ಸಂವಿಧಾನದ ಆಶಯಗಳಿಗೆ ನೀರೆರಚಿ ಮೇಲ್ಮನೆ ಸದಸ್ಯರ ಆಯ್ಕೆ
ಬೆಂಗಳೂರು, ಮೇ. 23: ರಾಜ್ಯಸಭೆ ಮತ್ತು ವಿಧಾನ ಪರಿಷತ್ ಅನ್ನು ಚಿಂತಕರ ಚಾವಡಿ ಎಂದು ಕರೆಯುತ್ತೇವೆ. ಸಮಾಜದ ನಾನಾ ಕ್ಷೇತ್ರದಲ್ಲಿ ಅಮೂಲ್ಯ ಸಾಧನೆ ಮಾಡಿದವರನ್ನು, ಅತಿ ಬುದ್ಧಿವಂತರನ್ನು ಗುರುತಿಸಿ ಮೇಲ್ಮನೆಗಳಿಗೆ ಆಯ್ಕೆ ಮಾಡಬೇಕು. ಈ ಮೂಲಕ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಮೇಲ್ಮನೆ ಸದಸ್ಯರ ಆಯ್ಕೆ ಹಿಂದಿನ ಭಾರತ ಸಂವಿಧಾನದ ಮೂಲ ಆಶಯ. ಆದರೆ, ಚುನಾಯಿತ ಪ್ರತಿನಿಧಿಗಳಿಂದ ಮೇಲ್ಮನೆಗಳಿಗೆ ಸದಸ್ಯರನ್ನು ಅಯ್ಕೆ ಮಾಡುವುದನ್ನು ರಾಜಕೀಯ ಪಕ್ಷಗಳು ವ್ಯಾಪಾರವನ್ನಾಗಿ ಮಾಡಿಕೊಂಡಿವೆ.
ಭಾರತದ ಸಂವಿಧಾನದ 80 ನೇ ವಿಧಿ ರಾಜ್ಯಸಭಾ ಸದಸ್ಯರ ಅಯ್ಕೆ ಮತ್ತು ಅಧಿಕಾರದ ಬಗ್ಗೆ ಉಲ್ಲೇಖವಾಗಿದೆ. ಸಂವಿಧಾನದ 169 ರಾಜ್ಯ ವಿಧಾನ ಪರಿಷತ್ ಸದಸ್ಯರ ಅಯ್ಕೆ ಬಗ್ಗೆ ಉಲ್ಲೇಖವಾಗಿದೆ. ರಾಜ್ಯಸಭೆ ವಿಚಾರಕ್ಕೆ ಬಂದರೆ ರಾಜ್ಯಸಭೆ ಸದಸ್ಯರ ಸಂಖ್ಯೆ 250. ಅದರಲ್ಲಿ 238 ಚುನಾಯಿತ ಪ್ರತಿನಿಧಿಗಳ ಮೂಲಕ ಆಯ್ಕೆಯಾದರೆ, ಉಳಿದ 12 ಸದಸ್ಯರನ್ನು ಕಲೆ, ಸಾಹಿತ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಉಳಿದ 238 ಸದಸ್ಯರನ್ನು ಅಯಾ ರಾಜ್ಯಗಳ ವಿಧಾನಸಭೆ ಸಂಖ್ಯಾಬಲಕ್ಕೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ.
ಆದರೆ ಸಂವಿಧಾನದ ಮೂಲ ಆಶಯದ ಪ್ರಕಾರ ರಾಜಕೀಯ ಪಕ್ಷಗಳು ರಾಜ್ಯಸಭೆಗೆ ಬುದ್ಧಿವಂತರನ್ನು, ವಿವಿಧ ಕ್ಷೇತ್ರಗಳ ಪರಿಣಿತರನ್ನು ಆಯ್ಕೆ ಮಾಡಿ ಕಳುಹಿಸೇಕು. ಈ ಸಾಧಕರ ಆಲೋಚನೆಗಳು, ಚಿಂತನೆಗಳು ಮತ್ತು ಅನುಭವ ಯೋಜನೆ, ಕಾಯ್ದೆ ರೂಪದಲ್ಲಿ ಬಂದು ರಾಷ್ಟ್ರದ ಸರ್ವತೋಮುಖ ಪ್ರಗತಿಗೆ ನಾಂದಿ ಹಾಡಬೇಕು.
ಆದರೆ ಇವತ್ತು ಕರ್ನಾಟಕದಲ್ಲಿ ಪಕ್ಷಗಳು ಸೇರಿದಂತೆ ರಾಜ್ಯಸಭೆ ಸದಸ್ಯರ ಆಯ್ಕೆ ವಿಚಾರದಲ್ಲಿ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿವೆ. ತಜ್ಞರು, ಸಾಧಕರ ಬದಲಿಗೆ ಕೈತುಂಬಾ ಕಾಸು ಇರುವರ ಹುಡುಕಾಟದಲ್ಲಿ ತೊಡಗಿವೆ. ಬಹುಶಃ ಹಣ ಇರುವರನ್ನೇ ಆಯ್ಕೆ ಮಾಡಿಕೊಡುವ ಕಾರ್ಯದಲ್ಲಿ ಮುಳಗಿವೆ. ಸಾಧಕರು, ಪ್ರತಿಭಾನ್ವಿತರು, ಕಾನೂನು ತಜ್ಞರು, ಬುದ್ಧಿವಂತರು ರಾಜಕೀಯದಿಂದಲೇ ದೂರ ಉಳಿದಿದ್ದಾರೆ. ತಮ್ಮ ವ್ಯಾಪಾರ, ಉದ್ಯಮಗಳನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ರಾಜಕೀಯ ಸ್ಥಾನಕ್ಕಾಗಿ ಹಪಹಪಿಸುವ ಮಂದಿಯನ್ನು ಗುರುತಿಸಿ ರಾಜಕೀಯ ಪಕ್ಷಗಳು ಆಯ್ಕೆ ಮಾಡಲು ಹೊರಟಿವೆ.
ಪಕ್ಷಕ್ಕೆ ಲಾಭ ಮಾಡಿಕೊಡಬೇಕು
ರಾಜ್ಯಸಭಾ ಸದಸ್ಯರ ಆಯ್ಕೆ ಕೂಡ ಒಂದು ರೀತಿಯ ಪಕ್ಷಕ್ಕೆ ಲಾಭ ಮಾಡಿಕೊಡುವಂತಿರಬೇಕು ಎಂಬ ತತ್ವ ಪರಿಪಾಲನೆಯಲ್ಲಿ ಪಕ್ಷಗಳು ಮುಳುಗಿವೆ. ರಾಜ್ಯ ವಿಧಾನ ಮಂಡಲದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸದಸ್ಯರನ್ನು ನೋಡಿದರೆ ಇಂತಹ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಇನ್ನು ರಾಜ್ಯದ ಹಿತಾಸಕ್ತಿ ಬಲಿಕೊಟ್ಟು ಹೊರ ರಾಜ್ಯದ ಉದ್ಯಮಿಗಳಿಗೆ ಮಣೆ ಹಾಕಿರುವ ಸಂಗತಿಗಳು ಇವೆ. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇರಳಾ ಮೂಲದ ರಾಜೀವ್ ಚಂದ್ರಶೇಖರ್, ತಮಿಳುನಾಡಿನ ನಿರ್ಮಲಾ ಸೀತಾರಾಮನ್ನಂತೆ ಅನೇಕರು ಹೊರಗಿನವರಿಗೆ ಮಣೆ ಹಾಕಲಾಗಿದೆ. ರಾಜಕೀಯ ಪಕ್ಷಗಳು ಒಂದೆಡೆ ಹೊರಗಿನವರೆ ಅವಕಾಶ ಕೊಡುವ ಜತೆಗೆ ಉಳಿದ ಸೀಟುಗಳನ್ನು ಸಂಪತ್ತಿನ ಕುಳಗಳಿಗೆ ಮೀಸಲಿಟ್ಟಿವೆ. ರಾಜ್ಯದ ಒಂದೇ ಒಂದು ರಾಜಕೀಯ ಪಕ್ಷವಾದರೂ ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಿದೆಯಾ?
ವಿಧಾನ ಪರಿಷತ್ ಸದಸ್ಯರದ್ದೂ ಅದೇ ಕಥೆ
ವಿಧಾನ ಪರಿಷತ್ ಸದಸ್ಯರ ಆಯ್ಕೆ, ಸೇವಾವಧಿ, ಅಧಿಕಾರದ ಬಗ್ಗೆ ಸಂವಿಧಾನದ 169 ನೇ ವಿಧಿ ಹೇಳುತ್ತದೆ. ಕರ್ನಾಟಕ ವಿಧಾನಸಭೆ ಸಂಖ್ಯೆಗೆ ಅನುಗುಣವಾಗಿ ವಿಧಾನ ಪರಿಷತ್ಗೆ 75 ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಅದರಲ್ಲಿ ಒಬ್ಬರಿಗೆ ಆಂಗ್ಲೋ ಇಂಡಿಯನ್ ಅವರನ್ನು ನೇಮಕ ಮಾಡಲಾಗುತ್ತದೆ. ವಿಧಾನ ಸಭೆಯಿಂದ 25 ಸದಸ್ಯರು, ಸ್ಥಳೀಯ ಸಂಸ್ಥೆಗಳಿಂದ 25, ಪದವೀಧರ ಕ್ಷೇತ್ರದಿಂದ 7 , ಶಿಕ್ಷಕರ ಕ್ಷೇತ್ರದಿಂದ 7 , ರಾಜ್ಯಪಾಲರಿಂದ ಒಬ್ಬರನ್ನು ನೇಮಕ ಮಾಡಲಾಗುತ್ತದೆ.
ಬಹುಮತ ಕಳೆದುಕೊಂಡರೆ ವಿಧಾನಸಭೆ ವಿಸರ್ಜನೆ ಮಾಡಬಹುದು. ಆದರೆ ವಿಧಾನ ಪರಿಷತ್ ವಿಸರ್ಜನೆ ಮಾಡಲು ಬರಲ್ಲ. ವಿಧಾನ ಪರಿಷತ್ ಚಿಂತರಕರ ಜಾವಡಿ ಇದ್ದಂತೆ. ರಾಜ್ಯದ ಪ್ರಗತಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿಪರಿಷತ್ ಮಹತ್ವದ ಕೊಡುಗೆ ನೀಡಬೇಕು. ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಚರ್ಚೆಗಳು ಪರಿಷತ್ನಲ್ಲಿ ಆಗಬೇಕು. ಮಸೂದೆ ರೂಪಿಸಿ ಅವುಗಳಿಗೆ ಅಂಗೀಕಾರ ನೀಡುವ ಮೂಲಕ ಜಾರಿಗೆ ಒತ್ತು ನೀಡಬೇಕು. ಆದರೆ ರಾಜ್ಯದಲ್ಲಿ ಎಂಎಲ್ಸಿ ಟಿಕೆಟ್ ಅನ್ನೋದು ಕೂಡ ಬಿಕರಿಯಾಗುವ ವಸ್ತುವಾಗಿಬಿಟ್ಟಿದೆ.
ವ್ಯಾಪಾರಿ, ಉದ್ಯಮಿಗಳಿಗೆ ಆದ್ಯತೆ
ಇಲ್ಲಿ ವ್ಯಾಪಾರೋದ್ಯಮಿಗಳಿಗೆ ಮೊದಲ ಆದ್ಯತೆ. ಮೇಲ್ನೋಟಕ್ಕೆ ಸಮಾಜದ ಕಣ್ಣೊರೆಸುವ ತಂತ್ರವಾಗಿ ಕೆಲವರಿಗೆ ಕೊಟ್ಟಿದ್ದರೂ ಅದು ಅವರು ರಾಜಕೀಯವಾಗಿ ಪಕ್ಷಕ್ಕಾಗಿ ದುಡಿದ ಕೆಲವರಿಗೆ ನೀಡಲಾಗುತ್ತದೆ. ನಿವೃತ್ತ ನ್ಯಾಯಾಧೀಶರು, ಕಾನೂನು ತಜ್ಞರು, ಆರ್ಥಿಕ ತಜ್ಞರು, ಪ್ರೊಫೆಸರ್ಗಳು, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರು, ನೀರಾವರಿ ತಜ್ಞರು, ಹವಾಮಾನ ವೈಪರೀತ್ಯದ ಬಗ್ಗೆ ಅಧ್ಯಯನ ಮಾಡಿದ ಸಂಶೋಧಕರು, ನಿವೃತ್ತ ಐಪಿಎಸ್, ಐಎಎಸ್ ಅಧಿಕಾರಿಗಳು ಯಾರೂ ಈ ರಾಜಕೀಯ ಪಕ್ಷಗಳ ಕಣ್ಣಿಗೆ ಬೀಳುವುದಿಲ್ಲ.
ಹೋಟೆಲ್ ವ್ಯಾಪಾರಿ, ಚಿನ್ನದ ವ್ಯಾಪರಿ, ಜಲ್ಲಿ ಕ್ರಷರ್ ಮಾಲೀಕರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ನಿಮ್ಮಿಂದ ಕರ್ನಾಟಕ ರಾಜ್ಯಕ್ಕೆ ಎಷ್ಟು ಒಳಿತಾಗಲಿದೆ? ಎಂಬುದಕ್ಕಿಂತಲೂ ನಮ್ಮ ಪಕ್ಷಕ್ಕೆ ಏನು ಲಾಭವಾಗಲಿದೆ? ಎಂಬ ಮಾನದಂಡ ಇಟ್ಟುಕೊಂಡು ಅಭ್ಯರ್ಥಿಗಳನ್ನು ರಾಜಕೀಯ ಪಕ್ಷಗಳು ಆಯ್ಕೆಯಾಗುತ್ತಿವೆ. ತಮ್ಮ ವಹಿವಾಟು, ವ್ಯಾಪಾರಗಳನ್ನು ರಕ್ಷಣೆ ಮಾಡಿಕೊಳ್ಳಲು ರಾಜಕೀಯ ಒಂದು ಟ್ರಂಪ್ ಕಾರ್ಡ್ಆಗಿ ಬಳಕೆ ಮಾಡಿಕೊಳ್ಳಲು ಇಚ್ಛೆಯುಳ್ಳವರಿಗೆ ಮೇಲ್ಮನೆ ಸ್ಥಾನಗಳು ಕೈ ಬೀಸಿ ಕರೆಯುತ್ತಿವೆ.
ರಾಜ್ಯದ ಪ್ರಗತಿಗೆ ಕೊಡುಗೆ ಏನು?
"ವಿಧಾನ ಪರಿಷತ್ ಆಗಿರಲೀ, ರಾಜ್ಯಸಭೆ ಆಗಿರಲಿ ಸಂವಿಧಾನದ ಆಶಯಕ್ಕೆ ತಕ್ಕಂತೆ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಬುದ್ಧಿವಂತರನ್ನು, ಸಾಧಕರನ್ನು, ನ್ಯಾಯಾಂಗದ ಹಿನ್ನೆಲೆಯುಳ್ಳವರನ್ನು ಈ ಮೇಲ್ಮನೆಗಳಿಗೆ ನೇಮಿಸಬೇಕು. ಆದರೆ ಇವತ್ತು ರಾಜಕೀಯ ಪಕ್ಷಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಪಕ್ಷಕ್ಕೆ ಲಾಭ ಮಾಡುವಂತವರಿಗೆ ಮಣೆ ಹಾಕುತ್ತಿವೆ. ಇದು ಬೇಸರದ ಸಂಗತಿ. ರಾಜ್ಯದ ಪ್ರಗತಿಗೆ ಕೊಡುಗೆ ನೀಡಲು ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಕಾನೂನು ಗಂಧ ಗಾಳಿ ಗೊತ್ತಿಲ್ಲದ, ಸಮಾಜದ ಪ್ರಗತಿ ಬಗ್ಗೆ ಒಂದು ಕಲ್ಪನೆ ಇರದ ವ್ಯಕ್ತಿಗಳನ್ನು ನೇಮಕ ಮಾಡುತ್ತಿರುವುದು ಬೇಸರದ ಸಂಗತಿ" ಎಂದು ಹಿರಿಯ ವಕೀಲ ಶಂಕರಪ್ಪ ಅವರು ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ಬಡತನ ನಿರ್ಮೂಲನೆ, ಕೃಷಿ ಸಮಸ್ಯೆ, ಶೈಕ್ಷಣಿಕ ಪ್ರಗತಿ, ಅಪೌಷ್ಠಿಕತೆ ಹೀಗೆ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಮೇಲ್ಮನೆಗಳ ಚರ್ಚೆಗಳು ಬುನಾದಿ ಹಾಕಬೇಕು. ಆದರೆ ರಾಜಕೀಯ ಪುಢಾರಿಗಳು, ಉದ್ಯಮಿಗಳು, ವ್ಯಾಪಾರಿಗಳು ಮೇಲ್ಮನೆಗೆ ಪ್ರವೇಶ ಪಡೆಯುತ್ತಿದ್ದಾರೆ. ಇದರ ಬಗ್ಗೆ ರಾಜಕೀಯ ಪಕ್ಷಗಳು ನಿಜವಾಗಿಯೂ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸೂಕ್ತಕಾಲ. ಈ ನಿಟ್ಟಿನಲ್ಲಿ ಆಲೋಚನೆ ಮಾಡಲಿವೆಯೇ ?
Recommended Video