ವೈಎಸ್ವಿ ದತ್ತ ಕಾಂಗ್ರೆಸ್ಸಿನತ್ತ: 'ಪಕ್ಷದಲ್ಲಿ ಇರೋ ಒಬ್ಬ ಬ್ರಾಹ್ಮಣ' ಎಂದಿದ್ದ ದೇವೇಗೌಡ್ರು
ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಮೇಷ್ಟ್ರು ಎಂದೇ ಕರೆಯಲ್ಪಡುವ ಮಾಜಿ ಶಾಸಕ ವೈಎಸ್ವಿ ದತ್ತ ಕಾಂಗ್ರೆಸ್ ಸೇರುವುದಾಗಿ ಅಧಿಕೃತವಾಗಿ ಹೇಳಿದ್ದಾರೆ. ಆ ಮೂಲಕ, ಹಲವು ದಿನಗಳ ಗೊಂದಲ/ಊಹಾಪೋಹಕ್ಕೆ ದತ್ತ ತೆರೆ ಎಳಿದಿದ್ದಾರೆ.
ರಾಜಕಾರಣಿಗಳು ಕೊಟ್ಟ ಮಾತಿನ ಮೇಲೆ ನಿಲ್ಲುವುದು ಕಮ್ಮಿ ಎನ್ನುವ ರಾಜಕೀಯದ ಇತಿಹಾಸಕ್ಕೆ ಈ ವಿದ್ಯಮಾನ ಮತ್ತೊಂದು ಸೇರ್ಪಡೆಯಾಗಿದೆ ಎನ್ನಬಹುದಾಗಿದೆ. ಯಾಕೆಂದರೆ, ದತ್ತ ಮತ್ತು ದೇವೇಗೌಡ್ರು ತಮ್ಮ ಬಾಂಧವ್ಯದ ಬಗ್ಗೆ ಹಲವು ಬಾರಿ ಬಹಿರಂಗವಾಗಿ ಹೇಳಿಕೆ ನೀಡಿದ್ದುಂಟು.
ದೇವೇಗೌಡ್ರ ಮಾನಸಪುತ್ರ ಎಂದೇ ಕರೆಯಲ್ಪಡುವ ದತ್ತ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುವುದಾಗಿ ಅಧಿಕೃತವಾಗಿ ಸ್ಪಷ್ಟನೆಯನ್ನು ನೀಡಿದ ಸಂದರ್ಭದಲ್ಲಿ, ದೇವೇಗೌಡ್ರ ಮೇಲಿರುವ ಋಣವನ್ನು ಸ್ಮರಿಸಿಕೊಳ್ಳಲು ಮರೆಯಲಿಲ್ಲ. "ಅವರ ಋಣ ನನ್ನ ಮೇಲೆ ಇದೆ. ಅದಕ್ಕಾಗಿ ನಾನು ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಜೆಡಿಎಸ್ನಿಂದ ಶಾಸಕ ಆಗುವವರೆಗೂ ಪಕ್ಷ ಕಟ್ಟಿದ್ದೇನೆ" ಎಂದು ದತ್ತ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಬೆಳ್ಳಿ ಪ್ರಕಾಶ್ ವಿರುದ್ದ 15,372 ಮತಗಳ ಅಂತರದಿಂದ ಸೋಲುಂಡಿದ್ದರು. ಇದಾದ ನಂತರ ಜೆಡಿಎಸ್ ನಲ್ಲಿ ಅಷ್ಟೇನೂ ಸಕ್ರಿಯರಾಗಿರದ ದತ್ತ, ಕೊರೊನಾ ವೇಳೆ ವಿಡಿಯೋ ಮೂಲಕ ಹತ್ತನೇ ತರಗತಿಯ ಗಣಿತದ ಪಾಠವನ್ನು ಫೇಸ್ ಬುಕ್ ಮೂಲಕ ಲೈವ್ ಮಾಡಿ ಜನಮನ್ನಣೆ ಗಳಿಸಿದ್ದರು. ದತ್ತ ಅವರು ಜೆಡಿಎಸ್ಸಿಗೆ ಟಾಟಾ ಹೇಳುತ್ತಿರುವ ಸಂದರ್ಭದಲ್ಲಿ ದೇವೇಗೌಡ್ರು ಈ ಹಿಂದೆ ಹೇಳಿದ ಮಾತನ್ನು ಒಮ್ಮೆ ಸ್ಮರಿಸಿಕೊಳ್ಳೋಣ..

ದತ್ತ ಅವರಿಗೆ ಟಿಕೆಟ್ ನೀಡಲಾಗುತ್ತದೆ, ಕೈಬಿಡುವ ಪ್ರಶ್ನೆಯೇ ಇಲ್ಲ
ಕಳೆದ ವಿಧಾನಸಭಾ ಚುನಾವಣೆಗೆ ಕಡೂರಿನಿಂದ ದತ್ತ ಅವರಿಗೆ ಜೆಡಿಎಸ್ ಟಿಕೆಟ್ ನೀಡುವ ವಿಚಾರದಲ್ಲಿ ಗೊಂದಲ ಏರ್ಪಟ್ಟಿತ್ತು. ಆ ವೇಳೆ ಮಾಧ್ಯಮದರ ಪ್ರಶ್ನೆಗೆ ಉತ್ತರಿಸುತ್ತಾ ದೇವೇಗೌಡ್ರು, ದತ್ತ ಅವರಿಗೆ ಟಿಕೆಟ್ ನೀಡಲಾಗುತ್ತದೆ, ಕೈಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದರು. ಗೌಡ್ರು, ದತ್ತ ಅವರು ಪ್ರತಿನಿಧಿಸುವ ಸಮುದಾಯವನ್ನು ಉಲ್ಲೇಖಿಸಿ ಮಾತನಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ನಮ್ಮ ಪಕ್ಷದಲ್ಲಿರುವ ಒಬ್ಬ ಬ್ರಾಹ್ಮಣನನ್ನು ಕೈಬಿಟ್ಟು ನಾನೇನು ಮಾಡಲಿ
"ಯಾವುದೇ ಕಾರಣಕ್ಕೂ ವೈಎಸ್ವಿ ದತ್ತ ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುತ್ತದೆ, ಈ ಬಗ್ಗೆ ಸಂಶಯ ಬೇಡ. ನಮ್ಮ ಪಕ್ಷದಲ್ಲಿರುವ ಒಬ್ಬ ಬ್ರಾಹ್ಮಣನನ್ನು ಕೈಬಿಟ್ಟು ನಾನೇನು ಮಾಡಲಿ" ಎಂದು ದೇವೇಗೌಡ್ರು ಹೇಳಿದ್ದರು. ಗೌಡ್ರು ಕೊಟ್ಟ ಮಾತಿನಂತೆ ನಡೆದುಕೊಂಡು ಕಡೂರಿನಿಂದ ಟಿಕೆಟ್ ನೀಡಿದ್ದರು.

ಆಮ್ ಆದ್ಮಿ ಪಾರ್ಟಿ ನೀಡಿದ್ದ ಆಫರ್ ಅನ್ನು ತಿರಸ್ಕರಿಸಿದ್ದರು
ಸೆಪ್ಟಂಬರ್ 2020ರ ವೇಳೆಯೂ ದತ್ತ ಅವರು ಜೆಡಿಎಸ್ ಬಿಡುತ್ತಾರೆ ಸುದ್ದಿ ಗುಲ್ಲೆಬ್ಬಿತ್ತು. ಆ ವೇಳೆ ಸ್ಪಷ್ಟನೆ ನೀಡಿದ್ದ ದತ್ತ, "ದೇವೇಗೌಡ್ರು ಇರುವ ತನಕ ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ" ಎಂದು ಸ್ಪಷ್ಟವಾಗಿ ಹೇಳುವ ಮೂಲಕ, ಆಮ್ ಆದ್ಮಿ ಪಾರ್ಟಿ ನೀಡಿದ್ದ ಆಫರ್ ಅನ್ನು ತಿರಸ್ಕರಿಸಿದ್ದರು. ಆಮ್ ಆದ್ಮಿ ಪಕ್ಷದ ರೋಮಿ ಭಾಟಿ, ಪೃಥ್ವಿ ರೆಡ್ಡಿ ಹಾಗೂ ಸಂಚಿತ್ ಸಹಾನಿ ಜೊತೆ, ದತ್ತ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು.

ಸಿದ್ದರಾಮಣ್ಣ ನನ್ನನ್ನ ಕಾಂಗ್ರೆಸ್ ಗೆ ಬಾ ಮಂತ್ರಿ ಮಾಡುತ್ತೇನೆ ಎಂದಿದ್ದ ವಿಡಿಯೋ
ಸಿದ್ದರಾಮಣ್ಣ ನನ್ನನ್ನ ಕಾಂಗ್ರೆಸ್ ಗೆ ಬಾ ಮಂತ್ರಿ ಮಾಡುತ್ತೇನೆ, ಎಲ್ಲಾ ರೀತಿಯಲ್ಲೂ ನಿನಗೆ ಕಾಂಗ್ರೆಸ್ ಪಕ್ಷದಲ್ಲಿ ಅನುವು ಮಾಡಿಕೊಡುತ್ತೇನೆ ಎಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಹೋಗುವ ತೀರ್ಮಾನ ಮಾಡಿದ್ದೇನೆ ಎಂದು ದತ್ತ ಹೇಳಿರುವ ಆಡಿಯೋ ಸಂಭಾಷಣೆ ಇದೇ ವರ್ಷದ ಮೇ ತಿಂಗಳಲ್ಲಿ ವೈರಲ್ ಆಗಿದ್ದನ್ನು ಇಲ್ಲಿ ನೆನೆಪಿಸಿ ಕೊಳ್ಳಬಹುದಾಗಿದೆ.












Click it and Unblock the Notifications