾಗಲಿ. ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿ, ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ನೀಡಿ. ಆಗ ಭಾಷೆಯೂ ಉಳಿಯುತ್ತದೆ, ಮಕ್ಕಳ ಮನಸ್ಸೂ ವಿಕಾಸವಾಗುತ್ತದೆ" ಎಂದು ಕಳಕಳಿಯಲ್ಲಿ ವಿನಂತಿಸಿಕೊಳ್ಳುತ್ತಾರೆ ಶ್ರೀಲಕ್ಷ್ಮಿ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications