ಮುಂಗಾರು ಮಳೆ ಬರಲು ನೂರೆಂಟು ಕಸರತ್ತು!

ಈಗ ಮೊದಲಿನಂತೆ ಕಾಲಕ್ಕೆ ತಕ್ಕಂತೆ ಮಳೆ ಸುರಿಯುತ್ತಿಲ್ಲ. ಮುಂಗಾರಿನಲ್ಲಿ ಎಡೆಬಿಡದೆ ಸುರಿಯುವ ಜಿಟಿಜಿಟಿ ಮಳೆಯ ಆ ಚಿತ್ರಣ ಈಗ ಅಪರೂಪವಾಗುತ್ತಿದೆ. ಮಳೆ ಯಾವಾಗ ಬರುತ್ತೋ ಹೇಳಲಾಗುತ್ತಿಲ್ಲ. ಸುರಿದರೆ ಒಮ್ಮೆಗೆ ಸುರಿದು ಅನಾಹುತ ಸೃಷ್ಟಿಸಿ ಸ್ತಬ್ಧವಾಗಿ ಬಿಡುತ್ತದೆ.

ಹಿಂದಿನ ಕಾಲದಲ್ಲಿ ಹಾಗಿರಲಿಲ್ಲ. ಸಾಮಾನ್ಯವಾಗಿ ಮುಂಗಾರಿನಲ್ಲಿ ಆರಂಭವಾದ ಮಳೆ ಒಂದೇ ಸಮನೆ ಸುರಿಯುತ್ತಿತ್ತು. ಒಮ್ಮೊಮ್ಮೆ ಮಳೆ ಜೋರಾಗಿ ಸುರಿದಾಗ ಪ್ರವಾಹ ಪರಿಸ್ಥಿತಿ ತಲೆದೋರುತ್ತಿತ್ತು. ಅದನ್ನು ಹೊರತುಪಡಿಸಿದರೆ ಪ್ರಕೃತಿ ವಿಕೋಪಗಳಂತಹ ಅನಾಹುತಗಳು ಸಂಭವಿಸುತ್ತಿದ್ದದ್ದು ಅಪರೂಪ. ಆದರೆ ಈಗ ಎಲ್ಲವೂ ಬದಲಾಗಿದೆ. ಹೇಳಿದ ಸಮಯಕ್ಕೆ ಸರಿಯಾಗಿ ಮಳೆ ಸುರಿಯದ ಕಾರಣದಿಂದಾಗಿ ತೊಂದರೆಗಳು ಎದುರಾಗುತ್ತಿವೆ. ಅಷ್ಟೇ ಅಲ್ಲ ಮಳೆ ಸುರಿದರೂ ಅನಾಹುತ ತಪ್ಪಿದಲ್ಲ.

 ಪರಿಸರದ ಮೇಲೆ ನಿರಂತರ ದೌರ್ಜನ್ಯ

ಪರಿಸರದ ಮೇಲೆ ನಿರಂತರ ದೌರ್ಜನ್ಯ

ಏಕೆ ಹೀಗಾಗುತ್ತಿದೆ ಎನ್ನುವುದನ್ನು ನೋಡಿದರೆ ಅದಕ್ಕೆ ಮನುಷ್ಯರೇ ಕಾರಣ ಎನ್ನುವುದು ಈಗಿನ ಸನ್ನಿವೇಶಗಳಿಂದ ಮನದಟ್ಟಾಗುತ್ತದೆ. ಪರಿಸರದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಕಾಡು ನಾಡಾಗುತ್ತಿದೆ. ಭೂಮಿಯ ಹೆಚ್ಚಿನ ಭಾಗ ಕಾಂಕ್ರಿಟ್, ಡಾಂಬರಿನಿಂದ ಮುಚ್ಚುತ್ತಿದೆ. ಇದರಿಂದ ಭೂಮಿಗೆ ಬಿದ್ದ ನೀರು ಇಂಗದೆ ಹರಿದು ಹೋಗುತ್ತಿದೆ. ಹೀಗಾಗಿ ಅಂತರ್ಜಲದ ಸಮಸ್ಯೆ ಎದುರಾಗಿದೆ.

 ಹನಿ ನೀರಿಗೂ ಪರದಾಡುವ ಸ್ಥಿತಿ

ಹನಿ ನೀರಿಗೂ ಪರದಾಡುವ ಸ್ಥಿತಿ

ನಾವು ಎಷ್ಟೇ ಆಧುನಿಕವಾಗಿ ಅಭಿವೃದ್ಧಿಯಾದರೂ ಪರಿಸರವನ್ನು ಅವಲಂಬಿಸಲೇಬೇಕಾಗಿದೆ. ಆದರೆ ಈ ಪ್ರಕೃತಿಗೆ ನಾವು ಮೇಲಿಂದ ಮೇಲೆ ದ್ರೋಹ ಎಸಗುತ್ತಿದ್ದೇವೆ. ಇದರಿಂದಾಗಿಯೇ ವಾತಾವರಣದಲ್ಲಿ ಏರುಪೇರಾಗುತ್ತಿದೆ. ಸಕಾಲಕ್ಕೆ ಮಳೆ ಬಾರದ ಕಾರಣ ನದಿಮೂಲಗಳು ಸದ್ದಿಲ್ಲದೆ ಬತ್ತುತ್ತಿವೆ. ಹನಿ ನೀರಿಗೂ ಪರದಾಡುವಂತಹ ಸ್ಥಿತಿಗೆ ಬಂದು ತಲುಪಿದ್ದೇವೆ. ಇದರಿಂದ ಬೇಸಿಗೆ ಬಂತೆಂದರೆ ಮಳೆಯ ಚಿಂತೆ ಕಾಡುತ್ತದೆ. ಅದರಲ್ಲೂ ಗ್ರಾಮೀಣ ಜನರಿಗೆ ಮಳೆ ಬಂದಿಲ್ಲವೆಂದರೆ ಯಾವ ಕೆಲಸವೂ ನಡೆಯುವುದಿಲ್ಲ. ಹೀಗಾಗಿ ಮಳೆಗಾಗಿ ದೇವಾಲಯಗಳಲ್ಲಿ ಪೂಜೆ ಮಾಡುವುದು, ಹೋಮಹವನ ಮಾಡುವುದು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ವರುಣನ ಮೊರೆ ಹೋಗುವುದು ಕಂಡುಬರುತ್ತಿದೆ.

 ಸರ್ಕಾರದಿಂದಲೇ ಪೂಜೆಗೆ ಆದೇಶ

ಸರ್ಕಾರದಿಂದಲೇ ಪೂಜೆಗೆ ಆದೇಶ

ಈ ಬಾರಿ ಸರ್ಕಾರವೇ ದೇವಾಲಯಗಳಲ್ಲಿ ಮಳೆಗಾಗಿ ಪರ್ಜನ್ಯ ಜಪ ಮಾಡುವಂತೆ ಆದೇಶ ನೀಡಿದ್ದು ಇದಕ್ಕೆ ಸಾಕ್ಷಿಯಾಗಿದೆ. ಬಹಳಷ್ಟು ಕಡೆಗಳಲ್ಲಿ ಬೇಸಿಗೆಯಲ್ಲಿಯೇ ಮಳೆಗಾಗಿ ದೇವಾಲಯಗಳಲ್ಲಿ ಪೂಜೆ ನಡೆಯುತ್ತಿವೆ. ಕೊಡಗಿನಲ್ಲಿ ಇಗ್ಗುತಪ್ಪ ದೇವರನ್ನು ಮಳೆ ದೇವರು ಎಂದೇ ಕರೆಯಲಾಗುತ್ತದೆ. ಇನ್ನು ಹಲವು ದೇವಾಲಯಗಳಲ್ಲಿ ಇವತ್ತಿಗೂ ಮಳೆಗಾಗಿ ಪೂಜೆಯನ್ನು ನಡೆಸಿಕೊಂಡೇ ಬರಲಾಗುತ್ತಿದೆ.

 ಗ್ರಾಮಗಳಲ್ಲಿ ಕಪ್ಪೆ ಮದುವೆ ಮಹಿಮೆ

ಗ್ರಾಮಗಳಲ್ಲಿ ಕಪ್ಪೆ ಮದುವೆ ಮಹಿಮೆ

ಇದಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಗಿ ಕಪ್ಪೆಗೆ ಮದುವೆ ಮಾಡುವ ಸಂಪ್ರದಾಯವೂ ಇದೆ. ಈ ಮದುವೆ ಹೇಗೆ ಇರುತ್ತದೆ ಎಂದರೆ, ಗ್ರಾಮದ ಯುವಕರು ಗಂಡು ಮತ್ತು ಹೆಣ್ಣು ಕಪ್ಪೆಗಳನ್ನು ತಂದು, ಯುವಕರು ಗಂಡು ಕಪ್ಪೆಗೆ ಅಲಂಕಾರ ಮಾಡಿದರೆ, ಯುವತಿಯರು ಹಾಗೂ ಮಹಿಳೆಯರು ಹೆಣ್ಣು ಕಪ್ಪೆಗೆ ಶೃಂಗಾರ ಮಾಡಿ, ನಂತರ ಮುತ್ತೈದೆಯರು ಕಳಸ ಹೊತ್ತುಕೊಂಡು ನೀರು ತರುವ ಶಾಸ್ತ್ರಕ್ಕೆ ಮುಂದಾಗುತ್ತಾರೆ. ಇದರ ಜತೆಗೆ ಗಂಡು ಕಪ್ಪೆಗೆ ಯುವಕರು ಹಸೇಮಣೆ ಏರಿಸುವ ಶಾಸ್ತ್ರ ಮಾಡುತ್ತಾರೆ.
ನಂತರ ಗಂಡು ಕಪ್ಪೆಯನ್ನು ಪುಟಾಣಿ ಮಕ್ಕಳು ಗ್ರಾಮದ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಹೆಣ್ಣಿನ ಮನೆಗೆ ಕರೆದೊಯ್ಯುತ್ತಾರೆ. ಆಗ ಹೆಣ್ಣು ಕಪ್ಪೆಯ ಕಡೆಯವರು ಮನೆ ತುಂಬಿಸಿಕೊಳ್ಳುವ ಶಾಸ್ತ್ರವನ್ನು ಮಾಡುತ್ತಾರೆ. ಬಳಿಕ ಪುರೋಹಿತರು ಮೂಹೂರ್ತಕ್ಕೆ ಕಾಲ ನಿಗದಿ ಮಾಡಿ ಗಂಡು ಮತ್ತು ಹೆಣ್ಣು ಕಪ್ಪೆಗಳನ್ನು ಮದುವೆ ಚಪ್ಪರದ ಮಂಟಪಕ್ಕೆ ಕರೆ ತಂದು ಗ್ರಾಮದ ಐದು ಜನ ಮುತ್ತೈದೆಯರು ನವ ವಧು ವರರಿಗೆ ಕಂಕಣವನ್ನು ಕಟ್ಟಿ, ಅರಿಶಿನ ಕುಂಕುಮ ಇಟ್ಟು ಮಡಿಲಕ್ಕಿ ತುಂಬುತ್ತಾರೆ. ಪುರೋಹಿತರು ಸೂಕ್ತ ಸಮಯದಲ್ಲಿ ಎಲ್ಲರ ಸಮ್ಮುಖದಲ್ಲಿ ಮಂತ್ರಪಠಣ ಮಾಡಿ ಗಟ್ಟಿಮೇಳದೊಂದಿಗೆ ಮಾಂಗಲ್ಯ ಮಂತ್ರವನ್ನು ಪಠಿಸುತ್ತಾ ಕಪ್ಪೆಗಳಿಗೆ ತಾಳಿ ಕಟ್ಟಿಸುತ್ತಾರೆ.

ಈ ವೇಳೆ ಗ್ರಾಮದ ಹಿರಿಯರು, ಮುಖಂಡರು, ಮುತ್ತೈದೆಯರು ನೂತನ ವಧುವರರಿಗೆ ಶುಭ ಹಾರೈಸುತ್ತಾರೆ. ಇದಾದ ನಂತರ ನವ ದಂಪತಿಗಳನ್ನು ಒಂದು ತಟ್ಟೆಯಲ್ಲಿ ಕುಳ್ಳರಿಸಿ ಗ್ರಾಮದ ಪುಟಾಣಿ ಮಕ್ಕಳು ಮೆರವಣಿಗೆ ಮೂಲಕ ಪ್ರತಿಯೊಂದು ಮನೆಗೆ ಕರೆದೊಯ್ದು ಮಡಿಲಕ್ಕಿ ತುಂಬಿಸಿ, ಅಕ್ಷತೆ ಹಾಕಿಸಿ ಗ್ರಾಮದ ಅರಳಿ ಮರದಡಿಯಲ್ಲಿ ಆರತಕ್ಷತೆ ನಡೆಸುತ್ತಾರೆ.

ಈಗಾಗಲೇ ರಾಜ್ಯದ ಬಹಳ ಕಡೆ ಬರದ ಛಾಯೆ ಎದುರಾಗಿರುವುದರಿಂದ ಹಿಂದಿನ ಕಾಲದಲ್ಲಿ ಮಳೆಗಾಗಿ ಏನೆಲ್ಲ ಸಂಪ್ರದಾಯಗಳನ್ನು ಮಾಡುತ್ತಿದ್ದರೋ ಅದನ್ನೆಲ್ಲ ಮಾಡಲು ಜನ ಮುಂದಾಗಿರುವುದು ಕಂಡುಬರುತ್ತಿದೆ.

ಅದೇನೇ ಇರಲಿ ಈಗ ಕಾಲ ಮಿಂಚಿ ಹೋಗಿದೆ. ನಾವು ಪ್ರಕೃತಿ ವಿರುದ್ಧ ಸಾಗಿದ ಪರಿಣಾಮಗಳು ನಮ್ಮ ಮೇಲೆಯೇ ವಿವಿಧ ರೀತಿ ಬೀರುತ್ತಿದ್ದು, ಇನ್ನೂ ಎಚ್ಚೆತ್ತುಕೊಳ್ಳದೆ ಹೋದರೆ ಅಪಾಯ ತಪ್ಪಿದ್ದಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+